Advertisement

ಕನ್ನಡ ಶಾಲೆಗಳ ಪರಿವರ್ತನೆಗೆ ಕವಿಸಂ ಗರಂ

01:12 PM Jul 13, 2019 | Suhan S |

ಧಾರವಾಡ: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಒಂದು ಸಾವಿರ ಕನ್ನಡ ಶಾಲೆಗಳನ್ನು ಆಂಗ್ಲ ಮಾಧ್ಯಮ ಶಾಲೆಗಳನ್ನಾಗಿ ಪರಿವರ್ತಿಸಲು ಆದೇಶ ಹೊರಡಿಸಿರುವ ರಾಜ್ಯ ಸರಕಾರದ ಕ್ರಮ ಖಂಡಿಸಿ ಕವಿಸಂ ನೇತೃತ್ವದಲ್ಲಿ ಡಿಸಿ ಕಚೇರಿ ಎದುರು ಶುಕ್ರವಾರ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಲಾಯಿತು.

Advertisement

ಹಿರಿಯ ಹೋರಾಟಗಾರ ನಾಡೋಜ ಡಾ| ಪಾಟೀಲ ಪುಟ್ಟಪ್ಪ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಸರಕಾರದ ಕ್ರಮ ಖಂಡಿಸಿ ಘೋಷಣೆ ಕೂಗಲಾಯಿತು. ಸರಕಾರ ತನ್ನ ಆದೇಶ ಹಿಂಪಡೆಯುವಂತೆ ಆಗ್ರಹಿಸಿ ಡಿಸಿ ಮೂಲಕ ಸಿಎಂ ಕುಮಾರಸ್ವಾಮಿ ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯ ಸರಕಾರದ ಈ ನಿಲುವು ಮತ್ತು ಧೋರಣೆ ಜನವಿರೋಧಿಯಾಗಿದೆ. ಶಿಕ್ಷಣ ವಿರೋಧಿ ಮತ್ತು ಮಕ್ಕಳ ವಿರೋಧಿ ಧೋರಣೆ ಆಗಿರುವುದರ ಜೊತೆಗೆ ಕನ್ನಡ ಭಾಷೆ ಉಳಿವು ಮತ್ತು ಬೆಳವಣಿಗೆಗೂ ಕೂಡಾ ಮಾರಕ ಆಗಿದೆ. ಹೀಗಾಗಿ ಈ ನಿಲುವನ್ನು ಕೈ ಬಿಡಬೇಕು. ಈಗಾಗಲೇ ಆಂಗ್ಲ ಮಾಧ್ಯಮ ಶಾಲೆಗಳಾಗಿ ಪರಿವರ್ತನೆ ಮಾಡಿದ ಒಂದು ಸಾವಿರ ಶಾಲೆಗಳನ್ನು ಪುನಃ ಕನ್ನಡ ಮಾಧ್ಯಮ ಶಾಲೆಗಳನ್ನಾಗಿ ಪರಿವರ್ತಿಸಬೇಕು. ಒಂದು ವೇಳೆ ಸದರಿ ಆದೇಶವನ್ನು ಹಿಂಪಡೆಯದಿದ್ದರೆ, ಇನ್ನೂ ಉಗ್ರವಾದ ಹೋರಾಟ ಕೈಕೊಳ್ಳಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

ಕವಿಸಂ ಪ್ರಧಾನ ಕಾರ್ಯದರ್ಶಿ ಪ್ರಕಾಶ ಉಡಿಕೇರಿ, ಶಿವಣ್ಣ ಬೆಲ್ಲದ, ಕೃಷ್ಣ ಜೋಶಿ, ಶಂಕರ ಕುಂಬಿ ಸೇರಿದಂತೆ ಕವಿಸಂ ಪದಾಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next