Advertisement

41ನೇ ಯತಿ ಶ್ರೀ ಸತ್ಯಪ್ರಮೋದತೀರ್ಥರ ಆರಾಧನೆ

12:18 PM Oct 30, 2019 | Naveen |

ಗುಂಡಭಟ್ಟ ಜೋಶಿ

Advertisement

ಕೆಂಭಾವಿ: ಸಮಗ್ರ ಭಾರತ ಇತಿಹಾಸದಲ್ಲಿ ಮರೆಯಲಾಗದ ಸಂಸ್ಕೃತ ಪಾಂಡಿತ್ಯ ಪ್ರದರ್ಶಿಸಿ, ಭಾರತದ ಉದ್ದಗಲಕ್ಕೂ ಸಂಚರಿಸಿ, ಅನೇಕ ಸಂಸ್ಕೃತ ಪಂಡಿತರನ್ನು ನಿರ್ಮಾಣ ಮಾಡಿ, ಕಷ್ಟ ಕಾಲದಲ್ಲಿ ಅವರಿಗೆ ಸಹಾಯ ಮಾಡಿದವರೇ ಉತ್ತರಾದಿ ಮಠದ ಪರಂಪರೆಯಲ್ಲಿ 41ನೇ ಯತಿಗಳಾಗಿ ಮೆರೆದ ಶ್ರೀ ಸತ್ಯಪ್ರಮೋದ ತೀರ್ಥರು.

ದ್ವೈತ ವೇದಾಂತ ಪ್ರತಿಪಾದಕ ಮಧ್ವಾಚಾರ್ಯರ ತತ್ವಗಳನ್ನು ಜಗತ್ತಿನ ಉದ್ದಗಲಕ್ಕೂ ಪಸರಿಸಿ ಅನೇಕ ಮುಮುಕ್ಷುಗಳಿಗೆ ಜ್ಞಾನದ ರಸದೌತಣ ಉಣಬಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಸತತ 50 ವರ್ಷಗಳ ಕಾಲ ಮೂಲ ರಾಮರ ದೇವರ ಪೂಜೆ ಕೈಗೊಂಡು, ಅತೀ ಹಿಂದುಳಿದ ಗ್ರಾಮೀಣ ಭಾಗದಲ್ಲಿ ಸಂಚರಿಸಿ ವೈದಿಕ ತತ್ವಜ್ಞಾನ ಪ್ರಸಾರ ಮಾಡಿ, ಧರ್ಮದ ಗಂಧವೇ ಗೊತ್ತಿಲ್ಲದ ಅನೇಕ ಜನರಿಗೆ ಧರ್ಮ, ಗುರುಗಳು, ದೇವರ ಬಗ್ಗೆ ತಿಳಿಸಿ, ಅವರಿಗೆ ಸನ್ಮಾರ್ಗದ ದಾರಿ ತೋರಿದರಲ್ಲದೇ ಸುಧಾ ಮಂಡನ, ವಿಜಯೀಂದ್ರ ವಿಜಯ ವೈಭವ, ಯುಕ್ತಿಮಲ್ಲಿಕಾ, ವಾಯುಸ್ತುತಿ ಮಂಡನ ಸೇರಿದಂತೆ ಅನೇಕ ಗ್ರಂಥಗಳನ್ನು ಬರೆದರು.

ಜನನ: ಧಾರವಾಡ ಜಿಲ್ಲೆ ಗುತ್ತಲ ಎನ್ನುವ ಗ್ರಾಮದಲ್ಲಿ ಸುಸಂಕೃತ ಮನೆತನದ ರಂಗಾಚಾರ್ಯ ಹಾಗೂ ಕಮಲಮ್ಮ ಎನ್ನುವ ದಂಪತಿಗಳ ಉದರದಲ್ಲಿ 1918ರಲ್ಲಿ ಜನಿಸಿದರು. ಗುರುರಾಜ ಎನ್ನುವ ನಾಮಾಂಕಿತರಾದ ಅವರು ಚಿಕ್ಕವರಿದ್ದಾಗಲೇ ಸಂಸ್ಕೃತದಲ್ಲಿ ಅಗಾಧ ಪಾಂಡಿತ್ಯ ಪಡೆದು, ತರ್ಕ ಶಾಸ್ತ್ರದಲ್ಲಿ ನಿಷ್ಣಾತರಾದರು. 1941ರಲ್ಲಿ ಮಂದಾಕಿನಿ ಎನ್ನುವ ಕನ್ಯೆಯನ್ನು ವಿವಾಹವಾದ ಇವರು ನಾಡಿನ ಉದ್ದಗಲಕ್ಕೂ ತಿರುಗಾಡಿ ತರ್ಕ ಶಾಸ್ತ್ರದ ಬಗ್ಗೆ ಅನೇಕ ಗ್ರಂಥಗಳ ಮೇಲೆ ಬೆಳಕು ಚೆಲ್ಲಿ, ಅವುಗಳ ಬಗ್ಗೆ ಸಾಮಾನ್ಯರಿಗೂ ಮನವರಿಕೆ ಮಾಡಿಕೊಟ್ಟರು. ಸರ್ವಜಿತು ಸಂವತ್ಸರ ಪುಷ್ಯ ಬಹುಳ ಅಷ್ಟಮಿ 2 ಫೆಬ್ರವರಿ 1948ರಂದು ಸತ್ಯಾಭಿಜ್ಞತೀರ್ಥರಿಂದ ಸನ್ಯಾಸ ಸ್ವೀಕರಿಸಿ ಸತ್ಯಪ್ರಮೋದತೀರ್ಥರಾಗಿ ಹಂಸನಾಮಕ ಪೀಠವನ್ನೇರಿದರು.

ಮಂತ್ರಾಕ್ಷತೆ ಮಹಿಮೆ: ಸತ್ಯಪ್ರಮೋದರ ಮಂತ್ರಾಕ್ಷತೆ ಮಹಿಮೆ ಕರ್ನಾಟಕ ಮಾತ್ರವಲ್ಲದೇ ದೇಶದ ಎಲ್ಲ ರಾಜ್ಯಗಳಲ್ಲಿ ಪ್ರಸಿದ್ಧಿಯಾಗಿದೆ. ಯತಿಗಳ ಮುಷ್ಟಿ ಮಂತ್ರಾಕ್ಷತೆ ಅನೇಕ ತರಹದ ರೋಗ, ಪಿಶಾಚಿ ಬಾಧೆ, ಬಂಜೆತನ ಸೇರಿದಂತೆ ಹಲವು ಸಮಸ್ಯೆಗಳಿಗೆ ರಾಮಬಾಣವಾಗಿ ಕಾರ್ಯ ಮಾಡಿದೆ. ಹೀಗೆ ದೇಶದ ಉದ್ದಗಲಕ್ಕೂ ಸಂಚಾರ ಮಾಡುತ್ತಾ 1996ರಲ್ಲಿ ತಮಿಳುನಾಡಿನ ತಿರುಕೊಯಿಲೂರಿನಲ್ಲಿ ಸರ್ವಾಜ್ಞಾಚಾರ್ಯರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ನೇಮಿಸಿ ಸತ್ಯಾತ್ಮತೀರ್ಥರೆಂದು ನಾಮಕರಣ ಮಾಡಿದರು.

Advertisement

ಬೃಂದಾವನ ಪ್ರವೇಶ: ಅನೇಕ ವರ್ಷಗಳ ಕಾಲ ಮೂಲರಾಮ ದಿಗ್ವಿಜಯರಾಮ
ವೇದವ್ಯಾಸರ ಸೇವೆ ಮಾಡುತ್ತಾ, ತಮಿಳುನಾಡಿನ ಪಿನಾಕಿನಿ ನದಿ ತೀರ ಮನಂಪುಂಡಿ (ತಿರುಕೊಯಿಲೂರು)ಯಲ್ಲಿ ಈಶ್ವರ ನಾಮ ಸಂವತ್ಸರ ಕಾರ್ತಿಕ ಶುದ್ಧ ತೃತೀಯ 3 ನವೆಂಬರ್‌ 1997ರಂದು ರಘೋತ್ತಮ ತೀರ್ಥರ ಬೃಂದಾವನ ಪಕ್ಕದಲ್ಲೇ ಇವರು ಶ್ರೀರಾಮನ ಪಾದ ಸೇರಿದರು.

ಆರಾಧನೆ: ಶ್ರೀ ಸತ್ಯಪ್ರಮೋದತಿರ್ಥರ ಆರಾಧನೆಯು ಅವರ ಮೂಲ ಬೃಂದಾವನ ಸ್ಥಳವಾದ ತಿರುಕೊಯಿಲೂರ ಕ್ಷೇತ್ರದಲ್ಲಿ ಶ್ರೀ ಸತ್ಯಾತ್ಮತೀರ್ಥರ ದಿವ್ಯ ಉಪಸ್ಥಿತಿಯಲ್ಲಿ ಅ. 29, 30 ಹಾಗೂ 31 ರಂದು ಬಹು ವಿಜೃಂಭಣೆಯಿಂದ ನಡೆಯಲಿದೆ.

ಅಲ್ಲದೇ ಅವರ ಮೃತ್ತಿಕಾ ಬೃಂದಾವನವಿರುವ ಅನೇಕ ಸ್ಥಳಗಳಲ್ಲಿ ಆರಾಧನೆ ನಡೆಯಲಿದ್ದು, ಅದರಂತೆ ಕೆಂಭಾವಿ ಯತಿಚತುಷ್ಠಯರ ಬೃಂದಾವನ ಸನ್ನಿಧಾನದಲ್ಲಿ ಶ್ರೀ ಸತ್ಯಪ್ರಮೋದ ತೀರ್ಥರ ಆರಾಧನೆ ಬಹು ವಿಜೃಂಭಣೆಯಿಂದ ನಡೆಯಲಿದ್ದು, ಮೂರು ದಿನ ಆರಾಧನೆ ಸಮಯದಲ್ಲಿ ಬೆಳಗ್ಗೆ ಅಷ್ಟೋತ್ತರ, ಪಂಚಾಮೃತ, ಅಲಂಕಾರ, ಭಜನೆ, ರಥೋತ್ಸವ, ಪಲ್ಲಕ್ಕಿ ಉತ್ಸವ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next