Advertisement

ಕಾರವಾರ: ಇದ್ದೂ ಇಲ್ಲದಂತಾದ ನಗರಸಭೆಯ ಈಜುಕೊಳ!

05:24 PM Feb 02, 2024 | Team Udayavani |

ಉದಯವಾಣಿ ಸಮಾಚಾರ
ಕಾರವಾರ: ನಗರಸಭೆ ಒಡೆತನದ ಈಜುಕೊಳ ಬಾಗಿಲು ಮುಚ್ಚಿ 6 ವರ್ಷ ಕಳೆದಿದ್ದು ಈಜು ಪ್ರಿಯರಿಗೆ ಈಜುಕೊಳ ಇದ್ದೂ ಇಲ್ಲದಂತಾಗಿದೆ. ಹಲವು ಗೊಂದಲಗಳಿಂದ ಮುಚ್ಚಿಹೋದ ಈಜುಕೊಳವನ್ನು ಗುತ್ತಿಗೆ ಪಡೆದವರ ಅವಧಿ  ಮುಗಿದ ನಂತರ ಬೇರೊಬ್ಬರು ಗುತ್ತಿಗೆ ಪಡೆದು ಅದನ್ನು ನಡೆಸದೇ ವರ್ಷಗಟ್ಟಲೇ ನಗರಸಭೆ ಜೊತೆ ಸಂಘರ್ಷಕ್ಕೆ ಇಳಿದಿದ್ದರಿಂದ ಅದರ ನಿರ್ವಹಣೆ ಸಹ ಇಲ್ಲದೆ ಪಾಳು ಬಿದ್ದು ಪಾಚಿಗಟ್ಟಿತು.

Advertisement

ನಂತರ ಅದರ ನವೀಕರಣಕ್ಕೆ ನಗರಸಭೆ ಮುಂದಾಯಿತಾದರೂ, ಕಾಮಗಾರಿ ಗುತ್ತಿಗೆ ಪಡೆದವರು ಆಸಕ್ತಿ ವಹಿಸದ ಕಾರಣ ಈಜುಕೊಳ ಮತ್ತೆ ಪಾಳು ಬಿತ್ತು. ನವೀಕರಣ ಕೆಲಸ ಕುಂಟುತ್ತಾ ಸಾಗಿದ್ದು, ಸದ್ಯಕ್ಕೆ ಕೆಲಸ ಮುಗಿಯುವ ಸಾಧ್ಯತೆ ಇಲ್ಲ.

ಈಜುಕೊಳದ ನೀರು ಖಾಲಿ ಮಾಡದ ಪರಿಣಾಮ ಪಾಚಿಗಟ್ಟಿರುವ ನೀರು ಆತಂಕ ಹುಟ್ಟಿಸಿದೆ. ನಗರಸಭೆ ಸುಪರ್ದಿಯಲ್ಲಿರುವ ಈಜುಕೊಳವನ್ನು ಸ್ಥಳೀಯ ಸಂಸ್ಥೆಯೊಂದು ಸ್ವಂತ ವೆಚ್ಚ ಭರಿಸಿ ನವೀಕರಿಸಲು ಮುಂದೆ ಬಂದಿತ್ತು. ಕಳೆದ ವರ್ಷ ನಗರಸಭೆ ಸಾಮಾನ್ಯಸಭೆಯಲ್ಲಿ ಕಾಮಗಾರಿಗೆ ಅನುಮೋದನೆ ನೀಡಲಾಗಿತ್ತು. ಕೆಲಸ ಆರಂಭಗೊಂಡು ವರ್ಷ ಸಮೀಪಿಸಿದೆ. ಆದರೆ ಶೇ.35 ರಷ್ಟು ಕೆಲಸವೂ ಪೂರ್ಣಗೊಂಡಿಲ್ಲ.

ಈಜುಕೊಳದ ಆವರಣದಲ್ಲಿ ಆಳೆತ್ತರದವರೆಗೆ ಗಿಡಗಂಟಿಗಳು ಬೆಳೆದು ನಿಂತಿವೆ. 12 ಅಡಿ ಆಳದ ಈಜುಕೊಳದಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ನಿಂತಿದೆ. ಮಳೆನೀರು ಸೇರಿಕೊಂಡಿದೆ. ಹಲವು ತಿಂಗಳು ಕಳೆದಿದ್ದರಿಂದ ಈಜುಕೊಳ ಪಾಚಿಕಟ್ಟಿ
ಗಬ್ಬುನಾರುತ್ತಿದೆ.

ಈಜುಕೊಳದ ಪಕ್ಕದಲ್ಲಿ ಉಪನೋಂದಣಾಧಿಕಾರಿ ಕಚೇರಿ, ಹೂವು-ಹಣ್ಣಿನ ಮಾರುಕಟ್ಟೆ, ಅಂಗಡಿ ಮುಂಗಟ್ಟುಗಳು ಇವೆ. ನಗರದ ಹೃದಯಭಾಗದಲ್ಲಿರುವ ಈಜುಕೊಳದಲ್ಲಿ ಮಲೀನ ನೀರು ನಿಲ್ಲಲು ಅವಕಾಶ ಮಾಡಿಕೊಟ್ಟಿದ್ದು ಸೊಳ್ಳೆ ಉತ್ಪತ್ತಿಗೆ ಕಾರಣವಾಗುತ್ತಿದೆ. ಇದರಿಂದ ಅಕ್ಕಪಕ್ಕದ ಪ್ರದೇಶದಲ್ಲಿ ಸೊಳ್ಳೆ ಕಾಟವೂ ಹೆಚ್ಚಿದ್ದು ರೋಗರುಜಿನ ಹರಡುವ ಆತಂಕ ಎದುರಾಗಿದೆ ಎಂದು ಅಂಗಡಿಕಾರ ಸಲೀಂ ಮುಕ್ತಾರ ಹೇಳುತ್ತಾರೆ.

Advertisement

ಕಾರವಾರಕ್ಕೆ ಆಗಮಿಸುವ ಪ್ರವಾಸಿಗರು ಸಮುದ್ರದಲ್ಲಿ ಸ್ನಾನ ಮಾಡಿ ನಂತರ ಈಜುಕೊಳದಲ್ಲಿ ಸ್ನಾನ ಮಾಡಲು ಆಸಕ್ತಿ ತೋರುತ್ತಾರೆ. ಅಲ್ಲದೆ ವಾರದ ರಜೆ ಅವಧಿಯಲ್ಲಿ ಮಕ್ಕಳು, ವಿದ್ಯಾರ್ಥಿಗಳು ಈಜು ಚಟುವಟಿಕೆಯಲ್ಲಿ ತೊಡಗಲು ಮುಂದಾಗುತ್ತಾರೆ.

ಆದರೆ ನಗರದಲ್ಲಿ ಸಿಹಿನೀರಿನ ಈಜುಕೊಳ ಇದ್ದೂ ಪ್ರಯೋಜನಕ್ಕೆ ಬರದಂತಾಗಿದೆ. ಕೆಲವು ವರ್ಷಗಳಿಂದಲೂ ಈ ಸಮಸ್ಯೆ ಮುಂದುವರೆದಿದೆ ಎಂದು ಸ್ಥಳೀಯರಾದ ಗಿರೀಶ್‌ ಬಿ. ಬೇಸರ ವ್ಯಕ್ತಪಡಿಸಿದರು. ಈಜುಕೊಳ ನವೀಕರಣ ಕಾಮಗಾರಿಯನ್ನು ಕಳೆದ ಬೇಸಿಗೆಯಲ್ಲೇ ಮುಗಿಸಲು ಸೂಚಿಸಲಾಗಿತ್ತು. ನಿಧಾನಗತಿಯಲ್ಲಿ ಕೆಲಸ ಮಾಡಲಾಗುತ್ತಿದೆ. ಕೆಲವು ದಿನದಿಂದ ಕೆಲಸವೂ ನಡೆಯುತ್ತಿಲ್ಲ .ಈ ಬಗ್ಗೆ ಕ್ರಮಕ್ಕೆ ಮುಂದಾಗಲಾಗುವುದು ಎಂದು ನಗರಸಭೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈಜುಕೊಳದಲ್ಲಿ ಪಾಚಿಗಟ್ಟಿರುವ ನೀರನ್ನು ತೆರವು ಮಾಡಿ ಕೊಳವನ್ನು ಶುಚಿಯಾಗಿಡುವಂತೆ ಗುತ್ತಿಗೆ ಪಡೆದ ಸಂಸ್ಥೆಗೆ ಸೂಚಿಸಲಾಗುವುದು ಎಂದು ನಗರಸಭೆ ಎಇಇ ಸದಾನಂದ ಸಾಳೆಹಿತ್ತಲ ತಿಳಿಸಿದ್ದಾರೆ. ಈಜುಕೊಳದ ನವೀಕರಣ ಕಾಮಗಾರಿ ಇಷ್ಟರೊಳಗೆ ಪೂರ್ಣಗೊಳ್ಳಬೇಕಿತ್ತು. ಸ್ವ ಆಸಕ್ತಿಯಿಂದ ಈಜುಕೊಳದ ನಿರ್ವಹಣೆಗೆ ಮುಂದೆ ಬಂದಿರುವ
ಸಂಸ್ಥೆಯವರು ಅಂದಾಜು ರೂ. 23 ಲಕ್ಷ ವೆಚ್ಚದಲ್ಲಿ ನವೀಕರಣ ಕೆಲಸ ಮಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಈಜು ಕೊಳದ ನವೀಕರಣ ಕೆಲಸ ನಿಧಾನಗತಿಯಲ್ಲಿ ನಡೆಯುತ್ತಿರುವುದಕ್ಕೆ ಹಲವು ಬಾರಿ ನೊಟೀಸ್‌ ನೀಡಲಾಗಿದೆ. ತ್ವರಿತವಾಗಿ ಕೆಲಸ ಮಾಡುವಂತೆ ಇನ್ನೊಮ್ಮೆ ಸೂಚಿಸಲಾಗುವುದು.
*ಸದಾನಂದ ಸಾಳೆಹಿತ್ತಲ ಎಇಇ .
ನಗರಸಭೆ.ಕಾರವಾರ.

Advertisement

Udayavani is now on Telegram. Click here to join our channel and stay updated with the latest news.

Next