Advertisement

ಕೊರಗಜ್ಜ ಚಿತ್ರದ ಗುಳಿಗಕ್ಕೆ ದೇವಸ್ಥಾನ

11:47 AM May 06, 2023 | Team Udayavani |

ಕರಾವಳಿಯ ಕೋಲ ಮತ್ತು ಭೂತಾರಾಧನೆಯ ಕಥಾಹಂದರ ಹೊಂದಿರುವ “ಕರಿಹೈದ ಕೊರಗಜ್ಜ’ ಚಿತ್ರದ ಕೆಲಸಗಳು ಭರದಿಂದ ನಡೆಯುತ್ತಿದೆ.

Advertisement

ಇದೇ ವೇಳೆ ಚಿತ್ರದ ನಿರ್ದೇಶಕ ಸುಧೀರ್‌ ಅತ್ತಾವರ ಈ ಸಿನಿಮಾದಲ್ಲಿ ಬರುವ “ಗುಳಿಗ’ ದೈವಕ್ಕೆ ದೇವಸ್ಥಾನ ನಿರ್ಮಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಅಂದಹಾಗೆ, ಇಂಥದ್ದೊಂದು ಕಾರ್ಯಕ್ಕೆ ಬಲವಾದ ಕಾರಣ “ಕರಿಹೈದ ಕೊರಗಜ್ಜ’ ಚಿತ್ರೀಕರಣದ ವೇಳೆ ನಡೆದ ಅನೇಕ ಪವಾಡಗಳು ಎನ್ನುವುದು ಚಿತ್ರತಂಡದ ಮಾತು.

ಈ ಹಿಂದೆ ನಡೆದ ಸಿನಿಮಾದ ಪತ್ರಿಕಾಗೋಷ್ಠಿ ಯಲ್ಲಿ ಇಂಥ ಅಗೋಚರ ಪವಾಡಗಳ ಬಗ್ಗೆ ಚಿತ್ರದ ಕಲಾವಿದರಾದ ಕಬೀರ್‌ ಬೇಡಿ, ಶ್ರುತಿ, ಭವ್ಯಾ ಹಾಗೂ ಚಿತ್ರತಂಡದ ಅನೇಕ ಸದಸ್ಯರು ತಮ್ಮ ಅನುಭವವನ್ನು ಹಂಚಿಕೊಂಡಿದ್ದರು. ಆದರೆ ಇದಕ್ಕೆ ಸಂಬಂಧಿಸಿದ ಮತ್ತೂಂದು ಕುತೂಹಲದ ವಿಚಾರ ಎಲ್ಲೂ ಹೊರಬಂದಿರಲಿಲ್ಲ.

ಇದನ್ನೂ ಓದಿ: ‘ದಿ ಕೇರಳ ಸ್ಟೋರಿʼ 1st Day ಕಲೆಕ್ಷನ್‌:‌ ಮೊದಲ ದಿನವೇ ಕಾಶ್ಮೀರ್‌ ಫೈಲ್ಸ್‌ ಮೀರಿಸಿದ ಚಿತ್ರ

ಅದೇನೆಂದರೆ, ಈ ಸಿನಿಮಾದ ಚಿತ್ರೀಕರಣದ ಆರಂಭಕ್ಕೂ ಮೊದಲು ಪುತ್ತೂರಿನಲ್ಲಿ ಸೆಟ್‌ ನಿರ್ಮಾಣದ ವೇಳೆ, ಸೆಟ್‌ ಕೆಲಸಗಾರರು ಯಾವುದೋ ಆವೇಶ ಬಂದಂತವರಾಗಿ ಅಲ್ಲಲ್ಲಿ ಮೂರ್ಛೆ ಹೋಗ ತೊಡಗಿದರು. ಸ್ಥಳಿಯರು ಅರಿಶಿಣ ನೀರನ್ನು ಪ್ರೋಕ್ಷಿಸಿ, ಕೆಲವರನ್ನು ಅಲ್ಲಿನ ಆಸ್ಪತ್ರೆಗೂ ಸೇರಿಸಲಾಯಿತು. ನಂತರ ಆ ಪ್ರದೇಶದಲ್ಲಿ ಯಾರೂ ಸೆಟ್‌ ಕೆಲಸ ಮಾಡಲು ಮುಂದೆ ಬರಲಿಲ್ಲ. ಸೆಟ್‌ ಹಾಕಲಿದ್ದ ಆ ಜಾಗವು ಕರಾವಳಿಯ ಉಗ್ರರೂಪದ ದೈವ ಗುಳಿಗನ ಸ್ಥಳವೆಂದು ಸ್ಥಳಿಯರು ತಿಳಿಸಿದರು. ದೈವದ ಮೇಲಿನ ಗೌರವ-ಭಕ್ತಿಯಿಂದ ಪುತ್ತೂರಿನಿಂದ ಬೆಳ್ತಂಗಡಿಯ ಅರಣ್ಯ ಪ್ರದೇಶದಲ್ಲಿ ಸೆಟ್‌ ಕೆಲಸವನ್ನು ಸ್ಥಳಾಂತರ ಗೊಳಿಸಲಾಯಿತು.

Advertisement

ಇನ್ನು ಚಿತ್ರದಲ್ಲಿ “ಗುಳಿಗ’ ದೈವದ ಪಾತ್ರವನ್ನು ಹಾಲಿವುಡ್‌ ನಟ, ಫ್ರೆಂಚ್‌ ಹಾಗೂ ಬಾಲಿವುಡ್‌ ಕೊರಿಯೋಗ್ರಾಫ‌ರ್‌ ಸಂದೀಪ್‌ ಸೋಪರ್ಕರ್‌ ಅಭಿನಯಿಸಿದ್ದು, ಮಂಗಳೂರಿನ ಸೋಮೆಶ್ವರ ಸಮುದ್ರ ಕಿನಾರೆಯಲ್ಲಿ ಗುಳಿಗ ದೈವದ ಚಿತ್ರೀಕರಣವನ್ನು ನಡೆಸುತ್ತಿದ್ದಾಗಲೂ, ತಂಡಕ್ಕೆ ಹಲವಾರು ರೀತಿಯ ಅಡೆತಡೆಗಳು ಎದುರಾಯಿತು. ಈ ಬಗ್ಗೆ ತಿಳಿದವರಲ್ಲಿ ಚಿಂತನ -ಮಂಥನ ನಡೆಸಿದಾಗ ನಿರ್ದೇಶಕ ಸುಧೀರ್‌ ಅತ್ತಾವರ್‌ ರವರ ಹಿರಿಯರಿದ್ದ ಮನೆಯಲ್ಲಿ ಗುಳಿಗ ದೈವದ ಸಾನಿಧ್ಯವಿದ್ದು, ಹಲವಾರು ವರ್ಷಗಳಿಂದ ಆ ಮನೆಯಲ್ಲಿ ಯಾರೂ ವಾಸವಿರದೆ, ಪಾಳು ಬಿದ್ದಕಾರಣ ದೈವಕ್ಕೆ ಪೂಜೆ ಪುರಸ್ಕಾರಗಳು ನಡೆಯದಿರುವ ವಿಚಾರ ಗೋಚರಿಸಿತು. ಕೂಡಲೇ ನಿರ್ದೇಶಕರು ದೈವಕ್ಕೆ ಗುಡಿ ನಿರ್ಮಾಣ ಮಾಡುವ ಕಾರ್ಯಕ್ಕೆ ಮುಂದಾಗಿ, ಚಿತ್ರದ ಎಡಿಟಿಂಗ್‌ ಕೆಲಸ ಮುಗಿದ ಕೂಡಲೇ, ದೈವಸ್ಥಾನದ ಕಾರ್ಯ ಮುಗಿಸಿ, ಗುಳಿಗ ಹಾಗೂ ಕಲ್ಲುಟಿಗ ದೈವಗಳಿಗೆ ಅದ್ದೂರಿಯ ಕೋಲ ಸೇವೆಯನ್ನು ನಡೆಸಿದರು.

ಈ ಸಮಯದಲ್ಲಿ ಹಿರಿಯ ನಟಿ ಭವ್ಯಾ, ನಿರ್ಮಾಪಕರಾದ ತ್ರಿವಿಕ್ರಮ ಸಾಫ‌ಲ್ಯ, ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್‌ ಶೆಟ್ಟಿ, ಕಲಾವಿದರಾದ ಭರತ್‌ ಸೂರ್ಯ, ರಿತಿಕ ಹಾಗೂ ಹಲವು ತಂತ್ರಜ್ಞರು ಅಹೋರಾತ್ರಿ ವಿಜೃಂಭಣೆಯಿಂದ ನಡೆದ ಕೋಲಸೇವೆಯಲ್ಲಿ ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ಚಿತ್ರತಂಡವು ಚಿತ್ರೀಕರಣ ಮುಗಿದ ಕೂಡಲೇ ಕೊರಗಜ್ಜನಿಗೂ ಕೋಲಸೇವೆಯನ್ನು ಅದ್ದೂರಿಯಾಗಿ ನೆರವೇರಿಸಿತ್ತು. ಅದಾದ ಬಳಿಕ ಸಿನಿಮಾದ ಕೆಲಸಗಳು ಶರವೇಗದಲ್ಲಿ ಪೂರ್ಣಗೊಳ್ಳುತ್ತ ಬಂದಿದ್ದು, ಆಗಸ್ಟ್‌ ತಿಂಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಯೋಜನೆಯಲ್ಲಿದೆ ಚಿತ್ರತಂಡ. ಈ ಸಂದರ್ಭದಲ್ಲಿ ತಮ್ಮ ಸಂಕಲ್ಪದಂತೆ “ಗುಳಿಗ’ ದೈವದ ದೇವಸ್ಥಾನಕ್ಕೆ ನಿರ್ದೇಶಕ ಸುಧೀರ್‌ ಅತ್ತಾವರ್‌ ಮತ್ತು ಚಿತ್ರತಂಡ ಚಾಲನೆ ನೀಡಿದ್ದು, ಇದೆಲ್ಲವೂ ದೈವದ ಪವಾಡ ಎಂಬುದು ಚಿತ್ರತಂಡದ ಒಕ್ಕೊರಲ ಮಾತು.

Advertisement

Udayavani is now on Telegram. Click here to join our channel and stay updated with the latest news.

Next