Advertisement

Karnataka Bank; ಕರಾವಳಿಯ ಪ್ರತಿಭೆಗಳನ್ನು ಉಳಿಸಿಕೊಳ್ಳಲು ಶ್ರಮಿಸಿ: ಡಿ.ಕೆ.ಶಿವಕುಮಾರ್‌

12:39 AM Feb 19, 2024 | Team Udayavani |

ಮಂಗಳೂರು: ಕರಾವಳಿ ಪ್ರತಿಭೆಗಳನ್ನು ಇಲ್ಲಿಯೇ ಉಳಿಸಿ ಕೊಂಡು ಪ್ರದೇಶ ಅಭಿವೃದ್ಧಿಗೆ ದುಡಿಸಿ
ಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಚಿಂತಿಸಬೇಕಿದೆ ಎಂದು ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

100 ವರ್ಷಗಳನ್ನು ಪೂರೈಸಿರುವ ಖಾಸಗಿ ರಂಗದ ಮುಂಚೂಣಿಯ ಕರ್ಣಾಟಕ ಬ್ಯಾಂಕ್‌ನ ಶತಮಾನೋತ್ಸವ ಸಮಾರಂಭ ರವಿವಾರ ಇಲ್ಲಿನ ಟಿಎಂಎ ಪೈ ಸಭಾಂಗಣದಲ್ಲಿ ನೆರವೇರಿತು. ಶತಮಾನೋತ್ಸವ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದ ಡಿ.ಕೆ. ಶಿವಕುಮಾರ್‌, ಕರಾವಳಿ ಸುಧಾರಣೆಗೆ ಒತ್ತು ನೀಡಬೇಕಿದೆ ಎಂದರು.

“ನೀವು (ಕರ್ಣಾಟಕ ಬ್ಯಾಂಕ್‌) ಕೇವಲ ಉದ್ಯಮಿಗಳಿಗೆ ಮಾತ್ರವಲ್ಲ, ಎಲ್ಲ ವರ್ಗದ ಜನರಿಗೆ, ರೈತರಿಗೆ ಸೇವೆ ನೀಡುತ್ತಿದ್ದೀರಿ ಎನ್ನುವ ಮಾಹಿತಿ ಇದೆ. ಮಂಗಳೂರಿಗೆ ಎಂತಹ ಇತಿಹಾಸ ಇದೆ ಎಂಬುದು ನಮಗೆಲ್ಲ ಗೊತ್ತು. ಇದು ಸಂಸ್ಕೃತಿ, ಉದ್ಯಮ, ಶಿಕ್ಷಣ, ಮೆಡಿಕಲ್‌ ಕಾಲೇಜುಗಳನ್ನು ಹೊಂದಿರುವ ಪ್ರದೇಶ. ಉತ್ತಮ ಸಂಪರ್ಕ ವ್ಯವಸ್ಥೆಯೂ ಇದೆ.ಆದರೂ ಹಿಂದುಳಿಯುತ್ತಿದೆ. ಇಲ್ಲಿನ ಪ್ರತಿಭಾನ್ವಿತರು ಕಾಲೇಜಿನಿಂದ ಹೊರಗೆ ಬಂದು ಬೇರೆಲ್ಲೋ ದುಡಿಯುವ ಪರಿಸ್ಥಿತಿ ಇದೆ. ಅದಕ್ಕಾಗಿ ನಿಮ್ಮ ಸಿಎಸ್‌ಆರ್‌ ಬಳಸಿಕೊಂಡಾದರೂ ಪ್ರತಿ ಭಾನ್ವಿತರನ್ನು ಇಲ್ಲಿಯೇ ಉಳಿಸಿಕೊಂಡು ಪ್ರದೇಶ ಪ್ರಗತಿಯಾಗುವಂತೆ ಮಾಡಿ. ಈ ಬಗ್ಗೆ ಸರಕಾರಕ್ಕೆ ನಿಮ್ಮ ಯೋಜನೆ ಯನ್ನು ನೀಡಿ ಎಂದು ಹೇಳಿದರು.

ನಾನು ಇಲ್ಲಿ ರಾಜಕೀಯ ಮಾತಾಡು ವುದಿಲ್ಲ, ನಾವು ನೀವು ಸೇರಿಕೊಂಡು ಈ ಅಪೂರ್ವ ಭೂ ಪ್ರದೇಶವನ್ನು ಉಳಿಸುವ ಪಣತೊಡಬೇಕು. ಈ ಭಾಗದಲ್ಲಿ ಜನಿಸಿರುವ ಈ ಬ್ಯಾಂಕ್‌ ಅನ್ನು ಉಳಿಸಿ ಬೆಳೆಸುವ ಗುರಿ ಇಟ್ಟುಕೊಳ್ಳೋಣ ಎಂದ ಅವರು, ಈ 100 ವರ್ಷ ತುಂಬಿದ ದೊಡ್ಡ ಸಂಸ್ಥೆಯ ಸಮಾರಂಭದಲ್ಲಿ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌, ಪ್ರಹ್ಲಾದ ಜೋಶಿ, ವಿಧಾನಸಭಾಧ್ಯಕ್ಷ ಯುಟಿ. ಖಾದರ್‌ ಬರಬೇಕಿತ್ತು, ರಾಜ್ಯದ ಪ್ರತಿನಿಧಿಯಾಗಿ ನನಗೆ ಸಿಕ್ಕಿದ್ದು ನಿಜಕ್ಕೂ ಭಾಗ್ಯ ಎಂದರು.

ಬ್ಯಾಂಕಿಂಗ್‌ ಭಾರತ್‌
ಜೋಡೋ ಆಗಲಿ
ಭಾರತ ಸರಕಾರದ ಅಟಾರ್ನಿ ಜನರಲ್‌ ಆರ್‌. ವೆಂಕಟರಮಣಿ ಮಾತ ನಾಡಿ, ಕರ್ಣಾಟಕ ಬ್ಯಾಂಕ್‌ ದೇಶಾದ್ಯಂತ ಬ್ಯಾಂಕಿಂಗ್‌ ಕನಸು ಹುಟ್ಟುಹಾಕಿದೆ. ಅದೇ ರೀತಿ ಕನ್ಯಾಕುಮಾರಿ ಹಾಗೂ ಕಾಶ್ಮೀರ ದಲ್ಲೂ ಶಾಖೆ ತೆರೆಯುವ ಮೂಲಕ ಭಿನ್ನವಾದ “ಭಾರತ್‌ ಜೋಡೋ’ ಯೋಜನೆ ಹಮ್ಮಿಕೊಳ್ಳಲಿ. ಆ ಮೂಲಕ ಮೌಲ್ಯಯುತವಾದ ಉತ್ಪನ್ನಗಳು ಜನರಿಗೆ ಸಿಗುವಂತಾಗಲಿ ಹಾಗೂ ನೂರಾರು ಕರ್ಣಾಟಕ ಬ್ಯಾಂಕ್‌ಗಳು ಜನಿಸುವಂತಾಗಲಿ ಎಂದು ಹಾರೈಸಿದರು.

Advertisement

ಕೆಲವು ವರ್ಷಗಳಲ್ಲಿ ದೇಶದಲ್ಲಿ ರಾಷ್ಟ್ರೀಯ ಮಹತ್ವದ ಅನೇಕ ಸಂಸ್ಥೆಗಳನ್ನು ಆರಂಭಿಸಲಾಗಿದೆ. ಬ್ಯಾಂಕಿಂಗ್‌ ರಂಗ ನಿಂತ ನೀರಾಗದೆ ಸದಾ ಪ್ರಗತಿಯಲ್ಲಿರಬೇಕಾದರೆ ಅದರಲ್ಲೂ ಸಂಶೋಧನೆ ಆಗಬೇಕು, ಅದಕ್ಕೊಂದು ಸಂಸ್ಥೆಯನ್ನು ಹುಟ್ಟು ಹಾಕುವ ಕೆಲಸವನ್ನು ಕರ್ಣಾಟಕ ಬ್ಯಾಂಕೇ ವಹಿಸಿ ಕೊಳ್ಳಲಿ ಎಂದು ಸಲಹೆ ನೀಡಿದರು.

ರಾಜ್ಯದ ಪೋಸ್ಟ್‌ಮಾಸ್ಟರ್‌ ಜನರಲ್‌ ರಾಜೇಂದ್ರ ಕುಮಾರ್‌ ಮಾತ ನಾಡಿ, ಪಂಚ ರತ್ನಗಳಲ್ಲಿ ಒಂದಾದ ಕರ್ಣಾಟಕ ಬ್ಯಾಂಕ್‌ ಶ್ಲಾಘನೀಯ ಸೇವೆ, ತಂತ್ರಜ್ಞಾನ ಹಾಗೂ ಉತ್ತಮ ಸಿಬಂದಿ ವರ್ಗ ಹೊಂದಿದೆ ಎಂದು ಶುಭ ಹಾರೈಸಿದರು.

ಬ್ಯಾಂಕ್‌ನ ಚೇರ್ಮನ್‌ ಪಿ. ಪ್ರದೀಪ್‌ ಕುಮಾರ್‌ ಮಾತನಾಡಿ, 100 ವರ್ಷಗಳಲ್ಲಿ ಗ್ರಾಹಕರ ಅವಿರತ ಅನಿಯ ಮಿತ ಬೆಂಬಲ, ಸಿಬಂದಿಯ ಸೇವಾ ಬದ್ಧತೆ, ಆಡಳಿತವರ್ಗದ ಸದಾ ನವೀನತೆಗೆ ತೆರೆದುಕೊಳ್ಳುವ ಗುಣ ದಿಂದಾಗಿ ಇಷ್ಟು ದೊಡ್ಡ ಗಾತ್ರಕ್ಕೆ ಬೆಳೆಯುವಂತಾಯಿತು ಎಂದರು.

ಭಾರತದ ಬ್ಯಾಂಕ್‌
ಆಗುತ್ತಿದೆ ಕೆಬಿಎಲ್‌
ಬ್ಯಾಂಕ್‌ ಎಂಡಿ ಹಾಗೂ ಸಿಇಒ ಶ್ರೀಕೃಷ್ಣನ್‌ ಎಚ್‌. ಸ್ವಾಗತಿಸಿ, ಈ ಭಾಗ ದಿಂದ ಖಾಸಗಿ ರಂಗದಲ್ಲಿ ಹುಟ್ಟಿ 100 ವರ್ಷ ಪೂರೈಸಿದ ಏಕೈಕ ಬ್ಯಾಂಕ್‌ ಆಗಿ ಕರ್ಣಾಟಕ ಬ್ಯಾಂಕ್‌ ಹೊರಹೊಮ್ಮಿದೆ. ಎಲ್ಲÉ 99 ವರ್ಷಗಳಲ್ಲೂ ಲಾಭ ಗಳಿಸಿದ್ದೇ ಅಲ್ಲದೆ, ಮೂರು ವರ್ಷ ಬಿಟ್ಟುಳಿದಂತೆ 96 ವರ್ಷಗಳಲ್ಲೂ ನಿರಂತರ ಲಾಭಾಂಶವನ್ನು ವಿತರಿಸಿದ ದಾಖಲೆ ನಮ್ಮದು ಎಂದರು.

ಆದ್ಯತೆಯ ಷೇರುಗಳ ವಿತರಣೆ ಮೂಲಕ ನಾವು ಈಗಾಗಲೇ 800 ಕೋಟಿ ರೂ. ಸಂಗ್ರಹಿಸಿದ್ದು, ಇನ್ನೂ 700 ಕೋಟಿ ರೂ. ಸಂಗ್ರಹವಾಗಬೇಕಿದೆ. ಬ್ಯಾಂಕ್‌ 100 ವರ್ಷಗಳ ಬಳಿಕ ಅದೇ ಪರಂಪರೆಯೊಂದಿಗೆ ಹೊಸತನವನ್ನು ಅಪ್ಪಿಕೊಳ್ಳಲು ಮುಂದಾಗುತ್ತಿದೆ. ಕರ್ಣಾಟಕ ಬ್ಯಾಂಕ್‌ ಈಗ ಕೇವಲ ನಮ್ಮ ಬ್ಯಾಂಕ್‌ ಅಲ್ಲ, “ಭಾರತದ ಕರ್ಣಾಟಕ ಬ್ಯಾಂಕ್‌’ ಆಗಿ ಗುರುತಿಸಿಕೊಳ್ಳುತ್ತಿದೆ ಎಂದು ವಿವರಿಸಿದರು. ಕಾರ್ಯ ನಿರ್ವಾಹಕ ನಿರ್ದೇಶಕ ಶೇಖರ್‌ ರಾವ್‌ ವಂದಿಸಿದರು.

ವಿಲೀನ ಮಾಡಬೇಡಿ, ವಿಲೀನ ಮಾಡಿಸಿಕೊಳ್ಳಿ !
ಕರ್ಣಾಟಕ ಬ್ಯಾಂಕ್‌ ಯಾವುದೇ ಕಾರಣಕ್ಕೂ ಬೇರೆ ಬ್ಯಾಂಕ್‌ಗಳೊಂದಿಗೆ ವಿಲೀನ ಆಗಬಾರದು, ಬದಲಿಗೆ ಬೇರೆ ಬ್ಯಾಂಕ್‌ಗಳನ್ನೇ ಇದರಲ್ಲಿ ವಿಲೀನ ಮಾಡುವುದಕ್ಕೆ ಎಲ್ಲರೂ ಪ್ರತಿಜ್ಞಾಬದ್ಧರಾಗಬೇಕು ಎಂದು ಹೇಳಿದ ಡಿ ಕೆ ಶಿವಕುಮಾರ್‌, ಬ್ಯಾಂಕಿಂಗ್‌ ರಂಗದ ತೊಟ್ಟಿಲು ಎಂದೇ ಖ್ಯಾತಿ ಪಡೆದ ಅವಿಭಜಿತ ದಕ್ಷಿಣ ಕನ್ನಡದಲ್ಲಿ ಹುಟ್ಟಿದ ಕಾರ್ಪೊರೇಶನ್‌ ಬ್ಯಾಂಕ್‌, ವಿಜಯ ಬ್ಯಾಂಕ್‌, ಸಿಂಡಿಕೇಟ್‌ ಬ್ಯಾಂಕ್‌ಗಳೆಲ್ಲಾ ಬೇರೆ ಬ್ಯಾಂಕ್‌ಗಳಲ್ಲಿ ವಿಲೀನವಾಗಿವೆ. ಆದರೆ ಕರ್ಣಾಟಕ ಬ್ಯಾಂಕ್‌ ರಾಜ್ಯ ಉದಯವಾಗುವ ಮೊದಲೇ, ಸ್ವಾತಂತ್ರ್ಯ ಕ್ಕೂ ಮೊದಲೇ ಸ್ಥಾಪನೆಯಾಗಿರುವಂಥದ್ದು, ಅಷ್ಟು ದೊಡ್ಡ ಇತಿಹಾಸ, ಸಂಸ್ಕೃತಿ, ಪರಂಪರೆ ಹೊಂದಿದೆ. ಅದನ್ನು ಯಾವುದೇ ಕಾರಣಕ್ಕೂ ಬೇರೆ ಬ್ಯಾಂಕ್‌ ಜತೆ ವಿಲೀನ ಮಾಡಬೇಡಿ. ನಿಮ್ಮ ಇತಿಹಾಸ ಉತ್ತಮವಾಗಿದೆ, ಶಿವರಾಮ ಕಾರಂತರು ಅರ್ಥಪೂರ್ಣ ಲಾಂಛನ ಮಾಡಿಕೊಟ್ಟಿದ್ದಾರೆ. ಅದನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ನಿಮ್ಮದು ಎಂದು ಹೇಳಿದರು.

ಶತಮಾನೋತ್ಸವ
ಕಟ್ಟಡ ಉದ್ಘಾಟನೆ
ಸಮಾರಂಭಕ್ಕಿಂತ ಮೊದಲು ಮಂಗಳೂರಿನ ಪಂಪ್‌ವೆಲ್‌ ಬಳಿಯಿರುವ ಬ್ಯಾಂಕ್‌ನ ಪ್ರಧಾನ ಕಚೇರಿ ಬಳಿಯೇ ನಿರ್ಮಿಸಲಾದ ಶತಮಾನೋತ್ಸವ ಕಟ್ಟಡವನ್ನು ಡಿಸಿಎಂ ಡಿ.ಕೆ. ಶಿವಕುಮಾರ್‌ ಉದ್ಘಾಟಿಸಿದರು. ಶತಮಾನೋತ್ಸವ ಸವಿನೆನಪಿಗೆ 100 ರೂ.ನ ವಿಶಿಷ್ಟ ನಾಣ್ಯ, ಅಂಚೆ ಚೀಟಿ ಹಾಗೂ ಕವರ್‌ಗಳನ್ನು ಗಣ್ಯರು ಬಿಡುಗಡೆ ಮಾಡಿದರು. ಅಲ್ಲದೆ ಶತಮಾನೋತ್ಸವ ನೆನಪಿನ ಸ್ಮರಣ ಸಂಚಿಕೆ ಹಾಗೂ ನವೀಕೃತ ವೆಬ್‌ಸೈಟ್‌ಗಳನ್ನು ಅನಾವರಣಗೊಳಿಸಲಾಯಿತು. ಇದೇ ವೇಳೆ ಕರ್ಣಾಟಕ ಬ್ಯಾಂಕ್‌ನ ವಿವಿಧ ಕಡೆಗಳಲ್ಲಿ 16 ಶಾಖೆಗಳನ್ನು ಏಕಕಾಲದಲ್ಲಿ ಉದ್ಘಾಟನೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next