Advertisement

Karnataka Election ಕಾಂಗ್ರೆಸ್‌ನದು ‘ಸುಳ್ಳಿನ ಗ್ಯಾರಂಟಿ’: ಪ್ರಧಾನಿ ಮೋದಿ ವಾಗ್ಧಾಳಿ

10:49 PM Apr 27, 2023 | Team Udayavani |

ಬೆಂಗಳೂರು: ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನೀಡಿರುವ ಉಚಿತ “ಗ್ಯಾರಂಟಿ’ ಯೋಜನೆಗಳ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಇದು “ಜೂs… ಗ್ಯಾರಂಟಿ’ (ಸುಳ್ಳಿನ ಭರವಸೆ) ಎಂದು ವ್ಯಂಗ್ಯವಾಡಿದ್ದಾರೆ.

Advertisement

ಗುರುವಾರ ಕಾರ್ಯಕರ್ತರೊಂದಿಗೆ ವರ್ಚುವಲ್‌ ಸಂವಾದದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ ಉಚಿತ ಕೊಡುಗೆಗಳ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ಮಾತಿನಲ್ಲೇ ಡೋಲು ಬಾರಿಸುವ ಕಾಂಗ್ರೆಸ್‌ ನಿಮ್ಮನ್ನು ಉಚಿತ ಗ್ಯಾರಂಟಿಯ ಹೆಸರಿನಲ್ಲಿ ಮೂರ್ಖರನ್ನಾಗಿಸುತ್ತದೆ. ಕಾಂಗ್ರೆಸ್‌ ಎಂದರೆ ಭ್ರಷ್ಟಾಚಾರ ಹಾಗೂ ಸ್ವಜನ ಪಕ್ಷಪಾತದ ಗ್ಯಾರಂಟಿ ಎಂದೂ ಟೀಕಿಸಿದರು.

ಸ್ವಾತಂತ್ರ್ಯದ ಅಮೃತ ಕಾಲದಲ್ಲಿ ದೇಶಕ್ಕೆ ಏನು ಬೇಕೆಂಬುದರ ಬಗ್ಗೆ ಬಿಜೆಪಿ ಸ್ಪಷ್ಟ ನೀಲನಕ್ಷೆಯನ್ನು ಹೊಂದಿದ್ದು, “ವಿಕಸಿತ ಭಾರತದ ಗ್ಯಾರಂಟಿ’ಯನ್ನು ನೀಡಲು ಬಯಸುತ್ತದೆ. ಸಮೃದ್ಧ ಭಾರತ ನಿರ್ಮಾಣವೇ ನಮ್ಮ ಗುರಿ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಯಕರ್ತ ಅರುಣ್‌ ಶೇಟ್‌ ಅವರ ಪ್ರಶ್ನೆಗೆ ನೀಡಿದ ಸುದೀರ್ಘ‌ ಉತ್ತರದಲ್ಲಿ ಮೋದಿ ಅಭಿಪ್ರಾಯಪಟ್ಟರು.

ಪ್ರಧಾನಿಯವರ ಈ ಹೇಳಿಕೆ ಕಾಂಗ್ರೆಸ್‌ ಹಾಗೂ ಬಿಜೆಪಿ ಮಧ್ಯೆ ಹೊಸ ರಾಜಕೀಯ ತಿಕ್ಕಾಟ ಸೃಷ್ಟಿಸಿದ್ದು, ನರೇಂದ್ರ ಮೋದಿಯವರ ವರ್ಚುವಲ್‌ ಪ್ರಚಾರ ಪ್ರವೇಶದೊಂದಿಗೆ ರಾಜ್ಯ ಚುನಾವಣ ಅಖಾಡ ಈಗ ಮತ್ತಷ್ಟು ಬಿರುಸು, ರಂಗು ಪಡೆದುಕೊಂಡಿದೆ. ಕಾಂಗ್ರೆಸ್‌ ಮೇಲಿನ ವಾಗ್ಧಾಳಿಯ ಜತೆಗೆ ಡಬಲ್‌ ಎಂಜಿನ್‌ ಸರಕಾರದ ಅನಿವಾರ್ಯದ ಬಗ್ಗೆಯೂ ಪ್ರತಿಪಾದಿಸಿರುವ ಮೋದಿ, ಸ್ಥಿರ ಹಾಗೂ ಪೂರ್ಣ ಬಹುಮತದ ಸರಕಾರಕ್ಕಾಗಿ ಬಿಜೆಪಿಗೆ ಆಶೀರ್ವಾದ ಮಾಡುವಂತೆ ರಾಜ್ಯದ ಜನತೆಯಲ್ಲಿ ಮನವಿ ಮಾಡಿದರು.

ಕಾರ್ಯಕರ್ತರ ಪಂಚ ಪ್ರಶ್ನೆಗೆ ಮೋದಿ ನೀಡಿದ ಉತ್ತರ ಹೀಗಿತ್ತು…
– ಉಚಿತ ಕೊಡುಗೆಗಳ ಸಂಪ್ರದಾಯಕ್ಕೆ ಕೊನೆ ಹಾಡಬೇಕಿದೆ. ಸರಕಾರವನ್ನು ಈ ರೀತಿ ನಡೆಸಲು ಸಾಧ್ಯವಿಲ್ಲ. ಅಧಿಕಾರ ಹಿಡಿಯುವುದಕ್ಕಾಗಿ ಇಂಥ ಸಾಮ-ದಾನ-ಭೇದ ತಂತ್ರವನ್ನು ಅನುಸರಿಸುವ ರಾಜಕೀಯ ಪಕ್ಷಗಳಿಗೆ ಕರ್ನಾಟಕದ ಮಕ್ಕಳು, ಯುವಕರು ಹಾಗೂ ಸಂಪನ್ಮೂಲದ ಭವಿಷ್ಯದ ಚಿಂತೆ ಇಲ್ಲ. ಆದರೆ ಬಿಜೆಪಿ ವಿಕಸಿತ ಭಾರತದ ದೃಷ್ಟಿಕೋನ ಹೊಂದಿದೆ. ಇದಕ್ಕಾಗಿ ಯಾವುದೇ ಅಡ್ಡದಾರಿಗಳು ಇಲ್ಲ. ನಾವು ಮುಂದಿನ ಐದು ವರ್ಷ ಅಧಿಕಾರ ಹಿಡಿಯುವುದಕ್ಕಾಗಿ ಯೋಜನೆ ರೂಪಿಸುತ್ತಿಲ್ಲ. ಮುಂದಿನ 25 ವರ್ಷದಲ್ಲಿ ಭಾರತ ಹೇಗಿರಬೇಕೆಂಬ ಬಗ್ಗೆ ಚಿಂತನೆ ಹೊಂದಿದ್ದೇವೆ.

Advertisement

ಉಚಿತ ಕೊಡುಗೆಗಳ ಭರವಸೆ ಜನರನ್ನು ಮೂರ್ಖರನ್ನಾಗಿಸುವ ತಂತ್ರವಾಗಿದ್ದು, ಇವುಗಳಿಗೆ ಅಂತ್ಯ ಹಾಡಬೇಕಿದೆ. ಕಾಂಗ್ರೆಸ್‌ ನೀಡಿದ ಇಂಥ ಭರವಸೆಗಳು ಎಲ್ಲಿಯೂ ಅನುಷ್ಠಾನವಾಗಿಲ್ಲ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾದರೂ ಜನ ಗ್ಯಾರಂಟಿ ಯೋಜನೆಗಾಗಿ ಕಾಯುತ್ತಿದ್ದಾರೆ. ರಾಜಸ್ಥಾನದಲ್ಲಿ ಜನರು ಪ್ರತಿಭಟನೆ ನಡೆಸುವ ಸ್ಥಿತಿ ಬಂದರೂ ಕಾಂಗ್ರೆಸ್‌ ಗ್ಯಾರಂಟಿ ಜಾರಿಗೆ ಬಂದಿಲ್ಲ ಎಂದು ಪ್ರಧಾನಿ ವ್ಯಂಗ್ಯವಾಡಿದರು.

ಕರ್ನಾಟಕದ ವಿಕಾಸದಲ್ಲಿ ಭಾರತದ ವಿಕಾಸ ಇದೆ. ಭವಿಷ್ಯದಲ್ಲಿ ಕರ್ನಾಟಕ ಮೂಲ ಸೌಕರ್ಯ ಕ್ಷೇತ್ರದ ಕೇಂದ್ರವಾಗಲಿದೆ. ನಮ್ಮ ಅಭಿವೃದ್ಧಿಯ ಕಲ್ಪನೆ ಏಮ್ಸ್‌ ಮಾದರಿಯ ಆಸ್ಪತ್ರೆ ನಿರ್ಮಾಣ, ರಸ್ತೆ, ವೈದ್ಯ ಕಾಲೇಜು, ಐಐಟಿ, ಐಐಎಂ ನಿರ್ಮಾಣ. ನಮ್ಮ ದೃಷ್ಟಿಯಲ್ಲಿ ಎಫ್ಡಿಐ ಎಂದರೆ “ಫಾರಿನ್‌ ಡೈರೆಕ್ಟ್ ಇನ್ವೆಸ್ಟ್‌ಮೆಂಟ್‌’ ಎಂಬ ಅರ್ಥ ಮಾತ್ರವಲ್ಲ. “ಫ‌ಸ್ಟ್‌ ಡೆವಲಪ್‌ ಇಂಡಿಯಾ’ ಎಂಬುದೂ ಆಗಿದೆ. ಈ ಕಲ್ಪನೆ ಸಾಕಾರಗೊಳ್ಳಬೇಕಿದ್ದರೆ ರಾಜ್ಯದಲ್ಲಿ ಡಬಲ್‌ ಎಂಜಿನ್‌ ಸರಕಾರ ಮತ್ತೆ ಅಧಿಕಾರಕ್ಕೆ ಬರಬೇಕು. ಪೂರ್ಣಮತದ, ಸ್ಥಿರ ಬಿಜೆಪಿ ಸರಕಾರ ನಿರ್ಮಾಣವಾಗಬೇಕು. ಕರ್ನಾಟಕದ ಜನತೆ ಈ ಬಾರಿ ನಮಗೆ ಪೂರ್ಣ ಬಹುಮತದ ಆಶೀರ್ವಾದ ಕೊಟ್ಟೇ ಕೊಡುತ್ತಾರೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.

ಬೂತ್‌ ವಿಜಯ್‌
ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ಹಬ್ಬ ನಡೆಯುತ್ತಿದೆ. ಬಸವೇಶ್ವರರ ಪುಣ್ಯಭೂಮಿಯಲ್ಲಿ ಭಾಗವಹಿಸುವುದಕ್ಕೆ ನನಗೆ ಹೆಮ್ಮೆ ಎನಿಸುತ್ತದೆ. ರಾಜ್ಯದಲ್ಲಿ ಡಬಲ್‌ ಎಂಜಿನ್‌ ಸರಕಾರ ಮತ್ತೆ ಬರಬೇಕಿದ್ದರೆ ಕಾರ್ಯಕರ್ತರ ಜವಾಬ್ದಾರಿಯೂ “ಡಬಲ್‌’ ಆಗಿರಬೇಕು ಎಂದು ಶಿವಮೊಗ್ಗದ ವಿರೂಪಾಕ್ಷಪ್ಪ ಅವರ ಪ್ರಶ್ನೆಗೆ ಉತ್ತರಿಸುತ್ತ ಮೋದಿ ಹೇಳಿದರು. ಮುಂದಿನ 10 ದಿನ ಕಾರ್ಯಕರ್ತರ ಉತ್ಸಾಹ ಇದೇ ರೀತಿ ಇರಬೇಕು. ಬೂತ್‌ ವಿಜಯವೇ ಪಕ್ಷದ ವಿಜಯ. ನೀವು ಡಬಲ್‌ ಎಂಜಿನ್‌ ಸರಕಾರದ ಸಾಧನೆಗಳೇನು ಎಂಬುದನ್ನು ಮೊಬೈಲ್‌ನಲ್ಲಿ ದಾಖಲಿಸಿಕೊಳ್ಳಿ. ಆ ಬಳಿಕ ತಲಾ 10 ಪುರುಷ ಹಾಗೂ 10 ಮಹಿಳಾ ಕಾರ್ಯಕರ್ತರ ತಂಡವನ್ನು ಮಾಡಿಕೊಂಡು ಪ್ರತೀ ಮನೆಗೆ ತೆರಳಿ ವಿವರಣೆ ನೀಡಿ. ಜನ ಖಂಡಿತ ಒಪ್ಪುತ್ತಾರೆ. ಕೊರೊನಾ ಸಂದರ್ಭದಲ್ಲಿ ವಿಶ್ವದ ಇತರ ದೇಶದ ಅರ್ಥ ವ್ಯವಸ್ಥೆ ಛಿದ್ರವಾದರೂ ಭಾರತದ ಅರ್ಥ ವ್ಯವಸ್ಥೆ ಹೇಗೆ ಸದೃಢವಾಗಿತ್ತು ಎಂಬುದನ್ನು ತಿಳಿಸಿ. ಯೋಜನೆಯ ಬಗ್ಗೆ ಮಾಹಿತಿ ಪಡೆದ ಜನರು ಮತಗಟ್ಟೆಗೆ ಬರುವಂತೆ ಮಾಡಿ ಎಂದು ಕರೆ ನೀಡಿದರು.

ಡಬಲ್‌ ಎಂಜಿನ್‌ ಸರಕಾರ
ಡಬಲ್‌ ಎಂಜಿನ್‌ ಸರಕಾರ ಎಂದರೇನು ಎಂದು ಪ್ರಶ್ನಿಸಿದ ಚಿತ್ರದುರ್ಗದ ಫ‌ಕೀರಪ್ಪ ಅವರಿಗೆ ವಿವರಣೆ ನೀಡಿದ ಮೋದಿ, ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಅಧಿಕಾರದಲ್ಲಿ ಇದ್ದಾಗ ಅಭಿವೃದ್ಧಿ ಚಟುವಟಿಕೆಗಳು ಶೀಘ್ರ ಅನುಷ್ಠಾನವಾಗುತ್ತವೆ. ಅನ್ಯ ಪಕ್ಷಗಳು ಅಧಿಕಾರದಲ್ಲಿ ಇರಬಾರದು ಎಂದು ನಾನು ಹೇಳುವುದಿಲ್ಲ. ಆದರೆ ಒಂದೇ ಪಕ್ಷದ ಡಬಲ್‌ ಎಂಜಿನ್‌ ಸರಕಾರ ಅಧಿಕಾರಕ್ಕೆ ಬಂದರೆ ಅಭಿವೃದ್ಧಿಗೆ ವೇಗ ದೊರಕುತ್ತದೆ. ಕೇಂದ್ರದ ಜತೆ ಸಂಘರ್ಷ ಕಡಿಮೆಯಾಗುತ್ತ ಹೋಗುತ್ತದೆ. ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ 9 ವರ್ಷಗಳಲ್ಲಿ 20 ಏಮ್ಸ್‌ ಮಾದರಿ ಆಸ್ಪತ್ರೆಗಳು ನಿರ್ಮಾಣವಾಗಿವೆ. 600ಕ್ಕಿಂತ ಹೆಚ್ಚು ವೈದ್ಯ ಕಾಲೇಜುಗಳು ನಿರ್ಮಾಣವಾಗಿವೆ. ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲೂ ಯಶಸ್ಸು ಕಂಡಿದ್ದೇವೆ. ನೇರ ನಗದು ವರ್ಗಾವಣೆ ಜಾರಿಗೆ ಬಂದ ಬಳಿಕ ಹಣ ಫ‌ಲಾನುಭವಿಗಳಿಗೆ ಮಾತ್ರ ತಲುಪುತ್ತಿದೆ ಎಂದು ವಿವರಿಸಿದರು.

ಕೋಡಿಂಗ್‌-ಕವಿತೆ
ಕರ್ನಾಟಕದಲ್ಲಿ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಉತ್ಥಾನ ಏಕಕಾಲದಲ್ಲಿ ನಡೆದಿದೆ. ಇಲ್ಲಿನ ಯುವಕ-ಯುವತಿಯರು ಐ.ಟಿ. ಕೋಡಿಂಗ್‌ ಮಾಡುವುದರ ಜತೆಗೆ ಕುವೆಂಪು ಅವರ ಕವನ ವಾಚನ ಮಾಡುವ ಸಹೃದಯತೆಯ್ನೂ ಉಳಿಸಿಕೊಂಡಿದ್ದಾರೆ. ನಾನು ಕರ್ನಾಟಕದ ಜತೆಗೆ ದಶಕಗಳ ಸಂಬಂಧ ಹೊಂದಿದ್ದೇನೆ. ಅಧಿಕಾರಕ್ಕೆ ಬರುವುದಕ್ಕೆ ಮೊದಲು ಸಾಮಾನ್ಯ ಕಾರ್ಯಕರ್ತನಾಗಿ ಇಡೀ ರಾಜ್ಯವನ್ನು ಸುತ್ತಿದ್ದೇನೆ. ಕರ್ನಾಟಕದ ಜನತೆ ಸ್ಥಿರ ಹಾಗೂ ಬಹುಮತದ ಸರಕಾರಕ್ಕಾಗಿ ಬಿಜೆಪಿಗೆ ಆಶೀರ್ವಾದ ಮಾಡುತ್ತಾರೆಂಬ ಸಂಪೂರ್ಣ ಭರವಸೆ ನನಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next