Advertisement

Kaup ತಾ| ಪೌತಿ ಖಾತೆ ಆಂದೋಲನ; ಅರ್ಜಿ ಸಲ್ಲಿಕೆ ಅವಧಿ 8 ದಿನ; ವಂಶವೃಕ್ಷಕ್ಕೆ ಬೇಕು 14 ದಿನ !

11:46 AM Jan 03, 2024 | Team Udayavani |

ಶಿರ್ವ: ಉಡುಪಿ ಜಿಲ್ಲಾಧಿಕಾರಿಯವರ ಆದೇಶದಂತೆ ಕಾಪು ತಾಲೂಕಿನಲ್ಲಿ ಮೃತ ಖಾತೆದಾರರ ವಾರೀಸುದಾರರ ಹೆಸರಿಗೆ ಖಾತಾ ಬದಲಾವಣೆ ಮಾಡುವ ಬಗ್ಗೆ ಪೌತಿ ಖಾತೆ ಆಂದೋಲನವನ್ನು ಜ. 1 ರಿಂದ 8ರ ವರೆಗೆ ಏರ್ಪಡಿಸಲಾಗಿದೆ ಎಂದು ಪೌತಿ ಅದಾಲತ್‌ ಬಗ್ಗೆ ಕಾಪು ತಹಶೀಲ್ದಾರ್‌ ಅವರ ಪ್ರಕಟನೆ ತಿಳಿಸಿದೆ.

Advertisement

ಬ್ರಹ್ಮಾವರ ತಾಲೂಕು ಕೂಡಾ ಈ ಬಗ್ಗೆ ಪ್ರಕಟನೆ ಹೊರಡಿಸಿದೆ. ಪೌತಿ ಅದಾಲತ್‌ಗೆ ವಂಶವೃಕ್ಷ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.ವಂಶವೃಕ್ಷ ನೀಡಲು ಗ್ರಾಮ ಕರಣಿಕರು ಕಡಿಮೆಯೆಂದರೆ 7-15 ದಿನಗಳ ನೊಟೀಸು ನೀಡಬೇಕಾಗುತ್ತದೆ. ವಂಶವೃಕ್ಷ ಅನುಮೋದನೆಗೆ ಆನ್‌ಲೈನ್‌ನಲ್ಲಿ 14 ದಿನ ಬೇಕು. ಇದಕ್ಕಾಗಿ ಜನರು ದಾಖಲೆಗಳನ್ನು ಸಂಗ್ರಹಿಸಲೂ ಸಮಯಾವಕಾಶ ಬೇಕು. ಇದು ಅರ್ಜಿ ಸಲ್ಲಿಕೆ ದಿನದಿಂದ ಅನುಕ್ರಮವಾಗಿ ಅನುಮೋದನೆ ಮಾಡುವಂಥದ್ದು,ಆದರೆ ವಿಪರ್ಯಾಸವೆಂದರೆ ವಂಶವೃಕ್ಷವನ್ನು ಕಡ್ಡಾಯವಾಗಿಸಿದ ಪೌತಿ ಆಂದೋಲನಕ್ಕೆ ಅರ್ಜಿ ಸಲ್ಲಿಸಲು 8 ದಿನದ ಕಾಲಾವಕಾಶ ಮಾತ್ರವೇ ಇದೆ.ಇದರಲ್ಲಿ 2 ದಿನ ಈಗಾಗಲೇ ಕಳೆದಿದೆ.

ಪೌತಿ ಅದಾಲತ್‌ಗೆ ಬೇಕಾದ ದಾಖಲೆಗಳು

ಪೌತಿ ಅದಾಲತ್‌ಗೆ ಬೇಕಾದ ದಾಖಲೆಗಳಾದ ವಂಶವೃಕ್ಷ,ಅಫಿದಾವಿತ್‌ನಕಲು,ಮರಣ ಪ್ರಮಾಣಪತ್ರ,ಜೀವಿತ ಸದಸ್ಯರ ಆಧಾರ್‌ ಕಾರ್ಡ್‌,ಪಡಿತರ ಚೀಟಿ,ದೃಢೀಕೃತ ಜಮೀನಿನ ದಾಖಲೆ,ಪಹಣಿ ಇತ್ಯಾದಿ ದಾಖಲೆಗಳನ್ನು ಕಡಿಮೆ ಅವಧಿಯಲ್ಲಿ ಹೊಂದಿಸಿಕೊಳ್ಳಬೇಕಿದೆ. ವಂಶವೃಕ್ಷಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ 14 ದಿನ ಕಾಯಬೇಕಿದೆ.

ಮರಣಪ್ರಮಾಣ ಪತ್ರ ಮತ್ತು ಜಮೀನಿನ ದಾಖಲೆಗಳ ದೃಢೀಕೃತ ಪತ್ರವನ್ನು ಒದಗಿಸಬೇಕೆಂದು ತಹಶೀಲ್ದಾರ್‌ ಅವರ ಆದೇಶದಲ್ಲಿ ತಿಳಿಸಲಾಗಿದೆ.ಆದರೆ ಸದ್ರಿ ದೃಢೀಕೃತ ದಾಖಲೆಗಳನ್ನು ಪಡೆದುಕೊಳ್ಳಲು ಕನಿಷ್ಠ 15 ದಿನಗಳ ಕಾಲಾವಕಾಶ ಬೇಕಾಗುತ್ತದೆ. ಪೌತಿ ಆಂದೋಲನವು ಕಾನೂನು ಮಾಹಿತಿಯಿಲ್ಲದ ಬಡವರು, ಕೃಷಿಕರು ಮತ್ತು ಹೊಸದಾಗಿ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುವವರಿಗೆ ಪ್ರಯೋಜನಕಾರಿಯಾಗಬೇಕಿದೆ.

Advertisement

ತಾ. ಆಡಳಿತ ಅದಾಲತ್‌ಗೆ ಅರ್ಜಿ ಸಲ್ಲಿಕೆಯ ಅವಧಿಯನ್ನು ವಿಸ್ತರಿಸಿ ಜನೋಪಯೋಗಿಯಾಗಿ ಮತ್ತು ಪರಿಣಾಮಕಾರಿಯಾಗಿ ಸರಕಾರದ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕಾಗಿದೆ. ಅಥವಾ ಗ್ರಾಮ ಕರಣಿಕರು, ಕಂದಾಯ ಪರಿವೀಕ್ಷಕರು ಪೌತಿದಾರರ ವಂಶವೃಕ್ಷವನ್ನು ಹೇಳಿಕೆ ಮಹಜರಿನ ಆಧಾರದಲ್ಲಿ ಸ್ಥಳದಲ್ಲೇ ದೃಢೀಕರಿಸುವ ಈ ಹಿಂದಿನ ಕ್ರಮವನ್ನು ಮತ್ತೆ ಆರಂಭಿಸಬೇಕು, ಇದರಿಂದ ಗ್ರಾಮೀಣ ಭಾಗದ ನಾಗರಿಕರ ವರುಷಗಳಿಂದ ಬಾಕಿಯುಳಿದ ಹಲವಾರು ಪ್ರಕರಣಗಳನ್ನು ಬಗೆಹರಿಸಿದಂತಾಗುತ್ತಿದೆ ಮತ್ತು ಪೌತಿ ಆಂದೋಲನವು ಕೂಡಾ ಯಶಸ್ವಿಯಾಗುತ್ತದೆ.

ಜನ ಜಾಗೃತಿಗಾಗಿ ಪೌತಿ ಆಂದೋಲನ: ಪೌತಿ ಆಂದೋಲನಕ್ಕೆ ಯಾವುದೇ ಸೀಮಿತ ಕಾಲಮಿತಿ ಇಲ್ಲ.ಪೂರಕ ದಾಖಲೆಗಳೊಂದಿಗೆ ಜನರು ಯಾವುದೇ ಸಮಯದಲ್ಲಿ ಬಂದು ತಮ್ಮ ಕೆಲಸ ಮಾಡಿಸಿಕೊಳ್ಳಬಹುದು. ಜಾಗ ಹಿರಿಯರ ಹೆಸರಿನಲ್ಲೇ ಇದ್ದು ,ಜನರು ಅದನ್ನು ಗಮನಿಸಲು ಹೋಗುವುದಿಲ್ಲ.ಹಿರಿಯರ ಹೆಸರಿನಲ್ಲಿರುವ ಜಾಗವನ್ನು ತಮ್ಮ ಹೆಸರಿನಲ್ಲಿ ಮಾಡಿಸುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಆದ್ಯತೆಯ ಮೇರೆಗೆ ಜ. 1 ರಿಂದ 8ರ ವರೆಗೆ ಪೌತಿ ಆಂದೋಲನ ನಡೆಸ ಲಾಗುತ್ತಿದೆ. ಎಲ್ಲಾ ಪೌತಿಗಳನ್ನು ಮುಗಿಸಿಬಿಡುವ ಲೆಕ್ಕದಲ್ಲಿ ಆಂದೋಲನ ಪ್ರಾರಂಭಿಸಲಾಗಿದ್ದು, ಮುಂದೆಯೂ ಜನರಿಗೆ ಇದರ ಪ್ರಯೋಜನ ಸಿಗಲಿದೆ. ಆಂದೋಲನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ನಿಗದಿತ ಸಮಯದಲ್ಲಿ ಜನರಿಗೆ ಸಂತತಿ ನಕ್ಷೆ ,ಮರಣಪ್ರಮಾಣ ಪತ್ರ ತರಲು ಕಷ್ಟವಾಗುತ್ತಿದೆ. ವಂಶವೃಕ್ಷ, ಮರಣ ಪ್ರಮಾಣಪತ್ರ,ಹೇಗೆ ಹಕ್ಕು ಬಂತು,ಆಧಾರ್‌ ಕಾರ್ಡ್‌ ಮತ್ತಿತರ ಪೂರಕ ದಾಖಲೆ ನೀಡಿದರೆ ಕೂಡಲೇ ಪೌತಿ ಖಾತೆಯಾಗುತ್ತದೆ. ಸರಿಯಾದ ಮಾಹಿತಿ ನೀಡದಿದ್ದರೆ ವಿಳಂಬವಾಗುತ್ತದೆ.-ಡಾ| ಪ್ರತಿಭಾ .ಆರ್‌. ಕಾಪು ತಹಶೀಲ್ದಾರ್‌

-ಸತೀಶ್ಚಂದ್ರ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next