Advertisement

ಮಧ್ಯರಾತ್ರಿಯಿಂದ ಮುಂಜಾನೆವರೆಗೆ

05:00 AM May 18, 2018 | Team Udayavani |

ಹೊಸದಿಲ್ಲಿ: ಸದ್ದು…ಸುಪ್ರೀಂ ಕೋರ್ಟ್‌ನಲ್ಲಿ ಮಧ್ಯ ರಾತ್ರಿಯೂ ವಿಚಾರಣೆ ನಡೆದಿದೆ..!ಮೂರು ವರ್ಷಗಳ ಹಿಂದೆ ಉಗ್ರ ಯಾಕುಬ್‌ ಮೆನನ್‌ ಗಲ್ಲು ಶಿಕ್ಷೆ ವಿಚಾರವಾಗಿ ತಡರಾತ್ರಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ಬುಧವಾರ ರಾತ್ರಿ ಕರ್ನಾಟಕ ರಾಜಕೀಯ ಹೈಡ್ರಾಮಾಕ್ಕಾಗಿ ನಿದ್ದೆಗೆಟ್ಟು ವಾದ-ಪ್ರತಿವಾದ ಆಲಿಸಿತು. ಮಧ್ಯರಾತ್ರಿ ಆರಂಭವಾದ ವಿಚಾರಣೆ ಮುಂಜಾವಿನವರೆಗೂ ನಡೆದು, ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೆ ಸಮ್ಮತಿ ಸೂಚಿಸಿತು. ಈ ಎಲ್ಲ ವಿಚಾರಗಳಿಗಿಂತ ಹೆಚ್ಚಾಗಿ ಸುಪ್ರೀಂನ ಮಧ್ಯರಾತ್ರಿ ವಿಚಾರಣೆಯೇ ಇಂಟರೆಸ್ಟಿಂಗ್‌. ವಾದ-ಪ್ರತಿವಾದವಂತೂ ಇನ್ನೂ ಆಸಕ್ತಿಕರ…

Advertisement

ಮುಂಜಾನೆ 2.10 ಗಂಟೆಗೆ ವಿಚಾರಣೆ ಆರಂಭ
ಅಭಿಷೇಕ್‌ ಮನು ಸಿಂಘ್ವಿ: ಸರಕಾರ ರಚನೆಗೆ ರಾಜ್ಯಪಾಲರು ನೀಡಿರುವ ಆಹ್ವಾನ ಸಂವಿಧಾನಕ್ಕೆ ವಿರುದ್ಧವಾದದ್ದಾಗಿದೆ. ಬಹುಮತವೇ ಇಲ್ಲದ ಪಕ್ಷಕ್ಕೆ ಅವಕಾಶ ಕೊಟ್ಟು, 116 ಸಂಖ್ಯೆಯ ಬಹುಮತವುಳ್ಳವರಿಗೆ ಆಹ್ವಾನ ನಿರಾಕರಿಸಲಾಗಿದೆ. ಇದು ಸರ್ಕಾರಿಯಾ ಸಮಿತಿ ವರದಿಯ ಶಿಫಾರಸುಗಳಿಗೆ ವಿರುದ್ಧವಾದದ್ದು. ಕರ್ನಾಟಕದಲ್ಲಿ 104 ಸಂಖ್ಯಾಬಲ ಇರುವ ಯಡಿಯೂರಪ್ಪನವರನ್ನು ಆಹ್ವಾನಿಸಲಾಗಿದೆ. ವಿಶ್ವಾಸಮತ ಸಾಬೀತು ಮಾಡಲು ಅವರು ಕೇಳಿದ್ದು 7 ದಿನ. ಆದರೆ 15 ದಿನಗಳ ಅವಕಾಶ ನೀಡಲಾಗಿದೆ. ಇದು ಕುದುರೆ ವ್ಯಾಪಾರಕ್ಕೆ ಅವಕಾಶ ನೀಡುತ್ತದೆ. ಇದು ಕುದುರೆ ವ್ಯಾಪಾರ ಅಲ್ಲ ಮಾನವರ ವ್ಯಾಪಾರ. ರಾಜ್ಯಪಾಲರು ಕೈಗೊಳ್ಳುವ ನಿರ್ಧಾರಗಳೂ ಕೂಡ ನ್ಯಾಯಾಲಯದ ಪರಿಶೀಲನೆಗೆ ಒಳಗಾಗುತ್ತವೆ. ಬೊಮ್ಮಾಯಿ ಮತ್ತು ರಾಮಪ್ರಸಾದ್‌ ಪ್ರಕರಣಗಳಲ್ಲಿ ಈ ಅಂಶ ಸಾಬೀತಾಗಿದೆ.

ನ್ಯಾ| ಸಿಕ್ರಿ: ನೀವು ಸಲ್ಲಿಸಿರುವ ಅರ್ಜಿಯಲ್ಲಿ ಯಡಿಯೂರಪ್ಪನವರು ರಾಜ್ಯಪಾಲರಿಗೆ ಸಲ್ಲಿಸಿದ 2 ಪತ್ರಗಳ ಪ್ರತಿ ಇಲ್ಲ. ಏಕೆಂದರೆ ರಾಜ್ಯಪಾಲರು, ಯಡಿಯೂರಪ್ಪ ಅವರ ಪರ ವಾದಿಸುವವರೇ ಇಲ್ಲಿ ಇಲ್ಲ.

ಸಿಂಘ್ವಿ: ಹಾಗಿದ್ದರೆ ಪ್ರಮಾಣ ವಚನ ಸ್ವೀಕಾರವನ್ನು 2 ದಿನ ಅಥವಾ ಗುರುವಾರ ಸಂಜೆ 4.30ರ ವರೆಗೆ ಮುಂದೂಡಿ.

ಅಟಾರ್ನಿ ಜನರಲ್‌ ಮತ್ತು ರೋಹ್ಟಾಗಿ: ಅದು ಸಾಧ್ಯವೇ ಇಲ್ಲ.

Advertisement

ಅಟಾರ್ನಿ ಜನರಲ್‌: ರಾಜ್ಯಪಾಲರು ಸರಕಾರ ರಚನೆಯ ಆಹ್ವಾನ ನೀಡಿದ್ದನ್ನು ಪ್ರಶ್ನಿಸಿದರೆ ಸಾಂವಿಧಾನಿಕ ಸಮಸ್ಯೆಯಾಗುತ್ತದೆ. ಹೀಗಾಗಿ ಪ್ರಮಾಣ ವಚನ ಪ್ರಕ್ರಿಯೆಗೆ ತಡೆ ಮಾಡುವುದು ಬೇಡ.

ರೋಹ್ಟಾಗಿ: ತಡರಾತ್ರಿಯೇ ಈ ಪ್ರಕರಣದ ವಿಚಾರಣೆ ಏಕೆ ಕೈಗೆತ್ತಿಕೊಳ್ಳಬೇಕಿತ್ತು? ಗುರುವಾರ ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದ್ದರೆ ಸ್ವರ್ಗವೇನೂ ಬೀಳುತ್ತಿರಲಿಲ್ಲ. ಮತ್ತೆ ಇಲ್ಲಿ ಯಾರದ್ದೂ ಸಾವಿನ ಪ್ರಶ್ನೆಯೂ ಇರಲಿಲ್ಲ.

ನ್ಯಾ| ಬೋಬ್ದೆ (ತಿಳಿ ಹಾಸ್ಯ): ಬ್ರಾಹ್ಮೀ ಮುಹೂರ್ತ ಎನ್ನುವುದು ಎಲ್ಲ ಕೆಲಸಗಳಿಗೆ ಶ್ರೇಷ್ಠವಾದದ್ದು. ಹಾಗಾಗಿ ಈಗ ವಿಚಾರಣೆ ನಡೆಯುತ್ತಿದೆ.

ನ್ಯಾ| ಸಿಕ್ರಿ: ಬಿಜೆಪಿ ಪರವಾಗಿರುವ ಶಾಸಕರ ವಿವರಗಳನ್ನು ಕೋರ್ಟ್‌ಗೆ ಸಲ್ಲಿಕೆ ಮಾಡಿ.

ಅಟಾರ್ನಿ ಜನರಲ್‌: ವಿಶ್ವಾಸಮತ ಸಾಬೀತು ಮಾಡುವುದು ಎಂಬ ವಿಚಾರ ಸದನಲ್ಲಿಯೇ ನಡೆಯಲಿದೆ. ಅಲ್ಲಿ ಶಾಸಕರು ತಮಗೆ ಇಷ್ಟ ಬಂದವರಿಗೆ ಮತ ಹಾಕುತ್ತಾರೆ.

ನ್ಯಾ| ಸಿಕ್ರಿ: ಹಾಗಿದ್ದರೆ ಬಹುಮತ ಸಾಬೀತಿಗೆ 15 ದಿನಗಳ ಅವಕಾಶ ಏಕೆ ನೀಡಲಾಗಿದೆ? ಇದು ಕುದುರೆ ವ್ಯಾಪಾರಕ್ಕೆ ಪ್ರೋತ್ಸಾಹವಲ್ಲವೇ?

ರೋಹ್ಟಾಗಿ ಮತ್ತು ಅಟಾರ್ನಿ ಜನರಲ್‌: ಅದನ್ನು 7 ದಿನಕ್ಕೆ ಇಳಿಸಬಹುದು.

ನ್ಯಾ| ಸಿಕ್ರಿ: ಹಾಗಿದ್ದರೆ ಈಗ ಕೋರ್ಟ್‌ ಏನು ಮಾಡಬಹುದು? ಸದ್ಯಕ್ಕೆ ಪ್ರಮಾಣ ವಚನಕ್ಕೆ ತಡೆ ನೀಡಲು ನ್ಯಾಯಪೀಠ ಬಯಸುವುದಿಲ್ಲ. ಯಡಿಯೂರಪ್ಪ, ಕರ್ನಾಟಕ ಸರಕಾರಕ್ಕೆ ನೊಟೀಸ್‌ ನೀಡುತ್ತೇವೆ.

ಅಟಾರ್ನಿ ಜನರಲ್‌: ಪ್ರಕರಣದ ವಿಚಾರಣೆ ನಡೆಯಲಿ. ಜತೆಗೆ ಸದನದಲ್ಲಿ ವಿಶ್ವಾಸ ಮತ ಯಾಚನೆಯೂ ನಡೆಯಲಿ.

ನ್ಯಾ| ಸಿಕ್ರಿ: ಬಿಜೆಪಿ ಅತ್ಯಂತ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್‌ ದ್ವಿತೀಯ ಮತ್ತು ಜೆಡಿಎಸ್‌ ತೃತೀಯ ಸ್ಥಾನದಲ್ಲಿದೆ. ಈಗ ಎರಡೂ ಪಕ್ಷಗಳು ಸೇರಿಕೊಂಡು ಬಿಜೆಪಿಗಿಂತ ಹೆಚ್ಚಿನ ಸ್ಥಾನಗಳು ಇವೆ ಎಂದು ಹೇಳಿಕೊಂಡಾಗ ಯಡಿಯೂರಪ್ಪ ಅವರನ್ನು ಯಾವ ಆಧಾರದ ಮೇಲೆ ಸರಕಾರ ರಚಿಸಲು ಆಹ್ವಾನಿಸಲಾಗಿದೆ?

ಅಟಾರ್ನಿ ಜನರಲ್‌: ಬೆಂಬಲ ಪತ್ರಕ್ಕೆ ಸಹಿ ಮಾಡಿರುವ 117 ಶಾಸಕರ ಪೈಕಿ ಕೆಲವರ ಸಹಿ ನಕಲು ಆಗಿರುವ ಸಾಧ್ಯತೆ ಇದೆ.

ಸಿಂಘ್ವಿ: ಹಣಕ್ಕಾಗಿ ಏನೂ ಆಗಲು ಸಾಧ್ಯವಿದೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠಕ್ಕೆ ಧನ್ಯವಾದಗಳು. ನಡು ರಾತ್ರಿ ಸುಪ್ರೀಂ ಕೋರ್ಟಲ್ಲಿ ಪ್ರಕರಣದ ವಿಚಾರಣೆ ನಡೆದಿದೆ ಎಂದರೆ ಅದು ಪ್ರಜಾಪ್ರಭುತ್ವದ ವಿಜಯ.

5.30 ಬೆಳಗ್ಗಿನ ಜಾವ: ಪ್ರಮಾಣ ವಚನ ಸ್ವೀಕಾರಕ್ಕೆ ಕೋರ್ಟ್‌ ತಡೆ ನೀಡುವುದಿಲ್ಲ. ಶುಕ್ರವಾರ 10.30ಕ್ಕೆ ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ. ಅದಕ್ಕೂ ಮೊದಲು ಅಟಾರ್ನಿ ಜನರಲ್‌ 15, 16ರಂದು ರಾಜ್ಯಪಾಲರಿಗೆ ಯಡಿಯೂರಪ್ಪ ನೀಡಿದ ಪತ್ರಗಳ ಪ್ರತಿಯನ್ನು ನ್ಯಾಯಪೀಠದ ಮುಂದೆ ಹಾಜರುಪಡಿಸಬೇಕು.

ಆಂಗ್ಲೋ – ಇಂಡಿಯನ್‌ ಎಂಎಲ್‌ಎ ನೇಮಕಕ್ಕೆ ಆಕ್ಷೇಪ
ಈ ನಡುವೆ ಮಹತ್ವದ ಬೆಳವಣಿಗೆಯಲ್ಲಿ ಆಂಗ್ಲೋ-ಇಂಡಿಯನ್‌ ಸಮುದಾಯದಿಂದ ನಾಮಕರಣ ಶಾಸಕರನ್ನು ಆಯ್ಕೆ ಮಾಡದಂತೆ ರಾಜ್ಯಪಾಲ ವಿ.ಆರ್‌.ವಾಲಾಗೆ ಆದೇಶಿಸಬೇಕು ಎಂದು ಕಾಂಗ್ರೆಸ್‌ – ಜೆಡಿಎಸ್‌ ಸುಪ್ರೀಂಗೆ ಮತ್ತೂಂದು ಅರ್ಜಿ ಸಲ್ಲಿಸಿವೆ. ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವ ವರೆಗೆ ಅಂಥ ಪ್ರಯತ್ನಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಅರಿಕೆ ಮಾಡಲಾಗಿದೆ. ಅದನ್ನು ಶುಕ್ರವಾರ ಮುಖ್ಯ ಅರ್ಜಿಯ ಜತೆಗೆ ಸೇರಿಸಿಕೊಂಡು ವಿಚಾರಣೆ ನಡೆಸುವ ಸಾಧ್ಯತೆ ಇದೆ. ನ್ಯಾ| ಎ.ಕೆ.ಸಿಕ್ರಿ ನೇತೃತ್ವದ ಪೀಠವೇ ಅದರ ವಿಚಾರಣೆ ನಡೆಸಲಿದೆ.

ಸುಪ್ರೀಂಗೆ ಜೇಠ್ಮಲಾನಿ ಅರ್ಜಿ
ರಾಜ್ಯಪಾಲರ ನಡೆ ಪ್ರಶ್ನಿಸಿ ದೇಶದ ಹಿರಿಯ ವಕೀಲ ರಾಮ್‌ ಜೇಠ್ಮಲಾನಿ ಕೂಡ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯಪಾಲರು ಸಂವಿಧಾನದತ್ತ ಅಧಿಕಾರ ದುರ್ಬಳಕೆ ಮಾಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದಾರೆ. ಈ ಅರ್ಜಿಯೂ ಸ್ವೀಕಾರವಾಗಿದ್ದು, ಶುಕ್ರವಾರವೇ ವಿಚಾರಣೆಗೆ ಬರುವ ಸಾಧ್ಯತೆ ಇದೆ.

– ಕರ್ನಾಟಕ ರಾಜಕೀಯ : ಹೈಡ್ರಾಮಾಕ್ಕಾಗಿ ನಿದ್ದೆಗೆಟ್ಟ  ಸುಪ್ರೀಂ ಕೋರ್ಟ್‌
– ತಣ್ಣನೆಯ ಹವಾದಲ್ಲಿ ಮೂರುಕಾಲು ಗಂಟೆಗಳ ಕಾಲ ಭಾರೀ ವಾದ-ಪ್ರತಿವಾದ
– ಪ್ರಮಾಣವಚನ ತಪ್ಪಿಸಲೇಬೇಕು ಎಂದು ಹೊರಟ ಕಾಂಗ್ರೆಸ್‌ಗೆ ಮುಖಭಂಗ
– ಇಂದು ನಡೆಯಲಿದೆ ಮುಂದುವರಿದ ವಿಚಾರಣೆ

Advertisement

Udayavani is now on Telegram. Click here to join our channel and stay updated with the latest news.

Next