Advertisement

ಅಧಿಕಾರದಿಂದ ಬಿಜೆಪಿ ದೂರವಿಡಿ

01:19 PM Mar 25, 2019 | Lakshmi GovindaRaju |

ಕೊಳ್ಳೇಗಾಲ: ಲೋಕಸಭಾ ಚುನಾವಣೆ ಬಳಿಕ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಧಾನಿಯಾಗಲಿದ್ದು, ಅವರ ಸಂಪುಟದಲ್ಲಿ ಸಂಸದ ಆರ್‌.ಧ್ರುವನಾರಾಯಣ್‌ ಸಚಿವರಾಗಲಿದ್ದಾರೆ. ಅದಕ್ಕಾಗಿ ಅವರನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಹೇಳಿದರು.

Advertisement

ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ತಾಲೂಕಿನ ಚಿಲಕವಾಡಿ ಶಂಭುಲಿಂಗೇಶ್ವರ ಖಾಸಗಿ ಪ್ರೌಢಶಾಲಾ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಹಿಂದುಳಿದ ವರ್ಗಗಳ ಕಲ್ಯಾಣ ಕಾಂಗ್ರೆಸ್‌ ಸರ್ಕಾರದಿಂದ ಮಾತ್ರ ಸಾಧ್ಯವಾಗಿದ್ದು, ಕಾರ್ಯಕರ್ತರು ಮತದಾರರಿಗೆ ಸೂಕ್ತ ತಿಳಿವಳಿಕೆ ನೀಡಿ, ಏ.18ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಮತ ಗಳಿಸಿಕೊಡಬೇಕು ಎಂದರು.

ಸಾಲ ಮನ್ನಾ ಮಾಡದ ಕೇಂದ್ರ ಸರ್ಕಾರ: ಕಾಂಗ್ರೆಸ್‌ ನುಡಿದಂತೆ ನಡೆಯುವ ಪಕ್ಷ, ಕಳೆದ 2004ರಿಂದ 10 ವರ್ಷಗಳ ಕಾಲ ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್‌ ಅವರು ಜನಪರ ಯೋಜನೆಗಳನ್ನು ರೂಪಿಸಿ ರೈತರ ಸ್ವಾಭಿಮಾನಕ್ಕೆ ಧಕ್ಕೆ ಬಾರದಂತೆ ಆಡಳಿತ ನಡೆಸಿದ್ದರು ಮತ್ತು ರೈತರ ಸಾಲ ಸಹ ಮನ್ನಾ ಮಾಡಿದ್ದರು. ಆದರೆ ಎನ್‌ಡಿಎ ಪ್ರಧಾನಿ ನರೇಂದ್ರ ಮೋದಿ ರೈತರ ಸಾಲ ಮನ್ನಾ ಮಾಡದೆ ಅವರ ಸ್ವಾಭಿಮಾನಕ್ಕೆ ಧಕ್ಕೆ ತರಲು ಕೇವಲ 6 ಸಾವಿರ ಹಣವನ್ನು ಖಾತೆಗೆ ಹಾಕುವ ಟೊಳ್ಳು ಭರವಸೆ ನೀಡಿ ರೈತರನ್ನು ವಂಚಿಸಿದ್ದಾರೆ ಎಂದು ಆರೋಪಿಸಿದರು.

ಸಮಿಶ್ರ ಸರ್ಕಾರದಿಂದ ರೈತರ ರಕ್ಷಣೆ: ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ರೈತ ಸಾಲ ಮನ್ನಾ ಮಾಡಿದರು. ಅವರ ನಂತರ ಬಂದ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿದರು. ಆದರೆ ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡುವಲ್ಲಿ ವಿಫ‌ಲರಾಗಿದ್ದಾರೆಂದು ದೂರಿದರು.

ಹ್ಯಾಟ್ರಿಕ್‌ ಗೆಲುವು ಕೊಡಿ: ಸಂಸದ ಆರ್‌.ಧ್ರುವನಾರಾಯಣ್‌ ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿ ಉತ್ತಮ ಸೇವೆ ಸಲ್ಲಿಸಿ, ಜನರ ಕಾಳಜಿಯನ್ನು ಹೊಂದಿದ್ದರು. ಅವರಿಗೆ ಮೂರನೇ ಬಾರಿಗೆ ಹ್ಯಾಟ್ರಿಕ್‌ ಗೆಲುವು ತಂದುಕೊಡಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

Advertisement

ಶ್ರೀಮಂತರ ಪರ ಮೋದಿ: ಸಂಸದ ಆರ್‌.ಧ್ರುವನಾರಾಯಣ್‌ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಣಾಳಿಕೆ ಈಡೇರಿಸಿಲ್ಲ, ಐದು ವರ್ಷ ಆಡಳಿತ ಮಾಡಿ, ಗ್ಯಾಸ್‌, ಪೆಟ್ರೋಲ್‌, ಡೀಸೆಲ್‌ ಬೆಲೆ ಸೇರಿದಂತೆ ಇತರ ಸಾಮಗ್ರಿಗಳ ಬೆಲೆ ಗಗನಕ್ಕೆ ಏರುವಂತೆ ಮಾಡಿರುವುದೇ ಅವರ ದೊಡ್ಡ ಸಾಧನೆಯಾಗಿದೆ. ಪ್ರಧಾನಿ ಮೋದಿರವರು ಬಡವರ ಪರ ನಿಲ್ಲದೆ ಅದಾನಿ, ಅಂಬಾನಿ ಪರ ನಿಂತ ಏಕೈಕ ಪ್ರಧಾನಿ ಆಗಿದ್ದಾರೆ ಎಂದರು.

ರೈತರಿಗೆ ಅಪಮಾನ: ರೈತರ ಖಾತೆಗೆ 6 ಸಾವಿರ ನೀಡುವುದಾಗಿ ಘೋಷಣೆ ಮಾಡಿದ್ದು, ಒಂದು ದಿನಕ್ಕೆ 17 ರೂ. ನಂತೆ ನೀಡಿರುವ ಪರಿಹಾರ ರೈತರಿಗೆ ಅಪಮಾನ ಮಾಡಿದ ಏಕೈಕ ಪ್ರಧಾನಿ ಮೋದಿ ಎಂದು ದೂರಿದರು.

ಗಡಿಯಲ್ಲಿ ಸರಿಯಾದ ಕಾವಲು ಕಾಯದೆ ಅನೇಕ ಉಗ್ರ ಚುಟವಟಿಕೆಗೆ ಮೋದಿ ಸರ್ಕಾರ ಸಾಕ್ಷಿಯಾಗಿದೆ. ಇವರ ಆಡಳಿತದ ಅವಧಿಯಲ್ಲಿ ಉಗ್ರರ ಅಟ್ಟಹಾಸವೇ ಹೆಚ್ಚಾಗಿತ್ತು. ಇದನ್ನು ಸೈನಿಕರು ಹೋರಾಟ ಮಾಡಿ ಹತ್ತಿಕ್ಕಿರುವುದನ್ನು ಪ್ರಧಾನಿ ನರೇಂದ್ರ ಮೋದಿರವರು ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಳ್ಳಬಾರದು ಎಂದರು.

ಪ್ರಸಾದ್‌ಗೆ ತಿರುಗೇಟು: ಬುದ್ಧ, ಬಸವಣ್ಣ ರವರ ತತ್ವವನ್ನು ಪಾಲಿಸುತ್ತಿರುವುದಾಗಿ ಹೇಳಿರುವ ಬಿಜೆಪಿ ಲೋಕಸಭಾ ಅಭ್ಯರ್ಥಿ ವಿ.ಶ್ರೀನಿವಾಸ್‌ ಪ್ರಸಾದ್‌ ತನಗೆ ಕೆಡುಕು ಮಾಡಿದವರ ಬಗ್ಗೆ ಒಳ್ಳೆಯದನ್ನು ಬಯಸಬೇಕು. ಇದು ಬುದ್ಧ ಬಸವರವರ ತತ್ವ. ಆದರೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಬುದ್ಧ , ಬಸವಣ್ಣರವರ ತತ್ವವನ್ನು ಗಾಳಿಗೆ ತೂರಿದ್ದಾರೆಂದು ಅವರ ಆರೋಪಗಳಿಗೆ ತಿರುಗೇಟು ನೀಡಿದರು.

ಕೋಮುವಾದಿ ಪಕ್ಷ ದೂರವಿರಲಿ: ಶಾಸಕ ಯತೀಂದ್ರ ಮಾತನಾಡಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುವುದಾಗಿ ಹೇಳಿದ್ದು, ಇಂತಹ ಕೋಮುವಾದಿ ಪಕ್ಷವನ್ನು ದೂರ ಇಡಬೇಕು. ಬಿಜೆಪಿಯವರು ಈ ಹಿಂದೆ ಪ್ರತಿವರ್ಷ 2 ಕೋಟಿ ಉದ್ಯೋಗ ಮತ್ತು ಹೊರದೇಶದಲ್ಲಿ ಇಟ್ಟಿರುವ ಕಪ್ಪು ಹಣ ತಂದು ಎಲ್ಲರ ಖಾತೆಗೆ 15 ಲಕ್ಷ ನೀಡುವುದಾಗಿ ಹೇಳಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ಉದ್ಯೋಗವನ್ನು ಕೊಟ್ಟಿಲ್ಲ, ಹಣವನ್ನು ಕೊಟ್ಟಿಲ್ಲ. ಇಂತಹವರಿಗೆ ಮತ ನೀಡಬೇಕೆ ಎಂದು ಕಾರ್ಯಕರ್ತರನ್ನು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next