Advertisement

ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

01:01 AM Jul 02, 2019 | Sriram |

ಬೈಕ್‌ಗೆ ಕಾರು ಢಿಕ್ಕಿ ಹೊಡೆಸಿ
ಬಿಎಂಎಸ್‌ ಕಾರ್ಯಕರ್ತನಿಗೆ ಇರಿತ
ಕಾಸರಗೋಡು: ಕಾರಿನಲ್ಲಿ ಬಂದ ತಂಡವೊಂದು ಬಿಎಂಎಸ್‌ ಕಾರ್ಯಕರ್ತನಿಗೆ ಇರಿದು ಗಾಯಗೊಳಿಸಿದ ಘಟನೆ ನಡೆದಿದೆ.

Advertisement

ವಿದ್ಯಾನಗರ ನೆಲ್ಕಳದ ಪ್ರಶಾಂತ್‌ (32) ಅವರಿಗೆ ಇರಿದು ಗಾಯಗೊಳಿಸಲಾಗಿದೆ. ಜೂ. 30ರಂದು ರಾತ್ರಿ ಬೈಕ್‌ನಲ್ಲಿ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ವಿದ್ಯಾನಗರದಲ್ಲಿರುವ ಕಾಸರಗೋಡು ಸರಕಾರಿ ಕಾಲೇಜು ಬಳಿ ತಲುಪಿದಾಗ ಕಾರಿನಲ್ಲಿ ಬಂದ ಅಕ್ರಮಿಗಳ ತಂಡ ಬೈಕ್‌ಗೆ ಕಾರು ಢಿಕ್ಕಿ ಹೊಡೆಸಿ ಬೀಳಿಸಿದೆ. ಆಗ ಕೆಳಕ್ಕೆ ಬಿದ್ದ ಪ್ರಶಾಂತ್‌ ಅವರಿಗೆ ತಂಡ ಇರಿದು ಗಾಯಗೊಳಿಸಿದೆ. ಪ್ರಶಾಂತ್‌ ಅಲ್ಲಿಂದ ತಪ್ಪಿಸಿಕೊಂಡು ಆಸ್ಪತ್ರೆಯೊಂದರ ಒಳಗೆ ಓಡಿ ಹೋಗಿದ್ದಾರೆ. ಆಗ ಕಾರಿನಲ್ಲಿ ಬಂದ ತಂಡ ಪರಾರಿಯಾಯಿತು.

ಗಾಯಗೊಂಡ ಪ್ರಶಾಂತ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ. ಘಟನೆಗೆ ಸಂಬಂಧಿಸಿ ಎಸ್‌ಡಿಪಿಐ ಕಾರ್ಯಕರ್ತರೆಂದು ಹೇಳಲಾಗುತ್ತಿರುವ ಆರು ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ವ್ಯಾಪಕ ಶೋಧ ನಡೆಸುತ್ತಿದ್ದಾರೆ. ಎಲ್ಲೆಡೆ ಜಾಗ್ರತೆ ವಹಿಸಲಾಗಿದೆ.

2014ರ ಡಿ. 22ರಂದು ಕಾಸರಗೋಡು ನಗರದ ಎಂ.ಜಿ. ರಸ್ತೆಯಲ್ಲಿ ಹಾಸಿಗೆ ಮಾರಾಟದಂಗಡಿಯಲ್ಲಿ ತಳಂಗರೆ ನಿವಾಸಿ ಸೈನುಲ್‌ ಆಬಿದ್‌(25) ಕೊಲೆ ಪ್ರಕರಣದಲ್ಲಿ ಪ್ರಶಾಂತ್‌ ಮೂರನೇ ಆರೋಪಿಯೆಂದು ಪೊಲೀಸರು ತಿಳಿಸಿದ್ದಾರೆ.

ಪ್ರತಿಭಟನೆ
ಪ್ರಶಾಂತ್‌ ಅವರಿಗೆ ಇರಿದ ಘಟನೆಯನ್ನು ಪ್ರತಿಭಟಿಸಿ ಬಿಎಂಎಸ್‌ ಕಾರ್ಯಕರ್ತರು ಸೋಮವಾರ ಬೆಳಗ್ಗೆ ಕಾಸರಗೋಡು ನಗರದಲ್ಲಿ ಮೆರವಣಿಗೆ ನಡೆಸಿದರು. ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.

Advertisement

ಮರ ಕಳವು : ಅಕ್ರಮ ಕೋವಿ ಪ್ರಕರಣದ ಆರೋಪಿ
ಸಹಿತ ಇಬ್ಬರ ಬಂಧನ
ಅಡೂರು: ವೃದ್ಧೆಯೋರ್ವರು ಏಕಾಂಗಿಯಾಗಿ ವಾಸಿಸುವ ಮನೆ ಹಿತ್ತಿಲಿನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಬೀಟಿ ಮರಗಳನ್ನು ಕಡಿದು ಸಾಗಿಸಿದ ಘಟನೆಯಲ್ಲಿ ಕೋವಿಯನ್ನು ಅಕ್ರಮವಾಗಿ ಕೈವಶವಿರಿಸಿದ್ದ ಪ್ರಕರಣದಲ್ಲಿ ಆರೋಪಿಗಳಿಬ್ಬರನ್ನು ಆದೂರು ಪೊಲೀಸರು ಬಂಧಿಸಿದ್ದಾರೆ.

ಅಡೂರು ಬಳಿಯ ಬೆಳ್ಳಚ್ಚೇರಿಯ ಶ್ರೀಧರ (46) ಮತ್ತು ಕರ್ನೂರು ನಿವಾಸಿ ಗಣೇಶ (42)ನನ್ನು ಬಂಧಿಸಲಾಗಿದೆ. ಕಳವು ಮಾಡಿದ ಬೀಟಿ ಮರಗಳನ್ನು ಕುತ್ತಿಕೋಲ್‌ ಎಡಪರಂಬದಲ್ಲಿ ಬಚ್ಚಿಡಲಾಗಿತ್ತು. ಅವುಗಳನ್ನು ಆದೂರು ಪೊಲೀಸ್‌ ಠಾಣೆಗೆ ತಲುಪಿಸಲಾಗಿದೆ.

ಅಡೂರು ಓಲೆಕೊಚ್ಚಿಯ ಮಹಾಲಕ್ಷ್ಮೀ (68) ಅವರ ಹಿತ್ತಿಲಿ ನಿಂದ ಮೂರು ಬೀಟಿ ಮರಗಳನ್ನು ಕಳವು ಮಾಡಲಾಗಿತ್ತು. ಆರೋಪಿಗಳ ಪೈಕಿ ಶ್ರೀಧರ ಅಕ್ರಮ ಕೋವಿ ಕೈವಶವಿರಿಸಿಕೊಂಡು ಕಾರಿನಲ್ಲಿ ಸಂಚರಿಸುತ್ತಿದ್ದಾಗ ಒಂದು ವರ್ಷ ಹಿಂದೆ ಬಂಧಿತನಾಗಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

ಸ್ಕೂಟರ್‌ ಕಳವು
ಮಂಜೇಶ್ವರ: ಉದ್ಯಾವರ ಮಾಡ ಶ್ರೀ ಅರಸುಕೃಪಾ ವೀರ ಹನುಮಾನ್‌ ವ್ಯಾಯಾಮ ಶಾಲೆ ಬಳಿಯಲ್ಲಿ ನಿಲ್ಲಿಸಿದ್ದ ವಿಶ್ವ ಹಿಂದೂ ಪರಿಷತ್‌ ಜಿಲ್ಲಾ ಸಹಕಾರ್ಯದರ್ಶಿ ಶೈಲೇಶ್‌ ಅಂಜರೆ ಅವರ ಸ್ಕೂಟರ್‌ ಕಳವು ಮಾಡಲಾಗಿದೆ. ಈ ಬಗ್ಗೆ ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿದೆ.

ಕಳವು ಆರೋಪಿ ಬಂಧನ
ಹೊಸದುರ್ಗ: ಕುಖ್ಯಾತ ಕಳವು ಆರೋಪಿ ತೊರಪ್ಪನ್‌ ಸಂತೋಷ (35)ನನ್ನು ಕಾಲಿಕಡವಿನಿಂದ ಕಾಂಞಂಗಾಡ್‌ ಡಿವೈಎಸ್‌ಪಿ ಪಿ.ಕೆ. ಸುಧಾಕರನ್‌ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.

ಕಾಡುಹಂದಿ ತಿವಿದು ಗಾಯ
ಕಾಸರಗೋಡು: ಕಾಡುಹಂದಿ ತಿವಿದು ಬಾಲಕ ಗಾಯಗೊಂಡಿದ್ದಾನೆ. ವೆಸ್ಟ್‌ ಎಳೇರಿ ಪಂಚಾಯತ್‌ನ ಪೂತ್ತಂಕಲ್ಲಿನ ಇಸ್ಮಾಯಿಲ್‌ ಅವರ ಪುತ್ರ ಸಹದ್‌ (9) ಗಾಯಗೊಂಡಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ.

ತಾತ್ಕಾಲಿಕ ಸಿಬಂದಿ ಹೊರಕ್ಕೆ:
ಬಸ್‌ ಸೇವೆ ಮೊಟಕು
ಕಾಸರಗೋಡು: ಸುಪ್ರೀಂ ಕೋರ್ಟ್‌ ನೀಡಿದ ಕಾಲಾವಧಿಯ ವ್ಯಾಪ್ತಿ ಕೊನೆಗೊಂಡ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿಯ ಎಂ. ಪಾನಲ್‌ನಲ್ಲಿದ್ದ 49 ಮಂದಿಯನ್ನು ಸೇವೆಯಿಂದ ಹೊರತುಪಡಿಸಲಾಗಿದೆ. ಇದರಿಂದಾಗಿ ಕಾಸರಗೋಡು ಜಿಲ್ಲಾ ಡಿಪೋದಲ್ಲಿ 10 ಬಸ್‌ ಸೇವೆ ನಿಲುಗಡೆಗೊಳಿಸಿದೆ. ಮಂಗಳೂರು, ಸುಳ್ಯ, ಪುತ್ತೂರು ಇತ್ಯಾದಿ ರೂಟ್‌ಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ತಲಾ ಎರಡರಷ್ಟು ಬಸ್‌ ಸೇವೆ ನಿಲುಗಡೆಗೊಂಡಿದೆ. ಹೊಸದುರ್ಗ ಸಬ್‌ ಡಿಪೋದಲ್ಲಿ ಮೂರು ಬಸ್‌ ಸೇವೆ ನಿಲುಗಡೆಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next