Advertisement

Bangalore: ನಿರ್ವಹಣೆ ಇಲ್ಲದೆ ಅವಸಾನದತ್ತ 140 ಕೆರೆ

10:49 AM Feb 25, 2024 | Team Udayavani |

ಬೆಂಗಳೂರು:  ಹಿಂದೆ ರಾಜ್ಯ ರಾಜಧಾನಿಗೆ ಜಲಮೂಲಗಳಾಗಿದ್ದ ಕೆರೆಗಳು ತೀವ್ರ ನಗರೀಕರಣದ ಪರಿಣಾಮ ಮುಚ್ಚಿಹೋಗಿದ್ದು, ಸದ್ಯ ಇರುವ 753 ಕೆರೆಗಳ ಪೈಕಿ 140 ನಿರ್ವಹಣೆ ಇಲ್ಲದೇ ಹೂಳು ತುಂಬಿ ನಶಿಸುವ ಹಂತದಲ್ಲಿವೆ. ಹೀಗಾಗಿ, ನಗರದಲ್ಲಿ ನೀರಿಗೆ ಹಾಹಾಕಾರ ಹೆಚ್ಚಿದ್ದು, ಕಾವೇರಿ ನದಿ ನೀರು ಅವಲಂಬನೆ ಅನಿವಾರ್ಯವಾಗಿದೆ.

Advertisement

ನೀರಿನ ಸಮಸ್ಯೆ ಉಲ್ಬಣಿಸುತ್ತಿರುವ ಈ ಸಂದರ್ಭದಲ್ಲಿ ಬೆಂಗಳೂರಿನ ಕೆರೆಗಳ ಮಹತ್ವ ಗೊತ್ತಾಗುತ್ತಿದೆ. ಒಂದು ಕಾಲದಲ್ಲಿ ಬೆಂಗಳೂರಿಗೆ ನೀರು ಒದಗಿಸುತ್ತಿದ್ದ ಬಹುತೇಕ ಕೆರೆಗಳು ನಿರ್ವಹಣೆ ಇಲ್ಲದೇ ನಶಿಸಿಹೋಗುವ ಹಂತದಲ್ಲಿವೆ. ಚರಂಡಿ ನೀರು, ತ್ಯಾಜ್ಯ ತುಂಬಿ ದುರ್ನಾತ ಬೀರುತ್ತಿವೆ. ಇಲ್ಲಿನ ಕೆರೆಗಳ ನೀರು ಬಳಕೆಗೆ ಯೋಗ್ಯವಾಗಿಲ್ಲ ಎಂಬುದು ಪರಿಶೀಲನೆ ವೇಳೆ ತಿಳಿದು ಬಂದಿದೆ. ಬೆಂಗಳೂರು ಜಿಪಂ ವ್ಯಾಪ್ತಿಯಲ್ಲಿ 495, ಬಿಬಿಎಂಪಿ ವ್ಯಾಪ್ತಿಯಲ್ಲಿ 207, ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 47, ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ 4 ಸೇರಿ ಬೆಂಗಳೂರಿನಲ್ಲಿ ಒಟ್ಟು 753 ಕೆರೆಗಳಿವೆ.

ಶೇ.60 ಕೆರೆಗಳಲ್ಲಿ ಹೂಳು: ರಾಜ್ಯ ರಾಜ ಧಾನಿಯ ಶೇ.60 ಕೆರೆಗಳಲ್ಲಿ ಹೂಳು ತುಂಬಿಕೊಂ ಡಿದೆ. ಅನುದಾನದ ಲಭ್ಯತೆ ಮೇರೆಗೆ ಹೂಳು ತೆಗೆಯುವ ಕಾರ್ಯ ನಡೆಸಲಾಗುತ್ತಿದೆ. ಸಮಯಕ್ಕೆ ಸರಿಯಾಗಿ ಅನುದಾನ ಸಿಗದೇ ಕೆರೆಗಳ ಹೂಳು ತೆಗೆಯುವ ಕಾರ್ಯ ನಡೆಯುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಇನ್ನು ಸಾಮಾಜಿಕ ಅರಣ್ಯ ಯೋಜನೆಗಳಡಿ ಬೆಂಗಳೂರಿನ ಬಹುತೇಕ ಕೆರೆಗಳಲ್ಲಿ ಜಾಲಿ ಮರಗಳನ್ನು ನೆಡಲಾಗಿದೆ.

ಜಾಲಿ ಮರಗಳಿಂದ ಕೆರೆಗಳಲ್ಲಿ ನೀರಿನ ಅಂತರ್ಜಲ ಮಟ್ಟ ಕಡಿಮೆಯಾಗುತ್ತಿದೆ. ದಟ್ಟವಾಗಿ ಜಾಲಿ ಮರ ಬೆಳೆದಿರುವುದನ್ನು ಗುರುತಿಸಿ ಅಲ್ಲಲ್ಲಿ ಅವುಗಳನ್ನು ತೆರವು ಗೊಳಿಸುವ ಕಾರ್ಯವೂ ಅರ್ಧಕ್ಕೆ ನಿಂತಿದೆ. ಸದ್ಯ ಮಳೆ ಕೊರತೆಯಿಂದ ಬೆಂಗಳೂರಿನ ಬಹುತೇಕ ಕೆರೆಗಳು ಬತ್ತಿ ಹೋಗುತ್ತಿದೆ. ಅವುಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿ ಪುನಶ್ಚೇತನಗೊಳಿಸುವ ಅಗತ್ಯವಿದೆ ಎಂದು ಕೆರೆ ಅಭಿವೃದ್ಧಿಗೆ ಶ್ರಮಿಸುತ್ತಿರುವ ಎನ್‌ಜಿಒಗಳ ಆಗ್ರಹವಾಗಿದೆ.

ಬೆಂಗಳೂರಿಗೆ ಕಾವೇರಿ ನದಿ ನೀರೇ ಆಧಾರ: 

Advertisement

ನಗರದಲ್ಲಿ ನೀರಿನ ಸಮಸ್ಯೆ ಉಂಟಾಗಿರುವುದ ರಿಂದ ವಿವಿಧ ನೀರಿನ ಮೂಲಗಳನ್ನು ಆಶ್ರಯಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಮುಂದಾಗಿದೆ. ಆದರೆ, ಒಂದು ಕಾಲದಲ್ಲಿ ಬೆಂಗಳೂರಿಗೆ ನೀರು ಒದಗಿಸುತ್ತಿದ್ದ ಬಹುತೇಕ ಕೆರೆಗಳು ನಿರ್ವಹಣೆ ಇಲ್ಲದೇ ಇಲ್ಲಿನ ನೀರು ಬಳಕೆಗೆ ಯೋಗ್ಯವಾಗಿಲ್ಲ ಎಂಬುದು ಪರಿ ಶೀಲನೆ ವೇಳೆ ತಿಳಿದು ಬಂದಿದೆ. ಹೀಗಾಗಿ ಸದ್ಯ ಬೆಂಗ ಳೂರಿಗರಿಗೆ ಕುಡಿಯುವ ನೀರಿಗೆ ಕಾವೇರಿಯೊಂದೇ ಗತಿ. ಬೇರೆ ನೀರಿನ ಮೂಲಗಳೇ ಇಲ್ಲವೆಂದು ಜಲ ಮಂಡಳಿಯ ಉನ್ನತ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

ಬೆಂಗಳೂರಿಗೆ ಕೆರೆಗಳು ಏಕೆ ಮುಖ್ಯ?:

ಬೆಂಗಳೂರಿನಲ್ಲಿ ಜೀವನದಿ ಗಳಿಲ್ಲ, ಸಮುದ್ರವೂ ಇಲ್ಲದಿರು ವುದ ರಿಂದ ಕೆರೆಗಳು ಹೆಚ್ಚು ಪ್ರಾಮು ಖ್ಯತೆ ಪಡೆಯುತ್ತವೆ. ಗಾಳಿಯಲ್ಲಿ ತೇವಾಂಶ ಹೆಚ್ಚಿ ಸಲು ಕೆರೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಗಾಳಿಯಲ್ಲಿ ತೇವಾಂಶ ಪ್ರಮಾಣ ಇಳಿಕೆಯಾ ದರೆ ಉಸಿರಾಟ ಸೇರಿ ಆರೋ ಗ್ಯದ ಸಮಸ್ಯೆಗಳು ಕಂಡು ಬರುವ ಸಾಧ್ಯತೆಗಳಿ ರುತ್ತದೆ ಎಂಬುದು ಕೆರೆ ಹಾಗೂ ಪರಿಸರ ತಜ್ಞರ ಆತಂಕ.

ಅಭಿವೃದ್ಧಿಯ ಹೊಡೆತಕ್ಕೆ 700 ಕೆರೆ ಮಾಯ :

1896ರವರೆಗೆ ಇಡೀ ಬೆಂಗಳೂರಿಗೆ ಬೇಕಾದಷ್ಟು ನೀರನ್ನು ಧರ್ಮಾಂಬುಧಿ, ಸಂಪಂಗಿ, ಹಲಸೂರು, ಸ್ಯಾಂಕಿ ಕೆರೆಗಳಂತಹ ಸಾವಿರಾರು ಕೆರೆಗಳು ಪೂರೈಸುತ್ತಿದ್ದವು. ಇವಕ್ಕೆ ಪೂರಕವಾಗಿ ತೆರೆದ ಬಾವಿ, ಕಲ್ಯಾಣಿಗಳಂತಹ ಜಲಮೂಲಗಳೂ ಇದ್ದವು. ಸಾವಿರಾರು ಕೆರೆಗಳಿಂದಾಗಿ ಕೆರೆಗಳ ನಗರಿ ಎಂಬ ಹೆಗ್ಗಳಿಕೆಗೂ ಬೆಂಗಳೂರು ಪಾತ್ರವಾಗಿತ್ತು. ಆದರೆ, ನಗರದಲ್ಲಿದ್ದ ಬಹುತೇಕ ದೊಡ್ಡ ಕೆರೆಗಳು ಬಸ್‌ ನಿಲ್ದಾಣ, ಮಾರುಕಟ್ಟೆ, ಬಡಾವಣೆ, ಅಪಾರ್ಟ್‌ಮೆಂಟ್‌, ಮಾಲ್‌ಗ‌ಳು, ಐಟಿ-ಬಿಟಿ ಕಂಪನಿಗಳ ಕಟ್ಟಡಗಳಿಗೆ ನೆಲೆ ಕಲ್ಪಿಸಿವೆ. ಅಭಿವೃದ್ಧಿಯ ಹೊಡೆತಕ್ಕೆ ಸಿಲುಕಿ 700 ಕೆರೆಗಳು ಕಣ್ಮರೆಯಾಗಿವೆ. ಇನ್ನು ಕೆಲವು ಕೆರೆಗಳು ಒತ್ತುವರಿದಾರರ ಪಾಲಾಗಿವೆ. ಬೆಂಗಳೂರಿನ ಕೆರೆಗಳಿಗೆ ಕಸ ಎಸೆಯುವ ದೊಡ್ಡ ಜಾಲವಿದೆ. ಜೊತೆಗೆ ಗುತ್ತಿಗೆ ಮೇಲೆ ಕಸ ವಿಲೇವಾರಿ ಮಾಡುವವರು ಕೆರೆಗಳನ್ನೇ ವಿಲೇವಾರಿ ತಾಣ ಮಾಡಿಕೊಂಡಿದ್ದಾರೆ.

ಒಂದು ಕಾಲದಲ್ಲಿ ರಾಜ್ಯ ರಾಜಧಾನಿಯು ಕೆರೆಗಳಿಂದ ಸಮೃದ್ಧವಾಗಿತ್ತು. 6 ಸಾವಿರಕ್ಕೂ ಅಧಿಕ ಕೆರೆಗಳು ನೀರಿನ ಮೂಲವಾಗಿದ್ದವು. ಸದ್ಯ ಇರುವ ಕೆರೆಗಳನ್ನು ನಿರ್ವಹಣೆ ಮಾಡಲಾಗದೇ ನಶಿಸಿಹೋಗುತ್ತಿರುವುದು ಆತಂಕಕಾರಿ. ಇದು ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಕೆರೆ ಸಂರಕ್ಷಿಸೋಣ.ಡಾ.ಎ.ಎನ್‌.ಯಲ್ಲಪ್ಪರೆಡ್ಡಿ, ಕೆರೆ, ಪರಿಸರ ತಜ್ಞ.

ನಗರದಲ್ಲಿರುವ ಕೆರೆಗಳನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರವು ಕ್ರಮಕೈಗೊಂಡಿದೆ. ಕೆಲವು ಕೆರೆಗಳಲ್ಲಿನ ಬೆಳೆದಿದ್ದ ಗಿಡಗಂಟಿ, ತ್ಯಾಜ್ಯ ಹೊರತೆಗೆದು ಸ್ವಚ್ಛಗೊಳಿಸಲಾಗುತ್ತಿದೆ. ಪಾರ್ಕ್‌, ವಾಕಿಂಗ್‌ ಪಾತ್‌, ಹಲವು ಅಭಿವೃದ್ಧಿ ಕಾರ್ಯಕೈಗೊಳ್ಳಲು ಸರ್ಕಾರ ಚಿಂತಿಸಿದೆ.ರಾಕೇಶ್‌ ಸಿಂಗ್‌, ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ.

-ಅವಿನಾಶ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next