Advertisement

ಕರ್ಣಾಟಕ ಬ್ಯಾಂಕ್‌: 196.38 ಕೋ.ರೂ. ನಿವ್ವಳ ಲಾಭದ ದಾಖಲೆ

02:41 AM Jul 11, 2020 | Hari Prasad |

ಮಂಗಳೂರು: ದೇಶದ ಪ್ರತಿಷ್ಠಿತ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಕರ್ಣಾಟಕ ಬ್ಯಾಂಕ್‌ ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ತೈಮಾಸಿಕದ ಅಂತ್ಯಕ್ಕೆ ಶೇ. 11.95 ಅಭಿವೃದ್ಧಿಯೊಂದಿಗೆ ಸಾರ್ವಕಾಲಿಕ ದಾಖಲೆಯ 196.38 ಕೋ.ರೂ. ನಿವ್ವಳ ಲಾಭವನ್ನು ಘೋಷಿಸಿದೆ.

Advertisement

ಕೋವಿಡ್ 19ನ ಈ ಕಠಿನ ಸಮಯದಲ್ಲಿ ಬ್ಯಾಂಕ್‌ ಅಪ್ರತಿಮ ಸಾಧನೆ ಮಾಡಿದೆ.

ಬ್ಯಾಂಕಿನ ಇತಿಹಾಸದಲ್ಲಿ ಇದು ಸ್ಮರಣೀಯ ಸಾಧನೆ ಎಂದು ಬ್ಯಾಂಕಿನ ಎಂಡಿ ಮತ್ತು ಸಿಇಒ ಮಹಾಬಲೇಶ್ವರ ಎಂ.ಎಸ್‌ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ವೆಬೆಕ್ಸ್‌ ಮುಖಾಂತರ ಸಂಪನ್ನಗೊಂಡ ಆಡಳಿತ ಮಂಡಳಿಯ ಸಭೆಯಲ್ಲಿ ವಿತ್ತೀಯ ವರ್ಷ 2021ರ ಮೊದಲ ತ್ತೈಮಾಸಿಕದ ಹಣಕಾಸು ವರದಿಯನ್ನು ಅಂಗೀಕರಿಸಲಾಯಿತು.

ಬ್ಯಾಂಕಿನ ನಿರ್ವಹಣ ಲಾಭವು ಹಿಂದಿನ ವರ್ಷದ ಮೊದಲ ತ್ತೈಮಾಸಿಕದ ಅಂತ್ಯಕ್ಕೆ ಇದ್ದ 350.01 ಕೋ.ರೂ.ಗಳಿಂದ 677.04 ಕೋ.ರೂ.ಗೆ ತಲುಪಿ, ಶೇ. 93.43ರ ದರದ ಬೆಳವಣಿಗೆ ದಾಖಲಿಸಿದೆ.

Advertisement

ನಿವ್ವಳ ಬಡ್ಡಿ ಲಾಭವು ವರ್ಷದಿಂದ ವರ್ಷಕ್ಕೆ ಶೇ. 8.19ರ ದರದಲ್ಲಿ ಹೆಚ್ಚಳಗೊಂಡು 535.12 ಕೋ.ರೂ. ತಲುಪಿದೆ. ಹಿಂದಣ ವರ್ಷ ಇದೇ ಅವಧಿಯಲ್ಲಿ ಅದು 494.59 ಕೋ.ರೂ.ಗಳಾಗಿತ್ತು.

ಬ್ಯಾಂಕಿನ ಒಟ್ಟು ವ್ಯವಹಾರವು 2020ರ ಜೂ.30 ಅಂತ್ಯಕ್ಕೆ 1,26,063.48 ಕೋ.ರೂ. ತಲುಪಿದ್ದು, ವರ್ಷದಿಂದ ವರ್ಷಕ್ಕೆ ಶೇ. 3.89 ಬೆಳವಣಿಗೆ ಸಾಧಿಸಿದೆ.

ಬ್ಯಾಂಕಿನ ಠೇವಣಿಗಳ ಮೊತ್ತವು 68,520.72 ಕೋ.ರೂ.ನಿಂದ 71,853.98 ಕೋ.ರೂ.ಗೆ ಮತ್ತು ಮುಂಗಡಗಳು 52,818.80 ಕೋ.ರೂ.ನಿಂದ 54,209.50 ಕೋ.ರೂ.ಗೆ ತಲುಪಿದೆ. ಮುಂಗಡ ಮತ್ತು ಠೇವಣಿಗಳ ಅನುಪಾತ ಉತ್ತಮಗೊಂಡಿದ್ದು, ಶೇ. 75.44ರಷ್ಟಿದೆ. ಕಳೆದ ವರ್ಷದ ಮೊದಲ ಮಾಸಿಕ ಅಂತ್ಯಕ್ಕೆ (30-06-2019) ಶೇ. 12.70ರಷ್ಟಿದ್ದ ಬಂಡವಾಳ ಪರ್ಯಾಪ್ತತಾ ಅನುಪಾತವು (ಕ್ಯಾಪಿಟಲ್‌ ಅಡ್ವೆಕೆಸಿ ರೇಶಿಯೋ) ಈ ತ್ತೈಮಾಸಿಕದ ಅಂತ್ಯಕ್ಕೆ ಇನ್ನೂ ಉತ್ತಮಗೊಂಡು ಶೇ 13.07ರಷ್ಟಾಗಿದೆ.

ಪ್ರಸಕ್ತ ಸಾಲಿನ ಮೊದಲ ತ್ತೈಮಾಸಾಂತ್ಯಕ್ಕೆ (2020-21 ಆರ್ಥಿಕ ವರ್ಷ) ಬ್ಯಾಂಕಿನ ಸ್ಥೂಲ ಅನುತ್ಪಾದಕ ಆಸ್ತಿಗಳು ಇಳಿಕೆ ಕಂಡಿದ್ದು (ಜಿಎನ್‌ಪಿಎ) ಶೇ. 4.64ರಷ್ಟಿವೆ. ಅದು ಕಳೆದ ತ್ತೈಮಾಸಾಂತ್ಯಕ್ಕೆ, ಅಂದರೆ 2020ರ ಮಾ.31ರಲ್ಲಿ ಶೇ.4.82 ಆಗಿತ್ತು. ಅದರಂತೆಯೇ ಬ್ಯಾಂಕಿನ ನಿವ್ವಳ ಅನುತ್ಪಾದಕ ಸೊತ್ತುಗಳು (ಎನ್‌ಎನ್‌ಪಿಎ) ಶೇ. 3.01ರಷ್ಟಕ್ಕೆ ಇಳಿಕೆಯಾಗಿದ್ದು, ಈ ಮುಂಚೆ ಅದು ಶೇ.3.08ರಷ್ಟಿತ್ತು.

ಅಪ್ರತಿಮ ಸಾಧನೆ: ಮಹಾಬಲೇಶ್ವರ ಎಂ.ಎಸ್‌.
ಪ್ರಸಕ್ತ ವರ್ಷದ ಮೊದಲ ತ್ತೈಮಾಸಿಕದ ಫಲಿತಾಂಶದ ಬಗ್ಗೆ ಹರ್ಷ ವ್ಯಕ್ತಪಡಿಸಿದ ಬ್ಯಾಂಕಿನ ಮ್ಯಾನೇಜಿಂಗ್‌ ಡೈರೆಕ್ಟರ್‌ ಮತ್ತು ಸಿಇಒ ಮಹಾಬಲೇಶ್ವರ ಎಂ.ಎಸ್‌. ಅವರು, ಕೋವಿಡ್ 19 ಸೋಂಕು ರೋಗ ಜಗತ್ತನ್ನೇ ಘಾಸಿಗೊಳಿಸಿ ಅನಿಶ್ಚಿತತೆಗಳ ಆಗರವನ್ನೇ ಸೃಷ್ಟಿಸಿದೆ.

ಈ ಸಂಕಷ್ಟದ ಪರಿಸ್ಥಿತಿಗೆ ನಾವೂ ಹೊರತಲ್ಲ. ಆದರೂ ಈ ಕಠಿನ ಸಮಯದಲ್ಲಿ ಕರ್ಣಾಟಕ ಬ್ಯಾಂಕ್‌ ಅಪ್ರತಿಮ ಸಾಧನೆ ಮಾಡಿ 196.38 ಕೋ.ರೂ. ಸರ್ವಾಧಿಕ ನಿವ್ವಳ ಲಾಭವನ್ನು ಗಳಿಸಿದೆ. ಬ್ಯಾಂಕಿನ ಇತಿಹಾಸದಲ್ಲಿ ಇದೊಂದು ಸ್ಮರಣೀಯ ಸಾಧನೆ.

ಬ್ಯಾಂಕ್‌ ಸಾರ್ವಕಾಲಿಕ ದಾಖಲೆಯ 196.38 ಕೋ.ರೂ. ನಿವ್ವಳ ಲಾಭದೊಂದಿಗೆ ಸಾರ್ವಕಾಲಿಕ ದಾಖಲೆಯ 677.04 ಕೋ.ರೂ. ನಿರ್ವಹಣಾ ಲಾಭವನ್ನೂ ಗಳಿಸಿರುವುದು ಗಮನಾರ್ಹ ಎಂದರು.

ಸಂಕಷ್ಟದ ಸಮಯದಲ್ಲಿನ ಈ ಸಾಧನೆ ನಮಗೊಂದು ಸುಂದರ ಸ್ವಪ್ನದಂತೆ ಭಾಸವಾಗಿ ಸಂತಸವನ್ನಿತ್ತಿದೆ. ಇದೆಲ್ಲ ಸಾಧ್ಯವಾದದ್ದು ನಾವು ಸಾಕಷ್ಟು ಮುಂದಾಲೋಚನೆಯಿಂದ ನಮ್ಮ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿದ್ದು, ಉತ್ತಮವಾದ ಖಜಾನೆ ಕಾರ್ಯಾಚರಣೆ, ಉತ್ತಮಗೊಂಡ ಬಡ್ಡಿ ಆದಾಯ ಹಾಗೂ ಬಡ್ಡಿ ಆದಾಯದ ಹರಿವಿನಲ್ಲಿನ ಉತ್ತಮ ಹೆಚ್ಚಳ ಇತ್ಯಾದಿಗಳಿಂದ.

ಕೋವಿಡ್‌-19ರ ಕಷ್ಟಕಾಲದಲ್ಲಿನ ಮೊದಲೆರಡು ತ್ತೈಮಾಸಿಕ (2019-20ರ ಕೊನೆಯ ತ್ತೈಮಾಸಿಕ ಹಾಗೂ 2020-21ರ ಮೊದಲ ತ್ತೈಮಾಸಿಕ)ಗಳನ್ನು ಅತ್ಯಂತ ಸಮರ್ಥವಾಗಿ ಎದುರಿಸಿದ ಅನುಭವದ ಆಧಾರದ ಮೇಲೆ ಮುಂಬರುವ ದಿನಗಳಲ್ಲಿ ನಾವು ಅನೇಕ ಸಂರಕ್ಷಣ ಉಪಕ್ರಮಗಳೊಂದಿಗೆ ಮುನ್ನಡೆಯುವುದಲ್ಲದೆ ಸುಸ್ಥಿರವಾದ ಮತ್ತು ನಿರಂತರವಾದ ಸಾಧನೆಯನ್ನು ಮಾಡುವ ಅಚಲ ವಿಶ್ವಾಸವನ್ನು ಹೊಂದಿದ್ದೇವೆ. ಬ್ಯಾಂಕ್‌ನೊಂದಿಗೆ ಸದಾ ಕೈಜೋಡಿಸಿರುವ ಗ್ರಾಹಕರೆಲ್ಲರಿಗೂ ವಿಶೇಷ ಅಭಿನಂದನೆಗಳು ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next