Advertisement

Karkala: ಮಕ್ಕಳ ಕೈಯ್ಯಲ್ಲಿ ಹೂವಿನಕೋಲು!; ನವರಾತ್ರಿ ವಿಶೇಷ ಆಚರಣೆ ಮುಂದುವರಿಸುವ ಮಕ್ಕಳು

03:02 PM Oct 07, 2024 | Team Udayavani |

ಕಾರ್ಕಳ/ತೆಕ್ಕಟ್ಟೆ: ನವರಾತ್ರಿ ಸಂದರ್ಭ ಕುಂದಾಪುರ, ಬ್ರಹ್ಮಾವರ, ಬೈಂದೂರು, ಹೆಬ್ರಿ ತಾಲೂಕಿನ ಕೆಲವು ಭಾಗಗಳಲ್ಲಿ ಕಾಣಸಿಗುವ ವಿಶೇಷವಾದ ಆಚರಣೆಗಳಲ್ಲಿ ಹೂವಿನ ಕೋಲು ಒಂದು. ತಾಳಮದ್ದಳೆ ಶೈಲಿಯಲ್ಲಿ ದೇವಿಯ ನಾನಾ ಅವತಾರಗಳ ಕಥೆಯನ್ನು ಮನೆಮನೆಗೆ ತಲುಪಿಸುವ ಅತ್ಯಂತ ಸಾಂಸ್ಕೃತಿಕ, ಜನಪದೀಯ ಕಲೆ ಇದು. ಹಿಂದೆ ಅಲ್ಲಲ್ಲಿ ಕಾಣುತ್ತಿದ್ದ ಈ ಕಲೆ ಈಗ ಅಪರೂಪವಾಗುತ್ತಿದೆ. ಅಂಥ ಸಂದರ್ಭದಲ್ಲಿ ಕೆಲವು ತಂಡಗಳು ವಿದ್ಯಾರ್ಥಿಗಳ ಭಾಗವಹಿಸುವಿಕೆ ಯೊಂದಿಗೆ ಮತ್ತೆ ಚಿಗುರಿವೆ.

Advertisement

ಏನಿದು ಹೂವಿನ ಕೋಲು?
ಯಕ್ಷಗಾನ ಮೇಳಗಳು ಸಾಧಾರಣವಾಗಿ ನವೆಂಬರ್‌ ತಿಂಗಳಿನಲ್ಲಿ ಆರಂಭಗೊಳ್ಳುತ್ತದೆ. ಅದಕ್ಕೂ ಮುಂಚೆ ನವರಾತ್ರಿಯ ದಿನಗಳಲ್ಲಿ ಹೂವಿನಕೋಲು ಎನ್ನುವ ಕಾರ್ಯಕ್ರಮವನ್ನು ಮನೆ ಮನೆಗೂ ಹೋಗಿ ನಡೆಸಿಕೊಡುತ್ತಾರೆ. ಹೂವಿನಕೋಲು ಪ್ರಕಾರದಲ್ಲಿ ಮಕ್ಕಳು ಪಾಲ್ಗೊಳ್ಳುತ್ತಾರೆ. ಹಾಗೆ ವೃತ್ತಿ ತಿರುಗಾಟದ ಹಿಮ್ಮೇಳ ಕಲಾವಿದರಿಗೆ ಒಂದು ಪೂರ್ವ ತಯಾರಿಯ ರೀತಿಯಲ್ಲಿ ಇದು ನಡೆಯುತ್ತದೆ. ಭಾಗವತರು ಮದ್ದಲೆಗಾರರು, ಶ್ರುತಿಪಾಲಕರು ಮತ್ತು 2 ಅಥವಾ 4 ಜನ ಮಕ್ಕಳು ಇರುತ್ತಾರೆ. ಹೀಗೆ ಒಂದು ಹೂವಿನಕೋಲು ತಂಡವಾಗುತ್ತದೆ. ಭಾಗವತರು ಕೇವಲ 2-3 ಪಾತ್ರಗಳ ಸಂಭಾಷಣೆಯನ್ನು ಪ್ರಸಂಗಗಳಿಂದ ಆಯ್ದು ಮಕ್ಕಳಿಗೆ ಕಂಠಪಾಠ ಮಾಡಿಸುತ್ತಾರೆ. ಹಿಂದೆ ಐಗಳ ಮಠಗಳ ಯಕ್ಷಗಾನ ಕಲಿಸುವ ಕೇಂದ್ರಗಳಾಗಿದ್ದು, ಯಕ್ಷಗಾನ ಪ್ರಸಂಗಗಳ ಹಾಡುಗಾರಿಕೆ ಅರ್ಥ ಹೇಳುವ ಕ್ರಮ ಹೇಳಿಕೊಟ್ಟು ನವರಾತ್ರಿಯ ವೇಳೆ ಶಿಷ್ಯರ ಪ್ರತಿಭಾ ಪ್ರದರ್ಶನಕ್ಕೆ ಇದು ವೇದಿಕೆ ಆಗುತ್ತಿತ್ತು. ತಂಡವು ಹೂವಿನಿಂದ ಅಲಂಕರಿಸಿದ ಒಂದು ಅಡಿ ಉದ್ದದ ಹೂವಿನ ಕೋಲನ್ನು ಹಿಡಿದುಕೊಂಡಿರುವುದರಿಂದ ಇದು ಹೂವಿನ ಕೋಲು ಎಂದು ಹೆಸರಾಗಿದೆ.

ಮನೆಗೆ ಭೇಟಿ ನೀಡುವ ತಂಡಕ್ಕೆ ವೀಳ್ಯದೆಲೆ, ಅಡಕೆ, ಅಕ್ಕಿ ಜೊತೆ ಸಂಭಾವನೆ ನೀಡುವುದು ವಾಡಿಕೆಯಾಗಿದೆ. ರಾಮಾಯಣ, ಮಹಾಭಾರತ, ಕೃಷ್ಣ ಪುರಾಣ ಸೇರಿದಂತೆ ಕಥೆಗಳನ್ನು ಸಹ ಹೂವಿನ ಕೋಲಿನ ಸಂದರ್ಭ ತಿಳಿಸುತ್ತಾರೆ.

ಕಲೆ ಅರಳಿಸುವ ಯಶಸ್ವಿ ಕಲಾವೃಂದ
ಕೊಮೆ-ತೆಕ್ಕಟ್ಟೆಯ ಯಶಸ್ವೀ ಕಲಾವೃಂದ ಹೂವಿನ ಕೋಲಿಗೆ ಒಂದು ಅಭಿಯಾನದ ರೂಪವನ್ನು ನೀಡಿ ಮುನ್ನಡೆಸುತ್ತಿದೆ. ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಈ ಸಂಸ್ಥೆ ಈ ಬಾರಿ ಸಿನ್ಸ್‌ 1999 ಶ್ವೇತಯಾನ -63ರಡಿ ಕಾರ್ಯಕ್ರಮ ನೀಡುತ್ತಿದೆ. ಆನೆಗುಡ್ಡೆ ದೇವಾಲಯದಲ್ಲಿ ಈ ಅಭಿಯಾನಕ್ಕೆ ಚಾಲನೆ ದೊರೆತಿದ್ದು, ಕುಂದಾಪುರ, ಉಡುಪಿ, ಮಂಗಳೂರು ಬೆ„ಂದೂರು, ಮಾರಣಕಟ್ಟೆ ಹೀಗೆ ಹಲವು ಕಡೆಗಳಲ್ಲಿ ಮಕ್ಕಳ ನಾಲ್ಕು ತಂಡವಾಗಿ ಪರಿಸರದ ಮನೆಮನೆಗಳಲ್ಲಿ ಧರ್ಮ, ಜಾತಿ ಮತ ಮೀರಿ ಹೂವಿನಕೋಲು ಪ್ರದರ್ಶನಗೊಳ್ಳುತ್ತಿದೆ.
ಅತ್ಯಮೂಲ್ಯ ಕಲಾ ಪ್ರಕಾರದ ಉಳಿವಿಗಾಗಿ ನವರಾತ್ರಿಯ ಸಂದರ್ಭ ಅ.3ರಿಂದ ಅ.12ರ ತನಕ ಮನೆ ಮನೆಗಳಲ್ಲಿ ಹೂವಿನಕೋಲು ಅಭಿಯಾನ ಕಾರ್ಯಕ್ರಮ ಯಶಸ್ವಿ ಪ್ರದರ್ಶನಗೊಳ್ಳುತ್ತಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನುತ್ತಾರೆ ಸಂಘಟಕರಾದ ವೆಂಕಟೇಶ್‌ ವೈದ್ಯ ಅವರು.

ಬದಲಾದ ವೇಗದ ಬದುಕಿನ ನಡುವೆ ನಮ್ಮ ಸಂಸ್ಕೃತಿಯ ಪ್ರತೀಕವಾದ ಇಂತಹ ಕಲಾ ಪ್ರಕಾರಗಳ ಬಗ್ಗೆ ಯುವ ಸಮುದಾಯಕ್ಕೂ ಕೂಡಾ ಅರಿವು ಮೂಡಿಸುವ ಮಹತ್ವದ ಕಾರ್ಯವಾಗಬೇಕಾಗಿದೆ ಎನ್ನುವುದು ಟಿ.ಸುಧಾಕರ ಶೆಟ್ಟಿ ತೆಕ್ಕಟ್ಟೆ ಅವರ ಅಭಿಮತ.

Advertisement

ಮಹಾಬಲ ನಾಯ್ಕ ಸಾರಥ್ಯದ ಹೂವಿನ ಕೋಲು ಆಚರಣೆಯ ತಂಡ.

40 ವರ್ಷಗಳಿಂದ ಹೂವಿನ ಕೋಲು ಆಚರಿಸುವ ಮಹಾಬಲ ನಾಯ್ಕ್
ಮಂದಾರ್ತಿ ಮೇಳದ ಕಲಾವಿದರಾಗಿರುವ ಮಹಾಬಲ ನಾಯ್ಕ್ 40 ವರ್ಷಗಳಿಂದ ಹೂವಿನಕೋಲು ಆಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಬಿಳಿ ಬಟ್ಟೆ, ಖಾಕಿ ಚಡ್ಡಿ, ತಲೆಗೆ ಬಿಳಿ ಟೋಪಿ ಧರಿಸಿ ಕೈಯಲ್ಲಿ ಅಲಂಕೃತ ಕೋಲು ಹಿಡಿದು ಮನೆ ಮನೆಗೆ ಹೋಗಿ 10ರಿಂದ 20 ನಿಮಿಷದ ಪ್ರಸಂಗ ಪ್ರದರ್ಶಿಸುತ್ತಾರೆ. ಇವರ ತಂಡದಲ್ಲಿ ನಾಲ್ಕು ಮಂದಿ ಮಕ್ಕಳು ಅರ್ಥದಾರಿಗಳಾಗಿರುತ್ತಾರೆ.

ತಂದೆಯವರು ಹೂವಿನ ಕೋಲು ಆಚರಿಸು ತ್ತಿದ್ದರು. ಅದನ್ನು ಮುಂದುವರಿಸಿ ನಾನೂ 40 ವರ್ಷದಿಂದ ಮುನ್ನಡೆಸುತ್ತಿದ್ದೇನೆ. ಈ ಬಾರಿ ವರ್ಷ 13 ಮನೆಗಳಿಗೆ ಭೇಟಿ ನೀಡಿದ್ದೇವೆ. ಇನ್ನು 15 ಮನೆಗಳ ಭೇಟಿಯ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ಮಹಾಬಲ ನಾಯ್ಕ.

ಹೂವಿನ ಕೋಲಿನಲ್ಲಿ ಮಕ್ಕಳು ಭಾಗವಹಿಸುವುದರಿಂದ ಸಂಸ್ಕೃತಿ ಉಳಿಯುತ್ತದೆ. ಮಕ್ಕಳ ಓದು, ಏಕಾಗ್ರತೆ, ಭಾಷೆಯ ಮೇಲೆ ಹಿಡಿತ, ನಿರರ್ಗಳ ಮಾತು, ವಾಕ್ಚಾತುರ್ಯ ಕೂಡಾ ಹೆಚ್ಚುತ್ತದೆ ಎನ್ನುವುದು ಮಹಾಬಲ ನಾಯ್ಕ್ ಅಭಿಮತ.

ಸಮೃದ್ಧಿಯ ಪ್ರತೀಕ
ನಾರಾಯಣಾಯ ನಮೋಃ ನಾರಾಯಣಾಯ, ನಾಭಿ ಚರಣಕ್ಕೆ ನಮೋಃ ನಾರಾಯಣಾಯ, ಗುರುದೆ„ವ ಗಣಪತಿಗೆ ಶರಣು ಶರಣೆಂದು ಕರಗಳೆರಡನು ಮುಗಿದು ಶಿರವೇರಿನಿಂದು…: ಮನೆಯವರಿಗೆ, ಗುರುಗಳಿಗೆ, ಊರಿಗೆ ಶುಭವಾಗಲಿ, ಸಂತತಿಯಾಗಲಿ, ಸಂಪತ್ತು ವೃದ್ಧಿಸಲಿ ಎಂಬ ಆಶಯಗಳನ್ನೂ ಹೊಂದಿರುವ ಈ ಚೌಪದಿಗಳನ್ನೂ ಮಾನೌಮಿಯ ಪದಗಳೆಂದೂ, ಈ ಮಕ್ಕಳು ಮಾನೌಮಿಯ ಮಕ್ಕಳೆಂದೂ ಕರೆಯುವುದು ರೂಢಿಯಿದೆ.
-ಕೋಟ ಸುದರ್ಶನ ಉರಾಳ, ಯಕ್ಷಚಿಂತಕ

ಸಂಸ್ಕೃತಿ ದಾಟಿಸುವ ಪ್ರಯೋಗ
ಪಾಶ್ಚಾತ್ಯ ಅನುಕರಣೆ, ಮಾಧ್ಯಮಗಳ ಭರಾಟೆ, ಆಧುನಿಕತೆಯ ನಡುವೆ ಸಾಂಪ್ರದಾಯಿಕ ಆಚರಣೆಗಳು ನಶಿಸಿ ಹೋಗುತ್ತಿವೆ. ಮೂಲ ಸಂಸ್ಕೃತಿ ಉಳಿದು, ಮುಂದಿನ ತಲೆಮಾರಿಗೆ ಸಂಸ್ಕೃತಿ ದಾಟಿಸಬೇಕಾದ ಅನಿವಾರ್ಯತೆಯಲ್ಲಿ ನಾವಿದ್ದೇವೆ. ಇಂತಹ ಸ್ಥಿತಿಯಲ್ಲಿ ಯಕ್ಷಗಾನದ ಮೂಲ ಪೀಠಿಕೆಯಾದ ಕೋಲು ಆಚರಣೆ ಚಾಲ್ತಿಯಲ್ಲಿದೆ.
-ವಾದಿರಾಜ ಆಚಾರ್ಯ, ಕಬ್ಬಿನಾಲೆ .

-ಬಾಲಕೃಷ್ಣ ಭೀಮಗುಳಿ
-ಟಿ.ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next