Advertisement

ಮಾಲೂರು ಕೆರೆ ಮಣ್ಣಿನ ಮೇಲೆ ಕೇರಳ ಕಣ್ಣು

09:46 AM Feb 21, 2019 | |

ಮಾಲೂರು: ತಾಲೂಕಿನಲ್ಲಿರುವ ಇಟ್ಟಿಗೆ ಕಾರ್ಖಾನೆಗಳಿಗೆ ಮಾತ್ರ ಸೀಮಿತವಾಗಿದ್ದ ತಾಲೂಕಿನ ಕೆರೆಗಳಲ್ಲಿನ ಕೆನೆ ಪದರದ ಜೇಡಿ ಮಣ್ಣಿನ ಮೇಲೆ ನೆರೆಯ ಕೇರಳ ರಾಜ್ಯದವರ ಮೇಲೆ ಬಿದ್ದಿದೆ.

Advertisement

ಇಲ್ಲಿನ ಅನೇಕ ಕೆರೆಗಳಲ್ಲಿ ಮಣ್ಣನ್ನು ರಾತ್ರೋರಾತ್ರಿ ನೆರೆಯ ಕೇರಳ ರಾಜ್ಯಕ್ಕೆ ಸಾಗಾಣಿಕೆ ಮಾಡಲಾಗುತ್ತಿದ್ದು ಈ ಜೇಡಿ ಮಣ್ಣಿನಿಂದ ವಿವಿಧ ಅಲಂಕಾರಿಕ ಕಲಾಕೃತಿಗಳು ಮತ್ತು ಕಲಾತ್ಮಕವಾದ ಹೆಂಚು ತಯಾರಿಕೆ ನಡೆಯುತ್ತದೆ.

 ತಾಲೂಕಿನ ಕೆಲವು ಪ್ರಭಾವಿಗಳು ತಮ್ಮ ಖಾಸಗಿ ಭೂಮಿಯಲ್ಲಿ ಕೆರೆ ಮಣ್ಣನ್ನು ರಾಶಿ ಹಾಕಿಕೊಂಡು ರಾತ್ರಿ ವೇಳೆ ಹೊರ ರಾಜ್ಯಗಳಿಗೆ ಸಾಗಿಸುವ ಕಳ್ಳದಂಧೆ ನಡೆಸುತ್ತಿದ್ದಾರೆ. ಇದರಿಂದಾಗಿ ತಾಲೂಕಿನ ಅನೇಕ ಕೆರೆಗಳಲ್ಲಿ ನಿಗದಿತ ಪ್ರಮಾಣಕ್ಕೂ ಮೀರಿದ ಕಂದಕಗಳ ನಿರ್ಮಾಣವಾಗಿ ಕೆರೆಗಳು ಮೃತ್ಯ ಕೂಪಗಳಾಗಿ ಮಾರ್ಪಟ್ಟಿವೆ.

ಸ್ವರೂಪ ಕಳಕೊಂಡ ಕೆರೆಗಳು: ಕೋಲಾರ ಜಿಲ್ಲೆ ಕೆರೆಗಳ ಜಿಲ್ಲೆ ಎಂದು ಖ್ಯಾತಿ ಗಳಿಸಿದ್ದು ಇಲ್ಲಿನ ಜನ ಜಾನುವಾರುಗಳಿಗೆ ಮಳೆಗಾಲದಲ್ಲಿ ಕೆರೆಗಳಲ್ಲಿ ಸಂಗ್ರಹವಾಗುವ ಮಳೆ ನೀರೇ ಆಶ್ರಯವಾಗಿದೆ. ಪ್ರಸ್ತುತ ಕೆರೆಗಳಲ್ಲಿನ ಅಕ್ರಮ ಮಣ್ಣು ದಂಧೆ ಮತ್ತು ಮರಳು ದಂಧೆಯಿಂದ ತಾಲೂಕಿನ ಅನೇಕ ಕೆರೆಗಳು ತಮ್ಮ ಸ್ವರೂಪವನ್ನೇ ಕಳೆದು ಕೊಂಡಿವೆ.

ಕೆ.ಸಿ.ವ್ಯಾಲಿ ನೀರು ತಾಲೂಕಿನ ಕೆರೆಗಳಿಗೆ: ಇತ್ತೀಚಿನಲ್ಲಿ ರಾಜ್ಯ ಸರ್ಕಾರ ರೂಪಿಸಿರುವ ಕೆ.ಸಿ.ವ್ಯಾಲಿ ಯೋಜನೆಯಿಂದ ತಾಲೂಕಿನ 27 ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಸದ್ಯ ಈ ಯೋಜನೆಗೆ ಸುಪ್ರೀಂಕೋರ್ಟ್‌ ತಡೆಯಾಜ್ಞೆ ನೀಡಿದೆ. ಮೊದಲ ಹಂತದಲ್ಲಿ ನರಸಾಪುರ ಕೆರೆಯಿಂದ ಏತ ನೀರಾವರಿ ಮೂಲಕ ತಾಲೂಕಿನ ಶಿವಾರಪಟ್ಟಣದ ಕೆರೆಗೆ ನೀರು ಹರಿದು ಬರಲಿದೆ. 

Advertisement

ಮುಂದಿನ ದಿನಗಳಲ್ಲಿ ಮಾಲೂರು ತಾಲೂಕಿನ 27 ಕೆರೆಗಳಿಗೆ ಹಂತ ಹಂತವಾಗಿ ನೀರನ್ನು ತುಂಬಿಸಲಾಗುತ್ತದೆ. ಶಿವಾರಟ್ಟಣದಿಂದ ಬಾವನಹಳ್ಳಿ, ತಂಬಿಹಳ್ಳಿ, ಅಬ್ಬೇನಹಳ್ಳಿ ಹಾರೋಹಳ್ಳಿ ಕೆರೆಗಳ ಮಾಲೂರು, ಮಾಲೂರು ದೊಡ್ಡ ಕೆರೆಗೆ ನೀರು ಹರಿಯಲಿದೆ. ಪ್ರಸ್ತುತ ಹಾರೋಹಳ್ಳಿ ಕೆರೆಯಲ್ಲಿ ಮಣ್ಣು ದಂಧೆ ಕೋರರು ಭಾರೀ ಕಂದಕಗಳನ್ನು ತೋಡಿದ್ದಾರೆ. ಇದರಿಂದಾಗಿ ಕೆ.ಸಿ.ವ್ಯಾಲಿ ನೀರು ತುಂಬಿ ಹೊರ ಬರಬೇಕಾದರೆ ಕನಿಷ್ಠ ವರ್ಷಗಳೇ ಬೇಕಾಗಬಹುದು.

ಅಕ್ರಮ ದಂಧೆ ವಿರುದ್ಧ ನಿರಂತರ ಕ್ರಮ ಮಾಲೂರು ತಾಲೂಕಿನಲ್ಲಿ ಇಟ್ಟಿಗೆ ಕಾರ್ಖಾನೆಗಳ ಸಂಖ್ಯೆ ಹೆಚ್ಚಾಗಿದೆ. ಕೆರೆ ಮಣ್ಣು ತೆಗೆಯುವ ಸರ್ಕಾರದ ನಿಯಮದ ಅಡಿಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಅಕ್ರಮ ಮಣ್ಣು ಸಾಗಾಣಿಕೆ ದಂಧೆ ತಡೆಯುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮಾಲೂರು ತಹಶೀಲ್ದಾರ್‌ ವಿ.ನಾಗರಾಜ್‌ ತಿಳಿಸಿದ್ದಾರೆ. 

ಮಾಲೂರು ತಾಲೂಕಿನಲ್ಲಿ ಇಟ್ಟಿಗೆ ಕಾರ್ಖಾನೆಗಳು ಹೆಚ್ಚಾಗಿದ್ದು ಕೆರೆ ಮಣ್ಣೇ ಕಾರ್ಖಾನೆಗಳಿಗೆ ಜೀವಾಳ. ಕೆರೆಯ ಮಣ್ಣು ತೆಗೆಯುವ ವಿಚಾರದಲ್ಲಿ ಜಿಲ್ಲಾಡಳಿತ ನಿಯಮಗಳನ್ನು ಸಡಿಲಗೊಳಿಸಬೇಕಾಗಿದೆ. ಇನ್ನು ಕೆರೆಗಳಲ್ಲಿ ನಿರ್ಮಾಣವಾಗಿರುವ ಭಾರೀ ಪ್ರಮಾಣದ ಕಂದಕಗಳು ಇಟ್ಟಿಗೆ
ಕಾರ್ಖಾನೆಗಳು ತೆಗೆದ ಮಣ್ಣಿನಿಂದ ಆಗಿಲ್ಲ. ಅದು ಅಕ್ರಮ ಮಣ್ಣು ದಂಧೆಕೋರರ ಕೃತ್ಯವಾಗಿದೆ.
●ಪುಟ್ಟಸ್ವಾಮಿ, ಇಟ್ಟಿಗೆ ಕಾರ್ಖಾನೆ ಮಾಲಿಕ ಮಾರಸಂದ

ಕೆರೆಗಳಲ್ಲಿ ಬುಡಸಹಿತ ಕಳಚಿ ಬೀಳುವ ಮರಗಳು ಮಣ್ಣು ದಂಧೆಕೋರರ ಹಾವಳಿಗೆ ಬಲಿಯಾಲಿರುವ ತಾಲೂಕಿನ ಕೆಲವು ಕೆರೆಗಳಲ್ಲಿ ಅರಣ್ಯ ಇಲಾಖೆ ವತಿಯಿಂದ ಹಾಕಿದ್ದ ಅಕೇಶಿಯಾ, ಜಾಲಿ -ಬಿದಿರು ಮರಗಳು ಬುಡಸಹಿತ ಕಳಚಿ ಬೀಳುವ ಹಂತದಲ್ಲಿವೆ. ಈ ನಡುವೆ ತಾಲೂಕಿನ ಕೂಲಿ ಕಾರ್ಮಿಕರ ಹಿತ ದೃಷ್ಟಿಯಿಂದ ಇಟ್ಟಿಗೆ ಕಾರ್ಖಾನೆಗಳಿಗೆ ಮಾತ್ರ ನಿಗದಿತ ಆಳದವರೆಗೂ ಕೆರೆಯ ಮಣ್ಣು ತೆಗೆಯುವ ಅವಕಾಶ ಕಲ್ಪಿಸಬೇಕಾಗಿದೆ. ಅಕ್ರಮವಾಗಿ ಹೊರ ರಾಜ್ಯಗಳಿಗೆ ಕಳ್ಳದಂಧೆ ಮೂಲಕ ಮಣ್ಣು ಸಾಗಿಸುವ ಪ್ರಭಾವಿಗಳನ್ನು ತಡೆಯಬೇಕಾಗಿದೆ ಎಂದು ಸ್ಥಳೀಯರು ಮನವಿ ಮಾಡಿದ್ದಾರೆ. 
 
ಹೆಂಚು-ಇಟ್ಟಿಗೆ ಕಾರ್ಖಾನೆಗಳ ತವರಿಗೇ ಸಮಸ್ಯೆ ಜಿಲ್ಲೆಯ ಇತರೆ ತಾಲೂಕುಗಳಿಗೆ ಹೋಲಿಸಿದ್ದಲ್ಲಿ ಮಾಲೂರು ತಾಲೂಕಿನ ಕೆರೆಗಳಲ್ಲಿನ ಮಣ್ಣು ಇಟ್ಟಿಗೆ ತಯಾರಿಕೆಗೆ ಯೋಗ್ಯವಾಗಿದ್ದು ಸುಮಾರು 300ಕ್ಕೂ ಅತಿ ಹೆಚ್ಚು ಇಟ್ಟಿಗೆ ಕಾರ್ಖಾನೆಗಳು ಮಾಲೂರು ತಾಲೂಕಿನಲ್ಲಿವೆ. ಈ ಮಧ್ಯೆ ಕೆರೆಯಲ್ಲಿ ಸಂಗ್ರಹವಾಗುವ ಕೆನೆ ಪದರದ ಜೇಡಿ ಮಣ್ಣನ್ನು ನೆಚ್ಚಿಕೊಂಡು ತಾಲೂಕಿನಲ್ಲಿ ಅನೇಕರು ಹೆಂಚು ಮತ್ತು ಇಟ್ಟಿಗೆ ಕಾರ್ಖಾನೆ ಆರಂಭಿಸಿದ್ದಾರೆ. ಕೆರೆಯಲ್ಲಿನ ಮಣ್ಣನನ್ನು ಹೊರ ರಾಜ್ಯದವರೇ ತುಂಬಿಕೊಂಡು ಹೋಗುತ್ತಿರುವುದರಿಂದ ಸ್ಥಳೀಯರಿಗೆ ಸಮಸ್ಯೆಯಾಗಿದೆ.

●ಎಂ.ರವಿಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next