Advertisement

ಕುಂದಾಪುರ ಕ್ಷೇತ್ರ: ಹಾಲಾಡಿ ವರ್ಚಸ್ಸಿನ ಮತಗಳ ಮೇಲೆ ಎಲ್ಲರ ಕಣ್ಣು

07:20 AM May 01, 2018 | Karthik A |

ಕುಂದಾಪುರ: ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ ಎಂಬಂತಾಗಿದೆ ಕುಂದಾಪುರ ಕ್ಷೇತ್ರ. ಇಲ್ಲಿರುವುದು ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ವೈಯಕ್ತಿಕ ವರ್ಚಸ್ಸಿನ ಮತಗಳೋ ಬಿಜೆಪಿ ಪಕ್ಷದ ಮತಗಳೋ ಬಿಜೆಪಿಯಿಂದಾಗಿ ಹಾಲಾಡಿ ಗೆದ್ದರೋ ಹಾಲಾಡಿಯಿಂದಾಗಿ ಬಿಜೆಪಿ ಗೆಲ್ಲುತ್ತಿದೆಯೋ ಎಂಬ ದ್ವಂದ್ವ ಸದಾ ಚಾಲ್ತಿಯಲ್ಲಿದೆ. ಬಿಜೆಪಿಯಿಂದ ಮೂರು ಬಾರಿ ಗೆದ್ದ, ಒಮ್ಮೆ ಪಕ್ಷೇತರನಾಗಿ ಗೆದ್ದ ಸತತ ಗೆಲುವಿನ ಸರದಾರ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಕಾಂಗ್ರೆಸ್‌ನಿಂದ ರಾಕೇಶ್‌ ಮಲ್ಲಿ ಸ್ಪರ್ಧಿ. ಉಳಿದಂತೆ ಜೆಡಿಎಸ್‌, ಜೆಡಿಯು, ಆರ್‌.ಪಿ.ಐ.ಎ. ಪಕ್ಷಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ.

Advertisement

90ರ ದಶಕದವರೆಗೂ ಕಾಂಗ್ರೆಸ್‌ ಪ್ರಚಂಡ ಗೆಲುಮೆಯಲ್ಲಿದ್ದ ಕಾಲ. ವರ್ಷಾನುಗಟ್ಟಲೆ ಇಲ್ಲಿ ಕಾಂಗ್ರೆಸ್‌ನದ್ದೇ ಪಾರಮ್ಯ ಇತ್ತು. 1983ರಿಂದ 1994ರವರೆಗೆ ಪ್ರತಾಪಚಂದ್ರ ಶೆಟ್ಟರು ಕಾಂಗ್ರೆಸ್‌ನಿಂಧ ಸ್ಪರ್ಧಿಸಿ ಸತತವಾಗಿ ಗೆದ್ದರು. ಕಾಂಗ್ರೆಸ್‌ನಲ್ಲಿದ್ದ ಎ.ಜಿ. ಕೊಡ್ಗಿ ಅವರು ಬಿಜೆಪಿಗೆ ಸೇರ್ಪಡೆಯಾಗಿ ಸ್ಪರ್ಧಿಸಿ ಸೋತರು. ಹಾಲಾಡಿ ಶ್ರೀನಿವಾಸ ಶೆಟ್ಟರನ್ನು ಬಿಜೆಪಿಗೆ ಪರಿಚಯಿಸಿದರು. ಬಿಜೆಪಿಗೆ ಭದ್ರ ಬುನಾದಿ ಒದಗಿಸಿ 1999ರಿಂದ ಹಾಲಾಡಿ ಗೆಲ್ಲಲಾರಂಭಿಸಿದರು. ಅನಂತರ ಹಾಲಾಡಿ ಗೆಲುವಿನ ನಾಗಾಲೋಟಕ್ಕೆ ಕಡಿವಾಣ ಹಾಕಲು ಯಾರಿಂದಲೂ ಸಾಧ್ಯವಾಗಿಲ್ಲ. ಹಾಲಾಡಿ ಸ್ಪರ್ಧೆ ಆರಂಭಿಸಿದ ಮೇಲೆ ಸೋತದ್ದೇ ಇಲ್ಲ. 1989ರಲ್ಲಿ ಬಿಜೆಪಿಗೆ ಕುಂದಾಪುರದಲ್ಲಿ ಲಭಿಸಿದ ಮತಗಳು 3,086. ಅದೇ 1994ರಲ್ಲಿ ಎ.ಜಿ. ಕೊಡ್ಗಿ ಸ್ಪರ್ಧಿಸಿದಾಗ 37,770. ಹಾಲಾಡಿ ಗೆಲುವಿನ ನಗೆ ಬೀರತೊಡಗಿದ ಮೇಲೆ ಬಿಜೆಪಿ ಮತಗಳಿಕೆ ಏರುಗತಿಯಲ್ಲೇ ಇತ್ತು. ರಾಜಕೀಯ ಚಾಣಾಕ್ಷ, 67ರ ಹರೆಯದ ಹಾಲಾಡಿ ಅವರು ಪಕ್ಷೇತರರಾಗಿ 2013ರಲ್ಲಿ ಸ್ಪರ್ಧಿಸಿ ಗೆದ್ದಾಗ ಗೆಲುವಿನ ಅಂತರವೇ 40,611 ಮತಗಳು. ಆಗ ಬಿಜೆಪಿಗೆ ಲಭಿಸಿದ ಮತಗಳು 14,524. ಅಂದರೆ ಹಾಲಾಡಿಯವರು ಗಳಿಸಿದ 80,563 ಮತಗಳು ವೈಯಕ್ತಿಕ ವರ್ಚಸ್ಸಿನ ಪ್ರಭಾವವೇ. ಪಕ್ಷದ ಅಷ್ಟೂ ಮತಗಳನ್ನು ತಮ್ಮದನ್ನಾಗಿಸಿದ ರಾಜಕೀಯ ಚತುರ ನಡೆಯ ರಾಜಕಾರಣಿ. ಜನಸಾಮಾನ್ಯರ ಬಳಿ ಎಂದಿಗೂ ಜನಸಾಮಾನ್ಯನಾಗಿಯೇ ಉಳಿದ ಆಡಂಬರವಿಲ್ಲದ ಬ್ರಹ್ಮಚಾರಿ. ಪ್ರಚಾರದ ಜಿದ್ದಿಗೆ ಬೀಳದೆ ಜನರ ನಡುವೆಯೇ ಬೆರೆಯುವ ಶಾಸಕ. ಕುಂದಾಪುರ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಹೇಳಿಕೊಳ್ಳುವಂತಹ ಸಮಸ್ಯೆಗಳಿಲ್ಲ. ಕುಡಿಯುವ ನೀರಿಗೆ ಆದ್ಯತೆ ಕೊಡಲಾಗಿದೆ. ಜನ ಕ್ಷೇತ್ರದ ಅಭಿವೃದ್ಧಿಯನ್ನು ಕಣ್ಣಾರೆ ಕಾಣುತ್ತಿದ್ದಾರೆ. ಹಾಗಾಗಿ ಶಾಸಕರ ಬದಲಾವಣೆ ಇಲ್ಲಿನ ಮಟ್ಟಿಗೆ ಅಗತ್ಯವಿಲ್ಲ ಎಂಬ ಭಾವನೆ ಜನರದ್ದು ಎನ್ನುತ್ತಾರೆ ಹಾಲಾಡಿ.

ಬಿಜೆಪಿ ಸರಕಾರ ಸಚಿವ ಸ್ಥಾನ ಕೊಡಿಸುವುದಾಗಿ ಬೆಂಗಳೂರಿಗೆ ಕರೆಸಿ ಕೊನೆಕ್ಷಣದಲ್ಲಿ ಕೈ ಕೊಟ್ಟ ಬೇಸರದಲ್ಲಿ ಪಕ್ಷ ತೊರೆದ ಹಾಲಾಡಿ ಪಕ್ಷೇತರರಾಗಿ ಗೆದ್ದು ತಮ್ಮ ಪ್ರಭಾವ ಪ್ರದರ್ಶಿಸಿದ್ದರು. ಹಾಗಾಗಿ ಈ ಬಾರಿ ಬಿಜೆಪಿಯೇ ಅವರಿಗೆ ರತ್ನಗಂಬಳಿ ಹಾಸಿ ಸ್ವಾಗತಿಸಿ ಪಕ್ಷದಲ್ಲಿ ಟಿಕೆಟ್‌ ನೀಡಿದೆ. ಅವರ ಸ್ಪರ್ಧೆಗೆ ರಾಜಕೀಯ ಗುರು ಎ.ಜಿ. ಕೊಡ್ಗಿಯವರ ಅಪಸ್ವರವೂ ಸೇರಿದಂತೆ ಇದ್ದ ವಿರೋಧ ಎಲ್ಲೂ ಚಿಗಿತುಕೊಳ್ಳಲೇ ಇಲ್ಲ. ಎ.ಜಿ. ಕೊಡ್ಗಿ ಅವರ ಮಗ ಕಿರಣ್‌ ಕೊಡ್ಗಿ ಅವರೇ ಹಾಲಾಡಿ ಜತೆ ಓಡಾಡಿ ಮತಯಾಚಿಸುತ್ತಿದ್ದಾರೆ. 


ಇವರಿಗೆ ಸ್ಪರ್ಧೆಯೊಡ್ಡಿರುವ ಕಾಂಗ್ರೆಸ್‌ ಅಭ್ಯರ್ಥಿ, ಇಂಟಕ್‌ ರಾಜ್ಯಾಧ್ಯಕ್ಷ, ಎಐಸಿಸಿ ಸದಸ್ಯ, ಕಬಡ್ಡಿ ಅಸೋಸಿಯೇಶನ್‌ ರಾಜ್ಯಾಧ್ಯಕ್ಷ ರಾಕೇಶ್‌ ಮಲ್ಲಿ ಉದ್ಯಮಿಯಾಗಿದ್ದವರು. ಚುನಾವಣೆ ಸಲುವಾಗಿಯೇ ಬಂಟ್ವಾಳದಿಂದ ಇಲ್ಲಿ ಬಂದು ಮನೆ ಮಾಡಿ ತಿರುಗಾಟ ನಡೆಸಿ ಪಕ್ಷ ಸಂಘಟಿಸಿದರು. ಕಬಡ್ಡಿ, ಕ್ರಿಕೆಟ್‌ ಎಂದು ಯುವಕರನ್ನು ಬೆಂಬಲಿಸಿದರು. ಸಾಕಷ್ಟು ತಿರುಗಾಟ ನಡೆಸಿ ಕಾರ್ಯಕರ್ತರ ಸಭೆಗಳನ್ನು ನಡೆಸಿದರು. ಆದರೆ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಎದುರು ಕುಂದಾಪುರ ಜನತೆಗೆ ಹೊಸಬರಾದ, ರಾಜಕೀಯ ಅನುಭವದಲ್ಲಿ ಎಳಸು ಆದ, ಚೊಚ್ಚಲ ಚುನಾವಣೆ ಎದುರಿಸುತ್ತಿರುವ ರಾಕೇಶ್‌ ಮಲ್ಲಿ ಅವರ ಓಡಾಟ ಎಷ್ಟು ಮತಗಳಾಗಿ ಪರಿವರ್ತನೆಯಾಗುತ್ತದೆ ಎನ್ನುವುದು ನೋಡಬೇಕಿದೆ. ಹಾಲಾಡಿಯವರಿಗೆ ನಾಲ್ಕು ಅವಕಾಶಗಳನ್ನು ಕೊಟ್ಟಿದ್ದೀರಿ, ನನಗೊಂದು ಅವಕಾಶ ಕೊಟ್ಟು ನೋಡಿ. ನಿಮ್ಮ ನಿರೀಕ್ಷೆಯಂತೆ ಕೆಲಸ ಮಾಡದಿದ್ದರೆ ಮತ್ತೆ ಚುನಾಯಿಸಬೇಡಿ ಎನ್ನುವುದು ಮಲ್ಲಿಯವರ ಮನವಿ.

30 ವರ್ಷಗಳಿಂದ ಕಾರ್ಮಿಕರ ಪರ ಶಾಸಕರಿಲ್ಲ. ಇಂಟಕ್‌ ಮೂಲಕ ಕಾಂಗ್ರೆಸ್‌ ನನಗೆ ಅವಕಾಶ ನೀಡಿದೆ. ಕಾರ್ಮಿಕ ಸಂಘಟನೆ ಅಧ್ಯಕ್ಷನಾಗಿ, ಕೃಷಿ ಕುಟುಂಬದವನಾಗಿ ಈ ಕ್ಷೇತ್ರಗಳ ಪ್ರತಿನಿಧಿಯಾಗಿ ವಿಧಾನಸಭೆಯಲ್ಲಿ ಧ್ವನಿ ಎತ್ತಬೇಕಿದೆ. ಉದ್ಯೋಗಕ್ಕೆ ಆದ್ಯತೆ, ಕೃಷಿಗೆ ಒತ್ತು, ಕಾರ್ಮಿಕ ಕಲ್ಯಾಣ ನನ್ನ ಮುಖ್ಯ ಉದ್ದೇಶ. ಕುಂದಾಪುರವನ್ನು ಮಾದರಿ ಕ್ಷೇತ್ರವಾಗಿಸಬೇಕಿದೆ.
– ರಾಕೇಶ್‌ ಮಲ್ಲಿ, ಕಾಂಗ್ರೆಸ್‌ ಅಭ್ಯರ್ಥಿ

Advertisement

ಮತ್ತೂಮ್ಮೆ ಯಾಕೆ ನನ್ನನ್ನು ಆಯ್ಕೆ ಮಾಡಬೇಕು, ಈವರೆಗೆ ಏನು ಮಾಡಿದ್ದೇನೆ ಎನ್ನುವುದಕ್ಕೆ ಜನ ಫ‌ಲಿತಾಂಶದ ಮೂಲಕ ಉತ್ತರ ನೀಡಲಿದ್ದಾರೆ. ಕಳೆದ ಬಾರಿಗಿಂತಲೂ ಹೆಚ್ಚಿನ ಅಂತರದ ಮತಗಳಲ್ಲಿ ಗೆಲುವು ಸಾಧಿಸಲಿದ್ದೇನೆ. ವಿಪಕ್ಷದವರು ಹೊಗಳುವುದಿಲ್ಲ, ಹಾಗಾಗಿ ವಿಷಯ ಇಲ್ಲದಿದ್ದರೂ ತೆಗಳುತ್ತಾರೆ. ಇವೆಲ್ಲ ಜನರಿಗೆ ತಿಳಿದೇ ಇರುವ ವಿಚಾರ.
– ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿಜೆಪಿ ಅಭ್ಯರ್ಥಿ

ಕೇವಲ 20 ತಿಂಗಳ ಅವಧಿಯಲ್ಲಿ ಕುಮಾರಸ್ವಾಮಿ ಅವರು ಅತ್ಯುತ್ತಮ ಆಡಳಿತ ನೀಡಿದ್ದಾರೆ. ಆದ್ದರಿಂದ ಈ ಬಾರಿ ಮತ್ತೂಮ್ಮೆ ಜೆಡಿಎಸ್‌ ಸರಕಾರ ಬರಬೇಕಿದೆ. ಜನಸೇವೆಯ ಮೂಲಕ ಗುರುತಿಸಿಕೊಂಡಿರುವ ನಾನು ಸರಕಾರದ ಸೌಲಭ್ಯಗಳನ್ನು ಊರಿಗೆ ತಂದು ಅಭಿವೃದ್ಧಿಯ ಹಾದಿಯಲ್ಲಿ ನಡೆಸಬೇಕಿದೆ.
– ಪ್ರಕಾಶ್‌ ಶೆಟ್ಟಿ, ತೆಕ್ಕಟ್ಟೆ, ಜೆಡಿಎಸ್‌ ಅಭ್ಯರ್ಥಿ

ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next