Advertisement

ಬೆಳ್ತಂಗಡಿ: ಅನುಭವಿ ರಾಜಕಾರಣಿಗೆ ಯುವ ನಾಯಕನ ಸವಾಲು

09:00 AM Apr 27, 2018 | Team Udayavani |

ಬೆಳ್ತಂಗಡಿ: ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಾರುಪತ್ಯ ಮೆರೆದಿದ್ದರೂ ಬಿಜೆಪಿಯೂ ತನ್ನ ಪ್ರಾಬಲ್ಯ ತೋರಿದೆ. ಅನುಭವಿ ರಾಜಕಾರಣಿ ಹಾಗೂ ಯುವ ನಾಯಕನ ನಡುವಿನ ಹಣಾಹಣಿಗೆ ಬೆಳ್ತಂಗಡಿ ಕ್ಷೇತ್ರ ವೇದಿಕೆಯಾಗಲಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್‌, ಬಿಜೆಪಿ ನಡುವೆ ನೇರ ಸ್ಪರ್ಧೆ ನಿಚ್ಚಳವಾಗಿದ್ದರೂ ಜೆ.ಡಿ.ಎಸ್‌.ನಿಂದ ಜೆಡಿಎಸ್‌ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಸುಮತಿ ಎಸ್‌. ಹೆಗ್ಡೆ, ಎಂ.ಇ.ಪಿ ಅಭ್ಯರ್ಥಿಯಾಗಿ ತೋಟತ್ತಾಡಿಯ ಜಗನ್ನಾಥ್‌ ಎಂ, ಶಿವಸೇನೆಯಿಂದ ಪ್ರಸಾದ್‌ ಕುಮಾರ್‌ ಯು., ಸ್ವತಂತ್ರ ಅಭ್ಯರ್ಥಿಗಳಾಗಿ ವೆಂಕಟೇಶ್‌ ಬೆಂಡೆ, ಯು.ಎಂ. ಹಮೀದ್‌ ನಾಮಪತ್ರ ಸಲ್ಲಿಸಿದ್ದಾರೆ.

Advertisement

ಬೆಳ್ತಂಗಡಿ ತಾಲೂಕಿನಲ್ಲಿ ಒಟ್ಟು 2,13,875 ಜನ ಮತದಾರರಿದ್ದಾರೆ. ಇವರಲ್ಲಿ 1,07,230 ಪುರುಷರು, 1,06,645 ಮಹಿಳೆಯರು. ಜಾತಿ ಗನುಗುಣವಾಗಿ ಬಿಲ್ಲವರು ಅಧಿಕ ಸಂಖ್ಯೆಯಲ್ಲಿದ್ದಾರೆ. ಒಕ್ಕಲಿಗ ಗೌಡ ಸಮುದಾಯ ಇತರ ಸಮುದಾಯಗಳೂ ತಾಲೂಕಿನಲ್ಲಿವೆ.

ಜಾತಿವಾರು ಗೆದ್ದವರಲ್ಲಿ 1972ರಿಂದ ಬಿಲ್ಲವರು ಹಾಗೂ ಗೌಡ ಸಮುದಾಯದವರು ಪಾರಮ್ಯ ಮೆರೆದಿದ್ದಾರೆ. ಮುಖ್ಯವಾಗಿ 1994ರಿಂದ ಬಂಗೇರ ಸಹೋದರರು ತಾಲೂಕಿನಲ್ಲಿ ನಿರಂತರವಾಗಿ ಅಯ್ಕೆಯಾಗಿದ್ದಾರೆ. 1983, 84ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದ ವಸಂತ ಬಂಗೇರ ಅವರ ಗೆಲುವಿನ ಓಟಕ್ಕೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಗಂಗಾಧರ ಗೌಡ 1989ರಲ್ಲಿ ಬ್ರೇಕ್‌ ನೀಡಿದ್ದರು. ಆದರೆ ಮತ್ತೆ ಗೆಲುವಿನ ಹಳಿಗೆ ಮರಳಿದ ವಸಂತ ಬಂಗೇರ 1994ರಲ್ಲಿ ಜೆ.ಡಿ.ಎಸ್‌.ನಿಂದ ಸ್ಪರ್ಧಿಸಿ ಗೆದ್ದಿದ್ದರು. 1999, 2004ರಲ್ಲಿ ಪ್ರಭಾಕರ ಬಂಗೇರ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. 2008, 2013ರ ಚುನಾವಣೆಯಲ್ಲಿ ವಸಂತ ಬಂಗೇರ ಗೆಲ್ಲುವ ಮೂಲಕ 24 ವರ್ಷಗಳ ಕಾಲ ಬಂಗೇರ ಸಹೋದರರು ಆಡಳಿತ ನಡೆಸಿದಂತಾಗಿದೆ.


ಶಾಸಕರ ಪಾಳಯದಿಂದ ಭರ್ಜರಿ ತಯಾರಿ

ಹಾಲಿ ಶಾಸಕ ಕೆ. ವಸಂತ ಬಂಗೇರ ಅವರನ್ನು ಅಭ್ಯರ್ಥಿ ಎಂದು ಹಿಂದೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದರಿಂದ ಅವರ ಹ್ಯಾಟ್ರಿಕ್‌ ಗೆಲುವಿಗೆ ಕೈ ಪಾಳಯ ಸಿದ್ಧವಾಗಿದೆ. 9 ಬಾರಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿರುವ ವಸಂತ ಬಂಗೇರ, 6ನೇ ಗೆಲುವು ಕಾಣುವ ನಿರೀಕ್ಷೆಯಲ್ಲಿದ್ದಾರೆ.

ಬಿಜೆಪಿಯಿಂದ ಯುವ ನಾಯಕ
ಬೆಳ್ತಂಗಡಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್‌ ಪೂಂಜ ಭರ್ಜರಿ ಮೆರವಣಿಗೆಯೊಂದಿಗೆ ನಾಮಪತ್ರ ಸಲ್ಲಿಸಿರುವುದು ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದೆ. ವಕೀಲರಾಗಿರುವ ಇವರು ಅಖೀಲ ಭಾರತ ವಿದ್ಯಾರ್ಥಿ ಪರಿಷತ್‌ ನಲ್ಲಿ ಗುರುತಿಸಿಕೊಂಡಿದ್ದು, ಬಿಜೆಪಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಯುವನಾಯಕನಾಗಿ ಗುರುತಿಸಿಕೊಂಡಿದ್ದು, ತಾಲೂಕಿನಲ್ಲಿ ಧಾರ್ಮಿಕ ಕಾರ್ಯಗಳಲ್ಲಿ, ಹೋರಾಟಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು.

Advertisement

ಜೆ.ಡಿ.ಎಸ್‌. ಸ್ಪರ್ಧೆ
ಜೆಡಿಎಸ್‌ 1994ರಲ್ಲಿ ಗೆಲುವಿನ ನಗೆ ಬೀರಿದ್ದು, ಬಳಿಕ ಸ್ಪರ್ಧಿಸಿದರೂ ಗೆಲುವು ಸಾಧಿಸಿಲ್ಲ. ಕಳೆದ ಬಾರಿ ಸ್ಪರ್ಧಿಸಿದರೂ ಠೇವಣಿ ಕಳೆದು ಕೊಂಡಿತ್ತು. ಈ ಬಾರಿ ಬಿಎಸ್‌ಪಿ ಜತೆಯಾಗಿ ಸ್ಪರ್ಧಿಸುತ್ತಿದ್ದು, ಸುಮತಿ ಎಸ್‌. ಹೆಗ್ಡೆ ಅಭ್ಯರ್ಥಿಯಾಗಿದ್ದಾರೆ. ಆದರೆ ತಾಲೂಕಿನಲ್ಲಿ ಚುನಾವಣೆ ಘೊಷಣೆ ಬಳಿಕ ಎಲ್ಲೂ ಅಬ್ಬರದ ಪ್ರಚಾರ, ರಾಜ್ಯ ಮುಖಂಡರ ಉಪಸ್ಥಿತಿ ಕಂಡುಬಂದಿಲ್ಲ.

ಕದನ ಕುತೂಹಲ 
ಈಗಾಗಲೇ ಕಾಂಗ್ರೆಸ್‌ ಭರ್ಜರಿ ಸಭೆ, ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಿತ್ತು. ತಾಲೂಕಿಗೆ ಜನವರಿಯಿಂದ ಮುಖ್ಯಮಂತ್ರಿ ಸೇರಿದಂತೆ ಕಾಂಗ್ರೆಸ್‌ ಮುಖಂಡರು ಭೇಟಿ ನೀಡಿ ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದಾರೆ. ರಾಹುಲ್‌ ಗಾಂಧಿ ಅವರೂ ದೇಗುಲ ಭೇಟಿ ನೆಪದಲ್ಲಿ ಬರಲಿದ್ದಾರೆ. ಬಿಜೆಪಿಯಿಂದ ಕೇಂದ್ರ ಸಚಿವ ಮಹೇಂದ್ರ ಪ್ರಧಾನ್‌, ಕೇಂದ್ರ ಗೃಹಸಚಿವ ರಾಜನಾಥ್‌ ಸಿಂಗ್‌ ಹಾಗೂ ಮುಖಂಡರು ತಾಲೂಕಿಗೆ ಆಗಮಿಸಿ ಕಾರ್ಯಕರ್ತರಿಗೆ ಪ್ರೇರಣೆ ನೀಡಿದ್ದಾರೆ. ಗೆಲುವಿಗಾಗಿ ಎರಡೂ ಪಕ್ಷಗಳು ಭರ್ಜರಿ ತಯಾರಿ ನಡೆಸಿದ್ದು, ಮತಯಾಚನೆ ಪ್ರಕ್ರಿಯೆ ಬಿರುಸುಗೊಂಡಿದೆ. ಇತರ ಪಕ್ಷಗಳು, ಪಕ್ಷೇತರರೂ ಗೆಲುವಿನ ನಿರೀಕ್ಷೆಯಲ್ಲಿದ್ದು ಗೆಲುವಿನ ಮಾಲೆ ಯಾರ ಕೊರಳಿಗೆ ಬೀಳಲಿದೆ ಎನ್ನುವ ಕುತೂಹಲದಲ್ಲಿ ಮತದಾರರಿದ್ದಾರೆ.

ಗೆಲ್ಲುವವರ ಮುಂದಿದೆ ಸವಾಲು…
ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದರೂ 81 ಗ್ರಾಮಗಳನ್ನು ಹೊಂದಿರುವು ದರಿಂದ ಇನ್ನೂ ಹಲವು ಅಭಿವೃದ್ಧಿ ಕಾರ್ಯಗಳು ನಡೆಯಬೇಕಿವೆ. ತಾಲೂಕು ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿದ್ದು ಕುದುರೆಮುಖ ರಾಷ್ಟ್ರೀಯ ಉದ್ಯಾನವನವೂ ಇದೆ. ಈ ವ್ಯಾಪ್ತಿಯಲ್ಲಿ ವಾಸಿಸುವ ಕೆಲ ಕುಟುಂಬಗಳು ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ಮುಖ್ಯವಾಗಿ ರಸ್ತೆ, ವಿದ್ಯುತ್‌, ಹಕ್ಕುಪತ್ರಗಳು ಸಿಗಬೇಕಿವೆ. ಎಂಡೋಸಲ್ಫಾನ್‌ ಬಾಧಿತರಿಗೆ ಶಾಶ್ವತ ಪರಿಹಾರ ದೊರಕಿಸಬೇಕಿದೆ. ತಾಲೂಕಿನಾದ್ಯಂತ ರಸ್ತೆ , ಕುಡಿಯುವ ನೀರು ಮೊದಲಾದ ಮೂಲಸೌಕರ್ಯಗಳನ್ನು ಆದ್ಯತೆಯಲ್ಲಿ ಕಲ್ಪಿಸಬೇಕು ಎನ್ನುವ ಆಗ್ರಹ ಎಲ್ಲೆಡೆಯಿಂದ ಜನಸಾಮಾನ್ಯರಿಂದ ಕೇಳಿಬರುತ್ತಿದೆ. ಭವಿಷ್ಯದ ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕಿದೆ.

ಕ್ಷೇತ್ರದಿಂದ ವಿಜೇತರಾದವರು
1952- ಬಾಳುಗೋಡು ವೆಂಕಟರಮಣ ಗೌಡ
1957- ರತ್ನವರ್ಮ ಹೆಗ್ಗಡೆ (ಕಾಂಗ್ರೆಸ್‌)
1962-ವೈಕುಂಠ ಬಾಳಿಗ (ಕಾಂಗ್ರೆಸ್‌)
1967- ಬಿ.ವಿ. ಬಾಳಿಗ (ಕಾಂಗ್ರೆಸ್‌)
1972- ಕೆ. ಸುಬ್ರಹ್ಮಣ್ಯ ಗೌಡ (ಕಾಂಗ್ರೆಸ್‌)
1978- ಕೆ. ಗಂಗಾಧರ ಗೌಡ (ಕಾಂಗ್ರೆಸ್‌)
1983- ಕೆ. ವಸಂತ ಬಂಗೇರ (ಬಿಜೆಪಿ)
1985- ಕೆ. ವಸಂತ ಬಂಗೇರ (ಬಿಜೆಪಿ)
1989- ಕೆ. ಗಂಗಾಧರ ಗೌಡ (ಕಾಂಗ್ರೆಸ್‌)
1994- ಕೆ. ವಸಂತ ಬಂಗೇರ (ಜೆಡಿಎಸ್‌)
1999- ಕೆ. ಪ್ರಭಾಕರ ಬಂಗೇರ ( ಬಿಜೆಪಿ)
2004- ಕೆ. ಪ್ರಭಾಕರ ಬಂಗೇರ (ಬಿಜೆಪಿ)
2008- ಕೆ. ವಸಂತ ಬಂಗೇರ (ಕಾಂಗ್ರೆಸ್‌)
2013- ಕೆ. ವಸಂತ ಬಂಗೇರ (ಕಾಂಗ್ರೆಸ್‌)

— ಹರ್ಷಿತ್‌ ಪಿಂಡಿವನ

Advertisement

Udayavani is now on Telegram. Click here to join our channel and stay updated with the latest news.

Next