Advertisement

ಹನಿ ನೀರಿಗೂ ತಪ್ಪಿಲ್ಲ ಜನತೆ ಪರದಾಟ

12:16 PM May 20, 2019 | Naveen |

ಕೆಂಭಾವಿ: ಬೇಸಿಗೆ ಅವಧಿಯಲ್ಲಿ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಸರ್ಕಾರ ಹಲವು ಕ್ರಮ ಕೈಗೊಂಡಿದ್ದರೂ ಜಿಲ್ಲಾಡಳಿತ ನಿರ್ಲಕ್ಷ್ಯದಿಂದ ಕೆಂಭಾವಿ ವಲಯದ ಹಲವು ಗ್ರಾಮೀಣ ಪ್ರದೇಶಗಳಲ್ಲಿ ಜನತೆ ಹನಿ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

Advertisement

ನಗನೂರ ಗ್ರಾಪಂ ವ್ಯಾಪ್ತಿಯ ನಗನೂರ, ಖಾನಾಪೂರ, ಚಾಮನಾಳ ಗ್ರಾಪಂನ ವಿವಿಧ ತಾಂಡಾಗಳು ಹಾಗೂ ಏವೂರ ಗ್ರಾಪಂ ವ್ಯಾಪ್ತಿಯ ಹಲವು ಗ್ರಾಮಗಳು ಹಾಗೂ ತಾಂಡಾಗಳಲ್ಲಿ ನೀರಿಗೆ ಜನ ಪರಿತಪಿಸುತ್ತಿದ್ದಾರೆ. ಒಂದು ಕಡೆ ಬಿರು ಬೇಸಿಗೆಯಿಂದ ಜನತೆ ನೀರಿಗೆ ತತ್ತರಿಸುತ್ತಿದ್ದರೆ ಇತ್ತ ಮತ್ತೂಂದು ಕಡೆ ರಾಜಕೀಯ ನಾಯಕರು ಮದುವೆ ಹಾಗೂ ಸ್ಥಳೀಯ ಚುನಾವಣೆಯಲ್ಲಿ ಸಿಲುಕ್ಕಿದ್ದು, ಜನತೆಯ ಗೋಳು ಯಾರು ಕೇಳುವರು ಎಂಬ ಪ್ರಶ್ನೆ ಕಾಡುತ್ತಿದೆ.

ಸಕಾಲಕ್ಕೆ ಮಳೆಯಾಗದೆ ಈ ಬಾರಿ ಬೇಸಿಗೆ ಬಿಸಿಲಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಜಲಮೂಲ ಸಂಪೂರ್ಣ ಬತ್ತಿ ಹೋಗಿ ಕೊಳವೆ ಬಾವಿ ಹಾಗೂ ತೆರೆದ ಬಾವಿಗಳು ಒಣಗಿದ್ದು, ಇದರಿಂದ ನೀರಿನ ತೊಂದರೆ ಹೆಚ್ಚಾಗಲಿಕ್ಕೂ ಕಾರಣ ಎಂದು ಹೇಳಲಾಗುತ್ತಿದೆ.

ಯಾದಗಿರಿ-ವಿಜಯಪುರ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಹಲವು ತಾಂಡಾಗಳಲ್ಲಿ ಬೆಳಗ್ಗೆಯಿಂದ ಜನತೆ ತಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಟ್ಯಾಂಕರ್‌ ನೀರಿಗೆ ಸರದಿ ಸಾಲಿನಲ್ಲಿ ನಿಂತು ಕಾಯುತ್ತಿರುವ ದೃಶ್ಯ ಸರ್ವೇ ಸಾಮಾನ್ಯವಾಗಿದೆ. ಗ್ರಾಮಕ್ಕೆ ದಿನಕ್ಕೆ ಕೇವಲ ಎರಡು ಟ್ಯಾಂಕರ್‌ ನೀರಿನಂತೆ ತಾಲೂಕು ಆಡಳಿತ ಹಾಗೂ ಸ್ಥಳೀಯ ಗ್ರಾಪಂ ವತಿಯಿಂದ ಜನತೆಗೆ ನೀರು ಸರಬರಾಜು ಮಾಡುತ್ತಿದ್ದು, ಇದು ಯಾವುದಕ್ಕೂ ಸಾಕಾಗುವುದಿಲ್ಲ ಎಂಬುದು ಹಲವರ ವಾದವಾಗಿದೆ. ವಿಪರ್ಯಾಸವೆಂದರೆ ಹೋದ ವರ್ಷ ಟ್ಯಾಂಕರ್‌ ನೀರು ಪೂರೈಕೆ ಮಾಡಿದ ಟ್ಯಾಂಕರ್‌ ಮಾಲೀಕರಿಗೆ ತಾಲೂಕು ಆಡಳಿತ ಇನ್ನೂ ಬಿಲ್ ಪಾವತಿ ಮಾಡದ ಹಿನ್ನೆಲೆಯಲ್ಲಿ ಈ ಬಾರಿ ಗ್ರಾಮಗಳಿಗೆ ನೀರು ಸರಬರಾಜು ಮಾಡಲು ಹಲವು ಟ್ಯಾಂಕರ್‌ ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ.

ತಾಲೂಕಿನ ಗಡಿ ಗ್ರಾಮಗಳಾದ ಯಕ್ತಾಪೂರ ಗ್ರಾಪಂ ವ್ಯಾಪ್ತಿಯ ಯಕ್ತಾಪೂರ, ಬೊಮ್ಮನಹಳ್ಳಿ, ವಂದಗನೂರ, ಚಿಂಚೋಳಿ, ಮಲಕಾಪೂರ, ಕಾಚಾಪೂರ, ಹೂವಿನಹಳ್ಳಿ, ತಳ್ಳಳ್ಳಿ, ಐನಾಪೂರ, ಬೇವಿನಾಳ, ಆಲಾØಳ, ದೋರನಹಳ್ಳಿ ಗ್ರಾಮಗಳಲ್ಲಿ ಇದ್ದ ಎಲ್ಲ ಕೊಳವೆ ಬಾವಿಗಳು ಸಂಪೂರ್ಣ ಬತ್ತಿ ಹೋಗಿದ್ದು, ಇದರಿಂದ ಜನತೆ ನೀರಿನ ತೊಂದರೆ ಅನುಭವಿಸುತ್ತಿದ್ದಾರೆ. ವಿಚಿತ್ರವೆಂದರೆ ಗ್ರಾಪಂ ಕೇಂದ್ರ ಸ್ಥಾನವಾದ ಯಕ್ತಾಪೂರ ಗ್ರಾಮದಲ್ಲಿಯೇ ಕಳೆದ ಹಲವು ತಿಂಗಳಿನಿಂದ ಇಡೀ ಗ್ರಾಮಕ್ಕೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಕುಡಿಯುವ ನೀರಿಗೆ ಸರ್ಕಾರ ಪ್ರತಿವರ್ಷ ಸಾಕಷ್ಟು ಅನುದಾನ ನೀಡುತ್ತಿದ್ದರೂ ಗ್ರಾಮಾಂತರ ಪ್ರದೇಶಗಳಲ್ಲಿ ಜಲಮೂಲ ಬತ್ತಿ ಹೋಗಿರುವುದರಿಂದ ಜನತೆಗೆ ಯಾವ ರೀತಿ ನೀರು ಕೊಡಬೇಕು ಎಂಬುದೆ ಅಧಿಕಾರಿಗಳಿಗೆ ತಲೆನೋವಾಗಿ ಪರಣಮಿಸಿದೆ. ಇನ್ನು ಹಲವು ಗ್ರಾಮಗಳಲ್ಲಿ ಜಲಮೂಲ ಸಾಕಷ್ಟಿದ್ದರೂ ಅನುದಾನ ಬಳಕೆ ಮಾಡುವಲ್ಲಿ ಅಧಿಕಾರಿಗಳು ನಿರ್ಲಕ್ಷ ವಹಿಸುತ್ತಿದ್ದು, ಇದೂ ಕೂಡ ನೀರಿನ ತತ್ವಾರಕ್ಕೆ ಕಾರಣ ಎಂಬ ಮಾತು ಹಲವರಿಂದ ಕೇಳಿ ಬರುತ್ತಿದೆ. ಏನೆ ಇದ್ದರೂ ಬೇಸಿಗೆ ಮುಗಿಯುವ ಮುನ್ನವೆ ಸರ್ಕಾರದ ಅನುದಾನ ಸದ್ಬಳಕೆ ಮಾಡಿಕೊಂಡು ನೀರಿನ ಕೊರತೆ ನೀಗಿಸುವಲ್ಲಿ ಜಿಲ್ಲಾಡಳಿತ ಶ್ರಮ ವಹಿಸುವುದೆ ಕಾಯ್ದು ನೋಡಬೇಕು.

Advertisement

ತಾಲೂಕಿನ ಹಲವು ಗ್ರಾಮಗಳಲ್ಲಿ ಜಲಕ್ಷಾಮ ಉಂಟಾಗಿದ್ದು, ಭೂಮಿಯಲ್ಲಿ ನೀರಿನ ಪ್ರಮಾಣ ಸಂಪೂರ್ಣ ಕುಸಿದಿದೆ. ಕೆಲವು ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಯಿಂದ ಜನತೆಗೆ ನೀರು ಪೂರೈಕೆ ಮಾಡುತ್ತಿದ್ದು, ನಗನೂರ, ತಳ್ಳಳ್ಳಿ ಗ್ರಾಮಗಳಲ್ಲಿ ಟ್ಯಾಂಕರ್‌ ಮೂಲಕ ಜನತೆಗೆ ನೀರು ಸರಬರಾಜು ಮಾಡಲಾಗುತ್ತಿದೆ. ಬೇಸಿಗೆ ಮುಗಿಯುವವರೆಗೆ ಜನತೆಗೆ ಯಾವುದೇ ನೀರಿನ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು.
ಜಗದೇವಪ್ಪ. ಇಒ ಸುರಪುರ

ನಮ್ಮ ಗ್ರಾಮಕ್ಕೆ ದಿನಕ್ಕೆ ಎರಡು ಬಾರಿ ಟ್ಯಾಂಕರ್‌ ನೀರು ಸರಬರಾಜು ಮಾಡುತ್ತಿದ್ದು, ಇದು ಜನತೆಗೆ ಸಾಲುತ್ತಿಲ್ಲ. ಪ್ರತಿ ವಾರ್ಡ್‌ಗೆ ಒಂದರಂತೆ ಸಮಯದ ಅನುಗುಣವಾಗಿ ನೀರು ಸರಬರಾಜು ಮಾಡಬೇಕು ಎಂದು ಹಲವು ಬಾರಿ ಅಧಿಕಾರಿಗಳಲ್ಲಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ನೀರಿನ ಸಮಸ್ಯೆ ಹೆಚ್ಚಾಗಿದ್ದರಿಂದ ಹಲವು ಜನತೆ ಗ್ರಾಮವನ್ನೆ ತೊರೆದು ಬೇರೆ ಊರಿಗೆ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
•ಶರಣಪ್ಪ ಗಾಯಕವಾಡ, ನಗನೂರ ನಿವಾಸಿ

ಗುಂಡಭಟ್ಟ ಜೋಶಿ

Advertisement

Udayavani is now on Telegram. Click here to join our channel and stay updated with the latest news.

Next