Advertisement

ಕಾಸರಗೋಡು: ನಾಲ್ವರಿಗೆ ಸೋಂಕು

03:24 AM Apr 08, 2020 | Sriram |

ಕಾಸರಗೋಡು: ಕೇರಳ ರಾಜ್ಯದಲ್ಲಿ ಮಂಗಳವಾರ 9 ಮಂದಿಗೆ ಕೋವಿಡ್ 19 ಸೋಂಕು ದೃಢಗೊಂಡಿದ್ದು, ಅವರಲ್ಲಿ ನಾಲ್ವರು ಕಾಸರಗೋಡು ನಿವಾಸಿಗಳಾಗಿದ್ದಾರೆ.

Advertisement

ಕಣ್ಣೂರು ಜಿಲ್ಲೆಯಲ್ಲಿ 3, ಮಲಪ್ಪುರ ಮತ್ತು ಕೊಲ್ಲಂ ಜಿಲ್ಲೆಯ ತಲಾ ಒಬ್ಬರಲ್ಲಿ ಸೋಂಕು ದೃಢವಾಗಿದೆ. ಅವರಲ್ಲಿ ನಾಲ್ವರು ವಿದೇಶದಿಂದ ಬಂದವರು. ಇಬ್ಬರು ನಿಜಾಮುದ್ದೀನ್‌ ಸಮಾವೇಶದಲ್ಲಿ ಭಾಗವಹಿಸಿದವರು. ಕೋವಿಡ್ 19 ವೈರಸ್‌ ಸೋಂಕಿತ ರೊಂದಿಗಿನ ಸಂಪರ್ಕದಿಂದ ಮೂವರಿಗೆ ಕೊರೊನಾ ವೈರಸ್‌ ಸೋಂಕು ಬಾಧಿಸಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಬಾಧಿತರ ಸಂಖ್ಯೆ 152 ಕ್ಕೇರಿದೆ.

ಬಾಧಿತರಿವರು ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ ಕೋವಿಡ್ 19 ವೈರಸ್‌ ಸೋಂಕಿತರು ಮೊಗ್ರಾಲ್‌, ಮಧೂರು, ಉದುಮ ಮತ್ತು ಪಳ್ಳಿಕೆರೆ ನಿವಾಸಿಗಳಾಗಿದ್ದಾರೆ. ಇವರಲ್ಲಿ 67 ವರ್ಷದ ವೃದ್ಧರೂ, 10 ವರ್ಷದ ಬಾಲಕನೂ ಇದ್ದಾನೆ. ಇವರಲ್ಲಿ ಇಬ್ಬರು ದುಬಾೖ ಯಿಂದ ಬಂದವರು ಹಾಗು ಇನ್ನಿಬ್ಬರು ಅವರ ಸಂಪರ್ಕದಲ್ಲಿದ್ದವರು.

12 ಮಂದಿ ಗುಣಮುಖ
ಕಣ್ಣೂರು ಜಿಲ್ಲೆಯಲ್ಲಿ 5, ಎರ್ನಾಕುಳಂನಲ್ಲಿ 4, ತಿರುವನಂತಪುರ, ಆಲಪ್ಪುಳ, ಕಾಸರಗೋಡಿನಲ್ಲಿ ತಲಾ ಒಬ್ಬರಂತೆ ರಾಜ್ಯದಲ್ಲಿ ಮಂಗಳವಾರ 12 ಮಂದಿ ಕೋವಿಡ್ 19 ಸೋಂಕಿನಿಂದ ಗುಣಮುಖರಾಗಿದ್ದಾರೆ. ಕೇರಳದಲ್ಲಿ ಈ ವರೆಗೆ 336 ಮಂದಿಗೆ ಕೋವಿಡ್ 19 ವೈರಸ್‌ ಸೋಂಕು ಬಾಧಿಸಿದ್ದು, ಪ್ರಸ್ತುತ 263 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವರೆಗೆ 71 ಮಂದಿ ಗುಣಮುಖರಾಗಿದ್ದು, ಇಬ್ಬರು ಸಾವಿಗೀಡಾಗಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 11,87 ಮಂದಿ ನಿಗಾದಲ್ಲಿದ್ದಾರೆ. ಹೊಸದಾಗಿ 14 ಮಂದಿಯನ್ನು ಐಸೊಲೇಶನ್‌ಗೆ ದಾಖಲಿಸಲಾಗಿದೆ. ಶುಕ್ರವಾರ 32 ಸ್ಯಾಂಪಲ್‌ಗ‌ಳನ್ನು ಕಳುಹಿಸಲಾಗಿದೆ.

Advertisement

ಡ್ರೋನ್‌ ಮೂಲಕ ನಿಗಾ
ಕೋವಿಡ್ 19 ಸೋಂಕು ಅತ್ಯಧಿಕ ಸಂಖ್ಯೆಯಲ್ಲಿರುವ ಕಾಸರಗೋಡು ಜಿಲ್ಲೆಯಲ್ಲಿ ಪೊಲೀಸ್‌ ಕ್ರಮವನ್ನು ಬಿಗಿಗೊಳಿಸಲಾಗಿದೆ. ಚೆಂಗಳ, ಮೊಗ್ರಾಲ್‌ ಪುತ್ತೂರು, ಚೆಮ್ನಾಡ್‌, ಮಧೂರು, ಉದುಮ, ಪಳ್ಳಿಕ್ಕರೆ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಮತ್ತು ಕಾಸರಗೋಡು ನಗರಸಭೆ ವ್ಯಾಪ್ತಿ ಪ್ರದೇಶಗಳಲ್ಲಿ ಕೋವಿಡ್‌ 19 ಬಾಧಿತರು ಅತ್ಯಧಿಕ ಪ್ರಮಾಣದಲ್ಲಿದ್ದಾರೆ. ಈ ಪ್ರದೇಶಗಳನ್ನು ಕೋವಿಡ್‌ ಕಂಟಿಯನ್‌ಮೆಂಟ್‌ ಝೋನ್‌ ಎಂದು ಘೋಷಿಸಿ ಪೊಲೀಸ್‌ ಡ್ರೋನ್‌ ನಿಗಾ ಆರಂಭಿಸಲಾಗಿದೆ. ಮನೆಗಳಿಂದ ಹೊರಗಿಳಿಯುವವರ ವಿರುದ್ಧ ಪೊಲೀಸರು ಕೇಸು ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳುವುದರ ಜತೆಗೆ ಜಿಲ್ಲಾಡಳಿತ ಸಿದ್ಧಪಡಿಸಿದ ಕೋವಿಡ್ 19 ಕೇರ್‌ ಸೆಂಟರ್‌ಗಳಿಗೆ ವರ್ಗಾಯಿಸಲಾಗುವುದು. ಅನಿವಾರ್ಯ ಸಾಮಗ್ರಿ, ಔಷಧ ಅಗತ್ಯವಿರುವವರು ವಾಟ್ಸ್‌ಆ್ಯಪ್‌ ಸಂದೇಶ ನೀಡಿದರೆ ಪೊಲೀಸರೇ ಮನೆಗಳಿಗೆ ತಲಪಿಸುತ್ತಾರೆ ಎಂದು ಐಜಿ ವಿಜಯ್‌ ಸಖಾರೆ ತಿಳಿಸಿದ್ದಾರೆ.

ದಾಖಲಾತಿ ಆರಂಭ
ಉಕ್ಕಿನಡ್ಕದ ಕಾಸರಗೋಡು ಮೆಡಿಕಲ್‌ ಕಾಲೇಜಿನಲ್ಲಿ ಕೋವಿಡ್‌ 19 ಸೋಂಕು ಬಾಧಿತರ ದಾಖಲಾತಿ ಆರಂಭಗೊಂಡಿದೆ. ಎ. 6ರಂದು ಸೋಂಕು ಖಚಿತಗೊಂಡ 9 ಮಂದಿಯಲ್ಲಿ 6 ಮಂದಿಯನ್ನು ಈ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರನ್ನು ಅವರ ಸಂಬಂಧಿಕರು ಈಗಾಗಲೇ ದಾಖಲಾಗಿರುವ ಜಿಲ್ಲಾ ಜನರಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ದೌತ್ಯ ಜಿಲ್ಲಾ ಯೋಜನೆ ಪ್ರಬಂಧಕ ಡಾ| ರಾಮನ್‌ ಸ್ವಾತಿ ವಾಮನ್‌ ತಿಳಿಸಿದರು.

22 ಕೇಸು; 22 ಮಂದಿ ಸೆರೆ
ಲಾಕ್‌ಡೌನ್‌ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 22 ಕೇಸುಗಳನ್ನು ದಾಖಲಿಸಲಾಗಿದೆ. 22 ಮಂದಿಯನ್ನು ಬಂಧಿಸಲಾಗಿದೆ. 14 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಂಜೇಶ್ವರ ಠಾಣೆಯಲ್ಲಿ 2, ಬೇಕಲದಲ್ಲಿ 2, ಮೇಲ್ಪರಂದಲ್ಲಿ 3, ವೆಳ್ಳರಿಕುಂಡ್‌ 1, ರಾಜಪುರಂ 4, ಚಂದೇರ 4, ಹೊಸದುರ್ಗ 2, ಅಂಬಲತ್ತರ 1 ಕೇಸು ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಈ ವರೆಗೆ 317 ಕೇಸುಗಳನ್ನು ದಾಖಲಿಸಲಾಗಿದೆ. 539 ಮಂದಿಯನ್ನು ಬಂಧಿಸಲಾಗಿದೆ. 246 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next