Advertisement

ಅಧಿವೇಶನದಲ್ಲಿ ನಾಡಿನ ಸಮಸ್ಯೆಗಳ ಚರ್ಚೆಯಾಗಲಿ

10:14 PM Feb 09, 2023 | Team Udayavani |

ರಾಜ್ಯದ 15ನೇ ವಿಧಾನಸಭೆಯ ಕೊನೆಯ ಅಧಿವೇಶನ ಶುಕ್ರವಾರ ಆರಂಭಗೊಳ್ಳಲಿದೆ. ರಾಜ್ಯಪಾಲರಾದ ಥಾವರ್‌ಚಂದ್‌ ಗೆಹ್ಲೋತ್‌ ಅವರು ವಿಧಾನ ಮಂಡಲದ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡುವ ಮೂಲಕ ಬಜೆಟ್‌ ಅಧಿವೇಶನಕ್ಕೆ ಚಾಲನೆ ನೀಡಲಿದ್ದಾರೆ. ತಮ್ಮ ಭಾಷಣದಲ್ಲಿ ರಾಜ್ಯ ಸರಕಾರದ ಸಾಧನೆಗಳ ಬಗ್ಗೆ ರಾಜ್ಯಪಾಲರು ಪಟ್ಟಿ ಮಾಡಲಿದ್ದಾರೆ. ಹಾಗೆಯೇ ರಾಜ್ಯ ವಿಧಾನಸಭೆ ಚುನಾವಣೆ ಸನಿಹದಲ್ಲಿಯೇ ಇರುವುದರಿಂದ ಈ ಬಾರಿಯ ಅಧಿವೇಶನ ಆಡಳಿತ ಮತ್ತು ವಿಪಕ್ಷಗಳ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು ಅಧಿವೇಶನದ ಫ‌ಲಶ್ರುತಿಯ ಬಗೆಗೆ ರಾಜ್ಯದ ಜನತೆ ಹೆಚ್ಚಿನದೇನನ್ನೂ ನಿರೀಕ್ಷಿಸುವುದು ಕಷ್ಟಸಾಧ್ಯ. ಇತ್ತಂಡ ಗಳಿಂದಲೂ ಪರಸ್ಪರ ಆರೋಪ-ಪ್ರತ್ಯಾರೋಪಗಳ ವಿನಿಮಯ, ಆಡಳಿತ ಪಕ್ಷದ ಶಾಸಕರಿಂದ ಸರಕಾರದ ಸಮರ್ಥನೆ, ವಿಪಕ್ಷಗಳಿಂದ ಸರಕಾರದ ವೈಫ‌ಲ್ಯ, ಹಗರಣಗಳ ಬಗೆಗೆ ವಾಗ್ಧಾಳಿಯ ಹೊರತಾಗಿ ಸುಗಮ ಮತ್ತು ಸುಲಲಿತ ಕಲಾಪ ನಡೆದೀತು ಎಂದು ಊಹಿಸುವುದು ಭ್ರಮೆಯಾದೀತು.

Advertisement

ಹಾಲಿ ಸರಕಾರದ ಅವಧಿ ಮೇ ತಿಂಗಳಲ್ಲಿ ಕೊನೆಗೊಳ್ಳುವುದರಿಂದ ಹಾಲಿ ಸರಕಾರ ಮಂಡಿಸುವ ಬಜೆಟ್‌ ಹೆಚ್ಚು ಕಡಿಮೆ ಲೇಖಾನುದಾನದಂತೆ ಇರಲಿದೆ. ಆದರೂ  ಈ ಹಿಂದಿನ ಎಲ್ಲ ಸರಕಾರಗಳಂತೆ ಹಾಲಿ ಬಿಜೆಪಿ ಸರಕಾರವೂ ಪೂರ್ಣ ಪ್ರಮಾಣದ ಬಜೆಟ್‌ನ್ನು ಮಂಡಿಸುವ ಮೂಲಕ ರಾಜ್ಯದ ಜನರನ್ನು ಓಲೈಸುವ ಸಾಧ್ಯತೆ  ನಿಚ್ಚಳವಾಗಿದೆ. ಇದೇ ವೇಳೆ ವಿಪಕ್ಷಗಳು ಸರಕಾರದ ವಿರುದ್ಧ ಮುಗಿ ಬೀಳಲು ಸಜ್ಜಾಗಿದ್ದು ಅಧಿವೇಶನದ ಅವಧಿಯಲ್ಲಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಶತಪ್ರಯತ್ನ ನಡೆಸಲಿರುವುದಂತೂ ಖಚಿತ.

ಫೆ.17ರಂದು ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ 2023- 24ನೇ ಸಾಲಿನ ಬಜೆಟ್‌ನ್ನು ಮಂಡಿಸಲಿದ್ದು ಇದಕ್ಕಾಗಿ ಈಗಾಗಲೇ ಸಿದ್ಧತೆಗಳನ್ನು ಮಾಡಿ ಕೊಂಡಿದ್ದಾರೆ. ಚುನಾವಣ ವರ್ಷವಾದ್ದರಿಂದ ಈ ಬಾರಿಯ ಬಜೆಟ್‌ ಹಲವಾರು ಜನಪ್ರಿಯ ಘೋಷಣೆಗಳನ್ನು ಹೊಂದಿರುವ ಜತೆಯಲ್ಲಿ ಜನಕಲ್ಯಾಣ ಮತ್ತು ರಾಜ್ಯದ ಅಭಿವೃದ್ಧಿಯ ಬಗೆಗಿನ ತನ್ನ ದೃಷ್ಟಿಕೋನ ಮತ್ತು ನಿಲುವನ್ನು ಈ ಬಜೆಟ್‌ ಮೂಲಕ ರಾಜ್ಯದ ಜನರ ಮುಂದೆ ತೆರೆದಿಡುವ ಎಲ್ಲ ಸಾಧ್ಯತೆಗಳಿವೆ. ಹಾಲಿ ಸರಕಾರ ಮಂಡಿಸಲಿರುವ ಬಜೆಟ್‌ ಸರಕಾರದ ಎನ್ನುವುದಕ್ಕಿಂತಲೂ ಮುಖ್ಯವಾಗಿ ಬಿಜೆಪಿಯ ಮುನ್ನೋಟವಾಗಿರಲಿದೆ. ಏಕೆಂದರೆ ಚುನಾವಣೆ ನಡೆದು ಹೊಸ ಸರಕಾರ ರಚನೆಯಾದ ಬಳಿಕ ಮತ್ತೆ ಪೂರ್ಣ ಪ್ರಮಾಣದ ಬಜೆಟ್‌ ಮಂಡನೆ ಯಾಗಲಿದ್ದು ಅದುವೇ ಅಧಿಕೃತ ಬಜೆಟ್‌ ಆಗಿರಲಿದೆ. ಒಂದು ವೇಳೆ ಬಿಜೆಪಿಯೇ ಮರಳಿ ಅಧಿಕಾರಕ್ಕೆ ಬಂದರೂ ನೂತನ ಸರಕಾರ ಹೊಸದಾಗಿ ಬಜೆಟ್‌ ಮಂಡಿಸ ಲಿರುವುದರಿಂದ ಈ ಬಜೆಟ್‌ಗೆ ಅಷ್ಟೇನೂ ಮಹತ್ವವಿಲ್ಲ. ಆದರೆ ಚುನಾವಣ ಪೂರ್ವದಲ್ಲಿ ಹಾಲಿ ಸರಕಾರ ಮಂಡಿಸುವ ಬಜೆಟ್‌ ಬಗೆಗೆ ಸಹಜವಾಗಿಯೇ ಜನರಲ್ಲಿ ಒಂದಿಷ್ಟು ಕುತೂಹಲ ಮತ್ತು ನಿರೀಕ್ಷೆಗಳಿದ್ದೇ ಇರುತ್ತವೆ.

ಇತ್ತ ವಿಪಕ್ಷಗಳು ಬಿಜೆಪಿ ಸರಕಾರವನ್ನು ಹಣಿಯಲು ಈ ಅಧಿವೇಶನವನ್ನು ಬಳಸಿಕೊಳ್ಳಲು ಆತುರದಿಂದ ಕಾಯುತ್ತಿವೆ. ಚಳಿಗಾಲದ ಅಧಿವೇಶನದ ಬಳಿಕ ಹೊರಬಿದ್ದ ಸ್ಯಾಂಟ್ರೋ ರವಿ ಪ್ರಕರಣ ಸಹಿತ ರಾಜ್ಯ ಸರಕಾರದ ವಿರುದ್ಧದ ಹಲ ವಾರು ಭ್ರಷ್ಟಾಚಾರ ಆರೋಪಗಳು, ನೀರಾವರಿ ಯೋಜನೆಗಳ ಅನುಷ್ಠಾನ ಕುರಿತಂತೆ ಸರಕಾರ ನೀಡುತ್ತಿರುವ ವಿರೋಧಾಭಾಸದ ಹೇಳಿಕೆಗಳು, ಕಾನೂನು ಸುವ್ಯವಸ್ಥೆ, ಕೇಂದ್ರ ಬಜೆಟ್‌ನಲ್ಲಿ ರಾಜ್ಯದ ನಿರ್ಲಕ್ಷ್ಯ ಮತ್ತಿತರ ವಿಚಾರಗಳನ್ನು ಸದನ ದಲ್ಲಿ ಪ್ರಸ್ತಾವಿಸುವ ಮೂಲಕ ಸರಕಾರದ ವಿರುದ್ಧ ಮುಗಿಬೀಳಲು ಸಜ್ಜಾಗಿವೆ.   ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಹುತೇಕ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವುದರಿಂದ ಈ ಬಾರಿಯ ಅಧಿವೇಶನದಲ್ಲಿ ಪೂರ್ಣಪ್ರಮಾಣದಲ್ಲಿ ಪಾಲ್ಗೊಳ್ಳುವ ಬಗೆಗೆ ಅನುಮಾನವಂತೂ ಇದ್ದೇ ಇದೆ.

ಇದು ವಿಧಾನಸಭೆಯ ಕೊನೆಯ ಅಧಿವೇಶನ ಆಗಿರುವುದರಿಂದ ಉಭಯ ಸದನಗಳಲ್ಲಿ ಜನರ ಸಮಸ್ಯೆ, ಬೇಡಿಕೆಗಳ ಬಗೆಗೆ ಹೆಚ್ಚಿನ ಚರ್ಚೆ ನಡೆಯಲಿ. ಹಾಗೆಯೇ, ಈ ಅಧಿವೇಶನ, ಆಡಳಿತ ಮತ್ತು ವಿಪಕ್ಷಗಳ ಮೇಲಾಟಕ್ಕೆ ವೇದಿಕೆಯಾಗದೇ ಜನಪರ ಚರ್ಚೆ ನಡೆಯಲಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next