Advertisement

Karkala ಕೂಲಿ ಕಾರ್ಮಿಕೆಯ ಮಗ‌ ರಾಷ್ಟ್ರಮಟ್ಟಕ್ಕೆ

12:54 AM Dec 23, 2023 | Team Udayavani |

ಕಾರ್ಕಳ: ಕಿತ್ತು ತಿನ್ನುವ ಬಡತನ, ಇರಲು ಸ್ವಂತ ಸೂರಿಲ್ಲ, ಬಾಡಿಗೆ ಮನೆಯಲ್ಲಿ ವಾಸ, ಹೊಟೇಲ್‌ನಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡುತ್ತ ಕುಟುಂಬವನ್ನು ಪೊರೆಯುತ್ತಿರುವ ತಾಯಿಯೊಬ್ಬರು ಮಗನ ಕ್ರೀಡಾಸಕ್ತಿಗೆ ನೀಡಿರುವ ಪ್ರೋತ್ಸಾಹ ಇಂದು ಆತನನ್ನು ರಾಷ್ಟ್ರ ಮಟ್ಟದ ವರೆಗೆ ಕೊಂಡೊಯ್ದಿದೆ. ಸಾಧನೆಗೆ ಬಡತನ ಅಡ್ಡಿಯಲ್ಲ.ಆತ್ಮವಿಶ್ವಾಸ, ಪರಿಶ್ರಮದಿಂದ ಏನನ್ನೂ ಸಾಧಿಸಬಹುದು ಎನ್ನುವುದಕ್ಕೆ ಗ್ರಾಮೀಣ ಭಾಗದ ಸರಕಾರಿ ಕನ್ನಡ ಶಾಲೆಯ ಈ ಪ್ರತಿಭೆಯೇ ಸಾಕ್ಷಿ.

Advertisement

ಕಲ್ಯಾ ಸರಕಾರಿ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿ, ವರಂಗದ ಲೀಲಾ-ಹರೀಶ್‌ ದಂಪತಿಯ ಪುತ್ರ ಹಿತೇಶ್‌ ಈ ಸಾಧಕ. ಪುತ್ತೂರಿನ ಶ್ರೀ ರಾಮಕೃಷ್ಣ ಶಾಲೆಯಲ್ಲಿ ನಡೆದ 17ರ ವಯೋಮಾನದ ರಾಜ್ಯ ಮಟ್ಟದ ಬಾಲಕರ ಕೂಟದ 110 ಮೀ. ಹರ್ಡಲ್ಸ್‌ ಓಟದಲ್ಲಿ ಬೆಳ್ಳಿ ಪದಕ ಪಡೆದು ಶಿಮ್ಲಾದ ಡೆಹರಾಡೂನ್‌ನಲ್ಲಿ ಡಿಸೆಂಬರ್‌ ಅಂತ್ಯಕ್ಕೆ ನಡೆಯುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಹಿತೇಶ್‌ಆಯ್ಕೆಯಾಗಿದ್ದಾರೆ. ಕಲ್ಯಾದ ಗರಡಿ ನಗರದ ಬಾಡಿಗೆ ಮನೆಯಲ್ಲಿ ಹಿತೇಶ್‌ ತಾಯಿ ಮತ್ತು ಸಹೋದರಿಯೊಂದಿಗೆ ವಾಸವಾಗಿದ್ದಾರೆ. ತಾಯಿ ಹೊಟೇಲ್‌ ಕಾರ್ಮಿಕರಾಗಿದ್ದು, ಅವರ ಸಂಪಾದನೆಯಲ್ಲೇ ಮನೆಯ ಬಾಡಿಗೆ, ಕುಟುಂಬದ ನಿರ್ವಹಣೆ, ದ್ವಿತೀಯ ಪಿಯುಸಿ ಓದುತ್ತಿರುವ ಹಿರಿಯ ಮಗಳ ವಿದ್ಯಾಭ್ಯಾಸ ಖರ್ಚು, ಹಿತೇಶ್‌ನ ಶಿಕ್ಷಣ ವೆಚ್ಚವನ್ನೆಲ್ಲ ಭರಿಸಬೇಕು.

ಮಗನ ಕ್ರೀಡಾಸಕ್ತಿಗೆ ಹಣ ಹೊಂದಿಸಲು ತಾಯಿ ಹರಸಾಹಸ ಪಡುತ್ತಿದ್ದು, ಅಲ್ಪಸ್ವಲ್ಪ ಹಣ ಉಳಿಸಿ ಪ್ರೋತ್ಸಾಹ ನೀಡುತ್ತಿದ್ದಾರೆ. ಹಿತೇಶ್‌ಗೆ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ವಸಂತ್‌ ನಾೖಕ್‌ ಮತ್ತು ಪ್ರೌಢಶಾಲೆಯಲ್ಲಿ ದೈ.ಶಿ. ಶಿಕ್ಷಕ ಚಂದ್ರಶೇಖರ್‌ ನೀಡುತ್ತಿದ್ದಾರೆ.

ಎಲ್ಲದರಲ್ಲೂ ಮುಂದು
6 ಮತ್ತು 9 ತರಗತಿಯಲ್ಲಿ ರಾಜ್ಯ ಮಟ್ಟದ ಹರ್ಡಲ್ಸ್‌ನಲ್ಲಿ ಸ್ಪರ್ಧೆ, ವಿಭಾಗ ಮಟ್ಟದ ಖೋಖೋ ಸ್ಪರ್ಧೆಯಲ್ಲಿ 2 ಬಾರಿ ಹಿತೇಶ್‌ ಭಾಗವಹಿಸಿದ್ದಾರೆ. ಜಿಲ್ಲಾ ಮಟ್ಟದ ಖೋಖೋದಲ್ಲಿ 2 ಬಾರಿ ಸವ್ಯಸಾಚಿ ಆಟಗಾರ ಪ್ರಶಸ್ತಿಯ ಜತೆಗೆ‌ ಹಲವು ಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ. 8ನೇ ತರಗತಿಯಲ್ಲಿ ಎನ್‌ಎಂಎಂಎಸ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಾರ್ಷಿಕ ವಿದ್ಯಾರ್ಥಿ ವೇತನಕ್ಕೆ ಪಾತ್ರರಾಗಿದ್ದಾರೆ.

ದೈಹಿಕ ಶಿಕ್ಷಣ ಶಿಕ್ಷಕರು ನೀಡುವ ತರಬೇತಿ ಬಿಟ್ಟರೆ ಬೇರೆ ಯಾವುದೇ ಹೆಚ್ಚಿನ ತರಬೇತಿ ಸಿಗುತ್ತಿಲ್ಲ. ಕ್ರೀಡೆಗಬೇಕಾದ ಅಗತ್ಯ ಪರಿಕರಗಳೂ ಈತನಲ್ಲಿಲ್ಲ. ತರಬೇತುದಾರರು, ಶಿಕ್ಷಕರು, ಸ್ಥಳೀಯ ಸಂಘ-ಸಂಸ್ಥೆಗಳು ಬಾಲಕನ ಸಾಧನೆ ಗುರುತಿಸಿ ತಮ್ಮಿಂದಾದ ನೆರವು ನೀಡುತ್ತಿದ್ದಾರೆ. ಆದರೆ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಬೇಕಿದ್ದರೆ ಇನ್ನಷ್ಟು ಸೌಕರ್ಯ ಅಗತ್ಯ. ಕ್ರೀಡೆಯ ಜತೆಗೆ ಕಲಿಕೆಯಲ್ಲೂ ಮುಂದಿರುವ ಹಿತೇಶ್‌ 9ನೇ ತರಗತಿಯಲ್ಲಿ ತರಗತಿಗೆ ಟಾಪರ್‌ ಆಗಿ ಹೊರಹೊಮ್ಮಿದ್ದರು. ಪ್ರಸ್ತುತ ಶಾಲಾ ನಾಯಕನೂ ಹೌದು.

Advertisement

ಬೆಳಗ್ಗೆದ್ದು ಮನೆಮನೆಗೆ
ಪತ್ರಿಕೆ, ಹಾಲು ವಿತರಣೆ
ಹಿತೇಶ್‌ ಬೆಳಗ್ಗೆ 5 ಗಂಟೆಗೆದ್ದು ಓದುವುದರ ಜತೆಗೆ ಶಾರೀರಿಕ ಅಭ್ಯಾಸವನ್ನೂ ಮಾಡುತ್ತಾರೆ.ಬಡತನವಿದ್ದ ಕಾರಣ ಇತ್ತೀಚಿನ ದಿನಗಳ ತನಕ ಪ್ರತೀ ದಿನ ಬೆಳಗ್ಗೆ ಹಲವು ಮನೆಗಳಿಗೆ ಹಾಲು, ದಿನ ಪತ್ರಿಕೆ ಹಾಕುತ್ತಿದ್ದರು. ಅಭ್ಯಾಸಕ್ಕೆ ತೊಂದರೆಯಾಗುತ್ತದೆ ಎಂದು ಕೆಲವು ದಿನಗಳಿಂದ ಬಿಟ್ಟಿದ್ದಾರೆ. ಮನೆಮನೆಗೆ ಪತ್ರಿಕೆ ಹಾಕುವಾಗ ಉದಯವಾಣಿ ಕ್ರೀಡಾಪುಟ ಓದುತ್ತಿದ್ದೆ. ಅಲ್ಲಿರುವ ಕ್ರೀಡಾಸಾಧಕರ ಬಗ್ಗೆ ತಿಳಿಯುತ್ತಿದ್ದೆ.ಅದು ಕೂಡ ನನಗೆ ಕ್ರೀಡೆಯಲ್ಲಿ ಆಸಕ್ತಿ ತಂದಿದೆ ಎನ್ನುತ್ತಾರೆ ಹಿತೇಶ್‌.

ಸೂಕ್ತ ಪ್ರೋತ್ಸಾಹ ದೊರೆತಲ್ಲಿ ಈತ ಖಂಡಿತ ದೊಡ್ಡ ಮಟ್ಟದ ಸಾಧನೆ ತೋರುತ್ತಾನೆೆ. ಸರಕಾರಿ ಶಾಲೆಯಿಂದ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಜಿಲ್ಲೆಯ ಏಕೈಕ ಸ್ಪರ್ಧಿ ಎನ್ನುವುದು ಇನ್ನೊಂದು ಖುಷಿ. ಶಿಕ್ಷಕ ವರ್ಗ ಸಂಪೂರ್ಣ ಸಹಕಾರ ನೀಡುತ್ತಿದೆ.
-ಸುಮನಾ, ಮುಖ್ಯ ಶಿಕ್ಷಕಿ ಕಲ್ಯಾ ಸ. ಪ್ರೌಢ ಶಾಲೆ

ಆಟದಲ್ಲಿ ನಾನು ಏನಾದರೂ ಸಾಧಿಸಬೇಕು ಎನ್ನುತ್ತಿರುತ್ತಾನೆ. ಅದಕ್ಕೆ ತಕ್ಕಂತೆ ಅಭ್ಯಾಸ ಮಾಡುತ್ತಿದ್ದಾನೆ. ಅವನ ಆಸಕ್ತಿಗೆ ನನ್ನಿಂದಾದ ಗರಿಷ್ಠ ಸಹಾಯ ಮಾಡುತ್ತಿದ್ದೇನೆ. ದಾನಿಗಳು ಯಾರಾದರೂ ಮುಂದೆ ಬಂದರೆ ಅವನ ಸಾಧನೆಗೆ ಪೂರಕ ಆಗಬಹುದು.
– ಲೀಲಾ, ಕ್ರೀಡಾಪಟುವಿನ ತಾಯಿ

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next