Advertisement

Kaveri Water: ರಾಮನಗರ ಜನರ‌ ದಾಹ ತಣಿಸಲಿದ್ದಾಳೆ ಕಾವೇರಿ

04:26 PM Aug 20, 2023 | Team Udayavani |

ರಾಮನಗರ:  ಜಿಲ್ಲಾ ಕೇಂದ್ರದ ನಿವಾಸಿಗಳ ಹಲ ವರ್ಷದ ದಾಹ ನೀಗಿಸಲು ಸದ್ಯದಲ್ಲೇ ಕಾವೇರಿ ಮನೆ ಬಾಗಿಲಿಗೆ ಹರಿಯಲಿದ್ದಾಳೆ, ಅದೂ ದಿನದ 24 ತಾಸು, ವಾರದ 7 ದಿನಗಳ ಕಾಲ.

Advertisement

ಹೌದು.., ರಾಮನಗರ ಪಟ್ಟಣಕ್ಕೆ ಪ್ರತ್ಯೇಕ ಕುಡಿಯುವ ನೀರು ಪೂರೈಕೆ ಮಾಡುವ ಮಹತ್ವಾ ಕಾಂಕ್ಷಿ 456 ಕೋಟಿ ರೂ.ಗಳ ನೆಟ್ಟಕಲ್‌ ಯೋಜನೆ ಅಂತಿಮ ಹಂತಕ್ಕೆ ಬಂದಿದ್ದು, ಕೆಲವೇ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಕಾಮಗಾರಿ ಪೂರ್ಣಗೊಂಡ ಜಿಲ್ಲಾ ಕೇಂದ್ರದ ನಾಗರಿಕರಿಗೆ ಸಾಕಾಗುವಷ್ಟು ನೀರು ಲಭ್ಯವಾಗಲಿದೆ.

2018-19ನೇ ಸಾಲಿನಲ್ಲಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಚಾಲನೆಗೊಂಡ ಈ ಯೋಜನೆ ಬೆಂಗಳೂರಿಗೆ ನೀರು ಪೂರೈಕೆ ಮಾಡಲು ಕಾವೇರಿ ನದಿಯಿಂದ ನೀರು ಸಂಗ್ರಹಣೆ ಮಾಡುವ ನೆಟ್‌ಕಲ್‌ನಿಂದಲೇ ನೀರನ್ನು ತೆಗೆದು ಪಂಪ್‌ ಮಾಡಲಾಗುತ್ತದೆ. ರಾಮನಗರಕ್ಕೆ ಪ್ರತ್ಯೇಕವಾಗಿ 22 ಎಂಎಲ್‌ಡಿ ನೀರನ್ನು ಪೂರೈಕೆ ಮಾಡಲಿದ್ದು, ಪ್ರಸ್ತುತ 1.4 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ರಾಮನಗರ ಪಟ್ಟಣದ ನಿವಾಸಿಗಳಿಗೆ ಸಾಕಾಗುವಷ್ಟು ನೀರು ಈ ಯೋಜನೆಯ ಮೂಲಕ ಸಿಗಲಿದೆ.

ಜಿಲ್ಲಾ ಕೇಂದ್ರದಲ್ಲಿ ಜಲದಾಹ: ಪ್ರಸಕ್ತವಾಗಿ ಜಿಲ್ಲಾ ಕೇಂದ್ರ ರಾಮನಗರ ಪಟ್ಟಣದಲ್ಲಿ ಕುಡಿಯುವ ನೀರಿನ ಬವಣೆ ತೀವ್ರವಾಗಿದೆ. ರಾಮನಗರಕ್ಕೆ 20 ಎಂಎಲ್‌ಡಿಯಷ್ಟು ಕುಡಿಯುವ ನೀರಿನ ಅವಶ್ಯಕತೆ ಇದ್ದು, 12 ಎಂಎಲ್‌ಡಿಯಷ್ಟು ಮಾತ್ರ ನೀರು ಲಭ್ಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲ ಬಡಾವಣೆಗಳಿಗೆ ವಾರಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದ್ದು, ಅರ್ಕಾವತಿ ನದಿಯಲ್ಲಿ ನೀರು ಖಾಲಿಯಾದಾಗ ಕುಡಿಯುವ ನೀರಿನ ಬವಣೆ ತಾರಕಕ್ಕೇರುತ್ತದೆ.

ಪ್ರಸಕ್ತವಾಗಿ ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿ ಗ್ರಾಮದಲ್ಲಿ ಬೆಂಗಳೂರು ಜಲಮಂಡಳಿಯ ಕಾವೇರಿ ನೀರು ಶುದ್ಧೀಕರಣ ಕೇಂದ್ರದಿಂದ ರಾಮನಗರ ಮತ್ತು ಚನ್ನಪಟ್ಟಣಕ್ಕೆ ಬ್ಯಾಕ್‌ವಾಷ್‌ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಈ ಎರಡೂ ಪಟ್ಟಣಗಳಿಗೆ ಸೇರಿ 18 ಎಂಎಲ್‌ಡಿಯಷ್ಟು ನೀರು ಲಭ್ಯವಾಗುತಿದ್ದು, ಇದರಲ್ಲಿ 12 ಎಂಎಲ್‌ಡಿ ಚನ್ನಪಟ್ಟಣಕ್ಕೆ 7 ಎಂಎಲ್‌ಡಿ ರಾಮನಗರಕ್ಕೆ ಪೂರೈಕೆ ಮಾಡಲಾಗುತ್ತಿದೆ. ಇನ್ನು ರಾಮನಗರ ಪಟ್ಟಣಕ್ಕೆ ಅರ್ಕಾವತಿ ಮತ್ತು ಕೊಳವೆ ಬಾವಿಗಳಿಂದ ನೀರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಎಲ್ಲಾ ಮೂಲಗಳಿಂದ ಸಿಗುವ ನೀರು ಸಾಲದಾಗಿದ್ದು, ಇದಕ್ಕಾಗಿ ನೆಟ್‌ಕಲ್‌ ಜಲಾಶಯದಿಂದ ನೀರು ಪೂರೈಕೆ  ಮಾಡುವ ಕಾಮಗಾರಿಯನ್ನು ಕೈಗೊಳ್ಳಲಾಗಿದೆ.

Advertisement

60 ಕಿಮೀ ದೂರದಿಂದ ನೀರು: ರಾಮನಗರಕ್ಕೆ 60 ಕಿಮೀ ದೂರದಲ್ಲಿರುವ ತೊರೆಕಾಡನಹಳ್ಳಿ ಜಲಶುದ್ಧೀಕರಣ ಕೇಂದ್ರಕ್ಕೆ, ನೆಟ್‌ಕಲ್‌ ಗ್ರಾಮದ ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸಮತೋಲನ ಅಣೆಕಟ್ಟೆ ಯಿಂದ ಗುರುತ್ವಾಕರ್ಷಣೆಯ ಮೂಲಕ ನೀರನ್ನು ಕೊಳವೆಗಳಲ್ಲಿ ತರಲಾಗುವುದು. ಶುದ್ಧೀಕರಣ ಕೇಂದ್ರದಲ್ಲಿ ನೀರನ್ನು ಶುದ್ಧೀಕರಿಸಿ ಪಂಪು ಮೋಟರ್‌ಗಳ ಸಹಾಯದಿಂದ ರಾಮನಗಕ್ಕೆ ಪೂರೈಕೆ ಮಾಡಲಾಗುವುದು. ಇದಕ್ಕಾಗಿ ಚನ್ನಪಟ್ಟಣ ತಾಲೂಕಿನ ಅರಳಾಳುಸಂದ್ರ ಗ್ರಾಮದ ಬಳಿ ಪಂಪ್‌ ಹೌಸ್‌ ಅನ್ನು ನಿರ್ಮಿಸಲಾಗಿದೆ. ರಾಮನಗರದ ಜನತೆಗೆ ನೀರು ಪೂರೈಕೆ ಮಾಡುವುದಕ್ಕಾಗಿ ಕೊತ್ತೀಪುರದ ಬಳಿ 100 ಲಕ್ಷ ಲೀಟರ್‌ ಸಾಮರ್ಥ್ಯದ ಬೃಹತ್‌ ಟ್ಯಾಂಕ್‌ ಮತ್ತು ಬೋಳಪ್ಪನಹಳ್ಳಿ ಬಳಿಕ 200 ಲಕ್ಷಲೀಟರ್‌ ಸಾಮರ್ಥ್ಯದ ಬೃಹತ್‌ ಟ್ಯಾಂಕ್‌ ನಿರ್ಮಿಸಿದ್ದು, ಈ ಟ್ಯಾಂಕ್‌ಗಳ ಸಹಾಯದಿಂದ ಮನೆಗಳಿಗೆ ನೀರು ಪೂರೈಕೆ  ಮಾಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈ ಯೋಜನೆಗೆ 800 ಎಚ್‌ಪಿ ಸಾಮರ್ಥ್ಯದ ಪಂಪು ಮೋಟರ್‌ಗಳನ್ನು ಬಳಕೆ ಮಾಡಲಾಗಿದೆ.

30 ವರ್ಷದ ಗುರಿ: ಪ್ರಸ್ತುತ 25 ಎಂಎಲ್‌ಡಿ ನೀರು ಪೂರೈಸುವ ಸಾಮರ್ಥ್ಯ ಹೊಂದಿರುವ ಈ ಯೋಜನೆ 2052ರ ವೇಳೆಗೆ 62 ಎಂಎಲ್‌ಡಿಗೆ ಹೆಚ್ಚಳಗೊಳ್ಳಲಿದೆ. 2ಸಾವಿರ ಎಚ್‌ಪಿ ವರೆಗೂ ನೀರನ್ನು ಪಂಪ್‌ ಮಾಡುವ  ಈ ಯೋಜನೆಯ ಕೊಳವೆ ಹಾಯ್ದು ಹೋಗಿರುವ 12 ಗ್ರಾಮಗಳಿಗೂ ನೀರು ಪೂರೈಕೆ  ಮಾಡಲು ಅವಕಾಶ ಮಾಡಿಕೊಡಲಾಗಿದೆ.

ರಾಮನಗರದ ಜನತೆಗೆ ಕುಡಿಯುವ ನೀರಿನ ಬವಣೆ ನೀಗಿಸುವ ನಿಟ್ಟಿನಲ್ಲಿ ಈ ಕಾಮಗಾರಿ ಮಹತ್ವದ ಪಾತ್ರ ವಹಿಸಲಿದೆ. ಇದುವರೆಗೆ ಅರ್ಕಾವತಿಯ ಕಲುಷಿತ ನೀರನ್ನು ಪೂರೈಕೆ  ಮಾಡ ಲಾಗುತ್ತಿದೆ. ಈ ಕಾಮಗಾರಿ ಡಿಸೆಂಬರ್‌ ವೇಳೆಗೆ ಪೂರ್ಣಗೊಳ್ಳಲಿದ್ದು, ಜನವರಿಯಿಂದ ಎಲ್ಲಾ ಮನೆಗಳಿಗೆ ದಿನದ 24 ತಾಸು ವಾರದ 7 ದಿನ ನೀರು ಲಭ್ಯವಾಗಲಿದೆ.-ಇಕ್ಬಾಲ್‌ ಹುಸೇನ್‌, ಶಾಸಕ ರಾಮನಗರ  

– ಸು.ನಾ.ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next