Advertisement

ಜಾಲತಾಣದಲ್ಲಿ ಸಾಹಿತ್ಯಾಸಕ್ತರ ಸೃಷ್ಟಿಸಿದ ಅಕಾಡೆಮಿ

03:08 PM Aug 21, 2021 | Team Udayavani |

ಬೆಂಗಳೂರು: ಕೋವಿಡ್‌ ಸಂಕಷ್ಟವನ್ನು ಸವಾಲಾಗಿ ಸ್ವೀಕರಿಸಿರುವ ಕರ್ನಾಟಕ ಸಾಹಿತ್ಯ ಅಕಾಡೆಮಿ ಇದೀಗ ಫೇಸ್‌ಬುಕ್‌, ಯೂಟ್ಯೂಬ್‌ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣಗಳ ಮೂಲಕ ಸಾಹಿತ್ಯಾಸಕ್ತ ರನ್ನು ಹೆಚ್ಚಿನ ಸಂಖ್ಯೆಯಲ್ಲಿ ತಲುಪುವಲ್ಲಿ ಯಶಸ್ವಿಯಾಗಿದೆ. ಆ ಮೂಲಕ ಕರ್ನಾಟಕ ಸಾಹಿತ್ಯ ಅಕಾಡೆಮಿ ಓದುಗರ ಮನೆ ಬಾಗಿಲಿಗೆ ತಲುಪುವತ್ತ ಹೆಜ್ಜೆಯಿರಿಸಿದೆ.

Advertisement

ಕೋವಿಡ್‌ ಮೊದಲನೆ ಅಲೆ ಬಂದಾಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ಹಲವು ಅಕಾಡೆಮಿಗಳು ದಿಕ್ಕುತೋಚದಂತೆ ಸುಮ್ಮನಾ ಗಿದ್ದವು.ಆದರೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಭಿನ್ನವಾದ ಆಲೋಚನೆಯೊಂದಿಗೆ ಕಾರ್ಯಕ್ರಮಗಳನ್ನು ರೂಪಿಸಿ ಕೋವಿಡ್‌ ಸಂಕಷ್ಟದ ನಡುವೆ ಸಾಹಿತ್ಯವಲಯದ ಭಿನ್ನ ಓದುಗರನ್ನು ಸೂಜಿಗಲ್ಲಿನ ರೀತಿಯಲ್ಲಿ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಫೇಸ್‌ಬುಕ್‌ ಪೇಜ್‌ ಮತ್ತು ಯುಟ್ಯೂಬ್‌ಗಳಲ್ಲಿ ಕಾರ್ಯ ಕ್ರಮಗಳನ್ನುಬಿತ್ತರಿಸುವ ಮೂಲಕ ಕೇವಲ ಕರ್ನಾಟಕದಲ್ಲಷ್ಟೇ ಅಲ್ಲ ದೇಶ ಮತ್ತು ವಿದೇಶದಲ್ಲೂ ಕೂಡ ಓದುಗರ ಸಂಖ್ಯೆಯನ್ನು ಮತ್ತಷ್ಟು ವಿಸ್ತರಿಸಿಕೊಂಡಿದೆ. ಹೀಗಾಗಿಯೇ ಈ ಹಿಂದೆ ಬೆರಳೆಣಿಕೆಯಷ್ಟಿದ್ದ ಅಕಾಡೆಮಿಯ ಜಾಲತಾಣ ಸಾಹಿತ್ಯ ವೀಕ್ಷಕರ ಸಂಖ್ಯೆ ಈಗ 2,37,231ಕ್ಕೆ ತಲುಪಿ ಹೊಸ ದಾಖಲೆ ಬರೆದಿದೆ.

ಸಾಹಿತಾಸ್ತಕರನ್ನು ಸೆಳೆಯುವ ಸಲುವಾಗಿಯೇ ಕರ್ನಾಟಕ ಸಾಹಿತ್ಯ ಅಕಾಡೆಮಿ ಭಿನ್ನ ಶೈಲಿಯ ಕಾರ್ಯಕ್ರಮಗಳನ್ನು ರೂಪಿಸಿತು. “ಸಂಕಷ್ಟ ಗಳನ್ನುಮೀರೋಣ ಮಾಲಿಕೆ’ಯಡಿಕನಕದಾಸರ”ನಳಚರಿತ್ರೆ, ರಾಘವಾಂಕನ “ಹರಿಶ್ಚಂದ್ರ ಮಹಾಕಾವ್ಯ, ಷಡಕ್ಷರ ದೇವನ “ರಾಜಶೇಖರ ವಿಳಾಸ, ಮುದ್ದಣ ಕವಿಯ “ಶ್ರೀರಾಮಾಶ್ವಮೇಧಂ’ ಸೇರಿದಂತೆ ಮತ್ತಿತರ ಕಾವ್ಯಗಳನ್ನು ತೆಗೆದುಕೊಂಡು ಆ ಕಾವ್ಯಗಳಲ್ಲಿ ಸಂಕಷ್ಟ ಗಳನ್ನು ಯಾವ ರೀತಿಯಲ್ಲಿ ಮೀರಲಾಯಿತು ಎಂಬ ಕುರಿತು ಚರ್ಚಿಸಿ, ಆ ಮೂಲಕ ಓದುಗರನ್ನು ತಲುಪಲಾಯಿತು ಎಂದು ಅಕಾಡೆಮಿ ಅಧಿಕಾರಿಗಳು ಹೇಳುತ್ತಾರೆ. ಇಂತಹ ಭಿನ್ನ ಕಾರ್ಯಕ್ರಮದಿಂದಾಗಿ ಓದುಗರ ಸೆಳೆಯಲು ಕಾರಣವಾಯಿತು ಎಂದು ಸಂತಸ ವ್ಯಕ್ತಪಡಿಸುತ್ತಾರೆ.

ಇದನ್ನೂ ಓದಿ:ಕೃಷ್ಣಾ ಸಂತ್ರಸ್ತರ ಪುನರ್ವಸತಿ ಕೇಂದ್ರಗಳ ಅಭಿವೃದ್ಧಿಗೆ ನೂರು ಕೋಟಿ ಬಿಡುಗಡೆ: ಬೊಮ್ಮಾಯಿ

Advertisement

ಅನಿವಾಸಿ ಕನ್ನಡಿಗರಿಂದಲೂ ವೀಕ್ಷಣೆ: ಕರ್ನಾಟಕ ಸಾಹಿತ್ಯ ಅಕಾಡೆಮಿಯ ಕಾರ್ಯಕ್ರಮಗಳನ್ನು ದಕ್ಷಿಣ ಆಫ್ರಿಕಾ, ವಿಯೆಟ್ನಾಂ, ಲಂಡನ್‌, ಮಲೇಷಿಯಾ, ಸಿಂಗಾಪುರ, ಅಮೆರಿಕಾ ಸೇರಿದಂತೆ ಹಲವು ದೇಶಗಳಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಕೂಡ ಶೇ.4ರಷ್ಟು ಸಂಖ್ಯೆಯಲ್ಲಿ ವೀಕ್ಷಣೆ ಮಾಡಿದ್ದಾರೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್‌ ತಿಳಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಈ ಹಿಂದೆ ಬೆರಳೆಣಿಕೆಯಲ್ಲಿದ್ದ ಅಕಾಡೆಮಿ ಯುಟ್ಯೂಬ್‌ನ ಹೊಸ ಚಂದಾರರ ಸಂಖ್ಯೆ ಈಗ 6252ಕ್ಕೆ ಏರಿಕೆ ಆಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ದ್ವಿಗುಣವಾಗುವ ಸಾಧ್ಯತೆ ಇದೆ. ಜತೆಗೆ ಯೂಟ್ಯೂಬ್‌ ಚಂದಾರರು ಅಲ್ಲದವರು ಕೂಡ 5 ಸಾವಿರಕಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಕಾದಂಬರಿಗಳ ಬಗ್ಗೆ ಚರ್ಚೆ
ಕೋವಿಡ್‌ ಹಿನ್ನೆಲೆಯಲ್ಲಿ ಭಿನ್ನಕಾರ್ಯಕ್ರಮ ರೂಪಿಸಲಾಯಿತು.ಕುವೆಂಪು ಅವರ “ಮಲೆಗಳಲ್ಲಿ ಮದುಮಗಳು, ತ.ರಾ.ಸು ಅವರ “ದುರ್ಗಾಸ್ತಮಾನ, ಸಾರಾ ಅಬೂಬಕ್ಕರ್‌ ಅವರ “ಚಂದ್ರಗಿರಿಯ ತೀರದಲ್ಲಿ ‘, ಎಸ್‌.ಎಲ್‌.ಬೈರಪ್ಪ ಅವರ “ತಬ್ಬಲಿಯು ನೀನಾನೆ ಮಗನೆ’ ಸೇರಿದಂತೆ ನಾಡಿನ ಹೆಸರಾಂತ ಕಾದಂಬರಿಕಾರರ ಕಾದಂಬರಿಗಳನ್ನು “ಕಾದಂಬರಿ ಮಾಲಿಕೆ’ಯಲ್ಲಿ ಚರ್ಚಿಸಲಾಗಿದೆ. ರಾಜ್ಯದ ಎಲ್ಲಾ ಭಾಗಗಳಿಂದಲೂ ಉಪನ್ಯಾಸಕರು ಇದರಲ್ಲಿ ಭಾಗವಹಿಸಿದ್ದಾರೆ. ಇದುಕೂಡ ಸಾಹಿತ್ಯಾಸಕ್ತರಿಗೆ ಇಷ್ಟವಾಗಿದೆ. ಇದೀಗ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಅಕಾಡೆಮಿ “ಸ್ವಾತಂತ್ರ್ಯಹೋರಾಟದಲ್ಲಿ ಕರ್ನಾಟಕ’ ಮಾಲಿಕೆಯಡಿ “ಸ್ವಾತಂತ್ರ್ಯ ಹೋರಾಟದಲ್ಲಿ ಜಿಲ್ಲಾವಾರುಕೊಡುಗೆ’ ಬಗ್ಗೆ ಉಪನ್ಯಾಸ ಕಾರ್ಯಕ್ರಮ ರೂಪಿಸಿದೆ ಎಂದು ಅಕಾಡೆಮಿ ರಿಜಿಸ್ಟ್ರಾರ್‌ ಎಸ್‌.ಕರಿಯಪ್ಪ ಹೇಳಿದ್ದಾರೆ.

ಕೋವಿಡ್‌ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಾಹಿತ್ಯಾಸಕ್ತರನ್ನು ಸೆಳೆಯುವ ನಿಟ್ಟಿನಲ್ಲಿ ಅಕಾಡೆಮಿ ನಿರತವಾಗಿದೆ. ಶೇ.10ರಷ್ಟು
18 ರಿಂದ 24 ವರ್ಷದವರು, ಶೇ.25ರಷ್ಟು 25ರಿಂದ 43 ವರ್ಷದವರು, ಶೇ.20ರಷ್ಟು 35 ರಿಂದ 44 ವರ್ಷದವರು ಹಾಗೆಯೇ ಶೇ.30ರಷ್ಟು ಮಂದಿ 55 ವರ್ಷ ಮೇಲ್ಪಟ್ಟವರು ಜಾಲತಾಣದ ಮೂಲಕ ಸಾಹಿತ್ಯ ಅಕಾಡೆಮಿ ಕಾರ್ಯಕ್ರಮಗಳನ್ನು ವೀಕ್ಷಿಸಿದ್ದಾರೆ.
-ಡಾ.ಬಿ.ವಿ.ವಸಂತಕುಮಾರ್‌, ಅಧ್ಯಕ್ಷರು,
ಕರ್ನಾಟಕ ಸಾಹಿತ್ಯ ಅಕಾಡೆಮಿ

-ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next