Advertisement

ರಾಜ್ಯ ಅಮೆಚೂರ್‌ ಕಬಡ್ಡಿ ಸಂಸ್ಥೆಚುನಾವಣೆ: ಅಖಾಡಕ್ಕಿಳಿದ ಬಂಡಾಯ ವೀರರು!

11:17 AM Mar 27, 2020 | keerthan |

ಬೆಂಗಳೂರು: ಕರ್ನಾಟಕ ರಾಜ್ಯ ಅಮೆಚೂರ್‌ ಕಬಡ್ಡಿ ಸಂಸ್ಥೆ ಅಧ್ಯಕ್ಷ ಸ್ಥಾನಕ್ಕಾಗಿ ಮಾಜಿ ಅಂತಾರಾಷ್ಟ್ರೀಯ ಕಬಡ್ಡಿಪಟು ಪ್ರಸಾದ್‌ ಬಾಬು ಸ್ಪರ್ಧೆ ಮಾಡಲಿದ್ದಾರೆ.

Advertisement

ಇಂಡೋ ಇಂಟರ್‌ನ್ಯಾಷನಲ್‌ ಕಬಡ್ಡಿ ಲೀಗ್‌ (ಐಐಪಿಕೆಎಲ್‌) ನಂತಹ ದೊಡ್ಡ ಬಂಡಾಯ ಕೂಟ ಹುಟ್ಟು ಹಾಕಿ, ಪ್ರೊ ಕಬಡ್ಡಿಗೆ ಸೆಡ್ಡು ಹೊಡೆದಿದ್ದ ಪ್ರಸಾದ್‌ ಬಾಬು ಭಾರತದ ಕಬಡ್ಡಿಯಲ್ಲಿ ಬಂಡಾಯದ ಬಿರುಗಾಳಿ ಎಬ್ಬಿಸಿದ್ದರು. ಇದೀಗ ರಾಜ್ಯ ಕಬಡ್ಡಿ ಸಂಸ್ಥೆಯ ಚುಕ್ಕಾಣಿ ಹಿಡಿಯಲು ಸಿದ್ಧತೆ ನಡೆಸಿದ್ದಾರೆ.

ಈ ಬಗ್ಗೆ ಉದಯವಾಣಿಗೆ ನೀಡಿದ ಸಂದರ್ಶ ನದಲ್ಲಿ ಪ್ರಸಾದ್‌ ಬಾಬು ಮಾತನಾಡಿದರು. ತಮ್ಮ ಕನಸು, ಕಬಡ್ಡಿ ಏಳಿಗೆಗಾಗಿ ತಲುಪ  ಬೇಕಿರುವ ಗುರಿ, ಜಿಲ್ಲಾಮಟ್ಟದಿಂದಲೂ ಕಬಡ್ಡಿಗೆ ಸಿಗಬೇಕಿರುವ ಬೆಂಬಲ ಸೇರಿದಂತೆ ಹಲವು ವಿಚಾರದ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದ ಪೂರ್ಣ ವಿವರ ಇಲ್ಲಿದೆ ನೋಡಿ.

ಅನಿವಾರ್ಯ ಪರಿಸ್ಥಿತಿ: “ರಾಜ್ಯ ಕಬಡ್ಡಿ ಸಂಸ್ಥೆ ಚುನಾವಣೆಗೆ ಸ್ಪರ್ಧೆ ಮಾಡಬಾರದು ಎಂದು ನಿರ್ಧರಿಸಿದ್ದೆ, ಆದರೆ ಕ್ರೀಡಾ ಪಟುಗಳ ಹಿತ  ದೃಷ್ಟಿಯಿಂದ ನನ್ನ ಸ್ಪರ್ಧೆ ಅನಿವಾರ್ಯವಾಗಿದೆ. ರಾಜ್ಯ ಕಬಡ್ಡಿ ಪಟುಗಳಿಗೆ ನ್ಯಾಯ ದೊರಕುತ್ತಿಲ್ಲ, ಈಗಿನ ಪದಾಧಿಕಾರಿಗಳ ದುರಾಡಳಿತದಿಂದಾಗಿ ಪ್ರತಿಭಾವಂತ ಆಟಗಾರರು ನಿರ್ಲಕ್ಷ್ಯಕ್ಕೆ ಒಳಗಾಗಿ ದ್ದಾರೆ. ಇದರಿಂದಾಗಿ ಒಟ್ಟಾರೆ ರಾಜ್ಯದ ಕಬಡ್ಡಿ ಬೆಳವಣಿಗೆ ಕುಂಠಿತವಾಗಿದೆ. ಇದೆಲ್ಲವನ್ನು ಸರಿಪಡಿಸಬೇಕೆಂದು ನಿರ್ಧರಿಸಿರುವೆ’ ಎಂದು ಬಾಬು ತಿಳಿಸಿದರು.

ಪ್ರತಿ ಜಿಲ್ಲೆಗೂ ಅನುದಾನ ಅಗತ್ಯ: “ಬೇರುಮಟ್ಟದಿಂದಲೇ ಕಬಡ್ಡಿ ಬೆಳವಣಿಗೆ ಆಗಬೇಕಿದೆ. ಹಳ್ಳಿಗಳಲ್ಲಿ ಪ್ರತಿಭಾವಂತ ಕಬಡ್ಡಿ ಪಟುಗಳು ಸಿಗುತ್ತಾರೆ, ಅಂತಹವರನ್ನು ಪ್ರೋತ್ಸಾಹಿಸುವ ಅಗತ್ಯತೆ ಇದೆ. ಇದಕ್ಕಾಗಿ ಶಾಲಾಮಟ್ಟದಿಂದಲೇ ತಯಾರಿ ನಡೆಯಬೇಕು, ಪ್ರತೀ ಜಿಲ್ಲೆಗೂ ಅನು ದಾನ ಬಿಡುಗಡೆ ಆಗಬೇಕು, ಅಂತಾರಾಷ್ಟ್ರೀಯ ಪ್ರತಿಭೆ ಗಳನ್ನು ರೂಪಿಸಿ ಅವರಿಗೆ ಒಳ್ಳೆಯ ತರಬೇತಿ ನೀಡುವ ವ್ಯವಸ್ಥೆಯೂ ಆಗಬೇಕು, ಕಳೆದ ಕೆಲವು ವರ್ಷಗಳಿಂದ ರಾಜ್ಯದಲ್ಲಿ ಕಬಡ್ಡಿ ಬೆಳವಣಿಗೆ ಕಂಡಿಲ್ಲ. ಹೆಚ್ಚು ಕೂಟಗಳು ಆಯೋಜಿಸಿದಷ್ಟು ಪ್ರತಿಭಾನ್ವೇಷಣೆಗೆ ವೇದಿಕೆಯಾಗುತ್ತದೆ, ಆದರೆ ರಾಜ್ಯದಲ್ಲಿ ಯಾವುದೇ ಕೂಟಗಳನ್ನು ನಡೆಸುತ್ತಿಲ್ಲ ಎಂಬ ನೋವು ನನ್ನನ್ನು ಕಾಡುತ್ತಿದೆ’ ಎಂದರು ಪ್ರಸಾದ್‌ ಬಾಬು.

Advertisement

ಉದ್ಯೋಗಕ್ಕೆ ಮೊದಲ ಆದ್ಯತೆ: “ಕಬಡ್ಡಿ ಆಟಗಾರರಲ್ಲಿ ಹೆಚ್ಚಿನವರಿಗೆ ಉದ್ಯೋಗವಿಲ್ಲ, ಬಡತನದ ಹಿನ್ನೆಲೆಯಿಂದ ಬಂದ ಆಟಗಾರರನ್ನು ತೀರ ನಿರ್ಲಕ್ಷ್ಯವಾಗಿ ಕಾಣಲಾಗುತ್ತಿದೆ. ಮೊದ ಲಿಗೆ ಎಲ್ಲ ರೀತಿಯ ತಾರತಮ್ಯಗಳು ದೂರ ವಾಗಬೇಕು, ಕಬಡ್ಡಿ ಬೆಳೆಯಬೇಕು, ಆಟಗಾರರ ನೇಮಕಾತಿ ವಿಷಯದಲ್ಲಿ ಪಾರದರ್ಶ ಕತೆ ಅತ್ಯಗತ್ಯ, ಹಣ ಕೊಟ್ಟವರಿಗೆ ಮಾತ್ರ ತಂಡದಲ್ಲಿ ಸ್ಥಾನ ಸಿಗುವ ಪರಂಪರೆ ದೂರವಾಗಬೇಕು’

ಪ್ರೊ ಕಬಡ್ಡಿ ವಿರೋಧಿಯಲ್ಲ
ಪ್ರೊ ಕಬಡ್ಡಿ ವಿರೋಧಿ ನಾನಲ್ಲ ಎಂದು ಪ್ರಸಾದ್‌ ಬಾಬು ಸ್ಪಷ್ಟಪಡಿಸಿದ್ದಾರೆ. “ಪ್ರೊ ಕಬಡ್ಡಿಯಿಂದ ಹಲವಾರು ಆಟಗಾರರಿಗೆ ಒಳ್ಳೆಯ ಅವಕಾಶ, ಭವಿಷ್ಯ ಸಿಕ್ಕಿದೆ. ಇದರಿಂದ ದೇಶದ, ರಾಜ್ಯದ ಕಬಡ್ಡಿ ಪಟುಗಳಿಗೆ ಒಳ್ಳೆಯದೇ ಆಗಿದೆ ಎಂದ ಮೇಲೆ ಅದನ್ನು ವಿರೋಧಿಸುವುದರಲ್ಲಿ ಅರ್ಥವಿಲ್ಲ. ಇಂತಹ ಇನ್ನಷ್ಟು ಲೀಗ್‌ಗಳನ್ನು ಆರಂಭಿಸಲು ಪ್ರೋತ್ಸಾಹಿಸುವ ಅಗತ್ಯವಿದೆ. ಇದಕ್ಕೆ ನನ್ನ ಬೆಂಬಲ ಸದಾ ಇರುತ್ತದೆ’ ಎಂದು ತಿಳಿಸಿದರು. ಹಿಂದೆ ಪ್ರಸಾದ್‌ ಬಾಬು ಪ್ರೊ ಕಬಡ್ಡಿಗೆ ಪರ್ಯಾಯವಾಗಿ ಇಂಡೊ ಇಂಟರ್‌ನ್ಯಾಷನಲ್‌ ಪ್ರೀಮಿಯರ್‌ ಲೀಗ್‌ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಯಾರಿವರು?: ಪೂರ್ಣ ಹೆಸರು ಪ್ರಸಾದ್‌ ಬಾಬು, ಕಬಡ್ಡಿ ಕ್ಷೇತ್ರದಲ್ಲಿ ಕಬಡ್ಡಿ ಬಾಬು ಎಂದೇ ಜನಪ್ರಿಯ. 1976ರಲ್ಲಿ ರಾಜ್ಯ ತಂಡಕ್ಕೆ ಪದಾರ್ಪಣೆ ಮಾಡಿದ್ದರು. 1979ರಲ್ಲಿ ದಕ್ಷಿಣ ವಲಯ ಕೂಟದಲ್ಲಿ ಭಾಗವಹಿಸಿದ್ದರು, ಮೊದಲ ಬಾರಿಗೆ ನಾಯಕರಾಗಿ ಈ ಕೂಟದಲ್ಲಿ ರಾಜ್ಯ ತಂಡವನ್ನು ಮುನ್ನಡೆಸಿದ್ದರು. 1980ರಲ್ಲಿ ಬಿಇಎಲ್‌ ತಂಡಕ್ಕೆ ಆಯ್ಕೆಯಾದರು. ಜಪಾನ್‌ನಲ್ಲಿ ಏಷ್ಯನ್‌ ಕೂಟ ಸೇರಿದಂತೆ ಹಲವಾರು ಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ರಾಜ್ಯ ತಂಡವನ್ನು ಮೂರು ಸಲ ನಾಯಕರಾಗಿ ಮುನ್ನಡೆಸಿರುವ ಹೆಗ್ಗಳಿಕೆ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next