Advertisement

ಕಣ್ಣಿಗೆ ಹಬ್ಬ….ಭೋರ್ಗರೆಯುವ ಹಾಲ್ನೊರೆಯ ಝರಿ

02:14 PM Apr 14, 2020 | |

ಕಾಸರಗೋಡು: ಮಳೆಗಾಲ ಆರಂಭಗೊಳ್ಳುತ್ತಿದ್ದಂತೆಯೇ ಕೆರೆ, ಹಳ್ಳ,ತೋಡು ತುಂಬಿಕೊಂಡು ನೀರು ಸಮುದ್ರ
ಸೇರುವ ತವಕದಲ್ಲಿ  ಧುಮ್ಮಿಕ್ಕಿ ಹರಿಯುವ ದೃಶ್ಯ ಸಾಮಾನ್ಯ. ಆದರೆ ಕಾನನದ ಮಧ್ಯೆ ಕಾಲ್ನಡಿಗೆಯ ಮೂಲಕ ಸಾಗುವಾಗ ಬೆಳ್ಳಗಿನ ಹಾಲ್ನೊರೆ ಸೂಸುತ್ತ, ಭೋರ್ಗರೆಯುತ್ತಾ ರಭಸವಾಗಿ ಮೇಲಿಂದ ಕೆಳಾಭಿಮುಖವಾಗಿ ನೀರು ಬೀಳುವ ದೃಶ್ಯ ನೋಡುಗರನ್ನು ಮತ್ತೆ ಮತ್ತೆ ಆಕರ್ಷಿಸುತ್ತದೆ.

Advertisement

ಕೇರಳ ರಾಜ್ಯದ ಗಡಿನಾಡು ಕಾಸರಗೋಡು ಜಿಲ್ಲೆಯು ನಿಸರ್ಗದತ್ತವಾಗಿ ಸಂಪದ್ಭರಿತವಾಗಿದ್ದರೂ ಜಲಪಾತಗಳು ಬಹುತೇಕ ಎಲ್ಲೂ  ಕಣ್ಣಿಗೆ ಗೋಚರಿಸದು. ಆದ್ದರಿಂದಲೇ ಸಣ್ಣಪುಟ್ಟ  ಜಲಪಾತಗಳು ರುದ್ರನರ್ತನವನ್ನುಂಟು ಮಾಡುವಾಗ ಮನ ಸೋಲದವರು ಯಾರೂ ಇರದು. ಮಾತ್ರವಲ್ಲದೆ ಅದರ ಸೊಬಗು ಹೇಳತೀರದು.

ಮಂಜೇಶ್ವರ ತಾಲೂಕು ವ್ಯಾಪ್ತಿಯ ಬಂದ್ಯೋಡು – ಧರ್ಮತ್ತಡ್ಕ ರೂಟ್‌ನ ಪೆರ್ಮುದೆಯಿಂದ ಸೀತಾಂಗೋಳಿ ರಾಜ್ಯ ಹೆದ್ದಾರಿಯಲ್ಲಿ  ಸಿಗುವ ಕಂಬಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಹೋಗುವಾಗ ಪೂಕಳಬೈಲು ಎಂಬ ಪರಿಸರಲ್ಲಿ  ಈ ಪುಟ್ಟ  ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ. ಬೊಟ್ಟ  ಎಂಬ ಪ್ರದೇಶದ ಹತ್ತಿರವೇ ಇರುವ ಈ
ಜಲಪಾತಕ್ಕೆ ನಿರ್ದಿಷ್ಟ  ಹೆಸರಿಲ್ಲ. ಆದರೆ ಸುಮಾರು 50ರಿಂದ 60 ಅಡಿ ಎತ್ತರದಿಂದ ಬಿಳಿ ನೊರೆಯಾಗಿ ಜಲ ಹರಿಯುತ್ತಿರುವುದು ಇತ್ತೀಚೆಗಿನ ಎರಡು ಮೂರು ವರ್ಷಗಳಲ್ಲಿ  ಯುವ ಜನತೆಯನ್ನು  ಆಕರ್ಷಿಸಿದೆ. ಜಲಪಾತದ ವರೆಗೆ ಯಾವುದೇ ರಸ್ತೆ  ವ್ಯವಸ್ಥೆ  ಕೂಡ ಇಲ್ಲ. ಪೆರ್ಮುದೆಯಿಂದ ಕೇವಲ 3 ಕಿಲೋ ಮೀಟರ್‌ ದೂರವಿರುವ ಇಲ್ಲಿಗೆ ಬರಬೇಕಿದ್ದರೆ ಖಾಸಗಿ ವಾಹನಗಳನ್ನು  ಬಳಸುವುದು ಹೆಚ್ಚು  ಸೂಕ್ತವಾಗಿದೆ. ಪೂಕಳಬೈಲು ರಾಮ ಭಟ್‌ ಅವರ ಮನೆ ಗೇಟಿನ ತನಕ ಮಾತ್ರ ವಾಹನದಲ್ಲಿ  ತೆರಳಬಹುದಾಗಿದ್ದು, ಅಲ್ಲಿಂದ ಏಳೆಂಟುನಿಮಿಷಗಳ ದುರ್ಗಮ ಕಾಲು ದಾರಿ ಮೂಲಕ ಜಲಪಾತ ಪ್ರದೇಶಕ್ಕೆ ಸಾಗಬೇಕು.


ಅತ್ಯಂತ ಇಕ್ಕಟ್ಟಾದ ಈ ಕಾಲುದಾರಿ ಯುದ್ದಕ್ಕೂ ಕಾಡು, ಗಿಡ, ಪೊದೆ, ಬಂಡೆಕಲ್ಲುಗಳು ಆಕರ್ಷಣೀಯವಾಗಿದ್ದು, ಅತ್ಯಂತ ಕುತೂಹಲಕ್ಕೂ ಕಾರಣವಾಗುತ್ತಿದೆ. ಮತ್ತೂಂದೆಡೆ ದಾರಿಯಲ್ಲಿ  ಸಾಗುವಾಗಲೇ ಕಾಡಿನ ಮಧ್ಯೆ ಜಲಪಾತ ಹುದುಗಿರುವಂತಹ ಅನುಭವ ದೊರೆಯುತ್ತದೆ.

ಇಲ್ಲಿಯವರೆಗೂ ಎಲೆ ಮರೆ ಕಾಯಿಯಂತೆ ಮೂಲೆ ಸೇರಿದ್ದ  ಈ ಜಲಪಾತ ಇತ್ತೀಚೆಗಿನ ದಿನಗಳಲ್ಲಿ  ಜನಪ್ರಿಯತೆ ಗಳಿಸಿದ್ದು, ವಾರಾಂತ್ಯಗಳಲ್ಲಿ  100ಕ್ಕಿಂತಲೂ ಹೆಚ್ಚು  ಯುವಕರು ಭೇಟಿ ನೀಡುವುದಲ್ಲದೆ ನೀರಾಟವಾಡಿ ಮೋಜು ಅನುಭವಿಸುತ್ತಿದ್ದಾರೆ. ಪ್ರಕೃತಿಯ ಸೊಬಗನ್ನು  ಆಸ್ವಾದಿಸಿ ಕುಣಿದು ಕುಪ್ಪಳಿಸುತ್ತಿದ್ದಾರೆ.

ಸಾಮಾನ್ಯವಾಗಿ ಬೆಟ್ಟ  ಪ್ರದೇಶಗಳಲ್ಲಿ, ಏರು ತಗ್ಗುಗಳಲ್ಲಿ  ನದಿಗಳು, ತೊರೆಗಳು ಜಲಪಾತಗಳನ್ನು  ಸೃಷ್ಟಿಸುತ್ತವೆ. ಅದರಂತೆ ಇಲ್ಲಿ  ಸಮೀಪದಲ್ಲಿಯೇ ಇರುವ ಕಾಸರಗೋಡು ಜಿಲ್ಲೆಯ ರಮಣೀಯ ತಾಣಗಳಲ್ಲೊಂದಾಗಿರುವ ಪೊಸಡಿಗುಂಪೆ ಎಂಬ ಎತ್ತರದ ಪ್ರದೇಶದಿಂದ ಧರ್ಮತ್ತಡ್ಕ,ಪೆರ್ಮುದೆ ದಾರಿಯಾಗಿ ತೋಡುಗಳಲ್ಲಿ  ಹರಿದು ಬರುವ ನೀರು ಕಂಬಾರು ಹೊಳೆಯನ್ನು  ಸೇರಿಕೊಂಡು ಬಳಿಕ ಸೀರೆ ಹೊಳೆಗೆ ಜಂಟಿಯಾಗಿ ಅರಬಿ ಸಮುದ್ರವನ್ನು ಸೇರುತ್ತದೆ. ಕಂಬಾರು ಹೊಳೆಗೆ ಸೇರುವ ಸುಮಾರು ಎರಡು ಮೂರು ಕಡೆಗಳಿಂದ ಈ ಜಲಪಾತದ ಪ್ರದೇಶದಲ್ಲಿ ನೀರು ಸಂಗಮಿಸುವುದೇ ಜಲಪಾತದ ಅಂದವನ್ನು  ಇನ್ನಷ್ಟು  ಹೆಚ್ಚಿಸಲು ಕಾರಣ. 60 ಅಡಿ ಕೆಳಗಿನ ಭಾಗಕ್ಕೆ ಹರಿಯುವ ನೀರಿನ ರಭಸ, ಹಾಲ್ನೊರೆಯಂತಹ ಬಣ್ಣ, ಗಂಭೀರವಾದ ನೀರು ಹರಿಯುವಿಕೆಯ ನಿನಾದ, ನೀರ ಹನಿಗಳ ಸಿಂಚನ ಇವೆಲ್ಲವೂ ಇಲ್ಲಿ  ಪ್ರಕೃತಿ ಪ್ರೇಮಿಗಳನ್ನು  ಆಕರ್ಷಿಸುತ್ತವೆ.

Advertisement

ವಾಹನಗಳ ಅಬ್ಬರದ ಸದ್ದಿಲ್ಲದೆ, ಕಾಂಕ್ರೀಟ್‌ ರಸ್ತೆಯ ಪರಿವೆಯೇ ಇಲ್ಲದೆ, ಗಡಿಬಿಡಿಯ ಬದುಕಿನ ಜಂಜಾಟವೇ ಇಲ್ಲದೆ, ಗ್ರಾಮಗಳೂ ಪಟ್ಟಣ,ನಗರಗಳಾಗುವ ತವಕವಿಲ್ಲದೆ, ಇಲ್ಲಿ  ಕಲ್ಲು  ಮಣ್ಣಿನ ದಾರಿ ಕ್ರಮಿಸಿ ಅನತಿ ದೂರದಲ್ಲಿಯೇ ಸಿಗುವ ಬಿಳಿ ನಗು ಚೆಲ್ಲುವ ನೀರೆಂಬ ನೀರೆ ಅಬ್ಬರದ ಸದ್ದಿಲ್ಲದೆ ಕಪ್ಪು  ಬಂಡೆಯ ಮೇಲೆ ತೆವಳಿಕೊಂಡು, ಓಡಾಡಿ ಚೆಲ್ಲುಸಿರು ಬೀರುವ ದೃಶ್ಯ ಕಣ್ಮನಗಳನ್ನು  ಸೆಳೆಯುವುದರಲ್ಲಿ  ಯಾವುದೇ ಸಂದೇಹವೇ ಇಲ್ಲ.

ನಿರ್ಜನ ಪ್ರದೇಶದಲ್ಲಿರುವ ಈ ಜಲಪಾತವು 60 ಅಡಿ ಆಳವಿದ್ದು, ನೀರು ಅತ್ಯಂತ ರಭಸವಾಗಿ ಹರಿಯುವುದರಿಂದ ಭಾರೀ ಅಪಾಯಗಳಾಗುವ ಸಂಭವಗಳೂ ಇವೆ. ಅಲ್ಲದೆ ಪ್ರತಿದಿನ ಇಲ್ಲಿಗೆ ಶಾಲಾ ಮಕ್ಕಳ ಸಹಿತ ದೂರ ದೂರದ ಯುವ ಸಮೂಹ ಆಗಮಿಸುತ್ತಿದ್ದು, ಯಾವುದೇ ಕಾವಲು ವ್ಯವಸ್ಥೆ  ಇಲ್ಲಿರುವುದಿಲ್ಲ. ಇಲ್ಲಿನ ಬಂಡೆ ಕಲ್ಲುಗಳು ಭಾರೀ ಜಾರುವಿಕೆಯಿಂದ ಕೂಡಿದ್ದು, ಅಪ್ಪಿ ತಪ್ಪಿ  ಕೆಳಭಾಗಕ್ಕೆ ಬೀಳ್ಪಟ್ಟಲ್ಲಿ  ಬಹುದೊಡ್ಡ  ದುರಂತ ಸಂಭವಿಸುವುದು ಖಚಿತ. ಆದ್ದರಿಂದ ಈ ಜಲಪಾತವನ್ನು  ವೀಕ್ಷಿಸಲು ಆಗಮಿಸುವವರು ಸಾಕಷ್ಟು  ಎಚ್ಚರಿಕೆಯಿಂದಲೂ ಇರಬೇಕಾಗುತ್ತದೆ.

ಮನೆಯ ಹಿರಿಯರು ಬಳುವಳಿಯಾಗಿ ನೀಡಿದ ಮತ್ತು  ಸಣ್ಣಂದಿನಲ್ಲಿ  ಓಡಾಡಿಕೊಂಡಿದ್ದ  ಜಾಗ ಇದು. ನಮ್ಮ  ಮನೆಯ ಪಕ್ಕದಲ್ಲೇ ಇದ್ದರೂ ಅತ್ತ ಗಮನ ಹೆಚ್ಚು  ನೀಡಿರಲಿಲ್ಲ. ಎರಡು 3 ವರ್ಷಗಳಹಿಂದಿನ ವರೆಗೂ ಇಲ್ಲಿ  ಯಾರೂ ಬರುತ್ತಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ  ಅನೇಕರುಈ ಜಲಪಾತವನ್ನು  ವೀಕ್ಷಿಸಲು ಬರುತ್ತಿದ್ದಾರೆ. ಪೊಸಡಿಗುಂಪೆ ಭಾಗದಿಂದ ತೋಡಿನ ಮೂಲಕ ಬರುವ ಈ ನೀರು ಇಲ್ಲಿನ ಪ್ರದೇಶದಲ್ಲಿ  ಕಪ್ಪು ಬಂಡೆಗಳ ಮಧ್ಯೆ ಹರಿಯುವುದು ಸುಂದರ ಮತ್ತು  ಪ್ರಕೃತಿಯ ಅದ್ಭುತ ಸೃಷ್ಟಿಯನ್ನು  ನೆನಪಿಸುವಂತಿದೆ. ಇದು ವರ್ಷದ 12 ತಿಂಗಳೂ ಹರಿಯುವುದಿಲ್ಲ. ಬದಲಾಗಿ ಮಳೆಗಾಲದ 4ರಿಂದ 5 ತಿಂಗಳು ಮಾತ್ರ ಇಲ್ಲಿ  ನೀರಿನ ಹರಿವು ಇರುವುದು. ಅತ್ಯಂತ ಸುಂದರವಾದ ಪ್ರದೇಶವಾಗಿದ್ದು, ಆದರೆ ಜಾಗರೂಕತೆಯಿಂದ ಜಲಪಾತ ಭಾಗಕ್ಕೆ ತೆರಳಬೇಕು.

– ಪೂಕಳಬೈಲು ರಾಮ ಭಟ್‌
ನಿವೃತ್ತ ಮುಖ್ಯೋಪಾಧ್ಯಾಯರು

Advertisement

Udayavani is now on Telegram. Click here to join our channel and stay updated with the latest news.

Next