Advertisement

ಅಘೋಷಿತ ಹರತಾಳ : ಕಂಗೆಟ್ಟ ಜನತೆ 

06:15 AM Apr 17, 2018 | |

ಕಾಸರಗೋಡು: ಕೇರಳದಲ್ಲಿ ಸೋಮವಾರ ಯಾವುದೇ ರಾಜಕೀಯ ಪಕ್ಷಗಳು ಅಥವಾ ಸಂಘಟನೆಗಳು ಹರತಾಳಕ್ಕೆ ಕರೆ ನೀಡದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಬಂದ ಸಂದೇಶಗಳನ್ನು ಅನುಸರಿಸಿ ಜಿಲ್ಲೆಯಲ್ಲಿ ಹರತಾಳ ಪ್ರತೀತಿ ಕಂಡುಬಂದಿದೆ. ವ್ಯಾಪಾರ ಸಂಸ್ಥೆಗಳು ಮುಚ್ಚಿಕೊಂಡಿದ್ದು, ಬಸ್‌ ಸಂಚಾರ ಮೊಟಕುಗೊಂಡಿತು. 

Advertisement

ಜಮ್ಮು-ಕಾಶ್ಮೀರ ಕಥುವಾದಲ್ಲಿ 8ರ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆಗೈದ ಕೃತ್ಯ ವನ್ನು ಪ್ರತಿಭಟಿಸುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸೋಮವಾರ ಹರತಾಳ ನಡೆಸಲಾಗುವುದೆಂದು ಕಿಡಿಗೇಡಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ಸುದ್ದಿ ಹರಡಿಸಿದ್ದು, ಈ ಪ್ರಚಾರದ ಹೆಸರಿನಲ್ಲಿ ಕೇರಳದಲ್ಲಿ ಅಘೋಷಿತ ಹರತಾಳ ನಡೆಸಲಾಯಿತು. ಹರತಾಳದಿಂದಾಗಿ ಸೋಮವಾರ ಬೆಳಗ್ಗೆ ಕಾಸರಗೋಡು ಜಿಲ್ಲೆಯಲ್ಲಿ ಕೆಲವೆಡೆ ವಾಹನಗಳನ್ನು ತಡೆಯಲಾರಂಭಿಸಿದ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳು ರಸ್ತೆಗಿಳಿಯಲಿಲ್ಲ. ಕರ್ನಾಟಕ ಮತ್ತು ಕೇರಳ ರಾಜ್ಯಗಳ ಸರಕಾರಿ, ಖಾಸಗಿ ಬಸ್‌ಗಳು ಬೆಳಗ್ಗೆ ಸೇವೆ ಆರಂಭಿಸಿದಾಗ ಹಲವೆಡೆಗಳಲ್ಲಿ ತಡೆಯೊಡ್ಡಲಾಯಿತು.

  
ಇದರಿಂದಾಗಿ ರಾಜ್ಯ ಸರಕಾರಿ ಬಸ್‌ಗಳ ಸೇವೆಯೂ ಅವ್ಯವಸ್ಥೆಗೊಂಡಿತು. ಕಾಸರಗೋಡಿನಿಂದ ಸೇವೆ ಆರಂಭಿಸಿದ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ವಿದ್ಯಾನಗರ, ಪಾಣಲಂ, ಚೆರ್ಕಳ ಮೊದಲಾದೆಡೆಗಳಲ್ಲಿ ಕೆಲವರು ತಡೆದರು. ಬಸ್ಸುಗಳನ್ನು ತಡೆದ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. 

ಚೆಂಗಳ ಪಾಣಲಂನಲ್ಲಿ ಬೆಳಗ್ಗೆ ಟೋರಸ್‌ ಲಾರಿಯೊಂದು ಬರುತ್ತಿದ್ದಾಗ ಬೈಕ್‌ಗಳಲ್ಲಿ ಬಂದ ತಂಡ ಲಾರಿಗೆ ಅಡ್ಡವಾಗಿ ಇರಿಸಿ ತಡೆಗಟ್ಟಿದ್ದು, ಈ ಸಂಬಂಧ ಸಲೀಂನನ್ನು ವಿದ್ಯಾನಗರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. 

ಲಾರಿ ಶರವೇಗದಲ್ಲಿ ಸಾಗುತ್ತಿದ್ದ ವೇಳೆ ಬೈಕ್‌ ಅಡ್ಡ ನಿಲ್ಲಿಸಿದ ಹಿನ್ನೆಲೆಯಲ್ಲಿ ಅಪಘಾತ ಸಂಭವಿಸುವ ಸಾಧ್ಯತೆಯಿತ್ತೆಂದು ಪೊಲೀಸರು ತಿಳಿಸಿದ್ದಾರೆ. 

ಹೆಚ್ಚಿನ ಯಾವುದೇ ವ್ಯಾಪಾರ ಸಂಸ್ಥೆಗಳು ತೆರೆದಿಲ್ಲ. ಬಹುತೇಕ ಸರಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಸಿಬ್ಬಂದಿಗಳ ಹಾಜರಾತಿ ಕಡಿಮೆಯಿತ್ತು. ಯಾವುದೇ ಸೂಚನೆಯಿಲ್ಲದೆ ನಡೆಸಿದ ಅಘೋಷಿತ ಹರತಾಳದಿಂದ ಜನರು ಸಂಕಷ್ಟಕ್ಕೀಡಾದರು. ಖಾಸಗಿ ವಾಹನಗಳು ಮಾತ್ರವೇ ರಸ್ತೆಗಿಳಿದಿವೆ. 

Advertisement

ಜಿಲ್ಲೆಯ ಹಲವೆಡೆ ರಸ್ತೆ ತಡೆ ನಡೆಸಲಾಯಿತು. ಬಳಿಕ ಅಂತಹ ಅಡಚಣೆಗಳನ್ನು ಪೊಲೀಸರು ತೆರವುಗೊಳಿಸಿದರು. ಎದುರ್ತೋಡು, ಮೂಕಂಪಾರೆ, ಪೊವ್ವಲ್‌ ಮೊದಲಾದೆಡೆಗಳಲ್ಲಿ ರಸ್ತೆ ತಡೆ ನಡೆಸಲಾಯಿತು. ಪೊವ್ವಲ್‌ನಲ್ಲಿ ಗೂಡಂಗಡಿಯೊಂದನ್ನು ರಸ್ತೆಗೆ ಅಡ್ಡವಾಗಿ ಇರಿಸಲಾಯಿತು. ಕುಂಬಳೆ-ಮುಳ್ಳೇರಿಯ ರೂಟ್‌ನಲ್ಲಿ ಯಾವುದೇ ಬಸ್‌ಗಳು ಸಂಚರಿಸಿಲ್ಲ.ಇದೇ ವೇಳೆ ಅಘೋಷಿತ ಹರತಾಳದ ಹೆಸರಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಎಲ್ಲೆಡೆ ವ್ಯಾಪಕ ಗಸ್ತು ಏರ್ಪಡಿಸಿದ್ದರು. 


ಬಸ್ಸಿಗೆ ಕಲ್ಲೆಸೆತ, ಚಾಲಕರಿಬ್ಬರಿಗೆ ಗಾಯ : ಬೇವಿಂಜೆಯಲ್ಲಿ ಹರತಾಳ ಬೆಂಬಲಿಗರು ಕಲ್ಲೆಸೆದ ಪರಿಣಾಮವಾಗಿ ತಲಶೆÏàರಿಯಿಂದ ಕಾಸರಗೋಡಿಗೆ ಸೋಮವಾರ ಬೆಳಗ್ಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ಗಾಜು ಪೂರ್ಣವಾಗಿ ಪುಡಿಯಾಗಿದೆ. ಚಾಲಕ ತಲಶೆÏàರಿಯ ಸುಭಾಷ್‌(40) ಗಾಯಗೊಂಡಿದ್ದಾರೆ. ಅವರನ್ನು ಚೆಂಗಳ ಆಸ್ಪತ್ರೆಗೆ ದಾಖಲಿಸಲಾಗಿದೆ. 

ರವಿವಾರ ರಾತ್ರಿ ಮಂಗಳೂರಿನಿಂದ ಕಾಸರಗೋಡಿಗೆ ಬಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಉಪ್ಪಳ ನಯಾಬಜಾರ್‌ ಕುಕ್ಕಾರು ಜನಪ್ರಿಯ ಬಸ್‌ ತಂಗುದಾಣದ ಪರಿಸರದಲ್ಲಿ ಕಲ್ಲೆಸೆದ ಪರಿಣಾಮವಾಗಿ ಬಸ್‌ ಚಾಲಕ ಜೋಮೋನ್‌ ಮ್ಯಾಥ್ಯೂ(46) ಅವರ ಕಣ್ಣಿಗೆ ಗಾಯಗಳಾಗಿವೆ. ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
 
ಬಸ್‌ಗೆ ಕಲ್ಲೆಸೆದವರ ಸ್ಪಷ್ಟ ಮಾಹಿತಿ ಸಿಸಿಟಿವಿ ಕ್ಯಾಮರಾದಲ್ಲಿ ಕಂಡುಕೊಳ್ಳಲಾಗಿದೆ ಎಂದೂ, ಅವರನ್ನು ಶೀಘ್ರದಲ್ಲೇ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. 

ಚಿತ್ರಗಳು:  ಶ್ರೀಕಾಂತ್‌ ಕಾಸರಗೋಡು/ಮಣಿರಾಜ್‌ ವಾಂತಿಚಾಲ್‌ 
 

Advertisement

Udayavani is now on Telegram. Click here to join our channel and stay updated with the latest news.

Next