Advertisement

ಕಾನೂನು ವಿವಿಯಲ್ಲಿ ಗಗನ ಕುಸುಮವಾಗಿರುವ ನೇಮಕಾತಿ

11:40 PM Sep 03, 2022 | Team Udayavani |

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಆರಂಭವಾಗಿ 12 ವರ್ಷ ಕಳೆದರೂ ಅತಿಥಿ ಉಪನ್ಯಾಸಕರು ಹಾಗೂ ಹೊರಗುತ್ತಿಗೆ ನೌಕರರ ಮೇಲೆ ನಿಂತಿದೆ. ಒಂದು ಬಾರಿ ಮಾತ್ರ ಬೋಧಕ ಸಿಬಂದಿ ನೇಮಕಾತಿ ನಡೆದಿದೆ. ಬೋಧಕೇತರ ಸಿಬಂದಿ ನೇಮಕಾತಿ ಇನ್ನೂ ಗಗನ ಕುಸುಮವಾಗಿದೆ.

Advertisement

ಇತರ ವಿವಿಗಳಿಗೆ ಹೋಲಿಸಿದರೆ ಇಲ್ಲಿ ಸಾಕಷ್ಟು ಮೂಲ ಸೌಲಭ್ಯಗಳ ಕೊರತೆಯಿದೆ. ಸುಸಜ್ಜಿತ ಭೂಮಿ ದೊರೆಯದ ಕಾರಣ ಹರಿದು ಹಂಚಿ ಹೋಗಿರುವ 55 ಎಕರೆಯಲ್ಲಿ ಆರಂಭವಾಗಿದೆ. ಲಾ ಸ್ಕೂಲ್‌, ಉನ್ನತ ಹುದ್ದೆಯಲ್ಲಿರುವವರಿಗೆ ವಸತಿ ಗೃಹಗಳು, ಹಾಸ್ಟೆಲ್‌ ಒಂದಿಷ್ಟು ಬಿಟ್ಟರೆ ಇಂದಿಗೂ ವಿವಿಯ ಆಡಳಿತ ಕಟ್ಟಡ ಲೋಕೋಪಯೋಗಿ ಕಟ್ಟಡದಲ್ಲೇ ನಡೆಯುತ್ತಿದೆ. ಹೊಸ ಕೋರ್ಸ್‌ಗಳನ್ನು ಪರಿಚಯಿಸುವ ಗೋಜಿಗೆ ಹೋಗದೆ ಒಂದು ಸ್ನಾತಕೋತ್ತರ, ಎರಡು ಯುಜಿ ಕೋರ್ಸ್‌ಗೆ ಸೀಮಿತವಾಗಿದೆ. ಸಂವಿಧಾನಾತ್ಮಕ ಕಾನೂನು ಬಿಟ್ಟರೆ ಇತರ ವಿಷಯಗಳ ಸ್ನಾತಕೋತ್ತರ ಪದವಿಗೆ ಇತರ ವಿವಿಗಳ ಕಾನೂನು ಕಾಲೇಜುಗಳನ್ನು ಆಶ್ರಯಿಸುವಂತಾಗಿದೆ.

ಎಲ್ಲವೂ ಹೊರಗುತ್ತಿಗೆ
ಕಾನೂನು ವಿವಿ ಆರಂಭವಾದ ಸಂದರ್ಭ 10-ಪ್ರೊಫೆಸರ್‌, 17-ರೀಡರ್‌, 41-ಉಪನ್ಯಾಸಕರು ಸಹಿತ ಒಟ್ಟು 68 ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ ಮೂವರು ಪ್ರೊಫೆಸರ್‌, ಎಂಟು ಉಪನ್ಯಾಸಕರಿದ್ದಾರೆ. ರೀಡರ್‌ ಹುದ್ದೆಗಳು ಸಂಪೂರ್ಣ ಖಾಲಿಯಿದ್ದು, ಇಡೀ ವಿವಿಗೆ ಖಾಯಂ ಬೋಧಕ ಸಿಬಂದಿ ಇರುವುದು ಕೇವಲ 11 ಮಂದಿ ಮಾತ್ರ. ಉಳಿದೆಲ್ಲವೂ ಅತಿಥಿ ಉಪನ್ಯಾಸಕರ ಮೂಲಕ ಮುನ್ನಡೆಸಲಾಗುತ್ತಿದೆ. ಆರಂಭದಲ್ಲಿ 164 ಬೋಧಕೇತರ ಹುದ್ದೆಗಳು ಮಂಜೂರಾಗಿದ್ದವು. ಇಂದು ಸುಮಾರು 170ಕ್ಕೂ ಹೆಚ್ಚು ಸಿಬಂದಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಸದ್ಯ ಕುಲಪತಿ ಸ್ಥಾನವೂ ಪ್ರಭಾರದಲ್ಲಿದೆ. ಕುಲಸಚಿವರೇ ಮುಖ್ಯ ಹಣಕಾಸು ಅಧಿಕಾರಿಯಾಗಿ ಹೊಣೆ ನಿರ್ವಹಿಸುತ್ತಿದ್ದಾರೆ. ವಿಪರ್ಯಾಸ ಎಂದರೆ ಉಪ ಕುಲಸಚಿವ ಹಾಗೂ ಸಹಾಯಕ ಕುಲಸಚಿವ, ವಿವಿಯ ಹೃದಯ ಎನ್ನುವ ಮುಖ್ಯ ಗ್ರಂಥಪಾಲಕ ಹೊರ ಗುತ್ತಿಗೆ. ಅತ್ಯಂತ ಗೌಪ್ಯ ವಿಭಾಗ ಪರೀಕ್ಷಾಂಗ ವಿಭಾಗವನ್ನೂ ಹೊರ ಗುತ್ತಿಗೆ ಸಿಬಂದಿ ಮೂಲಕವೇ ನಡೆಸಲಾಗುತ್ತಿದೆ.

ನೇಮಕಾತಿಗೆ ಯಾಕೆ ವಿಘ್ನ?
ವಿವಿ ಆರಂಭದ ಬಳಿಕ ಒಮ್ಮೆಯಷ್ಟೇ ಪ್ರೊಫೆಸರ್‌, ರೀಡರ್‌, ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ನಡೆದಿದೆ. 2013ರಲ್ಲಿ 14 ಹುದ್ದೆಗಳ ಅಧಿಸೂಚನೆಗೆ ನೇಮಕವಾಗಿದ್ದು, 11 ಜನರು ಮಾತ್ರ. 2021 ನವೆಂಬರ್‌ ತಿಂಗಳಲ್ಲಿ 13 ಹುದ್ದೆಗಳ ನೇಮಕಾತಿಗೆ ಆಹ್ವಾನಿಸಿದ್ದರೂ ಪ್ರಕ್ರಿಯೆ ಮುಂದುವರಿದಿಲ್ಲ. ಆದರೆ ಬೋಧಕೇತರ ಹುದ್ದೆಗಳಿಗೆ ಎರಡು ಬಾರಿ ನೇಮಕಾತಿ ಅಧಿಸೂಚನೆ ಹೊರಡಿಸಿದ್ದರೂ ಪ್ರಕ್ರಿಯೆ ನಡೆದಿಲ್ಲ. ಪೂರ್ಣಾವಧಿ ಉಪನ್ಯಾಸಕರಿಗೆ ಯುಜಿಸಿ ವೇತನ ನೀಡುವಂತೆ ಕಾಲೇಜಿಗಳಿಗೆ ಆದೇಶ ನೀಡುವ ವಿಶ್ವವಿದ್ಯಾನಿಲಯವು ತನ್ನ ನಾಲ್ವರು ಗುತ್ತಿಗೆ ಉಪನ್ಯಾಸಕರಿಗೆ ಪಿಯು ಕಾಲೇಜಿನ ಉಪನ್ಯಾಸಕರ ವೇತನ ನೀಡುತ್ತಿದೆ. 10 ವರ್ಷ ಸೇವೆ ಸಲ್ಲಿಸಿದವರನ್ನು ನೇಮಕಾತಿಗೆ ಪರಿಗಣಿಸಬೇಕೆನ್ನುವ ಉಮಾದೇವಿ ಪ್ರಕರಣ ಮುಂದಿಟ್ಟುಕೊಂಡು ಹೋರಾಟಕ್ಕೆ ಮುಂದಾಗುವಂತಾಗಿದೆ.

Advertisement

ಕಾನೂನು ವಿಶ್ವ ವಿದ್ಯಾ ನಿಲಯ ವನ್ನು ಗುದ್ದಾಡಿ ತಂದಿದ್ದು, ಇದು ಉತ್ತರ ಕರ್ನಾಟಕದಲ್ಲಿದೆ ಎನ್ನುವ ಕಾರಣಕ್ಕೆ ಎಲ್ಲ ಸರಕಾರಗಳು ನಿರ್ಲಕ್ಷé ಮಾಡಿಕೊಂಡು ಬರುತ್ತಿವೆ. ವ್ಯವಸ್ಥಿತವಾಗಿ ದುರ್ಬಲಗೊಳಿಸಿ ಇದನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಬೇಕೆನ್ನುವ ಹುನ್ನಾರಗಳು ನಡೆಯುತ್ತಿವೆ. ಇಷ್ಟೊಂದು ನಿರ್ಲಕ್ಷé ಮಾಡುತ್ತಿರುವುದು ನೋವಿನ ಸಂಗತಿ. ಈ ಕುರಿತು ಮುಂದಿನ ಅಧಿವೇಶನದಲ್ಲಿ ಪ್ರಸ್ತಾವ ಮಾಡುತ್ತೇನೆ.
-ಬಸವರಾಜ ಹೊರಟ್ಟಿ,
ವಿಧಾನಪರಿಷತ್‌ ಸದಸ್ಯ

– ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next