Advertisement

ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

07:30 PM Jul 17, 2019 | Team Udayavani |

ತುಂಡಾಗಿ ಬಿದ್ದ ವಿದ್ಯುತ್‌ ತಂತಿ:
ಶಾಕ್‌ ತಗಲಿ ಮಹಿಳೆ ಸಾವು
ಕುಂಬಳೆ: ತುಂಡಾಗಿ ಬಿದ್ದ ವಿದ್ಯುತ್‌ ತಂತಿ ಎಂದು ತಿಳಿಯದೆ ಹಿತ್ತಿಲಲ್ಲಿದ್ದ ತಂತಿಯನ್ನು ತೆಗೆಯುವ ವೇಳೆ ಮಹಿಳೆ ಶಾಕ್‌ ತಗಲಿ ಸಾವಿಗೀಡಾದರು. ತಂತಿಯನ್ನು ಕೈಯಲ್ಲಿ ಹಿಡಿದುಕೊಂಡ ಸ್ಥಿತಿಯಲ್ಲಿ ಹಿತ್ತಿಲಲ್ಲಿ ಬಿದ್ದಿದ್ದ ಮೃತದೇಹವನ್ನು ದೂರದ ಸಂಬಂಧಿಕರು ಬುಧವಾರ ಬೆಳಗ್ಗೆ ಪತ್ತೆಹಚ್ಚಿದ್ದಾರೆ.

Advertisement

ಶೇಡಿಕಾವು ನಿವಾಸಿ ದಿ| ರಾಧಾಕೃಷ್ಣ ಮಯ್ಯ ಅವರ ಪತ್ನಿ ಕಲಾವತಿ (52) ಅವರು ಸಾವಿಗೀಡಾದವರು. ಕಲಾವತಿ ಅವರು ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದಾರೆ. ಇವರಿಗೆ ಮೂವರು ಹೆಣ್ಣು ಮಕ್ಕಳಿದ್ದರೂ ಅವರೆಲ್ಲ ವಿವಾಹವಾಗಿ ಪತಿಯೊಂದಿಗಿದ್ದಾರೆ. ಮನೆಯಿಂದ ಕೆಲವೇ ದೂರದಲ್ಲಿ ಸಂಗ್ರಹಿಸಿಡಲಾಗಿದ್ದ ಕಟ್ಟಿಗೆಯನ್ನು ತೆಗೆಯಲು ಹೋದಾಗ ದುರಂತ ಸಂಭವಿಸಿರಬೇಕೆಂದು ಶಂಕಿಸಲಾಗಿದೆ.

ಎಂಡೋ ಸಂತ್ರಸ್ತ ಕುಸಿದು ಬಿದ್ದು ಸಾವು
ಬದಿಯಡ್ಕ: ಎಂಡೋ ಸಂತ್ರಸ್ತ ಯಾದಿಯಲ್ಲಿ ಸೇರ್ಪಡೆಗೊಂಡಿದ್ದ ಕನ್ಯಪ್ಪಾಡಿ ಬಾಪೊಲಿ ಪೊನಂ ಕಂಬಾರ್‌ ಮನೆಯ ನಿವಾಸಿ ಮುಹಮ್ಮದ್‌ ಅವರ ಪುತ್ರ ಜುನೈದ್‌ (23) ಅವರು ಮನೆಯಲ್ಲಿ ಕುಸಿದು ಬಿದ್ದು ಸಾವಿಗೀಡಾದರು. ಹೃದಯ ಸಂಬಂಧಿ ಕಾಯಿಲೆಯಿಂದ ಅವರು ಬಳಲುತ್ತಿದ್ದರು.

ಮದ್ಯ ಸಹಿತ ಬಂಧನ
ಕುಂಬಳೆ: ಸೀತಾಂಗೋಳಿಯಿಂದ 14 ಬಾಟಿÉ ವಿದೇಶಿ ಮದ್ಯ ಸಹಿತ ಬೇಳ ಕೊಲ್ಲಂಗಾನದ ರಫೇಲ್‌ ಡಿ’ಸೋಜಾ (45)ನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.
ಬಿ.ಎಂ.ಎಸ್‌. ಕಾರ್ಯಕರ್ತನಿಗೆ

ಇರಿತ: ಇನ್ನೋರ್ವನ ಬಂಧನ
ಕಾಸರಗೋಡು: ವಿದ್ಯಾನಗರ ಬಳಿಯ ನೆಲ್ಕಳ ನಿವಾಸಿ, ಬಿಎಂಎಸ್‌ ಕಾರ್ಯಕರ್ತ ಪ್ರಶಾಂತ್‌ (33) ಅವರಿಗೆ ಇರಿದು ಹತ್ಯೆ ಯತ್ನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಚೆಂಗಳ ಎರ್ಮಾಳಂ ನಿವಾಸಿ ಅಬೂಬಕ್ಕರ್‌ ಸಿದ್ದಿಕ್‌ ಯಾನೆ ತಮ್ಮು (22)ನನ್ನು ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ ಆರಕ್ಕೇರಿದೆ. ಈ ಹಿಂದೆ ಐವರನ್ನು ಪೊಲೀಸರು ಬಂಧಿಸಿದ್ದರು.

Advertisement

ಗೋದಾಮಿನಿಂದ ಕಳವು
ಕಾಸರಗೋಡು: ವಿದ್ಯಾನಗರ ಸ್ಟೇಡಿಯಂ ಬಳಿಯ ಚಿಲ್ಡ್ರನ್ಸ್‌ ಪಾರ್ಕ್‌ ಗೋದಾಮಿಗೆ ನುಗ್ಗಿದ ಕಳ್ಳರು ಸುಮಾರು 3.5 ಲಕ್ಷ ರೂ. ಮೌಲ್ಯದ ಸಾಮಗ್ರಿಗಳನ್ನು ಕಳವು ಮಾಡಿದ ಘಟನೆ ನಡೆದಿದೆ. ಕಾಸರಗೋಡು ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. 5,000 ವೋಲ್ಟ್ನ 4ಆ್ಯಂಪ್ಲಿಫಯರ್‌, 10 ಫೋಕಸ್‌ ಲೈಟ್‌ಗಳು, 6 ಕಲರ್‌ ಲೈಟ್‌ಗಳು ಮತ್ತು 1 ಟನ್‌ ನಟ್‌ ಮತ್ತು ಬೋಲ್ಟ್‌ಗಳನ್ನು ಕಳವು ಮಾಡಲಾಗಿದೆ.

ಯುವಕನಿಗೆ ಹಲ್ಲೆ
ಕಾಸರಗೋಡು: ಕೂಡ್ಲು ವೀವರ್ಸ್‌ ಕಾಲನಿಯ ಐಶ್ವರ್ಯ ನಿಲಯದ ಸೂರ್ಯ ಕುಮಾರ್‌ (25) ಅವರಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಶರತ್‌ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.

ಮನೆಗೆ ಬೆಂಕಿ
ಕಾಸರಗೋಡು: ಎರಿಯಾಲ್‌ ಬಳಿಯ ರಾ.ಹೆದ್ದಾರಿ ಪಕ್ಕದ ಅಬ್ದುಲ್‌ ರಜಾಕ್‌ ಅವರ ಮನೆಗೆ ಬೆಂಕಿ ಹತ್ತಿಕೊಂಡ ಘಟನೆ ನಡೆದಿದೆ. ಮನೆಯ ಮೇಲ್ಛಾವಣಿ ಮತ್ತು ವಿವಿಧ ಸಾಮಗ್ರಿಗಳು ಬೆಂಕಿಗಾಹುತಿಯಾಗಿವೆ. ಅಗ್ನಿಶಾಮಕ ದಳ ಬೆಂಕಿಯನ್ನು ಆರಿಸಿತು. ಯಾರಿಗೂ ಅಪಾಯ ಸಂಭವಿಸಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next