Advertisement

ಬುಧ-ಗುರುವಾರ ಸಚಿವರ ಪ್ರಮಾಣ?

11:50 PM Jul 31, 2021 | Team Udayavani |

ಬೆಂಗಳೂರು: ನೂತನ ರಾಜ್ಯ ಸಚಿವ ಸಂಪುಟ ರಚನೆಯ ಕುತೂಹಲ ಮುಂದುವರಿದಿದ್ದು, ಎರಡು ದಿನಗಳಲ್ಲಿ ವರಿಷ್ಠರಿಂದ ಸಂದೇಶ ಬರುವ ಸಾಧ್ಯತೆ ಇದೆ. ಹೀಗಾಗಿ ಬುಧವಾರ ಅಥವಾ ಗುರುವಾರ ಮಹೂರ್ತ ನಿಗದಿಯಾಗುವ ಸಾಧ್ಯತೆಯಿದೆ.

Advertisement

ಎರಡು ಹಂತಗಳಲ್ಲಿ ಸಂಪುಟ ರಚನೆಯಾಗಲಿದ್ದು, ಮೊದಲಿಗೆ 15 ಜನರಿಗೆ ಅವಕಾಶ ಸಿಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣದ ಹಿನ್ನೆಲೆಯಲ್ಲಿ ಅಷ್ಟರಲ್ಲಿ ಒಂದೆರಡು ಸ್ಥಾನ ಉಳಿಸಿಕೊಂಡು ಭರ್ತಿ ಮಾಡ ಲಾಗುವುದು ಎಂದು ಹೇಳಲಾಗಿದೆ.

ಹದಿನೈದು ಹೊಸ ಮುಖಗಳಿಗೆ ಅವಕಾಶ ಕೊಟ್ಟು ಬಿಜೆಪಿ ಸರಕಾರದ ಅವಧಿಯಲ್ಲಿ ನಿರಂತರವಾಗಿ ಸಚಿವರಾಗಿ ಅಧಿಕಾರ ಅನುಭವಿಸಿದವರನ್ನು ಕೈ ಬಿಡುವ ಬಗ್ಗೆಯೂ ಗಂಭೀರ ಚಿಂತನೆ ನಡೆದಿದೆ. ಯಡಿಯೂರಪ್ಪ ಅವರ ಸಂಪುಟದಲ್ಲಿ ಸಚಿವರಾಗಿದ್ದ ಒಂಬತ್ತು ಸಚಿವರ ವಿರುದ್ಧ

ಭ್ರಷ್ಟಾಚಾರ ಆರೋಪಗಳಿದ್ದು, ಅವರಿಗೆ ಅವಕಾಶ ಸಿಗುವುದು ಬಹುತೇಕ ಅನುಮಾನ ಎನ್ನಲಾಗಿದೆ.

ಶೀಘ್ರದಲ್ಲೇ  ಸಂಪುಟ ಎಂದ ಸಿಎಂ :

Advertisement

ಶೀಘ್ರದಲ್ಲೇ ಸಚಿವ ಸಂಪುಟ ರಚನೆಯಾಗ ಲಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ. ವರಿಷ್ಠರು ಸಂದೇಶ ಕೊಟ್ಟ ತತ್‌ಕ್ಷಣ ಹೋಗುತ್ತೇನೆ, ಕರೆ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದೇನೆ. ವಾರದೊಳಗೆ ಎಲ್ಲವೂ ಗೊತ್ತಾಗಲಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು. ವರಿಷ್ಠರು ಒಪ್ಪಿಗೆ ಕೊಟ್ಟರೆ ಸೋಮವಾರವೇ ಸಂಪುಟ ರಚನೆಗೆ ಮುಖ್ಯಮಂತ್ರಿ ನಿರ್ಧಾರ ಮಾಡಿದ್ದರು. ಕೊರೊನಾ, ಪ್ರವಾಹ ಪರಿಸ್ಥಿತಿ ನಿಭಾಯಿ ಸಲು ಸಚಿವರು ಬೇಕು ಎಂದು ವರಿಷ್ಠರ ಮುಂದೆ ಪ್ರಸ್ತಾವಿಸಿದ್ದರು. ಆದರೆ ವರಿಷ್ಠರು, “ನಾವು ಸೂಚನೆ ನೀಡುತ್ತೇವೆ’ ಎಂದು ಹೇಳಿ ಕಳುಹಿಸಿದರು ಎನ್ನಲಾಗಿದೆ. ರವಿವಾರ ಸಂದೇಶ ಬಂದರೆ ಸೋಮವಾರ ಸಂಪುಟ ರಚನೆಯಾಗ ಬಹುದು ಎಂದೂ ಹೇಳಲಾಗುತ್ತಿದೆ.

ಕಾಗೇರಿ ಮುಂದುವರಿಕೆಗೆ ಒಲವು :

ವಿಶ್ವೇಶ್ವರ ಹೆಗಡೆ ಸಚಿವರಾಗುವ ಸಾಧ್ಯತೆ ಇದೆ ಎಂಬ ಮಾತುಗಳ ಬೆನ್ನಲ್ಲೇ 2 ವರ್ಷ ಅವರು ಸ್ಪೀಕರ್‌ ಸ್ಥಾನವನ್ನು ಚೆನ್ನಾಗಿ ನಿಭಾಯಿಸಿದ್ದು, ಅವರೇ ಮುಂದುವರಿ ಯುವುದು ಸೂಕ್ತ. ಮುಂದಿನ ದಿನಗಳಲ್ಲಿ ಬೇರೆ ರೀತಿಯ ರಾಜಕೀಯ ವಿದ್ಯಮಾನಗಳು ನಡೆದರೆ ಖಡಕ್‌ ಸ್ಪೀಕರ್‌ ಇರಬೇಕಾಗುತ್ತದೆ ಎಂಬ ಭಾವನೆ ಪಕ್ಷದಲ್ಲಿ ವ್ಯಕ್ತವಾಗಿದೆ.

 ಸೇರುತ್ತೇನೋ ಇಲ್ಲವೋ :

ಇದೆಲ್ಲದ ನಡುವೆ ಶನಿವಾರ ಬೆಳಗ್ಗೆ ಆರೆಸ್ಸೆಸ್‌ ಪ್ರಮುಖರಾದ ಕಲ್ಲಡ್ಕ ಪ್ರಭಾಕರ ಭಟ್‌ ಅವರು ಕೆ.ಎಸ್‌. ಈಶ್ವರಪ್ಪ ಅವರ ನಿವಾಸಕ್ಕೆ ಆಗಮಿಸಿ ಸ್ವಲ್ಪಕಾಲ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.

ನಾನು ಡಿಸಿಎಂ ಆಗುತ್ತೇನೋ, ಸಚಿವನಾಗುತ್ತೇನೋ ಇಲ್ಲವೋ ಎಂಬುದು ಪಕ್ಷಕ್ಕೆ ಬಿಟ್ಟದ್ದು. ಪಕ್ಷ ಮುಖ್ಯ. ಇಲ್ಲಿ ಹಿಂದುಳಿದವರು, ಅವರು ಇವರು ಎನ್ನುವ ಮಾತಿಲ್ಲ. ಪಕ್ಷ ಮತ್ತು ಸರಕಾರಕ್ಕೆ ಯಾವುದು ಒಳ್ಳೆಯದೋ ಅದು ಮುಖ್ಯ ಎಂದು ಈಶ್ವರಪ್ಪ ಅವರು ಭೇಟಿಯ ಅನಂತರ ಸುದ್ದಿಗಾರರಿಗೆ ಮಾರ್ಮಿಕವಾಗಿ ತಿಳಿಸಿದರು.

ಈ ಮಧ್ಯೆ ಹಿರಿಯರಿಗೆ ಪಕ್ಷ ಸಂಘಟನೆ ಹೊಣೆ ಗಾರಿಕೆ ನೀಡಿ ಹೊಸಬರಿಗೆ ಅವಕಾಶ ನೀಡಿ ಎಂದು ಆಗ್ರಹಿಸಿ ಇದುವರೆಗೆ ಸಚಿವಗಿರಿ ಪಡೆಯದ ಶಾಸಕರು ಸಂಘ ಪರಿವಾರದ ಮೊರೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.

ದಿಲ್ಲಿಯಲ್ಲೇ ಠಿಕಾಣಿ: 

ದಿಲ್ಲಿ ಪ್ರವಾಸದಿಂದ  ಬಸವರಾಜ ಬೊಮ್ಮಾಯಿ  ಬೆಂಗಳೂರಿಗೆ ವಾಪಸಾದರೂ ಸಚಿವಗಿರಿ ಉಳಿಸಿಕೊಳ್ಳಲು ಮತ್ತು ಉಪ ಮುಖ್ಯಮಂತ್ರಿ ಸ್ಥಾನ ಪಡೆಯುವುದಕ್ಕಾಗಿ ವರಿಷ್ಠರ ಮೇಲೆ ಒತ್ತಡ ಹೇರಲು ಹೋಗಿದ್ದವರು ಅಲ್ಲೇ ಉಳಿದಿದ್ದಾರೆ.

ವರಿಷ್ಠರಿಂದ ಸಂದೇಶ ಬಂದ ಅನಂತರವೇ ಸಂಪುಟ ರಚನೆಯಾಗಲಿದ್ದು, ಅಗತ್ಯವಾದರೆ ಮತ್ತೂಮ್ಮೆ ಮುಖ್ಯಮಂತ್ರಿ ದಿಲ್ಲಿಗೆ ಹೋಗಬೇಕಾಗಬಹುದು ಎನ್ನಲಾಗುತ್ತಿದೆ.

ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ಕೆಲವು ಹಿರಿಯರಿಗೆ ಸ್ವಯಂ ತ್ಯಾಗದ ಘೋಷಣೆ ಮಾಡಲು ಸೂಚನೆ ನೀಡಲಾಗಿದೆ. ಇದೇ ಹಿನ್ನೆಲೆ ಯಲ್ಲಿ ಜಗದೀಶ್‌ ಶೆಟ್ಟರ್‌ ನಾನು ಸಂಪುಟ ಸೇರುವುದಿಲ್ಲ ಎಂದು ಘೋಷಿಸಿದ್ದರು. ಇದೇ ರೀತಿ ಇನ್ನೂ ಕೆಲವರಿಗೆ ತಿಳಿಸಲಾಗಿದೆ. ಆದರೆ ಅವರು ಮೌನವಾಗಿದ್ದು ಬೇರೆ ಬೇರೆ ಮಾರ್ಗಗಳ ಮೂಲಕ ಸಚಿವರಾಗಲು ಒತ್ತಡ ಹಾಕಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಆರ್‌. ಅಶೋಕ್‌, ಡಾ| ಅಶ್ವತ್ಥನಾರಾಯಣ, ಕೆ.ಎಸ್‌. ಈಶ್ವರಪ್ಪ, ಶ್ರೀರಾಮುಲು, ಅರವಿಂದ ಬೆಲ್ಲದ, ಬಸನಗೌಡ ಪಾಟೀಲ್‌ ಯತ್ನಾಳ್‌ ಉಪ ಮುಖ್ಯಮಂತ್ರಿ ಸ್ಥಾನಕ್ಕಾಗಿ ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ.

ಸುನಿಲ್‌ಕುಮಾರ್‌, ಪಿ. ರಾಜೀವ್‌, ಅರವಿಂದ ಬೆಲ್ಲದ, ಎಸ್‌. ರಘು ಸೇರಿ ಹೊಸಮುಖಗಳ ಕಡೆ ವರಿಷ್ಠರು ಚಿತ್ತ ನೆಟ್ಟಿದ್ದಾರೆ. ಮಹಿಳಾ ಕೋಟಾದಲ್ಲಿ ಪೂರ್ಣಿಮಾ, ರೂಪಾಲಿ ನಾಯಕ್‌ ಕೂಡ ಅವಕಾಶಕ್ಕಾಗಿ ಬೇಡಿಕೆ ಮಂಡಿಸಿದ್ದಾರೆ ಎನ್ನಲಾಗಿದೆ.

ಇದರ ನಡುವೆ ಸಚಿವಗಿರಿಗಾಗಿ ಕೆಲವರು ತಮ್ಮ ಹೆಸರು ಶಿಫಾರಸು ಮಾಡುವಂತೆ ಯಡಿಯೂರಪ್ಪ ಅವರಿಗೆ ದುಂಬಾಲು ಬಿದ್ದಿದ್ದಾರೆ. ಆದರೆ ಯಡಿಯೂರಪ್ಪ ಅವರು, ನಾನು ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಬಸವರಾಜ ಬೊಮ್ಮಾಯಿ ಅವರತ್ತ ಸಾಗ ಹಾಕುತ್ತಿದ್ದಾರೆ.

ಸಂಪುಟ ರಚನೆ ಮುಖ್ಯಮಂತ್ರಿಯವರ ಪರಮಾಧಿಕಾರ ಎಂದು ಹೇಳಲಾದರೂ ಪೂರ್ಣ ಪ್ರಮಾಣದಲ್ಲಿ ಅವರ ಮಾತು ಪೂರ್ಣ ಪ್ರಮಾಣದಲ್ಲಿ ನಡೆಯುವುದು ಅನುಮಾನ. ಸಂಪುಟ ರಚನೆ ಹಿಂದೆ ಬೇರೆಯದೇ ಲೆಕ್ಕಾಚಾರ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಬೊಮ್ಮಾಯಿ ಅವರು ಯಡಿಯೂರಪ್ಪ ಜತೆ ಚರ್ಚಿಸಿ ಒಂದು ಪಟ್ಟಿ ಸಿದ್ಧಪಡಿಸಿದ್ದಾರೆ. ಅದರಲ್ಲಿ ಆರ್‌. ಅಶೋಕ್‌, ಗೋವಿಂದ ಕಾರಜೋಳ ಅವರಿಗೆ ಉಪ ಮುಖ್ಯಮಂತ್ರಿ ನೀಡಲಾಗಿದೆ ಎನ್ನಲಾಗಿದೆ.

ಸಿದ್ಧವಾಗುತ್ತಿರುವ ಪಟ್ಟಿ :

ಯಡಿಯೂರಪ್ಪ ಸರಕಾರದಲ್ಲಿ ಸಚಿವರಾಗಿದ್ದವರಲ್ಲಿ ಯಾರನ್ನು ಮುಂದುವರಿಸಬೇಕು, ಯಾರನ್ನು ಕೈ ಬಿಡಬೇಕು ಹಾಗೂ ಅವರು ಯಾಕೆ ಬೇಡ, ಕೈ ಬಿಟ್ಟವರ ಜಾಗಕ್ಕೆ ಯಾರನ್ನು ಸೇರ್ಪಡೆ ಮಾಡಿಕೊಳ್ಳಬೇಕು ಮತ್ತು ಯಾಕೆ ಎಂಬ ಲೆಕ್ಕಾಚಾರದಲ್ಲಿ ಪಟ್ಟಿ ಸಿದ್ಧವಾಗುತ್ತಿದೆ. ಈ ಬಾರಿ ಹಿಂದುತ್ವ ಪ್ರತಿಪಾದನೆ ಮತ್ತು ಸರಕಾರದ ವರ್ಚಸ್ಸು ಹೆಚ್ಚಿಸುವ ನಿಟ್ಟಿನಲ್ಲಿ ಯುವಕರಿಗೆ ಅವಕಾಶ ಕೊಟ್ಟು “ಪ್ರಯೋಗ’ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next