Advertisement

ಕಿಂಡಿ ಅಣೆಕಟ್ಟು ಹೂಳೆತ್ತಲು ನಿರ್ದೇಶನ: ಬೊಮ್ಮಾಯಿ

09:45 AM Jan 08, 2020 | Team Udayavani |

ಉಡುಪಿ: ಜಿ.ಪಂ. ಸಭಾಂಗಣದಲ್ಲಿ ಮಂಗಳವಾರ ಗೃಹ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ ಕಿಂಡಿ ಅಣೆಕಟ್ಟುಗಳಲ್ಲಿ ತುಂಬಿದ ಹೂಳಿನ ವಿಲೇವಾರಿ, ವಸತಿ ಸಮಸ್ಯೆ ನಿವಾರಣೆ, ಪ್ರವಾಹಪೀಡಿತರಿಗೆ ಸಿಗಬೇಕಾದ ಪರಿಹಾರ ವಿತರಣೆಗಳಿಗೆ ನಿರ್ದೇಶನ ನೀಡಲಾಯಿತು.

Advertisement

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೊಮ್ಮಾಯಿಯವರು, ಕಿಂಡಿ ಅಣೆಕಟ್ಟಿನಲ್ಲಿ ತುಂಬಿದ ಹೂಳನ್ನು ವಿಲೇ ಮಾಡಲು ಆಯಾ ಗ್ರಾ.ಪಂ. ಪಿಡಿಒ, ನಗರ ಪ್ರದೇಶದಲ್ಲಿ ಪೌರಾಯುಕ್ತರು, ಮುಖ್ಯಾಧಿಕಾರಿಗಳು ಜವಾಬ್ದಾರಿ ನೀಡಲಾಗಿದೆ. ತಾ.ಪಂ. ಮೇಲ್ವಿಚಾರಣೆ ನಡೆಸಲಿದೆ. ಇಲ್ಲಿ ದೊರಕಿದ ಮರಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ನೀಡಿ ಏಲಂ ಮೂಲಕ ವಿಲೇವಾರಿ ಮಾಡಬೇಕು. ಸುಮಾರು 80-90 ಲ.ರೂ. ಮೌಲ್ಯದ ಮರಳು ಸಿಗಬಹುದು ಎಂದು ಅಂದಾಜಿಸಲಾಗಿದೆ. ಈ ಮೊತ್ತವನ್ನು ಹೂಳೆತ್ತಲು ಬಳಸುತ್ತೇವೆ ಎಂದರು.

ಸಿಆರ್‌ಝಡ್‌- ನಾನ್‌ಸಿಆರ್‌ಝಡ್‌ ಮರಳುಗಾರಿಕೆ, ಕ್ವಾರಿ ಮತ್ತು ಡೀಮ್ಡ್ ಅರಣ್ಯ ಸಮಸ್ಯೆ ಕುರಿತು ಮುಂದಿನ ವಾರ ಅರಣ್ಯ, ಪರಿಸರ, ಗಣಿ – ಭೂವಿಜ್ಞಾನ ಸಚಿವರ ನೇತೃತ್ವದಲ್ಲಿ ಸಭೆ ನಡೆಸಲಾಗುವುದು ಎಂದರು.

ವಸತಿ ಸೌಲಭ್ಯ ಸಮಸ್ಯೆ
2018-19ನೆಯ ಸಾಲಿನಲ್ಲಿ ಮನೆ ಕಟ್ಟಿದವರಿಗೆ ಹಣ ಬರಬೇಕಾಗಿದೆ. ಹೋದ ವರ್ಷ 3,302 ಮನೆಗಳ ಫ‌ಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. 2019-20ರಲ್ಲಿ ಫ‌ಲಾನುಭವಿಗಳ ಆಯ್ಕೆಯೇ ಆರಂಭವಾಗಿಲ್ಲ. ಬುಧವಾರ ವಸತಿ ಸಚಿವರು ಉಡುಪಿಗೆ ಬಂದಾಗ ಅವರಲ್ಲಿ ಚರ್ಚಿಸುತ್ತೇವೆ ಎಂದು ಬೊಮ್ಮಾಯಿ ತಿಳಿಸಿದರು. ಪ್ರಧಾನಿಯವರ ಮಹತ್ವಾಕಾಂಕ್ಷಿ ಯೋಜನೆ ಕೃಷಿ ಸಮ್ಮಾನ್‌ನಲ್ಲಿ 1.39 ಲಕ್ಷ ರೈತರು ಹೆಸರು ನೋಂದಾಯಿಸಿದ್ದಾರೆ. ಇವರಲ್ಲಿ ಕೆಲವರಿಗೆ ಎರಡು, ಕೆಲವರಿಗೆ ಮೂರು ಕಂತು ಬಂದಿವೆ. ಕೆಲವು ಜನರಿಗೆ ನಾಲ್ಕನೆಯ ಕಂತೂ ಜಮೆಯಾಗಿದೆ ಎಂದರು.

ಅಂಬೇಡ್ಕರ್‌, ವಾಲ್ಮೀಕಿ, ಪರಿಶಿಷ್ಟ ಜಾತಿ – ಪಂಗಡದ ನಿಗಮದ ಗಂಗಾ ಕಲ್ಯಾಣ ಯೋಜನೆ ವಿಳಂಬವಾಗುತ್ತಿದೆ. 2018-19ರಲ್ಲಿ ಕೆಲಸ ಆಗಿಲ್ಲ. ಮಾರ್ಚ್‌ ಅಂತ್ಯದೊಳಗೆ ಇದನ್ನು ಮುಗಿಸಲು, ಜನವರಿ – ಫೆಬ್ರವರಿಯಲ್ಲಿ ಕೆಲಸ ಆರಂಭಿಸಲು ಸೂಚಿಸಿದ್ದೇವೆ ಎಂದರು.

Advertisement

ಪಡಿತರ ಚೀಟಿ: ವಿಲೇಗೆ ಸೂಚನೆ
ಸುಮಾರು 3,000 ಪಡಿತರ ಚೀಟಿ ಬಾಕಿ ಇದೆ. ಇದನ್ನು ಫೆಬ್ರವರಿ ಅಂತ್ಯದೊಳಗೆ ವಿಲೆ ಮಾಡಲು ಸೂಚಿಸಿದ್ದೇವೆ. 2018-19ರ ಗ್ರಾಮೀಣ ಕುಡಿಯುವ ನೀರಿನ ಯೋಜನೆಯನ್ನು ತಿಂಗಳಾಂತ್ಯದಲ್ಲಿ ಮುಗಿಸಲು ತಿಳಿಸಿದ್ದೇವೆ. ಮಳೆ ಹಾನಿ ಪರಿಹಾರಕ್ಕಾಗಿ 20 ಕೋ.ರೂ. ಮಂಜೂರು ಮಾಡಿದ್ದೇವೆ. ಶಾಲೆ, ರಸ್ತೆ, ಅಂಗನವಾಡಿ ಕಟ್ಟಡಗಳ ದುರಸ್ತಿಗೆ ತಿಳಿಸಲಾಗಿದೆ. ಶಾಲಾ ಮಕ್ಕಳಿಗೆ ಎರಡು ಜತೆ ಸಮವಸ್ತ್ರಗಳನ್ನು ಕೂಡಲೇ ವಿತರಿಸಲು ಬೇಕಾದ ಕ್ರಮ ಕೈಗೊಳ್ಳಬೇಕು. 1,191 ರೈತರಿಗೆ ಪರಿಹಾರಕ್ಕೆ ಸಾಫ್ಟ್ವೇರ್‌ ದಾಖಲಾಗಿದೆ. ಆದಷ್ಟು ಶೀಘ್ರದಲ್ಲಿ ವಿತರಣೆಯಾಗಲಿದೆ.

ಮಳೆಯಿಂದ ಹಾನಿಗೊಳಗಾದ 46 ಎ ಶ್ರೇಣಿ, 144 ಬಿ ಶ್ರೇಣಿ, 412 ಸಿ ಶ್ರೇಣಿ ಮನೆಗಳಿಗೆ ರಾಜೀವ್‌ಗಾಂಧಿ ವಸತಿ ನಿಗಮದಿಂದ ಮಂಜೂರಾಗಲಿದೆ. ಪೂರ್ತಿ ಮನೆ ಹಾನಿಗೊಂಡವರಿಗೆ 5 ಲ.ರೂ. ಪರಿಹಾರವನ್ನು ಸರಕಾರ ಹೆಚ್ಚಿಸಿದೆ ಎಂದರು.
ಹೂಡಿಕೆದಾರರ ಸಮ್ಮೇಳನ, ಆಸ್ಪತ್ರೆ ಮೇಲ್ದರ್ಜೆ ಜಿಲ್ಲೆಯಲ್ಲಿ ಭೂ ಬ್ಯಾಂಕ್‌ ಎಷ್ಟಿದೆ ಎಂದು ವರದಿ ತರಿಸಿಕೊಂಡು ಹೂಡಿಕೆದಾರರ ಸಮ್ಮೇಳನ ನಡೆಸಲು ಚಿಂತನೆ ನಡೆಸಿದ್ದೇವೆ. ಸರಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರನ್ನು ಭರ್ತಿಗೊಳಿಸಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಿದ್ದೇವೆ.

ಜಿಲ್ಲಾಸ್ಪತ್ರೆಯ ಹಾಲಿ ಇರುವ 120 ಬೆಡ್‌ಗಳನ್ನು 250ಕ್ಕೇರಿಸಲು ನಿರ್ಣಯ ತಳೆಯಲಾಗಿದೆ. ಇದರ ಬಗ್ಗೆ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರಲ್ಲಿ ಚರ್ಚಿಸುತ್ತೇನೆ. ಈ ಬಾರಿ ಬಜೆಟ್‌ನಲ್ಲಿ ಹಣ ತೆಗೆದಿರಿಸಿ 2020-21ರಲ್ಲಿ ಅಭಿವೃದ್ಧಿ ಕೆಲಸ ಆರಂಭಿಸುತ್ತೇವೆ ಎಂದು ಬೊಮ್ಮಾಯಿ ಹೇಳಿದರು. ಹಾಜಿ ಅಬ್ದುಲ್ಲಾ ಆಸ್ಪತ್ರೆ ಕುರಿತು ಹಿಂದಿನ ಸರಕಾರ ನಡೆಸಿದ ಒಪ್ಪಂದವನ್ನು ಅಧ್ಯಯನ ನಡೆಸಿ ಆರೋಗ್ಯ ಸಚಿವರಲ್ಲಿ ಚರ್ಚಿಸುತ್ತೇನೆ ಎಂದು ಬೊಮ್ಮಾಯಿ ತಿಳಿಸಿದರು.

ಸಕ್ಕರೆ ಕಾರ್ಖಾನೆ ಕುರಿತು ಮಾಹಿತಿ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ವಾರಾಹಿ ಯೋಜನೆಯನ್ನು ಪೂರ್ಣಗೊಳಿಸಲು ಭೂಸ್ವಾಧೀನ ಆಗಬೇಕಾಗಿದೆ. ಇದರ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.

ಬಂದ್‌ ಗೆ ಬಂದೋಬಸ್ತ್
ಬುಧವಾರದ ಬಂದ್‌ ಕುರಿತಂತೆ ಕಾನೂನು ಸುವ್ಯವಸ್ಥೆ ಕಾಪಾಡಲು ಬೇಕಾದ ಬಂದೋಬಸ್ತ್ ಏರ್ಪಡಿಸಲಾಗಿದೆ. ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಮೆರವಣಿಗೆಯನ್ನು ಮಾಡುವಂತಿಲ್ಲ ಎಂದರು. ಕೇಂದ್ರ ಗೃಹ ಸಚಿವರು ಮಂಗಳೂರಿಗೆ ಬರುವಾಗ ‘ಗೋಬ್ಯಾಕ್‌’ ಚಳವಳಿ ನಡೆಸುವ ಕುರಿತಂತೆ ಇದು ಸಂವಿಧಾನ, ಪ್ರಜಾಪ್ರಭುತ್ವಕ್ಕೆ ವಿರೋಧಿಯಾದ ನಡೆ ಎಂದರು.

ಕೊರಗರ ಅಭಿವೃದ್ಧಿ
ಕೊರಗರ ಅಭಿವೃದ್ಧಿಗೆ 10 ಕೋ.ರೂ. ಬಿಡುಗಡೆಯಾಗಿದ್ದು 6.36 ಕೋ.ರೂ. ಕಾಮಗಾರಿಗಳಿಗೆ ಅನುಮೋದನೆ ದೊರಕಿದೆ. 16 ಕಾಮಗಾರಿಗಳನ್ನು ಜನವರಿಯೊಳಗೆ, 9 ಕಾಮಗಾರಿಗಳನ್ನು ಎಪ್ರಿಲ್‌ ಅಂತ್ಯದೊಳಗೆ ಮುಗಿಸುವುದಾಗಿ ತಿಳಿಸಿದರು. ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಕಾಮಗಾರಿಗಳು ಫೆಬ್ರವರಿ ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದರು.

ಡ್ರಗ್ಸ್‌ ಜಾಲ ನಿರ್ಮೂಲನಕ್ಕೆ ಆದೇಶ
ಡ್ರಗ್ಸ್‌ ಮಾಫಿಯಾ ಮೇಲೆ ಯುದ್ಧ ಸಾರಿ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕು. ಈ ಜಾಲವನ್ನು ಸಂಪೂರ್ಣ ಮಟ್ಟಹಾಕಬೇಕು. ಜಾಲದಲ್ಲಿ ತೊಡಗಿರುವ ಕಿಂಗ್‌ಪಿನ್‌ಗಳನ್ನು ಬಂಧಿಸಿ ಜಾಲವನ್ನು ನಿಷ್ಕ್ರಿಯಗೊಳಿಸಬೇಕು ಎಂದು ಎಸ್‌ಪಿಯವರಿಗೆ ಬೊಮ್ಮಾಯಿ ಆದೇಶ ನೀಡಿದರು.

ಸಭೆಯಲ್ಲಿ ವಿಧಾನಸಭೆಯ ಮುಖ್ಯ ಸಚೇತಕ ವಿ. ಸುನಿಲ್‌ಕುಮಾರ್‌, ಶಾಸಕರಾದ ಕೆ. ರಘುಪತಿ ಭಟ್‌, ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿ. ಎಂ. ಸುಕುಮಾರ ಶೆಟ್ಟಿ, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಎಸ್‌ಪಿ ವಿಷ್ಣುವರ್ಧನ್‌, ಜಿ.ಪಂ. ಸಿಇಒ ಪ್ರೀತಿ ಗೆಹಲೋತ್‌, ಡಿಎಫ್ಒ ಕಮಲ, ಜಿ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷರಾದ ಸುಮಿತ್‌ ಶೆಟ್ಟಿ, ಪ್ರತಾಪ್‌ ಹೆಗ್ಡೆ ಮಾರಾಳಿ, ಶೋಭಾ ಜಿ. ಪುತ್ರನ್‌, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next