Advertisement

ಕೊಣ್ಣೂರ ನುಡಿ ಸಡಗರ

06:00 AM Sep 30, 2018 | |

ಹಿಂದಿನ ವಾರ, ಅಂದರೆ ಸೆಪ್ಟೆಂಬರ್‌ 20 ಮತ್ತು 21ರಂದು ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಬಳಿ ಇರುವ ಯಲ್ಲಟ್ಟಿ ಎಂಬ ಒಂದು ಪುಟ್ಟ ಊರಿನಲ್ಲಿ, ಕೊಣ್ಣೂರ ನುಡಿ ಸಡಗರ ಎಂಬ ಒಂದು ದೊಡ್ಡ ಅಕ್ಷರ ಜಾತ್ರೆ ನಡೆಯಿತು. ಅದರ ಸರ್ವಾಧ್ಯಕ್ಷತೆಗೆ ನನ್ನನ್ನು ಆಹ್ವಾನಿಸಲಾಗಿತ್ತು. ನಾನು ಸಕುಟುಂಬ ಅಲ್ಲಿಗೆ ಹೋಗಿ ಆ ಅವಿಸ್ಮರಣೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂದೆ. ಅದು ಅವಿಸ್ಮರಣೀಯವಾಗಲು ಮುಖ್ಯ ಕಾರಣ ಅದರ ರೂವಾರಿಯಾದ ಪ್ರೊಫೆಸರ್‌ ಬಸವರಾಜ ಕೊಣ್ಣೂರು. ಅವರು ಬೆಳೆದುಬಂದ ಬಗೆ ನಿಜಕ್ಕೂ ಕುತೂಹಲಕಾರಿಯಾಗಿದೆ:

Advertisement

ಕೊಣ್ಣೂರು ಜೀವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಮೇಲೆ ಉದ್ಯೋಗಕ್ಕಾಗಿ ತುಂಬ ಪರದಾಡಬೇಕಾಯಿತು. ಹದಿನೈದು ವರ್ಷ ಅರೆಕಾಲಿಕ ಉಪನ್ಯಾಸಕರಾಗಿ ಬಸವಳಿದು ಬೇಸತ್ತ ನಂತರ, ಆ ವೇಳೆಗೆ ತಮ್ಮ ಪಾಠ-ಪ್ರವಚನಗಳಿಂದ ವಿದ್ಯಾರ್ಥಿಗಳ ಮನ ಗೆದ್ದಿದ್ದ ಕೊಣ್ಣೂರ್‌ ಅವರಿಗೆ ತಾವೇ ಏಕೆ ಒಂದು ವಿದ್ಯಾಸಂಸ್ಥೆ ಪ್ರಾರಂಭಿಸಬಾರದು ಎಂಬ ಆಲೋಚನೆ ಬಂತು. ಅದರ ಫ‌ಲವಾಗಿ ಕಳೆದ ಕೇವಲ ಎಂಟು ವರ್ಷಗಳ ಸಣ್ಣ ಅವಧಿಯಲ್ಲಿ ಒಂದರ ನಂತರ ಒಂದು ಮೂಡಿ ಬಂದವು ಒಟ್ಟು ಐದು ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ವಿದ್ಯಾಸಂಸ್ಥೆಗಳು. ಯಲ್ಲಟ್ಟಿಯಲ್ಲಿ ಮೂರು, ಜಮಖಂಡಿಯಲ್ಲಿ ಒಂದು ಮತ್ತು ಧಾರವಾಡದಲ್ಲಿ ಒಂದು. “ಕೊಣ್ಣೂರ ಶಿಕ್ಷಣ ಸಮೂಹ ಸಂಸ್ಥೆಗಳು’ ಎಂದು ಜಿÇÉೆಯಾದ್ಯಂತ ಹೆಸರಾಗಿರುವ ಇದರಲ್ಲಿ ಇಂದು 3500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಸುಸಜ್ಜಿತವಾದ ಕಟ್ಟಡಗಳು, ವಸತಿಯ ಅನುಕೂಲ, ಸಮರ್ಥ ಶಿಕ್ಷಕರು ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಕನಿಷ್ಠ ಶುಲ್ಕ ಈ ವಿದ್ಯಾಸಂಸ್ಥೆಗಳ ಜನಪ್ರಿಯತೆಗೆ ಕಾರಣವೆನ್ನಬಹುದು.

ಸೆಪ್ಟಂಬರ್‌ 20, 2016 ಪ್ರೊ. ಕೊಣ್ಣೂರ್‌ ಅವರ 50ನೇ ಹುಟ್ಟುಹಬ್ಬ. ಅದರ ಅಂಗವಾಗಿ ಅವರ ಅಭಿಮಾನಿಗಳು ಬೋಧನಾ ತಪಸ್ವಿ ಎಂಬ ಅಭಿನಂದನಾ ಗ್ರಂಥವನ್ನು ಅವರಿಗೆ ಒಂದು ಅದ್ದೂರಿಯ ಸನ್ಮಾನ ಸಮಾರಂಭದಲ್ಲಿ ಅರ್ಪಿಸಿದ್ದಾರೆ. ಅದೇ ವರ್ಷ ಕೊಣ್ಣೂರ್‌ ಅವರು ಮೂಡುಬಿದಿರೆಯ ವಿಖ್ಯಾತ “ಆಳ್ವಾಸ್‌ ನುಡಿಸಿರಿ’ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದಾರೆ. ತಮ್ಮ ಯಲ್ಲಟ್ಟಿಯಲ್ಲೂ ಇಂಥಾದ್ದೊಂದು ಅಕ್ಷರಜಾತ್ರೆ ಮಾಡಬಾರದೇಕೆ ಎಂಬ ಅಲೋಚನೆ ಅವರಿಗೆ ಬಂದಿದೆ. ಕೂಡಲೇ ಕಾರ್ಯತತ್ಪರರಾದ ಅವರು 2017ರಲ್ಲಿ ತಮ್ಮ 51ನೇ ಹುಟ್ಟುಹಬ್ಬದ ಅಂಗವಾಗಿ ಸೆಪ್ಟಂಬರ್‌ 20, 21ರಂದು ಕೊಣ್ಣೂರ ನುಡಿ ಸಡಗರ ಎಂಬ ಪ್ರಥಮ ಅಕ್ಷರಜಾತ್ರೆಯನ್ನು ಡಾ. ಮಲ್ಲಿಕಾ ಘಂಟಿ ಅವರ ಸರ್ವಾಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಸಿದ್ದಾರೆ. ಈ ವಿಷಯ ನನಗೆ ತಿಳಿದಾಗ ನಾನು ನಿಜಕ್ಕೂ ಮೂಕವಿಸ್ಮಿತನಾದೆ. ಒಬ್ಬ ವ್ಯಕ್ತಿ ತನ್ನ ಹುಟ್ಟುಹಬ್ಬವನ್ನು ಇದಕ್ಕಿಂತಲೂ ಅರ್ಥಪೂರ್ಣವಾಗಿ, ಸಾರ್ಥಕವಾಗಿ ಆಚರಿಸಲು ಸಾಧ್ಯವಿಲ್ಲವೆಂದು ನನಗನ್ನಿಸಿತು.

ಈ ಬಾರಿಯ ನುಡಿಸಡಗರ
ನುಡಿ ಸಡಗರದ ಎರಡನೆಯ ಆವೃತ್ತಿ ಸಹ ಅತ್ಯಂತ ಅರ್ಥಪೂರ್ಣವಾಗಿತ್ತು. ಸುಮಾರು ಒಂದೂವರೆ ಸಾವಿರ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಅದರಲ್ಲಿ ಶ್ರೋತೃಗಳಾಗಿದ್ದರು. ಸಾರ್ವಜನಿಕರೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದರೂ ಸಹ ಪ್ರಧಾನವಾಗಿ ಅಲ್ಲಿನ ಕಾರ್ಯಕ್ರಮಗಳು ವಿದ್ಯಾರ್ಥಿಗಳನ್ನೇ ದೃಷ್ಟಿಯಲ್ಲಿಟ್ಟುಕೊಂಡು ಆಯೋಜಿತವಾಗಿದ್ದವು. ವಿದ್ಯಾರ್ಥಿಗಳಿಗೆ ಅವು ಆಕಷ‌ìಣೀಯವೂ, ಬೋಧಪ್ರದವೂ ಆಗಿದ್ದವು. ಡಾ. ಹುಲಿಕಲ್‌ ನಟರಾಜ ಅವರು ನಡೆಸಿಕೊಟ್ಟ “ವೈಜ್ಞಾನಿಕ ಕ್ರಾಂತಿ’ ಮತ್ತು “ಐ.ಎ.ಎಸ್‌./ ಕೆ.ಎ.ಎಸ್‌. ಪರೀಕ್ಷೆಯ ಸಿದ್ಧತೆಗೆ ಮಾರ್ಗದರ್ಶನ’ ಹಾಗೂ “ವಿದ್ಯಾರ್ಥಿಗಳಿಗಾಗಿ ನಡೆಸಿದ ರಸಪ್ರಶ್ನೆ’ ಅವುಗಳಲ್ಲಿ ಉಲ್ಲೇಖನೀಯವಾಗಿದ್ದವು. ಪಂ. ಶರಣ್‌ ಚೌಧರಿ ಮತ್ತು ಪಂ. ಬಸವರಾಜ ಮುಗಳಖೋಡ ಇವರ ತಂಡ ನಡೆಸಿಕೊಟ್ಟ ವಚನ, ಭಾವಗೀತೆ, ಚಿತ್ರಗೀತೆಗಳ “ಸಂಗೀತ ಸಿಂಚನ’ ಹಾಗೂ ಅಜಿತ ಸಾರಿಪುರೆ ಮತ್ತು ರವಿ ಬಜಂತ್ರಿ ಅವರು ನಡೆಸಿಕೊಟ್ಟ “ಹಾಸ್ಯ ಲಾಸ್ಯ’ ಶ್ರೋತೃಗಳ ಮನ ತಣಿಸಿತು. ಇವುಗಳ ಜೊತೆಗೆ “ಕವಿ ಸಮಯ’, “ಜನಪದ ಸಡಗರ’ ಮುಂತಾದ ಗಂಭೀರ ಚಿಂತನೆಯ ಗೋಷ್ಠಿಗಳೂ ನಡೆದವು. ವಿದ್ಯಾರ್ಥಿಗಳಿಗೆ ಕನ್ನಡದ ಶ್ರೀಮಂತ ಸಾಹಿತ್ಯ ಮತ್ತು ಸಂಸ್ಕೃತಿಯ ಪರಿಚಯ ಮಾಡಿಕೊಡುವಲ್ಲಿ ಈ ಗೋಷ್ಠಿಗಳು ನೆರವಾದವು. ಒಟ್ಟಾರೆ ಎರಡು ದಿನಗಳ ನುಡಿ ಸಡಗರ ತನ್ನ ಇತಿಮಿತಿಗಳ ನಡುವೆಯೂ ಅತ್ಯಂತ ಅಚ್ಚುಕಟ್ಟಾಗಿ ನಡೆಯಿತು.

ಉತ್ತರಕರ್ನಾಟಕ ಹಿಂದುಳಿದ ಪ್ರದೇಶವೆಂಬ ಅಪವಾದವಿದೆ. ಆದರೆ, ಸಾಂಸ್ಕೃತಿಕವಾಗಿ ಮತ್ತು ಸಾಹಿತ್ಯಿಕವಾಗಿ ಅದು ಶ್ರೀಮಂತವೇ ನಿಜ. ಏಕೆಂದರೆ, ಸುಪ್ರಸಿದ್ಧ ಸಾಹಿತಿಗಳಾದ ರಾವ್‌ ಬಹದ್ದೂರ್‌, ಸತ್ಯಕಾಮ, ದು. ನಿಂ. ಬೆಳಗಲಿ, ಈಶ್ವರ ಸಣಕಲ…, ವಜ್ರಮಟ್ಟಿ ಇವರೆಲ್ಲ ಬಾಗಲಕೋಟೆ ಜಿಲ್ಲೆಯವರೇ. ಹಾಗೆಯೇ ಇಂದಿನ ಸಾಹಿತಿಗಳಲ್ಲಿ ಡಾ. ಮಲ್ಲಿಕಾ ಘಂಟಿ, ಬಿ. ಆರ್‌. ಪೋಲೀಸ ಪಾಟೀಲ, ವೀಣಾ ಬನ್ನಂಜೆ ಮುಂತಾದವರು ರಾಜ್ಯಮಟ್ಟದಲ್ಲಿ ಹೆಸರು ಗಳಿಸಿದ್ದಾರೆ.

Advertisement

ಸಂಭ್ರಮದ ಮೆರವಣಿಗೆ
ವೈಯಕ್ತಿಕವಾಗಿ ನನ್ನ ಮನ ಸೂರೆಗೊಂಡದ್ದು ಅಲ್ಲಿನ ಜನರ ಮುಗ್ಧ ನಿಷ್ಕಲ್ಮಶ ಮನಸ್ಸು, ಆದರ ಮತ್ತು ಆತಿಥ್ಯ. ಹೋದೆಡೆಯೆಲ್ಲ ಅವರು ನೀಡಿದ ಸತ್ಕಾರ ನನ್ನನ್ನು ವಿನೀತನನ್ನಾಗಿಸಿತು. ನನ್ನ ಪತ್ನಿ ಗಿರಿಜಾಳಂತೂ ಬನಹಟ್ಟಿಯ ಸೀರೆಗಳ ವಿಶೇಷ ವಿನ್ಯಾಸ ಮತ್ತು ಸೊಬಗಿಗೆ ಮಾರು ಹೋದಳು. ನನ್ನೊಂದಿಗೆ ಅವಳನ್ನೂ ಸಂಭ್ರಮದ ಮೆರವಣಿಗೆಯಲ್ಲಿ ಕರೆತಂದು, ಭವ್ಯವಾದ ವೇದಿಕೆಯಲ್ಲಿ ನನ್ನೊಂದಿಗೆ ಸನ್ಮಾನಿಸಿದ್ದನ್ನು ಅವಳೆಂದೂ ಮರೆಯಲಾರಳು. ಡಾ. ಕೊಣ್ಣೂರ್‌ ತಮ್ಮ ಈ ಅಕ್ಷರಜಾತ್ರೆಯ ಮೂಲಕ ನಿಜವಾದ ಅರ್ಥದಲ್ಲಿ ಕನ್ನಡನಾಡು, ನುಡಿಗೆ ಸಾರ್ಥಕ ಸೇವೆ ಸಲ್ಲಿಸುತ್ತಿದ್ದಾರೆ. ಏಕೆಂದರೆ, ತಮ್ಮ ಪ್ರದೇಶದ ಇಂದಿನ ಯುವ ಪೀಳಿಗೆಯಲ್ಲಿ ಅವರು ಕನ್ನಡತನವನ್ನು ಬೆಳೆಸುತ್ತಿ¨ªಾರೆ. ಅವರ ಜೀವನಕ್ಕೆ ಉತ್ತಮ ಧ್ಯೇಯ ಮತ್ತು ಮೌಲ್ಯಗಳನ್ನು ಪರಿಚಯಿಸುತ್ತಿದ್ದಾರೆ. ಆದ್ದರಿಂದ ಕೊಣ್ಣೂರ ನುಡಿ ಸಡಗರ ನಿರಂತರವಾಗಲೆಂಬುದು ನನ್ನ ಹೃತೂ³ರ್ವಕ ಹಾರೈಕೆ.

ಬಿ. ಆರ್‌. ಲಕ್ಷ್ಮಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next