Advertisement

ಸಿಎಂ ಮೇಲೆ ಕಲ್ಲಿದ್ದಲು ಚೆಲ್ಲಿದ ಬಿಎಸ್‌ವೈ

06:00 AM Oct 22, 2017 | Team Udayavani |

ಬೆಂಗಳೂರು: ದೇಶಾದ್ಯಂತ ಭಾರಿ ವಿವಾದಕ್ಕೆ ಕಾರಣವಾಗಿದ್ದ ಕಲ್ಲಿದ್ದಲು ಹಗರಣದ ಆರೋಪ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಗಲೇರಿದೆ. ಅಕ್ರಮ ಕಲ್ಲಿದ್ದಲು ಗಣಿಗಾರಿಕೆಗೆ ಸಂಬಂಧಿಸಿದಂತೆ ಕಂಪನಿಯೊಂದು ಪಾವತಿಸಬೇಕಾಗಿದ್ದ ಸುಮಾರು 418 ಕೋಟಿ ರೂ. ಮೊತ್ತವನ್ನು ರಾಜ್ಯದ ಕಾಂಗ್ರೆಸ್‌ ಸರ್ಕಾರ ಕೆಪಿಸಿಎಲ್‌ ಮೂಲಕ ಭರಿಸಿ ದೊಡ್ಡ ಪ್ರಮಾಣದಲ್ಲೇ ಕಮಿಷನ್‌ ಹೊಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಗಂಭೀರ ಆರೋಪ ಮಾಡಿದ್ದಾರೆ.

Advertisement

ಸೋಮವಾರ ಬೆಳಗ್ಗೆ ಆರೋಪ ಮಾಡುತ್ತಿದ್ದಂತೆ ರಾಜಕೀಯ ಶುರುವಾಯಿತು. ಇಂಧನ ಸಚಿವ ಡಿ. ಕೆ.ಶಿವ ಕು ಮಾರ್‌ ಇದಕ್ಕೆ ಪ್ರತಿಕ್ರಿಯಿಸಿದರು. ಬೆನ್ನಲ್ಲೇ ಬಿಜೆಪಿ ಸಂಸದ ಪಿ.ಸಿ.ಮೋ ಹನ್‌ ಹಾಗೂ ವಿಧಾನ ಪರಿಷತ್‌ ಸದಸ್ಯ ಬಿ.ಜೆ.ಪುಟ್ಟಸ್ವಾಮಿ ಮತ್ತು ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ತಿರುಗೇಟು ನೀಡಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ದಾಖಲೆಗಳ ಸಹಿತ ಮಾತನಾಡಿದ ಯಡಿಯೂರಪ್ಪ, ಕಲ್ಲಿದ್ದಲು ಹಗರಣದಲ್ಲಿ ಕೆಪಿಸಿಎಲ್‌ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಿರ್ದೇಶಕ ಡಿ.ಕೆ.ಶಿವಕುಮಾರ್‌ ಅವರ ಪಾತ್ರವಿದ್ದು, ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್‌ ಆದೇಶಕ್ಕೆ ವ್ಯತಿರಿಕ್ತವಾಗಿ ಕೆಇಸಿಎಂಎಲ್‌ ಪಾವತಿಸಬೇಕಾದ 418 ಕೋಟಿ ರೂ. ರಾಜ್ಯ ಸರ್ಕಾರಿ ಸ್ವಾಮ್ಯದ ಕೆಪಿಸಿಎಲ್‌ ಮೂಲಕ ಪಾವತಿಸಿದ್ದೇಕೆ?ಎಂಬುದನ್ನು ಬಹಿರಂಗಪಡಿಸುವಂತೆ ಆಗ್ರಹಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೇಂದ್ರ ಸರ್ಕಾರ ಮತ್ತು ಸಿಬಿಐಗೆ ಕಳುಹಿಸಿ, ಸಿಬಿಐ ತನಿಖೆಗೆ ಆಗ್ರಹಿಸಲಾಗುವುದು. ಜತೆಗೆ ಈ ಕುರಿತ ಸಂಪೂರ್ಣ ಮಾಹಿತಿಯನ್ನು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಲೋಕಸಭೆಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಕಳುಹಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾಡಿರುವ ಹಗಲು ದರೋಡೆಯನ್ನು ಮನವರಿಕೆ ಮಾಡುವ ಪ್ರಯತ್ನ ಮಾಡುವುದಾಗಿ ಹೇಳಿದರು.

ಏನಿದು ವಿವಾದ?:
ಕೆಪಿಸಿಎಲ್‌ಗೆ ಕಲ್ಲಿದ್ದಲು ಹಂಚಿಕೆ ಮಾಡುವ ಉದ್ದೇಶದಿಂದ ಆಗಿನ ಕೇಂದ್ರ ಸರ್ಕಾರ 2002ರಲ್ಲಿ ಕೊಲ್ಕೊತಾದ ಇಎಂಟಿಎ ಕಂಪನಿ ಸಹಭಾಗಿತ್ವದಲ್ಲಿ ಕೆಇಸಿಎಂಎಲ್‌ ಎಂಬ ಕಂಪನಿ ರಚಿಸಿತ್ತು. ಇದಕ್ಕೆ ರಾಜ್ಯ ಸರ್ಕಾರದ ಕೆಪಿಸಿಎಲ್‌ ಅಧ್ಯಕ್ಷರನ್ನು ನಾಮನಿರ್ದೇಶನ ಮಾಡಿತ್ತು. ಕೇಂದ್ರದ ಯುಪಿಎ ಸರ್ಕಾರ ಕಲ್ಲಿದ್ದಲು ಗಣಿ ಹಂಚಿಕೆ ಮಾಡಿದಾಗ ಶೇ.76ರಷ್ಟು ಒಡೆತನ ಹೊಂದಿದ್ದ ಎಎಂಟಿಎಯ ಕೆಇಎಂಸಿಎಲ್‌ ಹೆಸರಿನಲ್ಲಿ ಕಲ್ಲಿದ್ದಲು ಗುತ್ತಿಗೆ ನೀಡಿತ್ತು.

Advertisement

2014ರಲ್ಲಿ ಸುಪ್ರೀಂಕೋರ್ಟ್‌ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿ, ಬಹಳಷ್ಟು ಕಲ್ಲಿದ್ದಲು ಹಂಚಿಕೆ ರದ್ದುಗೊಳಿಸಿತ್ತು. ಇದರಲ್ಲಿ ಕೆಇಎಂಸಿಎಲ್‌ಗೆ ಮಂಜೂರಾದ ಗಣಿಯೂ ಇತ್ತು. ಅಲ್ಲದೆ, ಸುಪ್ರೀಂ ಕೋರ್ಟ್‌ ತನ್ನ ತೀರ್ಪಿನಲ್ಲಿ ಪ್ರತಿ ಮೆಟ್ರಿಕ್‌ ಟನ್‌ ಕಲ್ಲಿದ್ದಲಿಗೆ 295 ರೂ.ನಂತೆ ದಂಡ ವಿಧಿಸಿತ್ತು. ಆ ವೇಳೆ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ್ದ ಸಿಎಜಿ, ಗಣಿ ಗುತ್ತಿಗೆಯಲ್ಲಿ ಕೆಇಎಂಸಿಎಲ್‌ ಗರಿಷ್ಠ ಲಾಭ ಗಳಿಸಿರುವುದರಿಂದ ದಂಡವನ್ನು ಅದೇ ಕಂಪೆನಿ ಭರಿಸಬೇಕು ಎಂದು ಹೇಳಿತ್ತು.

ಅದರಂತೆ ಸುಪ್ರೀಂ ಕೋರ್ಟ್‌ ಆದೇಶಿಸಿದ್ದು, ಈ ತೀರ್ಪಿನ ಆಧಾರದ ಮೇಲೆ ಕೇಂದ್ರ ಸರ್ಕಾರದ ಚಂದ್ರಾಪುರ ಕಲೆಕ್ಟರ್‌ ಕಚೇರಿ 2013ರ ಅ. 4ರಂದು ಕೆಇಎಂಸಿಎಲ್‌ನಿಂದ 417.96 ಕೋಟಿ ರೂ. ದಂಡ ಕಟ್ಟಿಸಿಕೊಳ್ಳಬೇಕು ಎಂದು ಒಕ್ಕಣೆ ನೀಡಿತ್ತು.

ಈ ಮಧ್ಯೆ 2014ರ ಅ. 13ರಂದು ಚಂದ್ರಾಪುರ ಕಲೆಕ್ಟರ್‌ಗೆ ಉತ್ತರ ಬರೆದ ಕೆಇಎಂಸಿಎಲ್‌, ದಂಡದ ಮೊತ್ತವನ್ನು ಕೆಪಿಸಿಎಲ್‌ ಭರಿಸಬೇಕು ಎಂದು ಹೇಳಿತ್ತು. ಇದಕ್ಕೆ 2014ರ ಡಿ.30ರಂದು ಉತ್ತರಿಸಿದ್ದ ಕೆಪಿಸಿಎಲ್‌, ದಂಡದ ಮೊತ್ತವನ್ನು ಕೆಇಎಂಸಿಎಲ್‌ ಕಂಪನಿಯೇ ಭರಿಸಬೇಕು ಎಂದು ಹೇಳಿತ್ತು. ಆದರೆ, ಇದಾದ ಮಾರನೇ ದಿನವೇ ಕಂಪನಿಯಲ್ಲಿ ಶೇ. 24ರಷ್ಟು ಪಾಲು ಹೊಂದಿರುವ ಕೆಪಿಸಿಎಲ್‌, 110.43 ಕೋಟಿ ದಂಡ ಪಾವತಿಸಿತ್ತು. ಆದರೆ, ದಂಡ ಪಾವತಿಸಲು ಕೆಪಿಸಿಎಲ್‌ಗೆ ಯಾರೂ ಸೂಚಿಸಿರಲಿಲ್ಲ.

ಇನ್ನೊಂದೆಡೆ ಕೇಂದ್ರ ಸರ್ಕಾರ ದಂಡ ಪಾವತಿಸದ ಕೆಇಎಂಸಿಎಲ್‌ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದು, ಅದರಂತೆ ಕಂಪನಿಗೆ ಸುಪ್ರೀಂ ಕೋರ್ಟ್‌ ನೋಟಿಸ್‌ ಜಾರಿ ಮಾಡಿತ್ತು. ಇದರ ನಡುವೆ ಕೆಇಎಂಸಿಎಲ್‌ ಪಾವತಿಸಬೇಕಿದ್ದ 337.77 ಕೋಟಿ ರೂ. ದಂಡವನ್ನೂ ಕೂಡ ಕೆಪಿಸಿಎಲ್‌ ಪಾವತಿಸಿತ್ತು. ಈ ಸಂದರ್ಭದಲ್ಲೂ ಕೆಪಿಸಿಎಲ್‌ ದಂಡ ಪಾವತಿಸಲು ಯಾರೂ ಹೇಳಿರಲಿಲ್ಲ. ಅಷ್ಟೇ ಅಲ್ಲ, ಹೈಕೋರ್ಟ್‌ ಕೂಡ ದಂಡ ಪಾವತಿಸುವ ವಿಚಾರ ಮತ್ತು ಇಎಂಟಿಎ ಜತೆಗಿನ ಕೆಪಿಸಿಎಲ್‌ ಒಪ್ಪಂದವೇ ಸರಿ ಇಲ್ಲ ಎಂದು ಹೇಳಿತ್ತು ಎಂದು ಯಡಿಯೂರಪ್ಪ ವಿವರಿಸಿದರು.

ಹಣ ಪಾವತಿ ಒಪ್ಪಂದ ಬಹಿರಂಗಪಡಿಸಲು ಆಗ್ರಹ
ಕೆಇಎಂಸಿಎಲ್‌ ಪರವಾಗಿ ಕೆಪಿಸಿಎಲ್‌ ದಂಡದ ಮೊತ್ತವನ್ನು ಸಂಪೂರ್ಣ ಪಾವತಿ ಮಾಡಿರುವುದರ ಹಿಂದೆ ಕಂಪನಿ ಜತೆ ಮಾಡಿಕೊಂಡಿರುವ ಕಮಿಷನ್‌ ಒಪ್ಪಂದದ ಕುರಿತು ಬಹಿರಂಗಪಡಿಸುವಂತೆ ಕೆಪಿಸಿಎಲ್‌ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಬಿ.ಎಸ್‌.ಯಡಿಯೂರಪ್ಪ ಆಗ್ರಹಿಸಿದ್ದಾರೆ.

ಪ್ರಕರಣದಲ್ಲಿ ಮುಖ್ಯಮಂತ್ರಿಗಳು ಮತ್ತು ಇಂಧನ ಸಚಿವರು ಕೆಇಎಂಸಿಎಲ್‌ ಏಜೆಂಟರಂತೆ ವರ್ತಿಸಿದ್ದಾರೆ. ಕೆಇಎಂಸಿಎಲ್‌ ಕಂಪೆನಿಯೇ ದಂಡ ಪಾವತಿಸಬೇಕು ಎಂದು ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್‌ ಸೂಚಿಸಿದ್ದರೂ ಕೆಪಿಸಿಎಲ್‌ ಮೂಲಕ ದಂಡದ ಮೊತ್ತ ಭರಿಸಿ ಕಮಿಷನ್‌ ದಂಧೆಯಲ್ಲಿ ಶಾಮೀಲಾಗಿದ್ದಾರೆ ಎಂದು ಅವರು ಆಪಾದಿಸಿದರು.

ದಂಡ ಪಾವತಿಗೆ ಸಮಯಾವಕಾಶ ಕಡಿಮೆ ಇದ್ದುದರಿಂದ ಕೆಪಿಸಿಎಲ್‌ ಪಾವತಿಸಬೇಕಾದ ಮೊತ್ತ ಪಾವತಿಸಿ ನಂತರ ಕಂಪೆನಿಯಿಂದ ಭರಿಸಲು ನಿರ್ಧರಿಸಲಾಗಿದೆ ಎಂದು ಸರ್ಕಾರ ಹೇಳಿದ್ದರೂ ಇದುವರೆಗೆ ಏಕೆ ಕಂಪೆನಿಯಿಂದ ಹಣ ವಸೂಲಿ ಮಾಡಿಲ್ಲ. ಇನ್ನೊಂದೆಡೆ ದಂಡದ ಸಂಪೂರ್ಣ ಮೊತ್ತವನ್ನು ರಾಜ್ಯ ಸರ್ಕಾರವೇ ಭರಿಸಿದ್ದೇಕೆ ಎಂದು ಪ್ರಶ್ನಿಸಿರುವ ಅವರು, ಈ ಕುರಿತು ಉತ್ತರಿಸುವಂತೆ ಮುಖ್ಯಮಂತ್ರಿ ಹಾಗೂ ಇಂಧನ ಸಚಿವರಿಗೆ ಸವಾಲು ಹಾಕಿದ್ದಾರೆ.

ಈ ಪ್ರಕರಣವನ್ನು ಸಂಪೂರ್ಣ ಪರಿಶೀಲಿಸಿದರೆ ದೇಶದ ಇತಿಹಾಸದಲ್ಲಿ ನೇರವಾಗಿ ಸರ್ಕಾರದ ಖಜಾನೆ ಲೂಡಿ ಮಾಡಿದ ಇಂತಹ ಪ್ರಕರಣ ಬೇರೆಲ್ಲೂ ನಡೆದಿಲ್ಲ ಎಂದು ಹೇಳಿದ ಯಡಿಯೂರಪ್ಪ, ಈ ಕುರಿತು ಕಾಂಗ್ರೆಸ್‌ ಹಮ್ಮಿಕೊಂಡಿರುವ ಮನೆ ಮನೆಗೆ ಕಾಂಗ್ರೆಸ್‌ ಕಾರ್ಯಕ್ರಮದ ವೇಳೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

ಯಡಿಯೂರಪ್ಪ ಆಧಾರ ರಹಿತ ಆರೋಪ ಮಾಡಿದ್ದಾರೆ. ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಪತ್ರ ಬರೆಯುವುದನ್ನು ಸ್ವಾಗತಿಸುತ್ತೇನೆ. ಈ ವಿಷಯದಲ್ಲಿ ಯಾವುದೇ ಬಹಿರಂಗ ಚರ್ಚೆಗೂ ಸಿದ್ಧನಿದ್ದೇನೆ. ಕೇಂದ್ರ ಸರ್ಕಾರದ ನೀತಿ ನಿಯಮಗಳಿಗನುಸಾರವಾಗಿಯೇ ಒಪ್ಪಂದಗಳು ನಡೆದಿವೆ. ಪ್ರತಿ ವರ್ಷವೂ ರಾಜ್ಯ ಸರ್ಕಾರ ಹೆಚ್ಚಿನ ಹಣ ನೀಡಿ ಕೇಂದ್ರದ ಕಂಪನಿಗಳಿಂದ ಕಲ್ಲಿದ್ದಲು ಖರೀದಿ ಮಾಡುತ್ತಿದ್ದು, ಇದರಿಂದ ರಾಜ್ಯ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ.
– ಡಿ.ಕೆ.ಶಿವಕುಮಾರ್‌, ಇಂಧನ ಸಚಿವ

ಕಲ್ಲಿದ್ದಲು ಖರೀದಿ ವಿಷಯದ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ನಡೆಯುತ್ತಿದೆ. ಈ ಸಂದರ್ಭದಲ್ಲಿ ಆರೋಪ ಮಾಡಲು ಯಡಿಯೂರಪ್ಪ ಯಾರು? ಆರೋಪದ ಹಿಂದಿನ ಉದ್ದೇಶ ಏನು? 2012 ರಲ್ಲಿ ಸುಪ್ರೀಂ ಕೋರ್ಟ್‌ ಕಲ್ಲಿದ್ದಲು ಹಂಚಿಕೆಯನ್ನು ನಿಷೇಧ ಮಾಡಿ, ಕೆಲವು ಸಂಸ್ಥೆಗಳ ಮೇಲೆ ದಂಡ ವಿಧಿಸಿತ್ತು. ಕೆಇಸಿಎಂಎಲ್‌ ಜೊತೆಗೆ ಕೆಪಿಟಿಸಿಎಲ್‌ ಸಹಭಾಗಿತ್ವ ಹೊಂದಿದ್ದರಿಂದ ದಂಡದ ಮೊತ್ತವನ್ನು ಕೆಪಿಟಿಸಿಎಲ್‌ ಭರಿಸಬೇಕು ಎಂದು ನ್ಯಾಯಾಲಯ ಸೂಚನೆ ನೀಡಿತ್ತು. ನ್ಯಾಯಾಲಯದ ಸೂಚನೆಯಂತೆ ಹಣ ಕಟ್ಟಲಾಗಿದ್ದು ಇದರಲ್ಲಿ ಯಾವುದೇ ಅಕ್ರಮವಾಗಿಲ್ಲ.
– ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಕಾರ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next