Advertisement

Karnataka; ರಾಜ್ಯದ ಆರು ನಕ್ಸಲರಿಂದ ಶರಣಾಗತಿಗೆ ಒಲವು?

01:01 AM Sep 29, 2024 | Team Udayavani |

ಕಾರ್ಕಳ: ನಕ್ಸಲರು ಶರಣಾಗತಿಯತ್ತ ಒಲವು ತೋರಿದ್ದಾರೆ ಎನ್ನುವ ವದಂತಿಯೊಂದು ಪ. ಘಟ್ಟದ ಮೂಲೆಯಲ್ಲಿ ಹರಿದಾಡುತ್ತಿದೆ. ಶಂಕಿತ ನಕ್ಸಲ್‌ ನಾಯಕ ವಿಕ್ರಂ ಗೌಡ ನೇತೃತ್ವದ 6 ಮಂದಿ ಶರಣಾಗತಿಗೆ ಒಲವು ತೋರಿದ್ದಾರೆ ಎನ್ನಲಾಗುತ್ತಿದೆ.

Advertisement

ಇಲಾಖೆಯಲ್ಲೂ ಈ ಕುರಿತು ಗುಸುಗುಸು ಹಬ್ಬತೊಡಗಿದೆ. ಪಶ್ಚಿಮ ಘಟ್ಟದ ಅರಣ್ಯದಂಚಿನಲ್ಲಿ ಇತ್ತೀಚೆಗೆ ಕಂಡುಬಂದಿದ್ದ ಶಂಕಿತ ನಕ್ಸಲರು ತಪ್ಪಲು ಭಾಗದಲ್ಲೇ ತಳವೂರಿ ಕೊಂಡಿರುವ ಶಂಕೆಯಿದೆ. ಅಲ್ಲಿ ನಿಯೋಜಿಸಿದ ಎನ್‌ಎನ್‌ಎಫ್ ಯೋಧರ ತಂಡ ಈಗಲೂ ಆ ಭಾಗದಲ್ಲಿ ಕಾರ್ಯನಿರತವಾಗಿದೆ.

ಶರಣಾಗತಿಗೆ ಕಾರಣಗಳೇನು?
ಸರಕಾರ ಈ ಹಿಂದೆ ಬಿಡುಗಡೆ ಮಾಡಿದ ನಕ್ಸಲರ ಪತ್ತೆಯ ಸೂಚನ ಫ‌ಲಕದಲ್ಲಿ 22 ಮಂದಿಯ ಭಾವಚಿತ್ರಗಳಿದ್ದವು. ಅದರಲ್ಲಿ ಕೆಲವರು ಎನ್‌ಕೌಂಟರ್‌ಗೆ ಬಲಿಯಾಗಿದ್ದರೆ ಇನ್ನು ಕೆಲವರು ಶರಣಾಗಿದ್ದಾರೆ. ಈಗ ಸಂಖ್ಯೆ ಸುಮಾರು 12ಕ್ಕೆ ಇಳಿದಿದ್ದು, 6ರಿಂದ 8 ಮಂದಿ ಸಕ್ರಿಯರಾಗಿದ್ದಾರೆ ಎನ್ನಲಾಗಿದೆ. ಅವರಲ್ಲಿ ಬೆರಳೆಣಿಕೆಯ ಮಂದಿ ರಾಜ್ಯ ದವರು. ಕೇರಳ, ಝಾರ್ಖಂಡ್‌ ಮತ್ತು ಛತ್ತೀಸ್‌ಗಢದಲ್ಲಿ ಸರಕಾರಗಳು ನಕ್ಸಲರನ್ನು ನಿಗ್ರಹಿಸಲು ಭಾರೀ ಕಾರ್ಯಾಚರಣೆ ನಡೆಸುತ್ತಿರುವುದು ಹಾಗೂ ಕೇರಳದಲ್ಲಿ ನಕ್ಸಲ್‌ ಗುಂಪಿನ ಆಂತರಿಕ ಭಿನ್ನಾಭಿಪ್ರಾಯ, ನಾಗರಿಕರಿಂದ ಬೆಂಬಲ ಕುಸಿತ ಮುಂತಾದ ಕಾರಣದಿಂದ ಶರಣಾಗತಿಗೆ ಯೋಚಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ರಾಜ್ಯದಲ್ಲಿ 14 ಮಂದಿ ಶರಣು
ರಾಜ್ಯದಲ್ಲಿ ಈವರೆಗೆ 14 ಮಂದಿ ನಕ್ಸಲ್‌ ಪ್ಯಾಕೇಜ್‌ನಲ್ಲಿ ಶರಣಾಗಿದ್ದರು. ಅಂಥವರಿಗೆ ಸರಕಾರ ಪ್ಯಾಕೇಜ್‌ ಘೋಷಿಸಿದೆ. 2010ರಲ್ಲಿ ವೆಂಕಟೇಶ್‌, ಜಯಾ, ಸರೋಜಾ, ಮಲ್ಲಿಕಾ, 2014ರಲ್ಲಿ ಸಿರಿಮನೆ ನಾಗರಾಜ್‌, ನೂರ್‌ ಜಲ್ಫಿಕರ್‌, 2016ರಲ್ಲಿ ಭಾರತಿ, ಫಾತೀಂ, ಪದ್ಮನಾಭ್‌, ಪರಶುರಾಮ್‌, 2017ರಲ್ಲಿ ಕನ್ಯಾಕುಮಾರಿ, ಶಿವು, ಚೆನ್ನಮ್ಮ, ಜಿಲ್ಲಾಡಳಿತದ ಮೂಲಕ ಶರಣಾಗಿದ್ದರು. ಮಲೆನಾಡು, ಪ.ಘಟ್ಟ ಪ್ರದೇಶದಲ್ಲಿ ಮುಂಚೂಣಿ ಯಲ್ಲಿದ್ದ ಬಿ.ಜಿ. ಕೃಷ್ಣಮೂರ್ತಿ, ಸಾವಿತ್ರಿ ಬಂಧನದ ಬಳಿಕ ಮಲೆನಾಡಿನಲ್ಲಿ ನಕ್ಸಲ್‌ ನೆಲೆಗೆ ಕಡಿವಾಣ ಬಿದ್ದಿತ್ತು.

ಏಕೆ ಈ ನಿರ್ಧಾರ?
ಆಂತರಿಕ ಭಿನ್ನಾಭಿಪ್ರಾಯ, ನಾಗರಿಕರಿಂದ ಬೆಂಬಲ ಕುಸಿಯುತ್ತಿರುವುದು
ಕೇರಳ, ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ನಕ್ಸಲ್‌ ನಿಗ್ರಹ ಕಾರ್ಯಾಚರಣೆ ಹೆಚ್ಚಳ

Advertisement

ಕರಾವಳಿ ಮೂಲದ ವ್ಯಕ್ತಿಯ ಮಧ್ಯಸ್ಥಿಕೆ?
ನಕ್ಸಲರ ಶರಣಾಗತಿ ಮತ್ತು ಪುನರ್ವಸತಿ ಸಂಬಂಧ ರಾಜ್ಯ ಮಟ್ಟದ ಸಮಿತಿಯನ್ನು ಸರಕಾರ ರೂಪಿಸಿದೆ. ಪುನಃ ಸಮಾಜದ ಮುಖ್ಯವಾಹಿನಿಗೆ ತರುವುದು ಸಮಿತಿಯ ಉದ್ದೇಶ. ಈ ನಿಟ್ಟಿನಲ್ಲಿ ಕರಾವಳಿ ಮೂಲದ ಓರ್ವರ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆಯುತ್ತಿದೆ ಎನ್ನಲಾಗುತ್ತಿದೆ.

ನಕ್ಸಲರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನಗಳು ನಡೆಯುತ್ತಿವೆ. ಶಸ್ತ್ರ ತ್ಯಜಿಸಿ ಬರುವವರಿಗೆ ವಿವಿಧ ಕೆಟಗರಿಯಿಡಿ 7.5 ಲಕ್ಷ ರೂ. ವರೆಗೂ ಪ್ಯಾಕೇಜ್‌ ನೀಡಲಾಗುತ್ತಿದೆ.
-ಜಿತೇಂದ್ರ ಕುಮಾರ್‌ ದಯಾಮ, ಪೊಲೀಸ್‌ ವರಿಷ್ಠಾಧಿಕಾರಿ, ನಕ್ಸಲ್‌ ನಿಗ್ರಹ ದಳ

ನಕ್ಸಲರು ಶರಣಾಗಿ ಮುಖ್ಯವಾಹಿನಿಗೆ ಬಂದರೆ ಸಂತಸ. ಹಾಗೆಂದು ಅವರ ಮೇಲಿನ ಪ್ರಕರಣಗಳನ್ನು ತೆಗೆದು ಹಾಕಲು ಸಾಧ್ಯವಿಲ್ಲ. ಅವುಗಳನ್ನು ವಿಶೇಷವಾಗಿ ಪರಿಗಣಿಸಿ ಶೀಘ್ರ ಇತ್ಯರ್ಥಪಡಿಸಲು ಪ್ರಯತ್ನಿಸಿ ಅವರಿಗೆ ನಗದು ಸಹಿತ ಎಲ್ಲ ಸೌಲಭ್ಯಗಳನ್ನು ನೀಡಲಿದ್ದೇವೆ. ಸಂವಿಧಾನದಡಿ, ಕಾನೂನು ಬದ್ಧ ಹೋರಾಟಕ್ಕೆ ಅವರಿಗೆ ಅವಕಾಶವಿದೆ.
-ಕೆ.ಪಿ. ಶ್ರೀಪಾಲ, ಸದಸ್ಯರು, ರಾಜ್ಯ ನಕ್ಸಲರ ಶರಣಾಗತಿ, ಪುನರ್ವಸತಿ ಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next