Advertisement

ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿ ಕಾಸರಗೋಡು, ದ.ಕ. ಜಿಲ್ಲೆ ಯುವಕರು

10:35 AM May 12, 2020 | sudhir |

ಮಂಗಳೂರು: ಕೋವಿಡ್ ಹರಡಬಾರದೆಂಬ ಮುನ್ನೆಚ್ಚರಿಕೆ ಕ್ರಮವಾಗಿ ಕರ್ನಾಟಕ-ಕೇರಳ ಗಡಿ ಬಂದ್‌ ಮಾಡಿರುವುದು ಇದೀಗ ಉಭಯ ರಾಜ್ಯಗಳ ಉದ್ಯೋಗಿಗಳ ಮೇಲೆ ಪರಿಣಾಮ ಬೀರಿದೆ. ಗಡಿ ದಾಟಿ ಬರಲಾರದೆ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ.

Advertisement

ಕೇರಳದಲ್ಲಿ ಕೋವಿಡ್ ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯಕ್ಕೆ, ಅದರಲ್ಲೂ ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಕೇರಳದಿಂದ ಬರುವ ಸುಮಾರು 10 ಗಡಿಗಳನ್ನು ಬಂದ್‌ ಮಾಡಲಾಗಿತ್ತು. ದ.ಕ.ದಲ್ಲಿ ಪ್ರಕರಣ ವೃದ್ಧಿಸಿ ಕಾಸರಗೋಡಿನಲ್ಲಿ ಇಳಿಕೆಯಾಗುತ್ತಿದ್ದಂತೆ ಕೇರಳ ಸರಕಾರವೂ ಇದೇ ನಿರ್ಧಾರವನ್ನು ತೆಗೆದುಕೊಂಡಿತ್ತು. ಈ ನಿರ್ಧಾರ ಇದೀಗ ಮಂಗಳೂರಿನಲ್ಲಿ ಕೆಲಸ ಮಾಡುವ ಕೇರಳದ ಮತ್ತು ಕೇರಳದಲ್ಲಿ ಕೆಲಸ ಮಾಡುವ ದಕ್ಷಿಣ ಕನ್ನಡದ ಉದ್ಯೋಗಿಗಳ ಮೇಲೆ ಪರಿಣಾಮ ಬೀರಿದೆ. ನಿರಂತರ ಗೈರುಹಾಜರಿಯಿಂದ ಕೆಲವರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಲಾಕ್‌ಡೌನ್‌ ಪರಿಣಾಮ ಒಂದೂವರೆ ತಿಂಗಳಿನಿಂದ ಬಾಗಿಲು ಹಾಕಿದ್ದ ಕೆಲವು ಕಂಪೆನಿಗಳು ಲಾಕ್‌ಡೌನ್‌ ಸಡಿಲಿಕೆಯಾಗುತ್ತಿದ್ದಂತೆ ಬಾಗಿಲು ತೆರೆದು ಕನಿಷ್ಠ ಸಿಬಂದಿ ಮೂಲಕ ಕಾರ್ಯಾರಂಭಿಸಿವೆ. ಮಂಗಳೂರಿನಲ್ಲಿ ಕೆಲಸ ಮಾಡುವ ಕೇರಳದ ಕಾಸರಗೋಡಿನವರನ್ನು ಆಯಾ ಕಂಪೆನಿಗಳು ಕೆಲಸಕ್ಕೆ ಹಾಜರಾಗಬೇಕೆಂದು ತಿಳಿಸಿವೆ. ಅತ್ತ ಕೇರಳದ ಕಂಪೆನಿಗಳೂ ಕೆಲಸಕ್ಕೆ ಬರುವಂತೆ ಸೂಚಿಸಿವೆ. ಆದರೆ ಇನ್ನೂ ಕೂಡ ಗಡಿ ಸಂಚಾರಕ್ಕೆ ಮುಕ್ತವಾಗದ ಕಾರಣ ಉದ್ಯೋಗಿಗಳು ದಾರಿ ಕಾಣದಾಗಿದ್ದಾರೆ.

ಸರಕಾರಕ್ಕೆ ಮನವಿ
ಸಮಸ್ಯೆಯ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಸಂದೇಶ ಕಳುಹಿಸಿ ಉಭಯ ರಾಜ್ಯಗಳ ಸರಕಾರ, ಜನಪ್ರತಿನಿಧಿಗಳ ಗಮನಕ್ಕೆ ತರುವ ಕೆಲಸ ಮಾಡಲಾಗುತ್ತಿದೆ.ಜೀವನೋಪಾಯಕ್ಕಾಗಿ ನಿತ್ಯ ಓಡಾಟ ನಡೆಸುವ ಅನಿವಾರ್ಯ ಇರುವವರಿಗೆ ಸ್ವಂತ ವಾಹನದಲ್ಲಿ ದಿನಕ್ಕೆರಡು ಬಾರಿ ಸಂಚರಿಸಲು ಪಾಸ್‌ ವ್ಯವಸ್ಥೆ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

ಕ್ವಾರಂಟೈನ್‌ ಗೊಂದಲ
ನೆರೆಯ ಕೇರಳ ಮಾತ್ರವಲ್ಲದೆ, ಇತರ ಹೊರ ರಾಜ್ಯಗಳಲ್ಲಿರುವ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಮಂದಿಯೂ ಇದೇ ಸಮಸ್ಯೆ ಅನುಭವಿಸುತ್ತಿದ್ದಾರೆ. ಕೆಲಸಕ್ಕೆ ಹಾಜರಾಗುವಂತೆ ಕಂಪೆನಿಗಳಿಂದ ಕರೆ ಬಂದಿದ್ದು, ಕೋವಿಡ್ ತಪಾಸಣೆ ನಡೆಸಬೇಕೊ, ಕೋವಿಡ್ ಇಲ್ಲವೆಂಬ ಪ್ರಮಾಣಪತ್ರ ಕೊಂಡೊಯ್ಯಬೇಕೊ, ಹಾಗೆ ಪ್ರಮಾಣಪತ್ರ ಕೊಂಡೊಯ್ದರೆ ಹೋಂ ಕ್ವಾರಂಟೈನ್‌ನಲ್ಲಿರಬೇಕೋ ಎಂಬ ಗೊಂದಲದಲ್ಲಿದ್ದಾರೆ. ಇಂತಹ ಉದ್ಯೋಗಿಗಳೂ ಲಾಕ್‌ಡೌನ್‌ ಮುಗಿಯುವವರೆಗೆ ಕಾದರೆ ಉದ್ಯೋಗ ಕಳೆದುಕೊಳ್ಳುವ ಭೀತಿಯೂ ಇದೆ.

Advertisement

ಲಾಕ್‌ಡೌನ್‌ ಸಂಪೂರ್ಣ ತೆರವಾಗುವವರೆಗೆ ರಾಜ್ಯದ ಹೊರಗಿನವರು ಬರುವುದಕ್ಕೆ ಅವಕಾಶ ಇರುವುದಿಲ್ಲ. ಉದ್ಯೋಗದಾತ ಸಂಸ್ಥೆಗಳೂ ಕೂಡ ಈ ಸಂಬಂಧ ಗಡಿಬಿಡಿ ಮಾಡಬಾರದು. ಕೋವಿಡ್ ಭೀತಿ ಇರುವಾಗ ನಿಯಮ, ಸಮಯಾವಕಾಶದ ಹೆಸರಿನಲ್ಲಿ ಅಮಾನತು, ಕೆಲಸದಿಂದ ತೆಗೆಯುವ ಸೂಚನೆ ನೀಡಬಾರದು.
– ಕೋಟ ಶ್ರೀನಿವಾಸ ಪೂಜಾರಿ, ದ.ಕ. ಜಿಲ್ಲಾ ಉಸ್ತುವಾರಿ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next