Advertisement

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

12:09 AM Jul 15, 2024 | Team Udayavani |

ಜೀಪು ಢಿಕ್ಕಿ ಹೊಡೆಸಿ ಕೊಲೆಗೆ ಯತ್ನ; ದೂರು
ಕಾಸರಗೋಡು: ಮೀಟರ್‌ ಬದಲಾಯಿಸಲು ಬಂದ ಕೆಎಸ್‌ಇಬಿ ನೌಕರನಿಗೆ ವಾಹನ ಢಿಕ್ಕಿ ಹೊಡೆಸಿ ಕೊಲೆಗೈಯ್ಯಲು ಯತ್ನಿಸಿದ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.

Advertisement

ಗುತ್ತಿಗೆ ಕಾರ್ಮಿಕನಾದ ತಯೆನಿಯ ಅರುಣ್‌ ಕುಮಾರ್‌ (33) ಅವರಿಗೆ ನಲ್ಲೋಂಪುಳ ಮಾರಿಪುರತ್ತ್ ಜೋಸೆಫ್‌ ಅವರ ಮನೆಗೆ ಬರುತ್ತಿದ್ದಂತೆ ಜೀಪು ಢಿಕ್ಕಿ ಹೊಡೆಸಿ, ಜಾಕಿ ಲಿವರ್‌ನಿಂದ ಇರಿದು ಕೊಲೆಗೆ ಯತ್ನಿಸಿದ್ದಾಗಿ ದೂರಲಾಗಿದೆ.

ಗಾಯಾಳುವನ್ನು ಕಾಂಞಂಗಾಡ್‌ನ‌ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಟ್ಟಾರಿಕ್ಕಲ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು ಪ್ರಕರಣ ದಾಖಲಿಸಲಾಗಿದೆ.

ಜ್ವರದಿಂದ ಬಾಲಕನ ಸಾವು
ಕಾಸರಗೋಡು: ಜ್ವರ ಬಾಧಿಸಿ 2 ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೋವಿಕ್ಕಾನ ನಿವಾಸಿ ಬಿ.ಕೆ. ನಾಜುದ್ದೀನ್‌ ಅವರ ಪುತ್ರ ಮಿಸ್ಬಾಹ್‌ (13) ಮೃತಪಟ್ಟಿದ್ದಾರೆ.ಎರ್ನಾಕುಳಂನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಬಾಲಕ ಕುವೈಟ್‌ನ ಜಾಬ್ರಿಯ ಇಂಡಿಯನ್‌ ಸ್ಕೂಲ್‌ನಲ್ಲಿ 8ನೇ ತರಗತಿ ವಿದ್ಯಾರ್ಥಿ.

ಕುಂಬಳೆಯಿಂದ ಕಾಣೆಯಾದ ಬಾಲಕ ತಿರೂರಿನಲ್ಲಿ ಪತ್ತೆ
ಕುಂಬಳೆ: ಪ್ಲಸ್‌ ವನ್‌ಗೆ ಸೀಟು ಲಭಿಸದ ಕಾರಣಕ್ಕೆ ಊರುಬಿಟ್ಟ ಕುಂಬಳೆ ಠಾಣೆ ವ್ಯಾಪ್ತಿಯ 15ರ ಹರೆಯದ ಬಾಲಕನನ್ನು ತಿರೂರಿನಲ್ಲಿ ಪತ್ತೆಹಚ್ಚಲಾಗಿದೆ.

Advertisement

ಬಾಲಕ ಜು. 12ರಂದು ಮಧ್ಯಾಹ್ನ ನಾಪತ್ತೆಯಾಗಿರು ವುದಾಗಿ ಮನೆಯವರು ಕುಂಬಳೆ ಪೊಲೀಸರಿಗೆ ದೂರು ನೀಡಿದ್ದರು. ತಿರೂರಿನಲ್ಲಿ ಅಪರಿಚಿತ ಬಾಲಕನನ್ನು ಕಂಡ ರಿಕ್ಷಾ ಚಾಲಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ವಿಚಾರಿಸಿದಾಗ ಪ್ಲಸ್‌ ವನ್‌ಗೆ ಸೀಟು ಸಿಗದ ಕಾರಣ ಊರು ಬಿಟ್ಟಿರುವುದಾಗಿ ಹೇಳಿದ್ದ. ಆತನನ್ನು ಕುಂಬಳೆಗೆ ಕರೆತರಲಾಗಿದೆ.

ಗಾಂಜಾ ಸಹಿತ ಸೆರೆ
ಕಾಸರಗೋಡು: ಇಲ್ಲಿನ ರೈಲು ನಿಲ್ದಾಣ ಪರಿಸರದಿಂದ 19.5 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡ ಪೊಲೀಸರು ಬೇಕಲದ ಅಶ್ರಫ್‌ ಟಿ.ಎ. (43) ನನ್ನು ಬಂಧಿಸಿದ್ದಾರೆ.

ವಿದ್ಯುತ್‌ ಕಂಬಕ್ಕೆ ಕಾರು ಢಿಕ್ಕಿ ಹೊಡೆದು
ಅಣ್ಣನ ಸಾವು, ತಮ್ಮನಿಗೆ ಗಂಭೀರ ಗಾಯ
ಬದಿಯಡ್ಕ: ನಿಯಂತ್ರಣ ಕಳೆದುಕೊಂಡ ಕಾರು ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಮಗುಚಿ ಬಿದ್ದ ಪರಿಣಾಮ ಮಾವಿನಕಟ್ಟೆ ಮಸೀದಿ ಬಳಿಯ ನಿವಾಸಿ ಅಬ್ದುಲ್ಲ ಅವರ ಪುತ್ರ ಕಲಂದರ್‌ ಸಮ್ಮಾಸ್‌ (21) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಹೋದರ ಮೊದೀನ್‌ ಸರ್ವಾಸ್‌ (19) ಗಂಭೀರ ಗಾಯಗೊಂಡಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂಬಂಧಿಕರ ಮನೆಗೆ ಹೋಗಿದ್ದ ಸಹೋದರರು ಮರಳುವಾಗ ರಾತ್ರಿ 10ಕ್ಕೆ ಮಾವಿನಕಟ್ಟೆಯಲ್ಲಿ ಅಪಘಾತ ಸಂಭವಿಸಿತು.

Advertisement

Udayavani is now on Telegram. Click here to join our channel and stay updated with the latest news.

Next