Advertisement

KC Reddy: ಜವಾಬ್ದಾರಿ ಸರ್ಕಾರದ ರೂವಾರಿ ಕೆ.ಸಿ.ರೆಡ್ಡಿ

05:07 PM Aug 15, 2023 | Team Udayavani |

ಕೋಲಾರ: ವಕೀಲರಾಗಿ, ಚಿನ್ನದ ಗಣಿ ಕಾರ್ಮಿಕ ಮುಖಂಡರಾಗಿ, ರೈತ ಹೋರಾಟಗಾರರಾಗಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿ, ತಮ್ಮದೇ ಸಾರಥ್ಯದಲ್ಲಿ ರಾಜಕೀಯ ಪಕ್ಷಗಳನ್ನು ಹುಟ್ಟುಹಾಕಿ, ಮಹಾತ್ಮಗಾಂಧೀಜಿ ಭೇಟಿಯ ನಂತರ ಕಾಂಗ್ರೆಸ್‌ ಸೇರ್ಪಡೆಯಾಗಿ, ಸ್ವಾತಂತ್ರ್ಯ ನಂತರ ಜವಾಬ್ದಾರಿ ಸರ್ಕಾರಕ್ಕೆ ಹೋರಾಟ ನಡೆಸಿ ಮೈಸೂರು ರಾಜ್ಯದ ಮೊದಲಮುಖ್ಯಮಂತ್ರಿಯಾಗಿ ಗಮನ ಸೆಳೆದಿದ್ದವರು ಕ್ಯಾಸಂಬಳ್ಳಿ ಚೆಂಗಲರಾಯರೆಡ್ಡಿ ಅಥವಾ ಕೆ.ಸಿ.ರೆಡ್ಡಿ.

Advertisement

ಚೆಂಗಲರಾಯರೆಡ್ಡಿ ಜನನ: ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕ್ಯಾಸಂಬಳ್ಳಿ ಗ್ರಾಮದ ಶ್ರೀಮಂತ ಭೂಮಾಲೀಕ ದಂಪತಿ ಗಂಗೋಜಮ್ಮ ಹಾಗೂ ವೆಂಕಟರೆಡ್ಡಿ ಪುತ್ರರಾಗಿ 1902 ಮೇ 4ರ ಮಧ್ಯರಾತ್ರಿ ಕೆ.ಸಿ.ರೆಡ್ಡಿ ಜನಿಸಿದರು. ತಮ್ಮ ಇಡೀ ಜೀವನವನ್ನು ಕಾರ್ಮಿಕರು, ಬಡವರು ಹಾಗೂ ನಿರ್ಗತಿಕರು ಸೇರಿದಂತೆ ಒಟ್ಟು ಸಮಾಜದ ಒಳಿತಿಗಾಗಿ ಶ್ರಮಿಸಿದ್ದರು. ಕೋಲಾರ, ಬೆಂಗಳೂರು, ಚನ್ನೈ ನಗರಗಳಲ್ಲಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಹಂತದ ವಿದ್ಯಾಭ್ಯಾಸವನ್ನು ಮಾಡಿ ಅಂತಿಮವಾಗಿ ವಕೀಲರಾಗಿ ಹೊರ ಹೊಮ್ಮಿದ್ದರು. ವಕೀಲರಾಗಿದ್ದಾಗಲೇ ಚಿನ್ನದ ಗಣಿ ಕಾರ್ಮಿಕರ ಹೋರಾಟಕ್ಕೆ ಧುಮುಕಿದ್ದರು.

ರಾಜಕೀಯ ಪ್ರವೇಶ: ಮದ್ರಾಸ್‌ ವ್ಯಾಸಾಂಗದಲ್ಲಿದ್ದಾಗಲೇ ಕೆ.ಸಿ.ರೆಡ್ಡಿ ಯುವಜನ ಸಂಘವನ್ನು ಸ್ಥಾಪಿಸಿ ಕಾರ್ಯದರ್ಶಿಗಳಾಗಿದ್ದರು. ಸ್ವಾತಂತ್ರ್ಯ ಚಳವಳಿ ಕುರಿತಂತೆ ಆಸಕ್ತಿ ಹೊಂದಿದ್ದರೂ ಕಾಂಗ್ರೆಸ್‌ ಪಕ್ಷದ ಧೋರಣೆಯಿಂದಾಗಿ ದೂರವಿದ್ದರು. ಹಾಗೆಯೇ ಕಾಂಗ್ರೆಸ್‌ ಧೋರಣೆ ವಿರೋಧಿಸಿ ಹುಟ್ಟಿಕೊಂಡಿದ್ದ  ಪ್ರಜಾಮಿತ್ರ ಮಂಡಳಿಯು ಜವಾಬ್ದಾರಿ ಸ‌ರ್ಕಾರ ರಚನೆ ಕುರಿತಂತೆ ಹೊಂದಿದ್ದ ಧೋರಣೆ ವಿರೋಧಿಸಿ ಅದನ್ನು ಸೇರುವ ಮನಸು ಮಾಡಿರಲಿಲ್ಲ. ಅಂತಿಮವಾಗಿ ಕೋಲಾರ ಜಿಲ್ಲೆಯ ಸಾಹಿತಿ ಡಿ.ವಿ.ಗುಂಡಪ್ಪ ಮತ್ತು ಚನ್ನಪಟ್ಟಣದ ವಿ.ವೆಂಕಟಪ್ಪರೊಂದಿಗೆ ಸೇರಿ ಪ್ರಜಾಪಕ್ಷವನ್ನು ಸ್ಥಾಪಿಸಿ ಪ್ರಥಮ ಅಧ್ಯಕ್ಷರಾಗಿ ಆಯ್ಕೆಯಾದರು. ಇದೇ ಪಕ್ಷದಿಂದ ಪ್ರಜಾಪ್ರತಿನಿಧಿ ಸಭೆಗೂ ಆಯ್ಕೆಯಾದರು. ರೈತ, ಕಾರ್ಮಿಕ, ಹಿಂದುಳಿದವರಿಗೆ ಮೂಲಸೌಕರ್ಯಗಳಕುರಿತಂತೆ ಧ್ವನಿ ಎತ್ತಿದ್ದರು. ಪ್ರಜಾಮಿತ್ರ ಮಂಡಳಿ ರೆಡ್ಡಿ ನೇತೃತ್ವದ ಪ್ರಜಾಪಕ್ಷ ಕುರಿತು ಪ್ರಭಾವಿತವಾಗಿತ್ತು. ಎರಡೂ ಪಕ್ಷಗಳು ಸೇರಿ 1934ರಲ್ಲಿ ಪ್ರಜಾ ಸಂಯುಕ್ತ ಪಕ್ಷವನ್ನು ಆರಂಭಿಸಿದ್ದವು. ಪ್ರಜಾಸಂಯುಕ್ತ ಪಕ್ಷದಿಂದ 1937 ರಲ್ಲಿ ಪ್ರಜಾಪ್ರತಿನಿಧಿ ಸಭೆಗೆ ಹೆಚ್ಚಿನ ಸಂಖ್ಯೆಯ ಸದಸ್ಯರು ಆಯ್ಕೆಯಾಗುವಂತಾಗಿತ್ತು. ಕೆ.ಸಿ.ರೆಡ್ಡಿಯವರು ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಲು ಸಹಕಾರಿಯಾಯಿತು.

1936ರಲ್ಲಿ ಗಾಂಧೀಜಿ ಭೇಟಿ: 1936ರ ಹೊತ್ತಿಗೆ ಮಹಾತ್ಮ ಗಾಂಧೀಜಿಯವರು ಅಸ್ಪೃಶ್ಯತಾ ನಿವಾರಣ ವಿಚಾರದಲ್ಲಿ ಕೋಲಾರ ಜಿಲ್ಲೆಗೆ ಆಗಮಿಸಿದ್ದರು. ಆಗಿನ ಅವಿಭಜಿತ ಕೋಲಾರ ಜಿಲ್ಲೆಯ ಭಾಗವಾಗಿದ್ದ ನಂದಿ ಬೆಟ್ಟದಲ್ಲಿದ್ದ ಗಾಂಧೀಜಿಯವರನ್ನು ಕೆ.ಸಿ.ರೆಡ್ಡಿ ಹಲವಾರು ಬಾರಿ ಭೇಟಿ ಮಾಡಲು ಅವಕಾಶ ಸಿಕ್ಕಿತು. ಗಾಂಧೀಜಿಯವರ ಆಹ್ವಾನದ ಮೇರೆಗೆ ಕಾಂಗ್ರೆಸ್‌ ಪಕ್ಷದೊಂದಿಗೆ ಪ್ರಜಾಸಂಯುಕ್ತ ಪಕ್ಷವನ್ನು ವಿಲೀನಗೊಳಿಸಲು ನಿರ್ಧರಿಸಿದ್ದರು.

ವಿವಿಧ ಹೋರಾಟ: ಕಾಂಗ್ರೆಸ್‌ನೊಂದಿಗೆ ವಿಲೀನ ಸಂದರ್ಭದಲ್ಲಿಯೇ ವಿರೋಧ ಪಕ್ಷದನಾಯಕರಾಗಿದ್ದ ಕೆ.ಸಿ.ರೆಡ್ಡಿ ಬಂಧನವಾಯಿತು. ಆನಂತರ ಮದ್ದೂರಿನ ಶಿವಪುರ ಹೋರಾಟ, ಗೌರಿಬಿದನೂರಿನ ವಿಧುರಾಶ್ವತ್ಥ ಹೋರಾಟ, ಪಾನನಿಷೇಧ ಹೋರಾಟ, ಕೆಜಿಎಫ್‌ ಸತ್ಯಾಗ್ರಹ, ಕ್ವಿಟ್‌ ಇಂಡಿಯಾ ಚಳವಳಿಗಳಲ್ಲಿ ಭಾಗವಹಿಸುವ ಮೂಲಕ ಆಗಿನ ಕಾಲಕ್ಕೆ ಕೋಲಾರ ಜಿಲ್ಲೆಯನ್ನು ಕಾಂಗ್ರೆಸ್‌ ಭದ್ರಕೋಟೆಯಾಗಿಸಿದರು. 1938 ರಲ್ಲಿ ಗಣ್ಯ ಶ್ರೀಮಂತ ಕುಟುಂಬದ ಹೂಡಿಯ ಗುರುವಾರೆಡ್ಡಿಯವರ ಪುತ್ರಿಸರೋಜಮ್ಮರೊಂದಿಗೆ ವಿವಾಹವಾದರು. ವಿವಾಹ ಸಂದರ್ಭದಲ್ಲಿ ಕೆ.ಸಿ.ರೆಡ್ಡಿಯವರಿಗೆ ಸರಕಾರಿ ನ್ಯಾಯಾಧೀಶರಾಗುವ ಹುದ್ದೆಯ ಆಮಿಷವನ್ನು ತೋರಿದರೂ, ಹೋರಾಟ ಮನೋಭಾವದ ರೆಡ್ಡಿ ಇದನ್ನು ತಿರಸ್ಕರಿಸಿ ನೌಕರಿಗೆ ಸೇರಿರಲಿಲ್ಲ.

Advertisement

ಮಧ್ಯಪ್ರದೇಶದಲ್ಲಿ ರಾಜ್ಯಪಾಲರಾಗಿ ಸೇವೆ: 1952ರ ನಂತರ ರಾಜ್ಯಸಭಾ ಸದಸ್ಯರಾಗಿ ನೆಹರೂ ಸಂಪುಟದಲ್ಲಿ ಕೇಂದ್ರ ಉತ್ಪಾದನಾ ಸಚಿವರಾಗಿ, ದೇಶಾದ್ಯಂತ ಅನೇಕ ಕಬ್ಬಿಣ ಉಕ್ಕು ಕಾರ್ಖಾನೆಗಳ ಸ್ಥಾಪನೆಗೆ ಮುಂದಾದರು. ಬೆಂಗಳೂರಿನ ಎಚ್‌ಎಂಟಿ ಕಾರ್ಖಾನೆಯು ಇವರ ಅವಧಿಯಲ್ಲೇ ಸ್ಥಾಪನೆಯಾಯಿತು. 1957ರಲ್ಲಿ ಲೋಕಸಭೆಗೆ ಆಯ್ಕೆಯಾಗಿ ಕಾಮಗಾರಿ, ವಸತಿ ಹಾಗೂ  ಪೂರೈಕೆ ಶಾಖೆ ಸಚಿವರಾಗಿ, 1960ರಲ್ಲಿ ವಾಣಿಜ್ಯ ಕೈಗಾರಿಕೆಗಳ ಮಂತ್ರಿಯಾಗಿ, 1962 ರವರೆಗೂ ಮುಂದುವರಿದರು. ಲೋಕಸಭೆಯಲ್ಲಿ ಉಪನಾಯಕರಾಗಿಯೂ ಆಯ್ಕೆಯಾಗಿದ್ದರು. 1964ರಿಂದ 1971ರವರೆಗೂ ಮಧ್ಯಪ್ರದೇಶದಲ್ಲಿ ರಾಜ್ಯಪಾಲರಾಗಿ ನೇಮಕಗೊಂಡಿದ್ದ ರೆಡ್ಡಿಯವರು ಬೆಂಗಳೂರಿನಲ್ಲಿ  ವಿಶ್ರಾಂತ ಜೀವನ ನಡೆಸುತ್ತಿದ್ದಾಗ 1976 ಫೆಬ್ರವರಿ 27 ರಂದು ದಿವಂಗತರಾದರು. ಕೋಲಾರ ನೆಲದಲ್ಲಿ ಹುಟ್ಟಿ ಸ್ವಾತಂತ್ರ್ಯ ಸಂಗ್ರಾಮ ಮತ್ತು ಆನಂತರದ ಜವಾಬ್ದಾರಿ ಸರ್ಕಾರದ ಆಡಳಿತಕ್ಕೆ ದಿಕ್ಸೂಚಿಯಾಗಿ ತಮ್ಮದೇ ಛಾಪು ಮೂಡಿಸಿ ಹೋಗಿರುವ ಕೆ.ಸಿ.ರೆಡ್ಡಿ ಅವರನ್ನು ಹೊಸಪೀಳಿಗೆ 77ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬೇಕಿದೆ.

42 ದಿನದ ಉಗ್ರ ಚಳವಳಿಯಲ್ಲಿ 20 ಮಂದಿ ಬಲಿದಾನ:

1947ರಲ್ಲಿ ದೇಶವು ಸ್ವಾತಂತ್ರ್ಯವಾದರೂ, ಮೈಸೂರು ಸಂಸ್ಥಾನವು ಜವಾಬ್ದಾರಿ ಸ‌ರ್ಕಾರ ರಚಿಸುವ ವಿಚಾರದಲ್ಲಿ ಆಸಕ್ತಿ ತೋರಿಸುತ್ತಿರಲಿಲ್ಲ. ಇದರ ವಿರುದ್ಧ ಕೆ.ಸಿ.ರೆಡ್ಡಿ ನೇತೃತ್ವದಲ್ಲಿ ಮೈಸೂರು ಚಲೋ ಹೋರಾಟಕ್ಕೆ ಕರೆ ನೀಡಲಾಯಿತು. ಹೋರಾಟ ರೂಪಿಸಿ ಜವಾಬ್ದಾರಿ ಸರ್ಕಾರಕ್ಕಾಗಿ ಆಗ್ರಹಿಸಲಾಯಿತು. 42 ದಿನಗಳ ಉಗ್ರ ಚಳವಳಿ, 20 ಮಂದಿ ಬಲಿದಾನಗಳ ಹೋರಾಟದ ನಂತರ ಸರ್ಕಾರ ಜವಾಬ್ದಾರಿ ಸರ್ಕಾರಕ್ಕೆ ಒಪ್ಪಿಗೆ ನೀಡಿತು. ಕೆ.ಸಿ.ರೆಡ್ಡಿ ಮುಖ್ಯಮಂತ್ರಿಯಾಗಿ 9 ಮಂದಿ ಮಂತ್ರಿಮಂಡಲದ ಸರ್ಕಾರ 29.10. 1947ರಲ್ಲಿ ಅಧಿಕಾರಕ್ಕೆ ಬಂದಿತು. ಆನಂತರ 1952ರವರೆಗೂ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದರು. ಆನಂತರ ವಿಧಾನಸಭೆಗೆ ಸ್ಪರ್ಧಿಸಲಿಲ್ಲ.

– ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next