Advertisement

ಕಾಪು: ಕಡಲು, ಕೈಗಾರಿಕೆಗಳ ಸಂಗಮ ಕ್ಷೇತ್ರವಿದು

08:15 AM Apr 21, 2018 | Team Udayavani |

ಬ್ರಿಟಿಷರಿಂದ 1901ರಲ್ಲಿ ಸ್ಥಾಪನೆಯಾದ ಪ್ರಖ್ಯಾತ ದೀಪಸ್ಥಂಭ ಹೊಂದಿರುವ ಕಾಪು ಸುಂದರ ಕಡಲ ಕಿನಾರೆಗೆ ಪ್ರಸಿದ್ಧವಾಗಿರುವಂತೆ ಕೈಗಾರಿಕೆಗಳಿಂದಲೂ ಗುರುತಿಸಲ್ಪಟ್ಟಿದೆ. ಪ್ರವಾಸೋದ್ಯಮ, ಬಂದರು, ಉದ್ಯೋಗ, ಕುಡಿಯುವ ನೀರು, CRZ ಕಾಯ್ದೆಗೆ ತಿದ್ದುಪಡಿ, ಉದ್ಯೋಗಾವಕಾಶಗಳು ಹೀಗೆ ಉಲ್ಲೇಖಗೊಳ್ಳುತ್ತವೆ ಇಲ್ಲಿನ ಆಗ್ರಹಗಳು.

Advertisement

1. ಕುಡಿಯುವ ನೀರು
ಕ್ಷೇತ್ರ ವ್ಯಾಪ್ತಿಯಲ್ಲಿ ಐದು ಹೊಳೆಗಳು ಹರಿಯುತ್ತಿದ್ದು, ಈ ನದಿಗಳ ನೀರನ್ನು ಸಂಗ್ರಹಿಸಿ, ಶುದ್ಧೀಕರಿಸಿ ಮನೆ ಮನೆಗೆ ವಿತರಿಸಲು ಅನುಕೂಲವಾಗುವಂತೆ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳ್ಳಬೇಕಿದೆ.

2. ಸ್ವ-ಉದ್ಯೋಗ
ಇಲ್ಲಿ ವಿದ್ಯಾವಂತ ಯುವಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, ಅದರ ಜತೆಗೆ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆಯೂ ವೃದ್ಧಿಸಿದೆ. ಈ ನಿಟ್ಟಿrನಲ್ಲಿ ಸ್ವಉದ್ಯೋಗಕ್ಕೆ ಒತ್ತು ನೀಡುವ ಉದ್ದಿಮೆಗಳ ಸ್ಥಾಪನೆಯಾಗಬೇಕಿದೆ.

3. ಬಂದರು ಅಭಿವೃದ್ಧಿ
ಕಾಪು ವಿಧಾನಸಭಾ ಕ್ಷೇತ್ರದ ಕರಾವಳಿ ತೀರದ ಜನತೆಯ ಬಹುಕಾಲದ ಕನಸಾಗಿರುವ ಹೆಜಮಾಡಿ ಬಂದರು 
ಅಭಿವೃದ್ಧಿ ಯೋಜನೆಗೆ ಶೀಘ್ರದಲ್ಲಿ ಚಾಲನೆ ದೊರಕಬೇಕಿದೆ.

4. ಪ್ರವಾಸೋದ್ಯಮ ಅಭಿವೃದ್ಧಿ
ಕಾಪು ವಿಧಾನಸಭಾ ಕ್ಷೇತ್ರದ ಬಹುಭಾಗವು ಸಮುದ್ರ ದಡ ಮತ್ತು ನದಿ ನೀರಿನ ತಟದಲ್ಲಿದ್ದು, ದೇಶ, ವಿದೇಶಗಳ ಪ್ರವಾಸಿಗರನ್ನು ಬಹುವಾಗಿ ಆಕರ್ಷಿಸುವ ರೀತಿಯಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಯಾಗಬೇಕಿದೆ.

Advertisement

5. ತಾಲೂಕು ಕ್ರೀಡಾಂಗಣ
ಕಾಪು ವಿಧಾನಸಭಾ ಕ್ಷೇತ್ರದ ಜನತೆಯ ಅನುಕೂಲಕ್ಕಾಗಿ ಸುಸಜ್ಜಿತ ಕ್ರೀಡಾಂಗಣದ ಅಗತ್ಯತೆಯಿದೆ. ಕಾಪು – ಪಡುಬಿದ್ರಿ – ಹೆಜಮಾಡಿ – ಕಟಪಾಡಿಯಲ್ಲಿ ಇದಕ್ಕಾಗಿ ಯೋಜನೆ ರೂಪಿಸಬೇಕಿದೆ.

6. ಕೆಎಸ್‌ಆರ್‌ಟಿಸಿ ತಂಗುದಾಣ, ಡಿಪೋ
ರಾಜ್ಯ – ರಾಷ್ಟ್ರಮಟ್ಟಕ್ಕೆ ಸಂಪರ್ಕ ಕಲ್ಪಿಸುವ ರಾ. ಹೆ. 66ನ್ನು ಹೊಂದಿರುವ ಕಾಪುವಿನಲ್ಲಿ KSRTC ಬಸ್‌ ತಂಗುದಾಣ ಮತ್ತು ಡಿಪೋ ನಿರ್ಮಾಣಗೊಳ್ಳಬೇಕಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸರಕಾರಿ ಬಸ್‌ಗಳು ಸಂಚರಿಸಬೇಕಿವೆ.

7. ಧಾರ್ಮಿಕ ಪ್ರವಾಸೋದ್ಯಮ
ಇಲ್ಲಿನ ಜಾನಪದ ಕಲೆ, ಸಂಸ್ಕೃತಿ, ಭೂತಾರಾಧನೆ ಸಹಿತ ಗ್ರಾಮೀಣ ಜನ ಜೀವನವನ್ನು ಎಲ್ಲೆಡೆಗೆ ಪರಿಚಯಿಸುವ ಉದ್ದೇಶದಿಂದ ಧಾರ್ಮಿಕ ಪ್ರವಾಸೋದ್ಯಮಕ್ಕೆ ಪೂರಕ ಅವಕಾಶ ಕಲ್ಪಿಸಿಕೊಡಬೇಕಿದೆ.

8. ಸಾರಿಗೆ
ಕಾಪು ಕ್ಷೇತ್ರ ಭೂ ಸಾರಿಗೆ, ರೈಲ್ವೇ ಸಾರಿಗೆ, ಜಲ ಸಾರಿಗೆ ಮತ್ತು ವಾಯು ಸಾರಿಗೆ ಮಾರ್ಗಕ್ಕೆ ಹತ್ತಿರದಲ್ಲಿದ್ದು, ನಾಲ್ಕೂ ಮಾರ್ಗಗಳ ನಡುವೆ ನೇರ ಸಂಪರ್ಕಕ್ಕಾಗಿ ಅವಕಾಶ ಒದಗಿಸಿಕೊಡಬೇಕಿದೆ.

9. ಕೈಗಾರಿಕೆಗೆ ಒತ್ತು
ಯುಪಿಸಿಎಲ್‌, ಐಎಸ್‌ಪಿಆರ್‌ಎಲ್‌, ಸುಜ್ಲಾನ್‌ ಹೀಗೆ 3 ಬೃಹತ್‌ ಕೈಗಾರಿಕೆ ಉದ್ದಿಮೆಗಳಿದ್ದು, ಇವುಗಳ ಮೂಲಕ ಕ್ಷೇತ್ರಾಭಿವೃದ್ಧಿಗೆ ಅನುದಾನ ಒದಗಿಸುವಿಕೆ ಮತ್ತು ಸಿಎಸ್‌ಆರ್‌ ಫಂಡ್‌ ಬಿಡುಗಡೆ ಮತ್ತು ಸದ್ಭಳಕೆಗೆ ಒತ್ತು ಸಿಗಬೇಕು.

10. ಅಗ್ನಿ ಶಾಮಕ ಇಲಾಖೆ
ಕರಾವಳಿ, ಗುಡ್ಡಗಾಡು ಮತ್ತು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಮಧ್ಯದಲ್ಲಿರುವ ಕಾಪುವಿನಲ್ಲಿ ತುರ್ತು ಸಂದರ್ಭಕ್ಕಾಗಿ ಪೂರ್ಣ ಪ್ರಮಾಣದ ಅಗ್ನಿಶಾಮಕ ಕಚೇರಿ ಬೇಕಿದೆ.

11. ತುರ್ತು ಚಿಕಿತ್ಸೆ
ಈ ನಿರಂತರ ಅಪಘಾತ ನಡೆಯುತ್ತಿದ್ದು, ಗಾಯಗೊಂಡವರ ತುರ್ತು ಶುಶ್ರೂಷೆಗಾಗಿ ಟ್ರೋಮಾ ಸೆಂಟರ್‌ ಅತ್ಯಗತ್ಯ. ಅದರ ಜತೆಯಲ್ಲಿ ಶೀಥಲೀಕರಣ ಶವಾಗಾರವೂ ಕಾಪುವಿನ ತುರ್ತು ಅಗತ್ಯಗಳಲ್ಲೊಂದಾಗಿದೆ.

12. CRZ ಕಾಯ್ದೆ ತಿದ್ದುಪಡಿ
ಕಡಲ ತೀರದ ಪ್ರದೇಶಗಳು ಸಿಆರ್‌ಝಡ್‌ -3ರ ವ್ಯಾಪ್ತಿಯಲ್ಲಿದ್ದು ಬೀಚ್‌ನ 500 ಮೀ. ವ್ಯಾಪ್ತಿಯೊಳಗೆ ಯಾವುದೇ ಕಟ್ಟಡ ನಿರ್ಮಾಣ ಅಸಾಧ್ಯ. ಸಿಆರ್‌ಝಡ್‌ -2ಕ್ಕೆ ಪರಿವರ್ತನೆ ಅತ್ಯಗತ್ಯ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next