Advertisement

“ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರ ಪಡೆದವರಿಗೂ ಸವಲತ್ತು ದೊರೆಯಲಿ’

11:02 PM Jun 17, 2019 | Team Udayavani |

ಕಾರ್ಕಳ: ಅರಣ್ಯ ಹಕ್ಕು ಕಾಯ್ದೆಯಡಿ ದೊರೆತ ಹಕ್ಕುಪತ್ರಗಳಿಂದ ಫ‌ಲಾನುಭವಿಗಳಿಗೆ ಸರಕಾರದ ಸವಲತ್ತು ಪಡೆಯಲು ಅವಕಾಶವಿರುವುದಿಲ್ಲ. ಹೀಗಾಗಿ ಅಂತಹ ಫ‌ಲಾನುಭವಿಗಳಿಗೂ ಸರಕಾರದ ಸೌಲಭ್ಯ ದೊರೆಯುವಂತಾಗಬೇಕೆಂಬ ಆಗ್ರಹ ಕಾರ್ಕಳ ತಾ.ಪಂ. ಸಾಮಾನ್ಯ ಸಭೆಯಲ್ಲಿ ಕೇಳಿಬಂತು.

Advertisement

ಜೂ. 17ರಂದು ತಾ.ಪಂ.ನ ಸಾಮರ್ಥ್ಯ ಸೌಧದಲ್ಲಿ ತಾ.ಪಂ. ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾವಿಸಿದ ಸದಸ್ಯ ಹರೀಶ್‌ ನಾಯಕ್‌, ಅರಣ್ಯ ಹಕ್ಕು ಕಾಯ್ದೆಯಡಿ ಫ‌ಲಾನುಭವಿಗಳಿಗೆ ಹಕ್ಕುಪತ್ರ ಲಭಿಸಿದ್ದರೂ ಆರ್‌ಟಿಸಿ ದೊರೆತಿರುವುದಿಲ್ಲ. ಹೀಗಾಗಿ ಅಂತಹವರಿಗೆ ಸರಕಾರದ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದರು. ಈ ವೇಳೆ ಧ್ವನಿಗೂಡಿಸಿದ ಸದಸ್ಯೆ ಮಂಜುಳಾ ಅವರು, ಕಂದಾಯ ಇಲಾಖೆ ಅಂತಹ ಫ‌ಲಾನುಭವಿಗಳಿಗೆ ಆರ್‌ಟಿಸಿ ನೀಡಬೇಕೆಂದು ಅಭಿಪ್ರಾಯಪಟ್ಟರು.

ಉತ್ತರಿಸಿದ ತಹಶೀಲ್ದಾರ್‌ ಪುರಂದರ ಹೆಗ್ಡೆ ಅವರು, ಅರಣ್ಯ ಇಲಾಖೆಗೊಳಪಟ್ಟ ಜಾಗದಲ್ಲಿ ಮನೆ ಮಾಡಿಕೊಂಡಿದ್ದರೆ ಸರಕಾರದ ನಿಯಮದಂತೆ ಆರ್‌ಟಿಸಿ ನೀಡಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ನಿಯಮದಲ್ಲಿ ತಿದ್ದುಪಡಿಯಾದಲ್ಲಿ ಅವಕಾಶ ದೊರೆಬಹುದು ಎಂದರು.

ಅಂಗನವಾಡಿಗೆ ದಿಢೀರ್‌ ಭೇಟಿ ನೀಡಿ
ಸರಕಾರ ಇಂಗ್ಲಿಷ್‌ ಮಾಧ್ಯಮ ಪ್ರಾರಂಭಿಸಿರುವುದರಿಂದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಕೊರತೆ ಕಾಡಲಿದೆ. ಇದರಿಂದ ಕ್ರಮೇಣ ಅಂಗನವಾಡಿ ಕೇಂದ್ರಗಳು ಮುಚ್ಚುವ ಹಂತಕ್ಕೆ ಬರಲಿದೆ ಎಂದು ಸದಸ್ಯೆ ಲಕ್ಷ್ಮೀ ಆತಂಕ ವ್ಯಕ್ತಪಡಿಸಿದರು.

ನೆಲ್ಲಿಕಟ್ಟೆ ಅಂಗನವಾಡಿ ಮಕ್ಕಳಿಗೆ ಆಟ ಪಾಠವಾಗುತ್ತಿಲ್ಲ. ಅಲ್ಲಿ ನ ಅಂಗನವಾಡಿ ಕೇವಲ ಸ್ತ್ರೀ ಶಕ್ತಿ, ಗ್ರಾಮಾಭಿವೃದ್ಧಿ ಯೋಜನೆ ಮೀಟಿಂಗ್‌ಗಳಿಗೆ ಸೀಮಿತವಾಗಿದೆ. ಸರಕಾರದಿಂದ ಸಿಗುವ ಆಹಾರ ಸಾಮಗ್ರಿಗಳು ಯಾವ ಪ್ರಮಾಣದಲ್ಲಿ ಯಾರಿಗೆ ಸಿಗುತ್ತಿದೆ ಎನ್ನುವ ಕುರಿತು ಕೇಳುವವರೇ ಇಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಈ ವೇಳೆ ಮಂಜುಳಾ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯೋಜನಾಧಿಕಾರಿ ಕುಮಾರ್‌ ಅವರನ್ನು ಉದ್ದೇಶಿಸಿ, ತಾವು ಅಂಗನವಾಡಿ ಕೇಂದ್ರಗಳಿಗೆ ದಿಢೀರ್‌ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಬೇಕು. ಇದರಿಂದ ಸಮಸ್ಯೆಗಳನ್ನು ಪರಿಹರಿಸಬಹುದಾಗಿದೆ ಎಂದರು.

ಮಾಳ ಅಂಗನವಾಡಿ ಕೇಂದ್ರ ಮುಚ್ಚಿದ್ದು ಕಟ್ಟಡ ಬೀಳುವ ಸ್ಥಿತಿಯಲ್ಲಿದೆ. ಅದನ್ನು ಕೆಡವಲು ಸಾಕಷ್ಟು ಬಾರಿ ಕೇಳಿಕೊಂಡರೂ ಇಲಾಖೆ ಸುಮ್ಮನಿದೆ ಎಂದು ಸೌಭಾಗ್ಯ ಅವರು ಏರುಧ್ವನಿಯಲ್ಲಿ ಇಲಾಖಾಧಿಯವರಲ್ಲಿ ಹೇಳಿದರು.

ಈ ವೇಳೆ ಮಾತನಾಡಿದ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಮೇ| ಹರ್ಷ, ಕಟ್ಟಡ ಕೆಡವಲು ಏನು ನಿಯಮವಿದೆಯೋ ಅದನ್ನು ಪಾಲಿಸಿ ಕೆಡವಲು ಇಲಾಖಾಧಿಯವರಿಗೆ ತಿಳಿಸಿದರು.

ಅಭಿನಂದನೆ
ಇತ್ತೀಚೆಗೆ ಕೆಎಂಎಫ್ಗೆ ನಾಮನಿರ್ದೇಶಿತ ನಿರ್ದೇಶಕರಾಗಿ ಆಯ್ಕೆಗೊಂಡ ತಾ.ಪಂ. ಸದಸ್ಯ ಸುಧಾಕರ್‌ ಶೆಟ್ಟಿ ಮುಡಾರು ಅವರನ್ನು ಈ ಸಂದರ್ಭ ಅಭಿನಂದಿಸಲಾಯಿತು.

ಉಳಿದಂತೆ ಇರ್ವತ್ತೂರು ಮಳಿಯಾಳಕಟ್ಟೆ ನಿವಾಸಿ ಶುಭಲತಾ ಅವರಿಗೆ 94 ಸಿಯಲ್ಲಿ ಅರ್ಜಿ ಸಲ್ಲಿಸಿ ಹಲವು ತಿಂಗಳು ಕಳೆದರೂ ಇನ್ನೂ ಹಕ್ಕುಪತ್ರ ಸಿಕ್ಕಿಲ್ಲ ಎಂದು ಪ್ರಮೀಳಾ ಮೂಲ್ಯ ಹೇಳಿದರು.

ನಾಡಾ³ಲು ಕಬ್ಬಿನಾಲೆ ಪರಿಸರದ ಪರಿಶಿಷ್ಟ ಪಂಗಡದ 8 ಮನೆಗಳಿಗೆ ವಿದ್ಯುತ್‌ ಸಂಪರ್ಕ ನೀಡುವಂತೆ ಲಕ್ಷ್ಮೀ ಅವರು ಮೆಸ್ಕಾಂ ಎಇಇ ನಾರಾಯಣ ನಾಯ್ಕ ಅವರಲ್ಲಿ ಕೇಳಿಕೊಂಡರು.

ಬೈಲೂರಿನಿಂದ ಜೋಡುರಸ್ತೆ ತನಕ ರಸ್ತೆ ಅಭಿವೃದ್ಧಿ ಯಾಗುತ್ತಿದ್ದು, ರಸ್ತೆ ಬದಿ ಅಪಾಯಕಾರಿಯಾಗಿರುವ ಮರವನ್ನು ತೆರವುಗೊಳಿಸಬೇಕೆಂದು ಅಶೋಕ್‌ ಶೆಟ್ಟಿ ಆಗ್ರಹಿ ಸಿದರು. ರಸ್ತೆ ಬದಿ ಕೇಬಲ್‌ ಗುಂಡಿಗಳನ್ನು ಅಗೆಯ ಲಾಗಿದ್ದು, ಬಳಿಕ ಸಮರ್ಪಕವಾಗಿ ಮುಚ್ಚಿಲ್ಲ ಎಂದು ರಮೇಶ್‌ ಪೂಜಾರಿ ಆರೋಪಿಸಿದರು.

ವೇದಿಕೆಯಲ್ಲಿ ತಾ.ಪಂ. ಉಪಾಧ್ಯಕ್ಷ ಗೋಪಾಲ ಮೂಲ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಶೇಖರ್‌ ಶೆಟ್ಟಿ, ಹೆಬ್ರಿ ತಹಶೀಲ್ದಾರ್‌ ಮಹೇಶ್ಚಂದ್ರ ಉಪಸ್ಥಿತರಿದ್ದರು.
ತಾ.ಪಂ. ಲೆಕ್ಕಾಧಿಕಾರಿ ನಿತಿನ್‌ ಕುಮಾರ್‌ ಸಭೆ ನಿರ್ವಹಿಸಿದರು.

ಅರಣ್ಯಾಧಿಕಾರಿ ಅನುಪಸ್ಥಿತಿ: ಸದಸ್ಯರ ಅಸಮಾಧಾನ
ಅರಣ್ಯ ಇಲಾಖೆಗೆ ಸಂಬಂಧಿಸಿದ ವಿಚಾರ ಬಂದಾಗ ಉತ್ತರಿಸಲು ಅರಣ್ಯಾಧಿಕಾರಿ ಇಲ್ಲದಿರುವುದು ಸದಸ್ಯರ ಅಸಮಾಧಾನಕ್ಕೆ ಕಾರಣವಾಯಿತು. ಸಾಮಾನ್ಯ ಸಭೆಗೆ ಕಡ್ಡಾಯವಾಗಿ ಇಲಾಖಾಧಿಕಾರಿಗಳು ಬರಬೇಕೆಂದು ಅದೆಷ್ಟು ಬಾರಿ ಹೇಳಿದರೂ ಕೆಲವೊಂದು ಅಧಿಕಾರಿಗಳು ಸಭೆಗೆ ಗೈರಾಗುತ್ತಿದ್ದಾರೆ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಆಧಾರ್‌ ತಿದ್ದುಪಡಿಗೆ ಪಡಿಪಾಟಲು
ಆಧಾರ್‌ ತಿದ್ದುಪಡಿ, ಹೊಸ ಪಡಿತರ ಚೀಟಿಗಾಗಿ ಪಹಣಿ ಪತ್ರ ಪಡೆಯುವಲ್ಲಿ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಸರ್ವರ್‌ ಸಮಸ್ಯೆ, ಸಿಬ್ಬಂದಿ ಸಮಸ್ಯೆ ಅಂಥ ಸಾರ್ವಜನಿಕರು ಪಹಣಿ ಪತ್ರಕ್ಕಾಗಿ ಅಲೆದಾಟ ಮಾಡುತ್ತಿದ್ದಾರೆ ಎಂದು ಮಂಜುಳಾ ಅವರು ಹೇಳಿದರು. ಆಧಾರ್‌ ಕಾರ್ಡ್‌ ತಿದ್ದುಪಡಿ ವೇಳೆ ತಲೆದೋರುವ ಸಮಸ್ಯೆಯನ್ನು ಬಗೆಹರಿಸುವುದಾಗಿ ತಹಶೀಲ್ದಾರ್‌ ಭರವಸೆ ನೀಡಿದರು.

ಪರಿಶೀಲಿಸಿ ಸೂಕ್ತ ಕ್ರಮ
ಮರ್ಣೆ ಗ್ರಾಮದ ಕುರ್ಡೆಲು ಎಂಬಲ್ಲಿ ಸರ್ವೆ ನಂಬರ್‌ 429ರ ಜಾಗವನ್ನು ಶ್ಮಶಾನ ನಿರ್ಮಾಣಕ್ಕಾಗಿ ಕಂದಾಯ ಇಲಾಖೆ ಶಿಫಾರಸು ಮಾಡಿತ್ತು. ಇದು ವಸತಿ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಮಧುರ ಪಟ್ಟಣದ ಸರ್ವೆ ನಂಬರ್‌ 529ರ ಸರಕಾರಿ ಜಾಗವನ್ನು ಶ್ಮಶಾನ ನಿರ್ಮಾಣಕ್ಕೆ ಕಾದಿರಿಸುವಂತೆ ಹರೀಶ್‌ ನಾಯಕ್‌ ಒತ್ತಾಯಿಸಿದರು. ಈ ವೇಳೆ ಮಾತನಾಡಿದ ತಹಶೀಲ್ದಾರ್‌ ಕಡತಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next