Advertisement

4 ವರ್ಷವಾದರೂ ಮುಗಿಯದ ಕಚೇರಿ ಕಾಮಗಾರಿ

07:47 PM Oct 22, 2021 | Team Udayavani |

ಹೆಮ್ಮಾಡಿ: ಪ್ರತ್ಯೇಕ ಪಂಚಾಯತ್‌ ರಚನೆಯಾಗಿ 7 ವರ್ಷಗಳಾಗುತ್ತ ಬಂದರೂ, ಕಟ್ ಬೆಲ್ತೂರು ಗ್ರಾಮ ಪಂಚಾಯತ್‌ ಇನ್ನು ಸ್ವಂತ ಕಚೇರಿಯನ್ನು ಹೊಂದಿಲ್ಲ. ಸ್ವಂತ ಕಚೇರಿಗಾಗಿ 4 ವರ್ಷಗಳ ಹಿಂದೆಯೇ ಗ್ರಾ.ಪಂ. ಕಟ್ಟಡದ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದರೂ, ಸ್ಥಳೀಯ ರಾಜಕೀಯ ಹಾಗೂ ಇನ್ನಿತರ ಕಾರಣಗಳಿಂದಾಗಿ ಇನ್ನೂ ಪೂರ್ಣಗೊಳ್ಳುವ ಹಂತಕ್ಕೆ ಬಂದಿಲ್ಲ.

Advertisement

ಇದರಿಂದಾಗಿ ಹೆಮ್ಮಾಡಿ ಗ್ರಾ.ಪಂ.ನಿಂದ ಬೇರ್ಪಟ್ಟ ಕಟ್ ಬೆಲ್ತೂರು ಪ್ರತ್ಯೇಕ ಗ್ರಾ.ಪಂ. ಆಗಿ ರಚನೆಯಾಗಿ 6 ವರ್ಷ ಕಳೆದರೂ, ಗ್ರಾ.ಪಂ. ಕಟ್ಟಡ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತ ಪರಿಣಾಮ ಇನ್ನೂ ಹೊಸ ಕಚೇರಿಯಲ್ಲಿ ಕಾರ್ಯಾಚರಿಸುವ ಕಾಲ ಮಾತ್ರ ಕೂಡಿಬಂದಿಲ್ಲ. 5 ವಾರ್ಡ್‌ಗಳಿರುವ ಗ್ರಾ.ಪಂ.ನಲ್ಲಿ 13 ಸದಸ್ಯ ಸ್ಥಾನಗಳಿವೆ. 4,900 ಜನಸಂಖ್ಯೆಯನ್ನು ಹೊಂದಿದೆ.

ಯಾಕೆ ವಿಳಂಬ?
ಪಂಚಾಯತ್‌ನ ನೂತನ ಕಚೇರಿಯ ಕಟ್ಟಡ ಕಾಮಗಾರಿ ಆರಂಭಗೊಂಡು ಸರಿ ಸುಮಾರು 4 ವರ್ಷ ಕಳೆದಿದೆ. 4 ವರ್ಷಗಳ ಹಿಂದೆ ಪಂಚಾಯತ್‌ ಹಾಗೂ ಉದ್ಯೋಗ ಖಾತರಿಯ ಅನುದಾನದಡಿ ಒಟ್ಟು 40 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಹಿಂದಿನ ಪಂಚಾಯತ್‌ ಅವಧಿಯಲ್ಲಿ ಶಿಲಾನ್ಯಾಸ ನೆರವೇರಿಸಲಾಗಿತ್ತು. ಆದರೂ ಈವರೆಗೆ ಆಗಿದ್ದು, ಅಡಿಪಾಯ ಹಾಗೂ ಗೋಡೆ ನಿರ್ಮಾಣ ಮಾತ್ರ. ಇದಕ್ಕೆ ಪ್ರಮುಖವಾಗಿ ಸ್ಥಳೀಯ ರಾಜಕೀಯ ಪ್ರಮುಖ ಕಾರಣ. ಇದರಿಂದಾಗಿ ಟೆಂಡರ್‌ ವಹಿಸಿಕೊಂಡವರು ಸಹ ಕಾಮಗಾರಿ ನಡೆಸಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಜನತಾ ಬಜಾರ್‌ ಜಾಗದಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಕೃಷಿ ವಿಭಾಗದ ಕಟ್ಟಡ ನಿರ್ಮಾಣ

ಗ್ರಾಮಸ್ಥರಿಗೆ ಸಮಸ್ಯೆ
ಕಟ್ ಬೆಲ್ತೂರು ಹಾಗೂ ದೇವಲ್ಕುಂದ ಗ್ರಾಮವನ್ನೊಳಗೊಂಡ ಹೊಸ ಪಂಚಾಯತ್‌ ಆಗಿ 2014-15ನೇ ಸಾಲಿನಲ್ಲಿ ರಚನೆಗೊಂಡಿತು. ಆಗ ದೇವಲ್ಕುಂದದಲ್ಲಿರುವ ಸಮುದಾಯ ಭವನದಲ್ಲಿ ತಾತ್ಕಾಲಿಕ ನೆಲೆಯಲ್ಲಿ ಗ್ರಾ.ಪಂ. ಕಚೇರಿ ಆರಂಭಗೊಂಡಿತು. ಅಲ್ಲಿಂದ ಇತ್ತೀಚೆಗೆ ಕೆಲವು ತಿಂಗಳ ಹಿಂದಷ್ಟೇ ಕಟ್ ಬೆಲ್ತೂರಿನಲ್ಲಿರುವ ಗ್ರಾಮ ವಿಕಾಸ ಯೋಜನೆಯಡಿ ನಿರ್ಮಾಣಗೊಂಡ ಸಮುದಾಯ ಭವನದಲ್ಲಿ ಗ್ರಾ.ಪಂ. ಕಚೇರಿ ಕಾರ್ಯಾಚರಿಸುತ್ತಿದೆ. ಇದೇ ಭವನದ ಪಕ್ಕದಲ್ಲಿಯೇ ಗ್ರಾ.ಪಂ. ಕಚೇರಿ ಕಟ್ಟಡವು ನಿರ್ಮಾಣ ವಾಗುತ್ತಿದೆ. ಅಲ್ಲಿಗೆ ಸಂಪರ್ಕಿಸುವ ಮಣ್ಣಿನ ರಸ್ತೆಯು ಮಳೆಗಾಲದಲ್ಲಿ ಕೆಸರುಮಯವಾಗಿರುವುದರಿಂದ ಗ್ರಾಮಸ್ಥರಿಗೆ ಸಮಸ್ಯೆಯಾಗುತ್ತಿದೆ.

Advertisement

ಸ್ಥಳೀಯ ರಾಜಕೀಯ
ಈ ಪಂಚಾಯತ್‌ ಕಚೇರಿಯ ಕಟ್ಟಡ ನಿರ್ಮಾಣ ಕಾಮಗಾರಿ ನಮ್ಮ ಆಡಳಿತಾವಧಿಯಲ್ಲಿ ಅಂದರೆ 4 ವರ್ಷಗಳ ಹಿಂದೆಯೇ ಆರಂಭವಾಗಿತ್ತು. ಆದರೆ ಆ ಬಳಿಕ ಕೆಲವರ ಹಸ್ತಾಕ್ಷೇಪದಿಂದ ವಿಳಂಬವಾಗಿತ್ತು. ಮುಖ್ಯವಾಗಿ ಸ್ಥಳೀಯ ರಾಜಕೀಯವೇ ಕಾಮಗಾರಿ ಸ್ಥಗಿತಗೊಳ್ಳಲು ಕಾರಣ. ಈಗ ಟೆಂಡರ್‌ ಆಗಿದ್ದರೂ, ಕಾಮಗಾರಿ ನಡೆಸಲು ಮುಂದಾಗುತ್ತಿಲ್ಲ. ಅಧಿಕಾರದಲ್ಲಿರುವವರಿಗೂ ಈ ಬಗ್ಗೆ ಆಸಕ್ತಿ ಇದ್ದಂತಿಲ್ಲ.
– ಶರತ್‌ ಕುಮಾರ್‌ ಶೆಟ್ಟಿ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ

ಟೆಂಡರ್‌ ಆಗಿದೆ
ಹಿಂದಿನ ಅವಧಿಯಲ್ಲಿಯೇ ಇದರ ಕಾಮಗಾರಿ ಸ್ಥಗಿತಗೊಂಡಿತ್ತು. ಈಗ ಮತ್ತೆ ಪುನರ್‌ ಟೆಂಡರ್‌ ಕರೆಯಲಾಗಿದೆ. ಆದರೆ ಕೆಲವು ಕಾರಣಕ್ಕೆ ಕಾಮಗಾರಿ ಆರಂಭವಾಗಿಲ್ಲ. ಈ ಬಗ್ಗೆ ಪಂಚಾಯತ್‌ನಿಂದ ಮಾತನಾಡಿ, ಕಾಮಗಾರಿ ಆರಂಭಿಸಲು ಎಲ್ಲ ರೀತಿಯಿಂದ ಪ್ರಯತ್ನಿಸಲಾಗುವುದು.
– ನಾಗರಾಜ್‌ ಪುತ್ರನ್‌, ಅಧ್ಯಕ್ಷರು, ಕಟ್ ಬೆಲ್ತೂರು ಗ್ರಾ.ಪಂ. ಅಧ್ಯಕ್ಷ

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next