Advertisement

ಮನವ ಕಾಡುವ ಹೃದ್ಯ ಟಿ.ಎಂ. ಕೃಷ್ಣ ಸ್ವರಾಂಜಲಿ

06:34 PM Jan 31, 2020 | mahesh |

ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ತನ್ನ ಗಾಯನದಿಂದಾಗಿ ಹಲವು ಕಾಲದಿಂದ ಮುಂಚೂಣಿಯಲ್ಲಿ ಗುರುತಿಸಲ್ಪಡುವ ಟಿ.ಎಂ. ಕೃಷ್ಣ ಅವರ ಗಾಯನ ಪರ್ಯಾಯದ ಮುನ್ನಾದಿನ ಉಡುಪಿಯ ಪುರಭವನದಲ್ಲಿ ಜರಗಿತು. ಸುಮಾರು ಎರಡೂವರೆ ಗಂಟೆಗಳ ಕಾಲ ಟಿ.ಎಂ. ಕೃಷ್ಣರು ಒಂದು ವಿಶಿಷ್ಟ ಆನಂದಾನುಭೂತಿಯನ್ನು ಉಣ ಬಡಿಸಿದರು. ಶುದ್ಧ ಶಾಸ್ತ್ರೀಯ ಕರ್ನಾ ಟಕ ಶೈಲಿಯನ್ನೇ ಆತುಕೊಂಡಿ ದ್ದರೂ, ಪರಂಪರೆಯ ಕಛೇರಿಯ ಪದ್ಧತಿಗಳನ್ನು, ವಿನ್ಯಾಸಗಳನ್ನು ಅವರದ್ದೇ ತರ್ಕಗಳಿಂದ ಖಂಡಿಸುತ್ತ ಆ ಸಂಪ್ರದಾಯವನ್ನು ಮುರಿಯುವುದನ್ನು ನಾವು ಅಂದು ಕಂಡೆವು. ಅವರು ತುಳಿಯುವ ಭಿನ್ನ ದಾರಿ ಒಂದು ದೃಷ್ಟಿಯಿಂದ ನಮ್ಮಲ್ಲಿ ಅಸಂತೋಷ ಮೂಡಿಸಬಹುದು. ಆದರೆ ಒಂದು ನಿರ್ಮಲ ಮನಸ್ಸಿನಿಂದ ಯಾವ ಪೂರ್ವಾಗ್ರಹ ಪೀಡಿತರೂ ಆಗದೆ, ಕೇವಲ ಸಂಗೀತವನ್ನು ವಸ್ತುನಿಷ್ಠವಾಗಿ ಸಹೃದಯತೆಯಿಂದ ಆಲಿಸುವ ಉದ್ದೇಶವಿದ್ದಾಗ ಇವೆಲ್ಲ ಗೌಣವಾಗಿ ಕಾಣುತ್ತದೆ. ಗಾಯಕ, ಅವನ ಗಾಯನ ಮತ್ತು ಕೇಳುಗ ಈ ಮೂವರ ನಡುವಿನ ಸಂವಹನ ತಂತುಗಳು ಒಂದಕ್ಕೊಂದು ಬೆಸೆಯಲ್ಪಟ್ಟಾಗ ಉಂಟಾಗುವ ಸಂತೃಪ್ತಿ, ನೆಮ್ಮದಿಯನ್ನು ಆತ್ಮಾನಂದ ಅಥವಾ ಧ್ಯಾನಸ್ಥ ಸ್ಥಿತಿ ಎಂದು ಕರೆಯಬಹುದೇನೋ.

Advertisement

ಟಿ.ಎಂ.ಕೆ.ಯವರು ಕಛೇರಿಯ ಪ್ರಾರಂಭವನ್ನೇ ಮುಖಾರಿ ರಾಗದ ವಿಸ್ತƒತ ಆಲಾಪನೆಯೊಂದಿಗೆ, ಜಯದೇವನ ಗೀತಗೋವಿಂದದ ಪ್ರಸಿದ್ಧ ಅಷ್ಟಪದಿ ಪ್ರಿಯೇ ಚಾರುಶೀಲೇಯನ್ನು ಬಹು ಮೆಲುವಾಗಿ, ಸಾಹಿತ್ಯವನ್ನು ನವಿರಾಗಿ ಎಳೆಎಳೆಯಾಗಿ ಬಿಡಿಸುತ್ತ, ಸಂಸ್ಕೃತ ಭಾಷೆ ಅರಿಯವದರಿಗೂ, ಸಾಹಿತ್ಯ ಅರ್ಥವಾಗುವಂತೆ, ಅತ್ಯಂತ ನಿಧಾನಗತಿಯಲ್ಲಿ ಪಕ್ಕವಾದ್ಯದವರನ್ನು ತನ್ನೊಳಗೆ ಸೇರಿಸುತ್ತ ಹಾಡಿದ ವೈಖರಿ ಮನನೀಯ. ಮುಂದೆ ಮೋಹನರಾಗದ ಆಲಾಪನೆ, ಉತ್ತಮ ತಾನಂ ಬಳಿಕ ನಿನ್ನುಕೋರಿವರ್ಣ ಸನ್ನುತಾಂಗ ಚರಣಕ್ಕೆ ಕಲ್ಪನಾ ಸ್ವರವಿಸ್ತಾರ ಹಾಗೂ ಮೃದಂಗದ ಮೊಹರ ಮುಕ್ತಾಯ-ಇವೆಲ್ಲವೂ ಒಂದು ಮಹತ್ತಾದ ಕೃತಿಯ ಗಾಯನ ಶೈಲಿಯನ್ನು ನೆನಪಿಸುವುದರೊಂದಿಗೆ ಏಕೆ ಈ ಎಡವಟ್ಟು ಎಂಬ ಭಾವವನ್ನು ಪಾರಂಪರಿಕ ಶ್ರೋತೃಗಳಲ್ಲಿ ಮೂಡಿಸಿದ್ದು ಸತ್ಯ. ರೀತಿ ಗೌಳ ರಾಗದ ವಿವಿಧ ಮಜಲುಗಳನ್ನು ಟಿ.ಎಂ.ಕೆ. ಚಿತ್ರಿಸಿ ಅಲಂಕರಿಸಿದ ರೀತಿಯಲ್ಲಿ ಇನ್ನೇನೂ ಈ ರಾಗದ ಶೃಂಗಾರಕ್ಕೆ ಕೊರತೆ ಇಲ್ಲ ಅನ್ನಿಸಿತು. ಪ್ರಸಿದ್ಧ ಕೃತಿ ಜನನಿ ನಿನ್ನು ವಿನಾದ ಪ್ರಾರಂಭದ ನಿಧಾನಗತಿ, ಮೃದಂಗ ಮತ್ತು ಘಟಂನ ನುಡಿಸಾಣಿಕೆ ಇಲ್ಲದೆ ಕೃತಿಯ ಮೊದಲ ಭಾಗದ ಸಾಹಿತ್ಯವನ್ನು ಅರ್ಥಾನುಸಂಧಾನದೊಂದಿಗೆ ಹಾಡಿದ ಪರಿ ಒಬ್ಬ ಭಕ್ತ ದೇವಿಗೆ ನಿನ್ನನ್ನು ಹೊರತುಪಡಿಸಿದರೆ ನನಗೆ ಯಾರೂ ಇಲ್ಲ ಎಂಬ ಆರ್ತಭಾವ ಹೃದಯದಲ್ಲಿ ಮೂಡಿಸಿತು. ಕೃಷ್ಣನನ್ನು ಯಶೋದೆ ವಾತ್ಸಲ್ಯದಿಂದ ಆಡಿಸುವ, ಮಧ್ಯೆಮಧ್ಯೆ ಮುನಿಸಿಕೊಳ್ಳುವ, ಜೊತೆಗೆ ಸಂಭ್ರಮಿಸುವ ವಿವಿಧ ಭಾವಗಳನ್ನು ಪೋಣಿಸಿ ಹಾಡಿದ ಕಾಪಿರಾಗದ ಜಗದೋದ್ಧಾರನ ರಾಮರಸವನ್ನು ನಾವು ಚಪ್ಪರಿಸುವಂತೆ ಮಾಡಿದ ಪಿಬರೆ ರಾಮರಸಂ ಮತ್ತು ಕೊನೆಯ ತುಳಸಿದಾಸರ ಶ್ರೀ ರಾಮಚಂದ್ರಂ ಕೃತಿ ಭಾವಸ್ನಾನವನ್ನೇ ಮಾಡಿಸಿದುವು.

ಅಕ್ಕರೈ ಶುಭಲಕ್ಷ್ಮೀಯವರ ನೆರಳಿನಂತೆ ನಿಚ್ಚಳವಾಗಿ ಸಾಗುವ ಮಾಧುರ್ಯದ ವಯೋಲಿನ್‌ ವಾದನ ಅತ್ಯುತ್ತಮವಾಗಿತ್ತು. ರಂಜನಿಯವರು ಟಿ.ಎಂ.ಕೆ.ಯವರ ಭಿನ್ನಶೈಲಿಯ ಹಾಡುಗಾರಿಕೆಗೆ ನುಡಿಸಾಣಿಕೆಯಲ್ಲಿ ಇನ್ನಷ್ಟು ಅನುಭವಿಗಳಾಗಬೇಕೆಂದು ಅಲ್ಲಲ್ಲಿ ಕಂಡರೂ, ತನಿ ಆವರ್ತನ ಮತ್ತು ಮಧ್ಯದ ಮೊಹರ ಮುಕ್ತಾಯದಲ್ಲಿ ಶ್ರೋತೃಗಳನ್ನು ರಂಜಿಸಿದರು. ಘಟಂನ ತ್ರಿಪುಣಿತರ ರಾಧಾಕೃಷ್ಣರ ನುಡಿತಗಳು ತೃಪ್ತಿಕರವಾಗಿದ್ದವು. ವಿ| ಉಮಾ ಉದಯಶಂಕರ್‌ ಮತ್ತು ಕು| ಆತ್ರೇಯಿ ತಂಬೂರ ಸಹಕಾರ ನೀಡಿದರು.

ವಿ| ಪ್ರತಿಭಾ ಎಂ.ಎಲ್‌. ಸಾಮಗ

Advertisement

Udayavani is now on Telegram. Click here to join our channel and stay updated with the latest news.

Next