Advertisement

ಸಂಬಂಧಗಳ ಚೌಕಟ್ಟಿನಲ್ಲಿ ಕವಚ ಹೊಳಪು

11:49 AM Apr 08, 2019 | Nagendra Trasi |

“ನನಗೆ ಕಣ್ಣಿಲ್ಲದೆ ಅವರನ್ನು ನೋಡಲಾಗಲಿಲ್ಲ ಎಂಬ ನೋವಿಗಿಂತ ಅವರು ಕಣ್ಣಿದ್ದೂ ನನ್ನನ್ನು ನೋಡಲಿಲ್ಲ ಎಂಬ ನೋವು ಜಾಸ್ತಿ ಇದೆ…’ – ಆ ಅಂಧ ಜಯರಾಮ ಕೋರ್ಟ್‌ ಆವರಣದಲ್ಲಿ ನಿಂತು ಹೀಗೆ ಭಾವುಕನಾಗಿ ಹೇಳುವ ಹೊತ್ತಿಗೆ, ಎಲ್ಲವನ್ನೂ ಮತ್ತು ಎಲ್ಲರನ್ನೂ ಅಕ್ಕರೆ, ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಅವನ ಬದುಕಲ್ಲಿ ಸಾಕಷ್ಟು ಏರಿಳಿತಗಳು ಸುತ್ತಿಕೊಂಡಿರುತ್ತವೆ.

Advertisement

ಕಣ್ಣೇ ಕಾಣದ ಅವನು ತನ್ನ ಒಳಗಣ್ಣಿನಿಂದ ಎಲ್ಲವನ್ನೂ ಸೂಕ್ಷ್ಮವಾಗಿ ಗ್ರಹಿಸುವಂಥವನು. ಮಾಡದ ತಪ್ಪಿಗೆ ನೋವು ಅನುಭವಿಸಿ, ಕಣ್ಣೀರಿಡುವ ವೇಳೆ, ಅಲ್ಲಿ ನೆರೆದವರ ಕಣ್ಣಂಚಲ್ಲೂ ನೀರು ತುಂಬಿಕೊಂಡಿರುತ್ತೆ. ಹಾಗೆ, ನೋಡುಗರ ಕಣ್ಣಾಲಿಗಳೂ ಒದ್ದೆಯಾಗಿರುತ್ತವೆ. ಇದು “ಕವಚ’ ಚಿತ್ರದ ಭಾವನಾತ್ಮಕ ಸನ್ನಿವೇಶದ ಒಂದು ತುಣುಕು. ಇಡೀ ಚಿತ್ರದಲ್ಲಿ ಭಾವನೆ ಮತ್ತು ಭಾವುಕತೆಯೇ ಹೈಲೈಟ್‌. ತಪ್ಪು, ಅರಿವು, ದ್ವೇಷ, ಅನುಮಾನ, ಪ್ರೀತಿ, ಮಮತೆ, ಅನುಕಂಪ, ಕಾಳಜಿ ಇತ್ಯಾದಿ ಚಿತ್ರದ ಜೀವಂತಿಕೆಗೆ ಸಾಕ್ಷಿ. ಒಂದೇ ಮಾತಲ್ಲಿ ಹೇಳುವುದಾದರೆ, “ಕವಚ’ ಮನಸ್ಸನ್ನು ಭಾರವಾಗಿಸುವ ಅಂದವಾದ ಚಿತ್ರ.

ಸಂಬಂಧಗಳನ್ನು ಬೆಸೆಯುವಂತಹ ಮೌಲ್ಯ ಸಾರುವ ಹೂರಣ ಈ ಚಿತ್ರದಲ್ಲಿದೆ. ಚಿತ್ರದ ಗಟ್ಟಿತನವೆಂದರೆ ಕಥೆ ಮತ್ತು ನಿರೂಪಣೆ. ಇದರ ಜೊತೆಗೆ ಪಾತ್ರಗಳ ಪೋಷಣೆ. ನೋಡುಗರ ಮನದ ಮೂಲೆಯಲ್ಲೆಲ್ಲೋ ಆತಂಕ ಮತ್ತು ಅನುಕಂಪ ಹುಟ್ಟುಹಾಕುತ್ತಲೇ “ಹೊಸ ಬೆಳಕು’ ಮೂಡಿಸುವ ತಾಕತ್ತು ಚಿತ್ರಕ್ಕಿದೆ.

ಅಂಥದ್ದೊಂದು ಹೊಸ ಹೊಳಪನ್ನು ನೋಡಬೇಕೆನಿಸಿದರೆ, ಯಾವುದೇ ಅನುಮಾನಗಳಿಲ್ಲದೆ ಚಿತ್ರ ನೋಡಬಹುದು. ಸಿನಿಮಾ ಅಂದರೆ, ಮನಬಂದಂತೆ ಡೈಲಾಗ್‌ ಹರಿಬಿಡುವುದು, ಹಾರಿ ಎಗರಿ ಬೀಳುವಂತೆ ಫೈಟ್‌ ಮಾಡುವುದು, ಮರಸುತ್ತಿ ಹಾಡಿ ಕುಣಿಯುವುದಷ್ಟೇ ಅಲ್ಲ. ಅದರ ಹೊರತಾಗಿ ಬೇರೆಯದ್ದನ್ನೂ ಕಾಣಿಸುವ, ಮನಭಾರವಾಗಿಸುವ, ಆಪ್ತವೆನಿಸುವ ಚಿತ್ರಣವೂ ಇದೆ ಎಂಬುದಕ್ಕೆ “ಕವಚ’ ಸಾಕ್ಷಿಯಾಗಿ ನಿಲ್ಲುತ್ತದೆ. ಹಾಗಂತ, ಇಲ್ಲಿ ಕಮರ್ಷಿಯಲ್‌ ಅಂಶಗಳಿಲ್ಲ ಎನ್ನುವ ಮನಸ್ಸುಗಳಿಗೆ ಅಚ್ಚರಿಯನ್ನೂ ಮೂಡಿಸುತ್ತದೆ. ಇಲ್ಲೂ ಹಾಡು-ಕುಣಿತ, ಫೈಟು ಎಲ್ಲವೂ ಇದೆ. ಇವೆಲ್ಲದರ ಜೊತೆ ಸಂಬಂಧಕ್ಕೆ ಕಲ್ಪಿಸಿರುವ ಅರ್ಥವನ್ನು ಅರ್ಥೈಸಿಕೊಂಡರೆ ಮಾತ್ರ “ಕವಚ’ ನೋಡಿದ್ದಕ್ಕೂ ಸಾರ್ಥಕ.

ಇದು ಮಲಯಾಳಂ “ಒಪ್ಪಂ’ ಚಿತ್ರದ ಅವತರಣಿಕೆ. ಆದರೆ, ನಿರ್ದೇಶಕರಿಗೆ ಇಲ್ಲಿ ಏನು ಹೇಳಬೇಕು, ಎಷ್ಟು ತೋರಿಸಬೇಕು ಎಂಬ ಸ್ಪಷ್ಟತೆ ಇದೆ. ಹಾಗಾಗಿ, ಚಿತ್ರ ಎಲ್ಲೂ
ತಾಳ್ಮೆಗೆಡಿಸುವುದಿಲ್ಲ. ಕೆಲವೊಂದು ಕಡೆ ಅನಗತ್ಯ ದೃಶ್ಯಗಳಿಗೆ ಇನ್ನಷ್ಟು ಕತ್ತರಿ ಹಾಕಿದ್ದರೆ, ವೇಗ ಹೆಚ್ಚಾಗುತ್ತಿತ್ತು. ಫೈಟ್‌ ಒಂದಕ್ಕೆ ಇನ್ನಷ್ಟು ನೈಜತೆ ಕಟ್ಟಿಕೊಡಬಹುದಾಗಿತ್ತು. ಮೊದಲರ್ಧ ಸರಾಗವಾಗಿದೆ. ದ್ವಿತಿಯಾರ್ಧದ ಚುರುಕಿನ ನಿರೂಪಣೆ ಚಿತ್ರದ ಮತ್ತೂಂದು ಪ್ಲಸ್ಸು. ಸಿನಿಮಾ ಇಷ್ಟ ಆಗೋದೇ ಕುತೂಹಲ ಕಾಯ್ದುಕೊಂಡಿರುವುದರಿಂದ, ಇಡೀ ಸಿನಿಮಾದ ತಾಕತ್ತು ಆ ಕುತೂಹಲಕ್ಕಿದೆ. ಆ ಕುತೂಹಲ ಬಗ್ಗೆ ತಿಳಿದುಕೊಳ್ಳುವ ಧಾವಂತವಿದ್ದರೆ, ಅಂಧನ ಅಂದ ಪ್ರಯತ್ನವನ್ನೊಮ್ಮೆ ನೋಡಲು ಯಾವ ಅನುಮತಿಯೂ ಬೇಕಿಲ್ಲ.

Advertisement

ಇದು ಅಂಧನೊಬ್ಬನ ಲೈಫ‌ಲ್ಲಿ ಎದುರಾಗುವ ಸಮಸ್ಯೆಗಳ ಚಿತ್ರ. ಆ ಸಮಸ್ಯೆಗಳಿಂದ ಅವನು ಹೇಗೆ ಹೊರಬರುತ್ತಾನೆ ಅನ್ನುವುದೇ ಚಿತ್ರದ ವಿಶೇಷ. ಜಯರಾಮ್‌ ಒಬ್ಬ ಅಂಧ. ಎಲ್ಲರಿಗೂ ಪ್ರೀತಿಪಾತ್ರವಾದ ವ್ಯಕ್ತಿ. ಕಣ್ಣು ಕಾಣಲ್ಲ ಎಂಬುದು ಬಿಟ್ಟರೆ, ಗೆಳೆತನಕ್ಕೆ, ಪ್ರೀತಿಗೆ, ಸಂಬಂಧಕ್ಕೆ ಕೊರತೆ ಇಲ್ಲದ ವ್ಯಕ್ತಿ. ಅಂಥಾ ಸಂದರ್ಭದಲ್ಲೇ ತಾನು ಸದಾ ಇಷ್ಟಪಡುವ ನಿವೃತ್ತ ನ್ಯಾಯಾಧೀಶರೊಬ್ಬರ ಕೊಲೆ ನಡೆದುಹೋಗುತ್ತೆ. ಆ ಕೊಲೆ ಜಯರಾಮನೇ ಮಾಡಿದ ಎಂಬ ಅನುಮಾನದ ಮೇಲೆ ಪೊಲೀಸರು ಇನ್ನಿಲ್ಲದ ಹಿಂಸೆ ಕೊಡುತ್ತಾರೆ.

ಅದರಿಂದ ಹೊರಬರುವ ಜಯರಾಮ, ಇನ್ನೊಂದು ಕೊಲೆ ಆಗುವುದನ್ನು ತಪ್ಪಿಸಲು ಹೋರಾಡುತ್ತಾರೆ. ಆ ಇನ್ನೊಂದು ಕೊಲೆ ಯಾರದ್ದು, ಆ ಹೋರಾಟದಲ್ಲಿ ಜಯರಾಮ ಗೆಲ್ಲುತ್ತಾನಾ, ಇಲ್ಲವಾ ಅನ್ನುವುದೇ ಕುತೂಹಲದ ಸಾರಾಂಶ. ಶಿವರಾಜಕುಮಾರ್‌ ಅವರು ಮೊದಲ ಬಾರಿಗೆ ಅಂಧ ಪಾತ್ರ ನಿರ್ವಹಿಸಿ, ಸೈ ಎನಿಸಿಕೊಂಡಿದ್ದಾರೆ. ಇದುವರೆಗೆ ಅವರ ಚಿತ್ರಗಳಲ್ಲಿನ ಆ್ಯಕ್ಷನ್‌, ಡ್ಯಾನ್ಸ್‌ ಗೆ ಚಪ್ಪಾಳೆ, ಶಿಳ್ಳೆ ಗಿಟ್ಟಿಸಿಕೊಳ್ಳುತ್ತಿದ್ದ ಅವರು, ಅಂಧನಾಗಿ ಇಲ್ಲೂ ಅದೇ ಚಪ್ಪಾಳೆ, ಶಿಳ್ಳೆಗೆ ಪಾತ್ರವಾಗಿದ್ದಾರೆ.

ತೆರೆ ಮೇಲೆ ನೋಡುವ ಅವರನ್ನು ಪ್ರತಿಯೊಬ್ಬರೂ ಇಷ್ಟ ಪಡದೇ ಇರಲಾರರು. ಅಷ್ಟರ ಮಟ್ಟಿಗೆ ಬಾಡಿಲಾಂಗ್ವೇಜ್‌ ಇರಬಹುದು, ಮಾತುಕತೆ ಇರಬಹುದು ಎಲ್ಲವೂ ನೈಜವೇನೋ ಎಂಬಂತೆ ಪಾತ್ರದಲ್ಲಿ ಜೀವಿಸಿದ್ದಾರೆ. ಬೇಬಿ ಮೀನಾಕ್ಷಿ ಕೂಡ ಗಮನಸೆಳೆಯುತ್ತಾಳೆ, ವಸಿಷ್ಠ ಸಿಂಹ
ಎಂದಿನಂತೆ ಇಲ್ಲೂ ಭಯಹುಟ್ಟಿಸುತ್ತಾರೆ. ಉಳಿದಂತೆ ಇಶಾ ಕೊಪ್ಪಿಕರ್‌, ಕೃತಿಕಾ, ಆಶಿಶ್‌ ವಿದ್ಯಾರ್ಥಿ, ರಾಜೇಶ್‌ ನಟರಂಗ, ತಬಲಾನಾಣಿ ಸೇರಿದಂತೆ ಇತರರು ಗಮನಸೆಳೆಯುತ್ತಾರೆ.

ಅರ್ಜುನ್‌ ಜನ್ಯ ಸಂಗೀತದಲ್ಲಿ “ರೆಕ್ಕೆಯ ಕುದುರೆ ಏರಿ ಬೆಳ್ಳಿ ಬೆಳ್ಳಿ ಮೋಡವ ದಾಟಿ ಬರುವ ನಿನ್ನ ಅಪ್ಪಯ್ಯ…’ ಹಾಡು ಮತ್ತೆ ಮತ್ತೆ ಗುನುಗುವಂತಿದೆ. ರೋನ್‌ ಏತನ್‌ ಯೋಹನ್‌ ಅವರ ಹಿನ್ನೆಲೆ ಸಂಗೀತ ಕೆಲವು ಕಡೆ ಮಾತುಗಳನ್ನೇ ನುಂಗಿದೆ. ಎಂ.ಎಸ್‌. ರಮೇಶ್‌ ಅವರ ಮಾತುಗಳು ಅಲ್ಲಲ್ಲಿ
ಮನಕಲಕುವಂತಿವೆ. ರಾಹುಲ್‌ ಶ್ರೀವಾತ್ಸವ್‌ ಛಾಯಾಗ್ರಹಣ ಕವಚವನ್ನು “ಅಂದ’ವಾಗಿಸಿದೆ.
*ಚಿತ್ರ: ಕವಚ
*ನಿರ್ಮಾಣ :ಎಂ.ವಿ.ವಿ.ಸತ್ಯನಾರಾಯಣ್‌
* ನಿರ್ದೇಶನ :ಜಿ.ವಿ.ಆರ್‌.ವಾಸು
*ತಾರಾಗಣ : ಶಿವರಾಜಕುಮಾರ್‌, ವಸಿಷ್ಠಸಿಂಹ, ಇಶಾ ಕೊಪ್ಪಿಕರ್‌, ಆಶಿಶ್‌ ವಿದ್ಯಾರ್ಥಿ, ರಾಜೇಶ್‌ ನಟರಂಗ, ಬೇಬಿ ಮೀನಾಕ್ಷಿ, ಜಯಪ್ರಕಾಶ್‌ ಇತರರು.

*ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next