Advertisement

Dengue Cases ಕಾರ್ಕಳ, ಹೆಬ್ರಿ: ಆರು ತಿಂಗಳಲ್ಲಿ 51 ಮಂದಿಗೆ ಡೆಂಗ್ಯೂ

11:52 PM Jul 08, 2024 | Team Udayavani |

ಕಾರ್ಕಳ: ಕಾರ್ಕಳ ಹಾಗೂ ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಕಳೆದ 6 ತಿಂಗಳಲ್ಲಿ 51 ಮಂದಿಯಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಂಡಿದೆ. ನಗರ ಹಾಗೂ ಗ್ರಾಮೀಣ ಭಾಗದಲ್ಲೂ ಡೆಂಗ್ಯೂ ಸೋಂಕಿತರಿದ್ದಾರೆ.

Advertisement

ಪಶ್ಚಿಮ ಘಟ್ಟ ತಪ್ಪಲಿನ ಪ್ರದೇಶವಾದ ಈ ಎರಡು ತಾಲೂಕುಗಳಲ್ಲಿ ಕೆಲವು ಸಮಯಗಳ ಹಿಂದೆ ಮಂಗನ ಕಾಯಿಲೆ ಲಕ್ಷಣಗಳು ಕಂಡುಬಂದಿತ್ತು. ಅನಂತರದ ದಿನಗಳಲ್ಲಿ ಮಳೆ ಹಾಗೂ ಬಿಸಿಲಿನ ವಾತಾವರಣಕ್ಕೆ ಜ್ವರ ಲಗ್ಗೆಯಿಟ್ಟಿತ್ತು. ಈ ಪೈಕಿ ಹೆಚ್ಚು ಡೆಂಗ್ಯೂ ಪ್ರಕರಣ ಕಂಡು ಬಂದಿರುವುದು ಕಾರ್ಕಳ ಪುರಸಭೆ ವ್ಯಾಪ್ತಿ ಹಾಗೂ ಗ್ರಾಮೀಣ ಭಾಗಗಳಾದ ಮಾಳ, ಕೆರ್ವಾಶೆ, ಕುಕ್ಕುಂದೂರು ಪಂಚಾಯತ್‌ ವ್ಯಾಪ್ತಿಯಲ್ಲಿ. ಡೆಂಗ್ಯೂ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಫಾಗಿಂಗ್‌ ಇತ್ಯಾದಿ ಸುರಕ್ಷಾ ಕ್ರಮಗಳನ್ನು ಕೈಗೊಂಡಿದೆ.

ಉಭಯ ತಾಲೂಕುಗಳಲ್ಲಿ ಡೆಂಗ್ಯೂ ಪ್ರಕರಣ ನಿಯಂತ್ರಣದಲ್ಲಿದ್ದು, ಗಂಭೀರ ಸ್ಥಿತಿಗೆ ತಲುಪಿಲ್ಲ. ಜನವರಿಯಿಂದ ಜೂನ್‌ 30ರ ವರೆಗೆ 51 ಡೆಂಗ್ಯೂ ಪ್ರಕರಣ ಪತ್ತೆಯಾಗಿದ್ದು, ಬಹುತೇಕ ಎಲ್ಲರೂ ಗುಣಮುಖ ರಾಗಿದ್ದಾರೆ. ಪ್ರಸ್ತುತ 7 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಾರದಲ್ಲಿ ಡೆಂಗ್ಯೂ ಪ್ರಕರಣ ತೀವ್ರ ಗತಿಯಲ್ಲಿ ಇಳಿಮುಖವಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ಬಾರಿ ಡೆಂಗ್ಯೂ ಪ್ರಕರಣಗಳಲ್ಲಿ ಸ್ವಲ್ಪ ಮಟ್ಟಿನ ಏರಿಕೆ ಕಂಡು ಬಂದಿದೆ. ಕಳೆದ ಬಾರಿ ಈ ಅವಧಿಯಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ 35ರ ಆಸುಪಾಸಿನಲ್ಲಿತ್ತು. ಕಾರ್ಕಳ ಹಾಗೂ ಹೆಬ್ರಿ ತಾಲೂಕು ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಸಹಿತ ಎಲ್ಲ ಆಸ್ಪತ್ರೆಗಳಲ್ಲಿ ಸಾಕಷ್ಟು ಔಷಧ, ಬೆಡ್‌ ವ್ಯವಸ್ಥೆ ಮಾಡಲಾಗಿದೆ.

ಸ್ಥಳೀಯ ಗ್ರಾಮ ಪಂಚಾಯತ್‌, ಸಂಘ ಸಂಸ್ಥೆಗಳ ಮೂಲಕ ಮಾಹಿತಿ ಶಿಬಿರಗಳ ಮೂಲಕ ಜನಜಾಗೃತಿ ನಡೆಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಪುರಸಭೆ, ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಫಾಗಿಂಗ್‌ ನಡೆಸಲಾಗುತ್ತಿದೆ. ಡೆಂಗ್ಯೂ ಬಗ್ಗೆ ಸಾರ್ವಜನಿಕರಿಗೆ ಆರೋಗ್ಯ ಇಲಾಖೆ ಕಾರ್ಯಕರ್ತರು ಮಾಹಿತಿ ನೀಡುತ್ತಿದ್ದಾರೆ.

Advertisement

ತಾಲೂಕು ಆಸ್ಪತ್ರೆ ಸಹಿತ ತಾಲೂಕಿನ ಪ್ರಾಥಮಿಕ ಕೇಂದ್ರಗಳಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಡೆಂಗ್ಯೂ ಬಾಧಿತರಿಗೆ ಚಿಕಿತ್ಸೆ ನೀಡಲು ಬೇಕಾದ ಎಲ್ಲ ಸೌಕರ್ಯಗಳಿವೆ. ಪ್ಲೇಟ್‌ಲೆಟ್‌ ಕಡಿಮೆಯಾಗದಂತೆ ನೋಡಿಕೊಳ್ಳುವುದು, ಕಡಿಮೆಯಾದ ಸಂದರ್ಭ ಪ್ಲೇಟ್‌ಲೆàಟ್‌ ನೀಡುವುದು ಹಾಗೂ ಡೆಂಗ್ಯೂ ಜ್ವರಕ್ಕೆ ಆರಂಭದಲ್ಲಿ ಔಷಧ ಪಡೆಯುವುದು ಅತಿ ಮುಖ್ಯ. ಶುದ್ಧವಾದ ಬಿಸಿ ನೀರನ್ನೇ ಸೇವಿಸುವುದು ಅಗತ್ಯ.

ಜ್ವರ ಬಂದ ಕೂಡಲೇ ರಕ್ತ ತಪಾಸಣೆ ಅಗತ್ಯ
ಸಣ್ಣ ಮಟ್ಟಿನ ಜ್ವರ, ಗಂಟು ನೋವು, ಇತ್ಯಾದಿ ಲಕ್ಷಣಗಳು ಕಂಡು ಬಂದ ಕೂಡಲೇ ಆಸ್ಪತ್ರೆಗೆ ತೆರಳಿ ರಕ್ತ ತಪಾಸಣೆ ನಡೆಸುವುದು ಅಗತ್ಯ. ಮನೆ ಸುತ್ತಮುತ್ತಲಿನಲ್ಲಿ ಸ್ವತ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಸೊಳ್ಳೆ ಉತ್ಪತ್ತಿಯಾಗದಂತೆ ನೋಡಿಕೊಳ್ಳುವುದು, ಸೊಳ್ಳೆ ಪರದೆ ಬಳಸುವುದು ಸೂಕ್ತ. ಕೊಳಚೆ ನೀರು ನಿಲ್ಲದಂತೆ ಎಚ್ಚರ ವಹಿಸುವುದೂ ಅಗತ್ಯ.

ಡೆಂಗ್ಯೂ ಜ್ವರ ಸದ್ಯ ನಿಯಂತ್ರಣದಲ್ಲಿದೆ. ಎಲ್ಲ ಪ್ರಾಥಮಿಕ ವೈದ್ಯಕೀಯ ಕೇಂದ್ರಗಳಲ್ಲಿ ಜ್ವರ ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಎಲ್ಲರ ಸಹಕಾರದಲ್ಲಿ ಜ್ವರ ನಿಯಂತ್ರಣಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ತಾಲೂಕು ಆಡಳಿತ ಕೈಗೊಂಡಿದೆ. ಜತೆಗೆ ಸಾರ್ವಜನಿಕರು ಕೂಡ ಸಹಕರಿಸಬೇಕು.
-ಡಾ| ಸಂದೀಪ್‌ ಕುಡ್ವ
ತಾಲೂಕು ಆರೋಗ್ಯಾಧಿಕಾರಿ ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next