Advertisement

ಮೋದಿ ಭದ್ರತೆಗೆ ಮುಧೋಳ ಶ್ವಾನ: ಸೇನೆ-ಎನ್‌ಎಸ್‌ಜಿ ಪಡೆಗೂ ಆಯ್ಕೆಯಾಗಿದ್ದ ವಿಶಿಷ್ಟ ತಳಿ

08:50 PM Aug 17, 2022 | Team Udayavani |

ಬಾಗಲಕೋಟೆ: ತನ್ನ ಅತ್ಯುತ್ತಮ ಮೈಮಾಟ, ಚಾಣಾಕ್ಷತನ, ವೇಗವಾಗಿ ಓಡುವ ಛಾತಿಯಂಥ ಹಲವು ವಿಶೇಷತೆ ಹೊಂದಿರುವ ಮುಧೋಳ ಶ್ವಾನ ಇದೀಗ ಮತ್ತೊಂದು ಗರಿ ತನ್ನ ಮುಡಿಗೇರಿಸಿಕೊಂಡಿದೆ. ಭಾರತೀಯ ಸೇನೆಯ ಗಡಿಯಲ್ಲಿ ಉಗ್ರರ ನುಸುಳುವಿಕೆ ಪತ್ತೆಗಾಗಿ ಆಯ್ಕೆಯಾಗಿದ್ದ ವಿಶಿಷ್ಟ ತಳಿಯ ಮುಧೋಳ ಶ್ವಾನ ಇದೀಗ ದೇಶದ ಪ್ರಧಾನಿ ನರೇಂದ್ರ ಮೋದಿ ಭದ್ರತೆಗೂ ಆಯ್ಕೆಯಾಗಿದೆ.

Advertisement

ಮುಧೋಳ ತಾಲೂಕಿನ ತಿಮ್ಮಾಪುರದ ಮುಧೋಳ ಶ್ವಾನ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ|ಸುಶಾಂತ ಹಂಡಗೆ ಈ ವಿಷಯ ದೃಢಪಡಿಸಿದ್ದು, ಏ.25ರಂದು ಮುಧೋಳ ತಳಿಯ ಎರಡು ತಿಂಗಳ ವಯಸ್ಸಿನ ಎರಡು ಶ್ವಾನ ಮರಿಗಳನ್ನು ಕೇಂದ್ರದ ಎನ್‌ಎಸ್‌ಜಿ ಪಡೆಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿಶೇಷತೆ ಏನು?:
ಭಾರತದ ದೇಶೀಯ ತಳಿ ಹಾಗೂ ವಿದೇಶಿ ತಳಿಯ ಶ್ವಾನಗಳಿಗೆ ಹೋಲಿಸಿದರೆ ಮುಧೋಳ ಶ್ವಾನ ಹಲವು ವಿಶೇಷತೆ ಹೊಂದಿದೆ. ಅತ್ಯಂತ ತೆಳುವಾದ ಮೈಕಟ್ಟು (ಬೇರೆ ಶ್ವಾನಕ್ಕೆ ಹೋಲಿಸಿದರೆ ತೂಕದಲ್ಲಿ ಕಡಿಮೆ), ಗಂಟೆಗೆ 50 ಕಿಮೀ ಓಡಬಲ್ಲ, ಮೂರು ಕಿಮೀ ದೂರ (ಬೇರೆ ನಾಯಿಗಳು 1 ಕಿಮೀ ಮಾತ್ರ ಸಾಮರ್ಥ್ಯ ಹೊಂದಿವೆ)ದಿಂದಲೇ ವಾಸನೆ ಗುರುತಿಸಬಲ್ಲ ಸಾಮರ್ಥ್ಯ ಹೊಂದಿದೆ.

ಬೇರೆ ಶ್ವಾನಗಳು 10ರಿಂದ 12 ವರ್ಷ ಆಯುಷ್ಯ ಹೊಂದಿದ್ದರೆ, ಮುಧೋಳ ಶ್ವಾನ 12ರಿಂದ 15 ವರ್ಷ ಆಯುಷ್ಯ ಹೊಂದಿದೆ. ಅತ್ಯಂತ ವಿರಳ ಹಾಗೂ ವಿಶೇಷವಾದ ಈ ಮೂಧೋಳ ಶ್ವಾನವನ್ನು ಬೇಟೆಯಾಡಲು ಬಳಸಲಾಗುತ್ತಿತ್ತು. ಇಂತಹ ವಿಶಿಷ್ಟ ಶ್ವಾನ ಸಂತತಿ ಉಳಿಸಿ-ಬೆಳೆಸುವ ಉದ್ದೇಶದಿಂದಲೇ 2007-08ರಲ್ಲಿ ಮುಧೋಳದಲ್ಲಿ ಶ್ವಾನ ಸಂಶೋಧನಾ ಕೇಂದ್ರ ಸ್ಥಾಪಿಸಲಾಗಿದೆ.

ಪ್ರಧಾನಿ ಮೋದಿ 2020ರಲ್ಲಿ ತಮ್ಮ ಮನ್‌ ಕಿ ಬಾತ್‌ ಭಾಷಣದಲ್ಲಿ ಈ ಮುಧೋಳ ಶ್ವಾನಗಳ ಬಗ್ಗೆ ಪ್ರಸ್ತಾಪಿಸಿದ್ದರು. ಈ ಹಿಂದೆ ಎನ್‌ಎಸ್‌ಜಿ ಪಡೆ, ಭಾರತೀಯ ಸೇನೆಗೆ ಆಯ್ಕೆಯಾಗಿದ್ದ ಮುಧೋಳ ಶ್ವಾನ ಇದೀಗ ಪ್ರಧಾನಿ ಮೋದಿ ಭದ್ರತೆಗೂ ಆಯ್ಕೆಯಾಗಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದು ಮುಧೋಳ ಶ್ವಾನ ಸಂಶೋಧನಾ ಕೇಂದ್ರ ಸ್ಥಾಪನೆಗೆ ವಿಶೇಷ ಕಾಳಜಿ ವಹಿಸಿರುವ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next