Advertisement

ಇವು ಮತ್ತೆ, ಮತ್ತೆ ಕಾಡುವ ಸಿನಿಮಾ ಹಾಗೂ ಅದರ ಹಿಂದಿನ ರೋಚಕ ಗಾಥೆ!

12:23 PM Jul 19, 2018 | Sharanya Alva |

ಕೆಲವು ಸಿನಿಮಾಗಳಲ್ಲಿನ ಪಾತ್ರಗಳೇ ಹಾಗೆ ಎಂತಹ ಕಲ್ಲು ಮನಸ್ಸಿನ ಹೃದಯದವರು ಕೂಡಾ ಕಣ್ಣೀರು ಹಾಕುವಂತೆ ಮಾಡಿ ಬಿಡುತ್ತದೆ..ವಿಕ್ರಮ್ ಅಭಿನಯದ ತಮಿಳಿನ ಸೇತು ಸಿನಿಮಾ, ದೈವ ತಿರುಮಗಳ್, ಅಂಜಲಿ ಸಿನಿಮಾದ ಕ್ಲೈಮ್ಯಾಕ್ಸ್, ಕನ್ನಡದಲ್ಲಿ ಕಳೆದ ವರ್ಷ ತೆರೆ ಕಂಡಿದ್ದ ಪುಷ್ಪಕ ವಿಮಾನ ಸೇರಿದಂತೆ ಹಲವು ಸಿನಿಮಾಗಳು ಈ ಸಾಲಿಗೆ ಸೇರುತ್ತದೆ.

Advertisement

ಅದೇ ರೀತಿ ವಿಷ್ಣುವರ್ಧನ್ , ಭವ್ಯಾ ಅಭಿನಯದ ನೀ ಬರೆದ ಕಾದಂಬರಿ ಇವೆಲ್ಲಕ್ಕಿಂತ ಪ್ರಮುಖವಾಗಿ ಕಾಡುವ ಸಿನಿಮಾ ಡಾ.ರಾಜ್ ಕುಮಾರ್ ಅಭಿನಯದ “ಕಸ್ತೂರಿ ನಿವಾಸ”. ಒಂದು ಪಾತ್ರಕ್ಕೆ ಹೇಗೆ ಜೀವ ತುಂಬಬಹುದು ಎಂಬುದಕ್ಕೆ ಕಸ್ತೂರಿ ನಿವಾಸ ಸಿನಿಮಾವೇ ಸಾಕ್ಷಿ. ವೀಕ್ಷಕರ ಅಂತಃಕರಣವನ್ನೇ ಅಲುಗಾಡಿಸಬಲ್ಲ ಸಿನಿಮಾ ಅದು. ಚಿತ್ರದ ಕೊನೆಯ ದೃಶ್ಯ ನಿಮ್ಮನ್ನು ಭಾವುಕರನ್ನಾಗಿಸುತ್ತೆ. ಅದು ಕಸ್ತೂರಿ ನಿವಾಸ ಸಿನಿಮಾದ ಧೀ ಶಕ್ತಿ.

ಕನ್ನಡ ಚಿತ್ರರಂಗ ಎಂದೆಂದೂ ಮರೆಯದ ಹಾಗೂ ಡಾ.ರಾಜ್ ಕುಮಾರ್ ಅವರ ಮನೋಜ್ಞ ಅಬಿನಯದ ಸಿನಿಮಾ ಕಸ್ತೂರಿ ನಿವಾಸ. ಒಂದೊಂದು ಸಲ ಕೈಗೊಂಡ ನಿರ್ಧಾರಗಳು ಹೇಗೆ ನಮ್ಮನ್ನು ಕಾಡುತ್ತವೆ, ಪರಿತಪಿಸುವಂತೆ ಮಾಡುತ್ತೆ ಎಂಬುದಕ್ಕೆ ಕಸ್ತೂರಿ ನಿವಾಸ ಸಿನಿಮಾದ ಹಿಂದಿನ ಕಥೆಯೇ ರೋಚಕವಾದದ್ದು!

ಡಾ.ರಾಜ್ ಕುಮಾರ್ ಗೆ ಒಲಿದು ಬಂದ ಅವಕಾಶ!

ಇದು ಜಿ.ಬಾಲಸುಬ್ರಮಣಿಯಂ ಅವರ ಕಥೆಯನ್ನಾಧರಿಸಿದ್ದ ಚಿತ್ರ. ಇದನ್ನು ನಿರ್ಮಾಪಕ ನೂರ್ ಅವರು ಸ್ಟಾರ್ ನಟರಾಗಿದ್ದ ಶಿವಾಜಿ ಗಣೇಶನ್ ಅವರನ್ನು ಹಾಕಿಕೊಂಡು ಸಿನಿಮಾ ಮಾಡಬೇಕೆಂಬ ಮಹದಾಸೆ ಅವರದ್ದಾಗಿತ್ತು. ಆದರೆ ಕಥೆಯ ಕೊನೆಯಲ್ಲಿ ನಾಯಕ ಸಾವನ್ನಪ್ಪುವ ದೃಶ್ಯ ಇದ್ದ ಕಾರಣ ಶಿವಾಜಿ ಗಣೇಶನ್ ಈ ಆಫರ್ ಅನ್ನು ಒಪ್ಪಿರಲಿಲ್ಲವಾಗಿತ್ತಂತೆ!

Advertisement

ನಂತರ ದೊರೈ ರಾಜ್ ಹಾಗೂ ಎಸ್.ಕೆ.ಭಗವಾನ್ ಅವರು ಡಾ.ರಾಜ್ ಅವರ ಸಹೋದರ ವರದಪ್ಪನವರಿಗೆ ಹೇಳಿ ಡಾ.ರಾಜ್ ಕುಮಾರ್ ಅವರು ಚಿತ್ರದಲ್ಲಿ ನಟಿಸುವಂತೆ ಮನವೊಲಿಸಿದ್ದರಂತೆ. ನಿರ್ದೇಶಕರಾದ ದೊರೈ ಹಾಗೂ ಭಗವಾನ್ ನೂರ್ ಅವರನ್ನು ಸಂಪರ್ಕಿಸಿ 39ಸಾವಿರ ರೂಪಾಯಿಗೆ ಕಥೆಯ ಹಕ್ಕನ್ನು ಪಡೆದಿದ್ದರು.

1971ರಲ್ಲಿ ಮೈಸೂರು ಹಾಗೂ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಕಸ್ತೂರಿ ನಿವಾಸ ಸಿನಿಮಾದ ಚಿತ್ರೀಕರಣ ಆರಂಭಿಸಿದ್ದರು. ಕೇವಲ 20 ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಂಡಿತ್ತಂತೆ.

70ರ ದಶಕದಲ್ಲಿ ನಿರ್ಮಿಸಿದ್ದ ಕಸ್ತೂರಿ ನಿವಾಸ ಸಿನಿಮಾಕ್ಕೆ ಅಂದಿನ ಬಜೆಟ್ 3.75 ಲಕ್ಷ ರೂಪಾಯಿ, ಅಂದ ಹಾಗೆ ಚಿತ್ರದಲ್ಲಿನ ಜೀವಾಳ ಬಿಳಿ ಪಾರಿವಾಳವನ್ನು ಮೈಸೂರಿನ ಹೊರವಲಯದಲ್ಲಿ 500 ರೂಪಾಯಿ ಕೊಟ್ಟು ಖರೀದಿಸಲಾಗಿತ್ತು.

ಚಿತ್ರದಲ್ಲಿ ಡಾ.ರಾಜ್ ಕುಮಾರ್, ರಾಜಾಶಂಕರ್, ನರಸಿಂಹರಾಜು, ಬಾಲಕೃಷ್ಣ, ಕೆಎಸ್ ಅಶ್ವಥ್, ಜಯಂತಿ, ಆರತಿ ಸೇರಿ ಹಲವು ನಟರು ಮುಖ್ಯಭೂಮಿಕೆಯಲ್ಲಿದ್ದರು. ಕಸ್ತೂರಿ ನಿವಾಸ ಸಿನಿಮಾ ಡಾ.ರಾಜ್ ಅವರ ಸಿನಿ ಜೀವನದ ಪ್ರಮುಖ ಮೈಲಿಗಳಲ್ಲಿ ಒಂದಾದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಈ ಸಿನಿಮಾ 16 ಚಿತ್ರಮಂದಿರಗಳಲ್ಲಿ ನೂರು ದಿನಗಳನ್ನು ಪೂರೈಸಿತ್ತು.

ಕಸ್ತೂರಿ ನಿವಾಸದಲ್ಲಿ ಡಾ.ರಾಜ್ ಅವರ ಮನೋಜ್ಞ ಅಭಿನಯ ಎಂತಹ ಕಲ್ಲು ಹೃದಯವನ್ನೂ ಕರಗಿಸುವಂತಹದ್ದಾಗಿತ್ತು. ಈ ಚಿತ್ರದಲ್ಲಿನ ನಟನೆಗಾಗಿ ಡಾ.ರಾಜ್ ಪಡೆದದ್ದು 15 ಸಾವಿರ ರೂಪಾಯಿ.

ಕಣ್ಣೀರು ಹಾಕಿದ ಶಿವಾಜಿ ಗಣೇಶನ್!

ಕಸ್ತೂರಿ ನಿವಾಸ ಸಿನಿಮಾ ಬಿಡುಗಡೆಯಾದ ಬಳಿಕ ನಟ ಶಿವಾಜಿ ಗಣೇಶನ್ ಅವರು ರಾಜ್ ಅಭಿನಯವನ್ನು ನೋಡಿ ಕಣ್ಣೀರು ಹಾಕಿದ್ದರಂತೆ. ಕಥೆಯನ್ನು ನಿರಾಕರಿಸಿದ್ದಕ್ಕೆ ನೊಂದುಕೊಂಡ ಶಿವಾಜಿ ಗಣೇಶನ್ ತಮಿಳಿನಲ್ಲೂ ತಾವೇ ನಾಯಕರಾಗಿ ನಟಿಸಲು ಅನುಮತಿ ನೀಡಿದ್ದರು. ಅದರಂತೆ ತಮಿಳಿನಲ್ಲಿ ಅವಾಂತಾನ್ ಮಣಿಥಾನ್ ಹೆಸರಿನಲ್ಲಿ ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿತ್ತು. 1974ರಲ್ಲಿ ಹಿಂದಿಯಲ್ಲೂ ಚಿತ್ರ ತಯಾರಾಗಿತ್ತು (ಶಾನ್ ದಾರ್ ಚಿತ್ರ, ಸಂಜೀವ್ ಕುಮಾರ್ ನಾಯಕ ನಟ) ಚಿತ್ರಕ್ಕೆ ಜಿ.ಉದಯ್ ಶಂಕರ್ ಅವರ ಸಂಭಾಷಣೆ, ಜಿಕೆ ವೆಂಕಟೇಶ್ ಅವರ ಸಂಗೀತ, ಪಿಬಿ ಶ್ರೀನಿವಾಸ್, ಪಿ.ಸುಶೀಲ,ಎಲ್ ಆರ್ ಈಶ್ವರಿ, ಜಿಕೆ ವೆಂಕಟೇಶ್ ಅವರ ಹಿನ್ನೆಲೆ ಸಂಗೀತ ಕಸ್ತೂರಿ ನಿವಾಸ ಸಿನಿಮಾವನ್ನು ಇನ್ನಷ್ಟು ಶ್ರೀಮಂತಗೊಳಿಸಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next