Advertisement

ಮತದಾನ ಪ್ರಮಾಣ ಹೆಚ್ಚಳ  ನಗರದಲ್ಲಿ ಮತ್ತೆ ನಿರಾಸಕ್ತಿ

02:43 AM May 11, 2023 | Team Udayavani |

ಕೆಲವೊಂದು ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ, ರಾಜ್ಯ ವಿಧಾನಸಭೆ ಯ ಎಲ್ಲ 224 ಸ್ಥಾನಗಳಿಗೆ ಬಹುತೇಕ ಶಾಂತಿಯುತವಾಗಿ ಮತದಾನ ನಡೆದಿದ್ದು ಒಟ್ಟು 2,615 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದೊಳಗೆ ಭದ್ರವಾಗಿದ್ದು ಮೇ 13ರಂದು ನಡೆಯಲಿರುವ ಮತಎಣಿಕೆಯ ಬಳಿಕ ಬಹಿರಂಗಗೊಳ್ಳಲಿದೆ.

Advertisement

ಬುಧವಾರ ನಡೆದ ಚುನಾವಣೆಯಲ್ಲಿ ಸುಮಾರು ಶೇ. 72.67ರಷ್ಟು ಮತ ದಾನವಾಗಿದೆ. ಕಳೆದ ಬಾರಿ ಅಂದರೆ 2018ರ ಚುನಾವಣೆಯಲ್ಲಿ ಅದುವರೆಗಿನ ಗರಿಷ್ಠ ಶೇ.72.13 ಮತದಾನವಾಗಿತ್ತು. ಈ ಬಾರಿ ಮತದಾನ ಪ್ರಮಾಣದಲ್ಲಿ ಒಂದಷ್ಟು ಏರಿಕೆಯಾಗಿದೆ. ಅಲ್ಲದೆ ಮತದಾನ ಪ್ರಮಾಣವನ್ನು ಹೆಚ್ಚಿಸುವ ಪಣ ತೊಟ್ಟಿದ್ದ ಚುನಾವಣ ಆಯೋಗ ಸಾಕಷ್ಟು ಮುಂಚಿತವಾಗಿಯೇ ಜನರಲ್ಲಿ ಮತ ಜಾಗೃತಿ ಮೂಡಿಸಲು ವಿಶೇಷ ಕಾರ್ಯಕ್ರಮ ಮತ್ತು ಅಭಿಯಾನಗಳನ್ನು ಹಮ್ಮಿ ಕೊಂಡಿತ್ತು. ಅಷ್ಟು ಮಾತ್ರವಲ್ಲದೆ ಅಂಗವಿಕಲರು ಮತ್ತು 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತ ಚಲಾಯಿಸಲು ಅವಕಾಶ ಕಲ್ಪಿಸಿಕೊಟ್ಟಿತ್ತು. ಇದು ಒಂದಷ್ಟು ಕೆಲಸ ಮಾಡಿರುವುದು ಕಾಣಿಸುತ್ತಿದೆ. ಆದರೆ ಬೆಂಗಳೂರಿನ ಮಂದಿ ಮತದಾನಕ್ಕಾಗಿ ಬರದೇ ಇರುವುದು ಅವರ ನಿರಾಸಕ್ತಿ ತೋರಿಸುತ್ತಿದೆ.  ದಕ್ಷಿಣ ಒಳನಾಡು ಮತ್ತು ಮಲೆನಾಡು ಜಿಲ್ಲೆಗಳ ಹಲವೆಡೆ ಸಂಜೆಯ ವೇಳೆ ಭಾರೀ ಮಳೆ ಸುರಿದದ್ದರಿಂದ ಸಂಜೆ ಮತ ಚಲಾಯಿಸುವ ಇರಾದೆಯಲ್ಲಿದ್ದವರಿಗೆ ತಮ್ಮ ಹಕ್ಕು ಚಲಾಯಿಸಲು ತೊಡಕುಂಟಾಯಿತು.

ಇದೇ ವೇಳೆ ರಾಜ್ಯದ ಅಲ್ಲಲ್ಲಿ ವಿದ್ಯುನ್ಮಾನ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡುಬಂದಿತಾದರೂ ಮತಗಟ್ಟೆ ಅಧಿಕಾರಿಗಳು ಕ್ಷಿಪ್ರ ಕ್ರಮ ಕೈಗೊಂಡು ಬದಲಿ ಯಂತ್ರಗಳನ್ನು ಅಳವಡಿಸುವ ಮೂಲಕ ಮತದಾನ ಸುಸೂತ್ರವಾಗಿ ನಡೆಯು ವಂತೆ ನೋಡಿಕೊಂಡರು. ಇನ್ನು ಕೆಲವೆಡೆ ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತಗಟ್ಟೆಯ ಹೊರಗಡೆ ಪರಸ್ಪರ ಘರ್ಷಣೆಯಲ್ಲಿ ತೊಡಗಿದ್ದರಿಂದಾಗಿ ಪೊಲೀ ಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರೆ ಒಂದೆರಡು ಕಡೆ ಅನಿ ವಾರ್ಯವಾಗಿ ಬಲಪ್ರಯೋಗ ನಡೆಸಿ ಘರ್ಷಣೆ ನಿರತರನ್ನು ಸ್ಥಳದಿಂದ ಚದು ರಿಸಿದರು. ಇದೇ ವೇಳೆ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿರುವುದು, ಯಾರದೋ ಹೆಸರಿನಲ್ಲಿ ಇನ್ಯಾರೋ ಮತ ಚಲಾಯಿಸಿದ ಕೆಲವೊಂದು ಪ್ರಕರಣಗಳು ಕೂಡ ವರದಿಯಾಗಿವೆ. ಈ ಘಟನೆಗಳನ್ನು ಹೊರತುಪಡಿಸಿದಂತೆ ರಾಜ್ಯದಲ್ಲಿ ಬಹುತೇಕ ಮತದಾನ ಪ್ರಕ್ರಿಯೆ ಸಾಂಗವಾಗಿ ನೆರವೇರಿರುವುದು ಚುನಾವಣ ಕರ್ತವ್ಯ ನಿರತ ಅಧಿಕಾರಿಗಳು, ಸಿಬಂದಿ, ಚುನಾವಣ ಆಯೋಗ ಮತ್ತು ರಾಜ್ಯದ ಪಾಲಿಗೆ ಸಂತಸದ ವಿಚಾರವೇ.

ಪ್ರಸಕ್ತ ವಿಧಾನಸಭೆ ಚುನಾವಣೆ ಅಕ್ರಮದಲ್ಲಿ ದಾಖಲೆ ನಿರ್ಮಿಸಿರುವುದು ಬಲುದೊಡ್ಡ ಕಪ್ಪುಚುಕ್ಕೆಯಾಗಿದೆ. ಈ ಬಾರಿ ಚುನಾವಣ ಅಕ್ರಮಗಳಿಗೆ ಸಂಬಂಧಿ ಸಿದಂತೆ ಜಪ್ತಿ ಮಾಡಲಾದ ನಗದು ಮತ್ತು ಇತರ ವಸ್ತುಗಳ ಮೌಲ್ಯ ಬರೋಬ್ಬರಿ 379 ಕೋ. ರೂ. ಗಳಾಗಿದೆ. ಚುನಾವಣ ಆಯೋಗ ಮತ್ತು ಸಂಬಂಧಿತ ಇಲಾಖೆ ಗಳು ಈ ಬಾರಿ ಅಕ್ರಮಗಳಿಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ನಿಗಾ ಇರಿಸಿದ್ದೇ ಅಲ್ಲದೆ ಇದಕ್ಕಾಗಿ ವಿಶೇಷ ದಳಗಳನ್ನು ನಿಯೋಜಿಸಿದ್ದರಿಂದಾಗಿ ಬಲುದೊಡ್ಡ ಪ್ರಮಾಣದ ಜಪ್ತಿ ನಡೆದಿದೆ.  ಸುಶಿಕ್ಷಿತ ಮತದಾರರನ್ನು ಒಳಗೊಂಡ ರಾಜ್ಯದಲ್ಲಿ ಪಕ್ಷಗಳು ಮತ್ತು ಇತರ ಅಭ್ಯರ್ಥಿಗಳು ಮತದಾರರಿಗೆ ಆಮಿಷ ವೊಡ್ಡಲು ಭಾರೀ ಪ್ರಮಾಣದ ಹಣವನ್ನು ವ್ಯಯಿಸಲು ಯತ್ನ ನಡೆಸಿರುವುದು ಕಳವಳಕಾರಿ ಬೆಳವಣಿಗೆ. ಈ ಹಿಂದೆ ಚುನಾವಣ ಅಕ್ರಮಗಳಲ್ಲಿ ಉತ್ತರ ಭಾರತದ ರಾಜ್ಯಗಳು ಮುಂಚೂಣಿಯಲ್ಲಿದ್ದರೆ ಇದೀಗ ಇದರ ಕರಿನೆರಳು ದೇಶದ ಇತರ ರಾಜ್ಯಗಳ ಮೇಲೆ ಬೀಳುತ್ತಿರುವುದರ ಬಗೆಗೆ ಕೇವಲ ಚುನಾವಣ ಆಯೋಗ ಮಾತ್ರವಲ್ಲದೆ ರಾಜಕೀಯ ಪಕ್ಷಗಳೂ ಗಂಭೀರವಾಗಿ ಚಿಂತನೆ ನಡೆಸುವುದು ಅತ್ಯವಶ್ಯ. ಚುನಾವಣೆಗಳಲ್ಲಿ ಕಾಂಚಾಣದ ರೌದ್ರ ನರ್ತನಕ್ಕೆ ಕಡಿವಾಣ ಹಾಕಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next