Advertisement

“ಸಮನ್ವಯ ಕವಿಯಾಗಿ ವ್ಯಕ್ತಿತ್ವ ರೂಪಿಸಿದ ಕಯ್ಯಾರ’

08:09 PM Aug 12, 2019 | Sriram |

ಕುಂಬಳೆ: ದುಡಿತವೇ ಜೀವನ ವೆಂಬ ಸಂದೇಶದೊಂದಿಗೆ ಬದುಕಿದ ನಾಡೋಜ ಕಯ್ಯಾ ರರ ಬದುಕು ಮತ್ತು ಬರಹಗಳು ಬಹುಮುಖದ ವ್ಯಕ್ತಿತ್ವಗಳಿಂದ ಕನ್ನಡದ ಶಕ್ತಿಯಾದವರು. ನವೋದಯ ಕಾಲ ಘಟ್ಟದಲ್ಲಿ ವಿಸ್ತೃತವಾದ ಸಾಹಿತ್ಯ ಕೃತಿ ಮಾಡಿದ ಅವರು ಯಾವ ಮನೋಧರ್ಮಕ್ಕೂ ಅಂಟದೆ ಸಮನ್ವಯ ಕವಿಯಾಗಿ ವ್ಯಕ್ತಿತ್ವ ರೂಪಿಸಿದವರು ಎಂದು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜು ಮಂಜೇಶ್ವರದ ಸಹಾಯಕ ಪ್ರಾಧ್ಯಾಪಕ ಶಿವಶಂಕರ ಪಿ. ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಹಾಗೂ ಧರ್ಮತ್ತಡ್ಕದ ಶ್ರೀ ದುರ್ಗಾಪರಮೇಶ್ವರಿ ಹೈಯರ್‌ ಸೆಕೆಂಡರಿ ಶಾಲೆ ಇವುಗಳ ಜಂಟಿ ಆಶ್ರಯದಲ್ಲಿ ಧರ್ಮ ತ್ತಡ್ಕದ ಶ್ರೀ ದುರ್ಗಾಪರಮೇಶ್ವರಿ ಅನುದಾನಿತ ಶಾಲಾ ಪರಿಸರದಲ್ಲಿ ನಡೆದ ನಾಡೋಜ ದಿ| ಕಯ್ಯಾರ ಕಿಂಞಿಣ್ಣ ರೈ ಅವರ ಪುಣ್ಯ ಸಂಸ್ಮರಣಾ ಕಾರ್ಯಕ್ರಮದಲ್ಲಿ ಸಂಸ್ಮರಣಾ ಭಾಷಣಗೈದು ಅವರು ಮಾತನಾಡಿದರು.

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಅನುಯಾಯಿಯಾಗಿ ಗಾಂಧಿ ತತ್ವ, ಸಂದೇಶಗಳನ್ನು ಅನುಸರಿಸಿ, ಸಾಕಾರ ತೆಗೆ ಶ್ರಮಿಸಿದ ಕಯ್ಯಾರರು ಗ್ರಾಮೋ ದ್ಧಾರ, ಹರಿಜನೋದ್ಧಾರದ ಕನಸು ಗಳೊಂದಿಗೆ ರಾಜಕೀಯ ಕ್ಷೇತ್ರದಲ್ಲೂ ಕೈಯಾಡಿಸಿ ಯಶಸ್ವಿಯಾದ ಮಹಾನ್‌ ಸುಧಾರಕರಾಗಿದ್ದರು ಎಂದು ತಿಳಿಸಿದ ಅವರು ಲೇಖನಿಯ ಸಮಕ್ಕೆ ನೇಗಿಲನ್ನೂ ಹಿಡಿದು ಸಾಹಿತ್ಯ ಮತ್ತು ವ್ಯವಸಾಯದಲ್ಲಿ ತೊಡಗಿಸಿಕೊಂಡು ನೆಲದ ಹಸಿರೊಂದಿಗೆ ಅಕ್ಷರವನ್ನು ಉಸಿರಾಗಿಸಿದ ಅಪೂರ್ವ ವ್ಯಕ್ತಿತ್ವ ಕಯ್ಯಾರರದು ಎಂದು ಅವರು ತಿಳಿಸಿದರು.

ಕಾಸರಗೋಡು ಕೇವಲ ಕನ್ನಡ ನೆಲವಾಗಿರದೆ, ಅದು ಕನ್ನಡದ ಪಂಥ ಎನ್ನುವುದನ್ನು ಸಾರಿದವರು ಕಯ್ಯಾರರು. ಕನ್ನಡಾಂತರ್ಗತ ತುಳುನಾಡಿನ ಭಾರತ ಎಂಬ ವಿಶಾಲ ಪರಿಕಲ್ಪನೆಯ ಕವಿ ವಿಶ್ವಕವಿಯ ಮಟ್ಟದಲ್ಲಿ ಬೆಳೆದವರು ಎಂದು ತಿಳಿಸಿದರು.

ಕಾಸರಗೋಡಿನ ಯುವ ಪದವೀಧರರು ರಾಜ್ಯ ಲೋಕಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವುದರ ಮೂಲಕ ಸರಕಾರಿ ಉದ್ಯೋಗಗಳನ್ನು ಪಡೆಯುವಲ್ಲಿ ಪ್ರಯತ್ನಿಸಬೇಕು. ಆ ಮೂಲಕ ಕಯ್ಯಾರರ ಹೋರಾಟಕ್ಕೆ ಮೌಲ್ಯ ಕಲ್ಪಿಸಿದಂತಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಕಸಾಪ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್‌.ವಿ.ಭಟ್‌ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ವೈವಿಧ್ಯಮಯ ವ್ಯಕ್ತಿತ್ವದ ಕಯ್ಯಾರರ ಸಮಗ್ರ ಚಿಂತನೆಗಳು
ಕಾಸರಗೋಡಿಗೆ ಸಂಬಂಧಿಸಿ ಎಲ್ಲಾ ಕಾಲಕ್ಕೂ ಪ್ರಸ್ತುತವಾದುದು. ಇಲ್ಲಿಯ ಕನ್ನಡ ಭಾಷೆ, ಸಂಸ್ಕೃತಿಯ ಮೇಲೆ ಆಗುತ್ತಿರುವ ನಿರಂತರ ಹಕ್ಕುಚ್ಯುತಿಗಳಿಗೆ ಒಗ್ಗಟ್ಟಿನ ಹೋರಾಟದ ಅಗತ್ಯ ಇದೆ ಎಂದರು. ಯುವ ಸಮುದಾಯ ಹೆಚ್ಚು ಜವಾಬ್ದಾರಿಯುತವಾಗಿ ಗಡಿನಾಡಿನ ಕನ್ನಡ ಅಸ್ಮಿತೆಯನ್ನು ಹೊಸಬಗೆಯಲ್ಲಿ ಕಟ್ಟಿ ಬೆಳೆಸಲು ಮುನ್ನುಗ್ಗಬೇಕು ಎಂದು ಕರೆ ನೀಡಿದರು.

ನಿವೃತ್ತ ಮುಖ್ಯೋಪಾಧ್ಯಾಯ, ಗಮಕಿ ರಾಮ ಭಟ್‌ ಎಚ್‌., ಧರ್ಮತ್ತಡ್ಕ ಶಾಲಾ ಪ್ರಾಂಶುಪಾಲ ಎನ್‌. ರಾಮಚಂದ್ರ ಭಟ್‌, ಶಾಲಾ ಪ್ರಬಂಧಕ ಎನ್‌. ಶಂಕರನಾರಾಯಣ ಭಟ್‌ ಉಪಸ್ಥಿತರಿದ್ದು ಕಯ್ಯಾರರ ಸಂಸ್ಮರಣೆಗೈದು ಮಾತನಾಡಿದರು. ರಾಮ ಭಟ್‌ ಎಚ್‌. ಅವರು ಕಯ್ಯಾರರ ಬದುಕು, ಹೋರಾಟದ ಬಗೆಗಿನ ಸ್ವರಚಿತ ಕವನ ವಾಚಿಸಿದರು. ಕಸಾಪ ಗಡಿನಾಡ ಘಟಕದ ಗೌರವ ಕಾರ್ಯದರ್ಶಿ ರಾಮಚಂದ್ರ ಭಟ್‌ ಪಿ. ಧರ್ಮತ್ತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪದಾಧಿಕಾರಿ ಸುಬ್ಬಣ್ಣ ಶೆಟ್ಟಿ ಕೆ. ವಂದಿಸಿದರು. ಶಿಕ್ಷಕ ಪ್ರಶಾಂತ ಹೊಳ್ಳ ನೀರಾಳ ಕಾರ್ಯಕ್ರಮ ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next