Advertisement

ಕರಾವಳಿ ಉತ್ಸವಕ್ಕೆ ಕಡಲನಗರಿ ಸಜ್ಜು

03:40 AM Dec 21, 2018 | Karthik A |

ಮಹಾನಗರ: ಕರಾವಳಿಯ ಸಂಸ್ಕೃತಿ-ಪರಂಪರೆಯನ್ನು ಬಿಂಬಿಸುವ ಜತೆಗೆ ದೇಶೀಯ ಸೊಗಡನ್ನು ಪರಿಚಯಿಸುವ ಕರಾವಳಿ ಉತ್ಸವಕ್ಕೆ ಮಂಗಳೂರು ನಗರ ಸಜ್ಜಾಗಿದೆ. ಡಿ. 21ರಿಂದ 30ರ ತನಕ ನಡೆಯುವ ಹತ್ತು ದಿನಗಳ ಈ ಕರಾವಳಿಯ ಸಾಂಸ್ಕೃತಿಕ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದ್ದು, ನಾಡಿನ ಪ್ರಸಿದ್ಧ ಕಲಾ ತಂಡಗಳು ಶುಕ್ರವಾರದಿಂದ ನಾನಾ ರೀತಿಯ ಮನೋರಂಜನೆಯ ರಸದೌತಣ ಉಣಬಡಿಸಲಿವೆ.

Advertisement

ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ನಡೆಯುವ ದ.ಕ. ಜಿಲ್ಲಾ ಕರಾವಳಿ ಉತ್ಸವವು ಈ ಬಾರಿ ‘ಹಳೆ ಮಂಗಳೂರು’ ಪರಿಕಲ್ಪನೆಯಲ್ಲಿ ನಡೆಯುತ್ತಿದೆ. ಸಾಂಸ್ಕೃತಿಕ, ಕಲಾ ಪ್ರದರ್ಶನ, ವಸ್ತು ಪ್ರದರ್ಶನ, ಕ್ರೀಡಾ ಪಂದ್ಯಾಟಗಳು ಸಹಿತ ಹತ್ತು ದಿನಗಳ ಉತ್ಸವದಲ್ಲಿ ಇಡೀ ಕರಾವಳಿಯ ಸಾಂಸ್ಕೃತಿಕ ಪರಂಪರೆ ಮೇಳೈಸಲಿದೆ. ಕರಾವಳಿ ಉತ್ಸವದ ಅಂಗವಾಗಿ ಕರಾವಳಿ ಉತ್ಸವ ಮೈದಾನ, ಕದ್ರಿ ಉದ್ಯಾನವನ ಹಾಗೂ ಪಣಂಬೂರು ಬೀಚ್‌ನಲ್ಲಿ ಈ ಎಲ್ಲ ಕಾರ್ಯಕ್ರಮಗಳು ನಡೆಯಲಿದ್ದು, ಕರಾವಳಿಗರು ಮಾತ್ರವಲ್ಲದೆ, ಜಿಲ್ಲೆಯ ಹೊರ ಭಾಗಗಳಿಂದಲೂ ಕಲಾಪ್ರೇಮಿಗಳು ಉತ್ಸವವನ್ನು ಕಣ್ತುಂಬಿಕೊಳ್ಳಲಿದ್ದಾರೆ.

ಆಕರ್ಷಕ ಸಾಂಸ್ಕೃತಿಕ ದಿಬ್ಬಣ
ಕರಾವಳಿ ಉತ್ಸವದ ಮುಖ್ಯ ಆಕರ್ಷಣೆ ಎಂದರೆ ಸಾಂಸ್ಕೃತಿಕ ದಿಬ್ಬಣ. 21ರಂದು ಸಂಜೆ 3.30ಕ್ಕೆ ನೆಹರೂ ಮೈದಾನದಿಂದ ಮೆರವಣಿಗೆ ಪ್ರಾರಂಭವಾಗಲಿದೆ. ಎ.ಬಿ. ಶೆಟ್ಟಿ ಸರ್ಕಲ್‌, ನೆಹರು ಮೈದಾನರಸ್ತೆ, ಗಡಿಯಾರ ಗೋಪುರ, ಯು.ಪಿ. ಮಲ್ಯ ರಸ್ತೆ, ಹಂಪನ್‌ಕಟ್ಟೆ ವೃತ್ತ, ಕೆ.ಎಸ್‌. ರಾವ್‌ರಸ್ತೆ, ಬಿಷಪ್‌ ಹೌಸ್‌, ನವಭಾರತ ಸರ್ಕಲ್‌, ಪಿವಿಎಸ್‌ ಜಂಕ್ಷನ್‌, ಮಹಾತ್ಮಾಗಾಂಧಿ ರಸ್ತೆ, ಬಲ್ಲಾಳ್‌ಬಾಗ್‌, ಮಹಾನಗರ ಪಾಲಿಕೆ ಮುಂಭಾಗ, ಲಾಲ್‌ಬಾಗ್‌ ಮೂಲಕವಾಗಿ ಕರಾವಳಿ ಉತ್ಸವ ಮೈದಾನಕ್ಕೆ ತಲುಪಲಿದೆ. ರಾಜ್ಯದ ವಿವಿಧ ಕಲಾತಂಡಗಳ ಪ್ರದರ್ಶನ, ನೃತ್ಯ, ಚೆಂಡೆ, ಡೋಲು ಕುಣಿತ ಸೇರಿ ಸುಮಾರು 80ಕ್ಕೂ ಹೆಚ್ಚು ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಕರಾವಳಿ ಉತ್ಸವ ವಸ್ತು ಪ್ರದರ್ಶನ ಮಂಟಪ ಹೊರ ಆವರಣದ ಮೈದಾನದಲ್ಲಿ ಸಂಜೆ 5.30ರಿಂದ 7ರವರೆಗೆ ರಾಜ್ಯಾದ್ಯಂತದಿಂದ ಬಂದ ಕಲಾ ತಂಡಗಳು ವಿಶೇಷ ಪ್ರದರ್ಶನ ನೀಡಲಿದ್ದಾರೆ.

ಕದ್ರಿ ಉದ್ಯಾನವನದ ವೇದಿಕೆ
22ರಂದು ಸಂಜೆ 6ರಿಂದ 7.30ರವರೆಗೆ ಕಣ್ಣಾನೂರಿನ ವಿದುಷಿ ಜಯಶ್ರೀ ರಾಜೀವ್‌ ಮತ್ತು ತಂಡದಿಂದ ಕರ್ನಾಟಕೀ ಶಾಸ್ತ್ರೀಯ ಗಾಯನ, 7.30ರಿಂದ 9.15ರವರೆಗೆ ಧಾರವಾಡದ ಉಸ್ತಾದ್‌ ರಫೀಕ್‌ ಖಾನ್‌ ಹಾಗೂ ಉಸ್ತಾದ್‌ ಶಫೀಕ್‌ ಖಾನ್‌ ಅವರಿಂದ ಸಿತಾರ್‌ ಜುಗಲ್‌ಬಂದಿ, 23ರಂದು ಬೆಳಗ್ಗೆ 6ರಿಂದ 7.30ರವರೆಗೆ ವಿದುಷಿ ಸತ್ಯವತಿ ಮುಡಂಬಡಿತ್ತಾಯ ಶಿಷ್ಯೆಯರಿಂದ ಉದಯರಾಗ-ಕರ್ನಾಟಕೀ ಶಾಸ್ತ್ರೀಯ ಗಾಯನ, 7.30ರಿಂದ 8.15ರವರೆಗೆ ಆವಿಷ್ಕಾರ ಯೋಗದ ಕುಶಾಲಪ್ಪ ಗೌಡ ಮತ್ತು ತಂಡದಿಂದ ಯೋಗ ಪ್ರಾತ್ಯಕ್ಷಿಕೆ, ಸಂಜೆ 6ರಿಂದ 7.30ರ ವರೆಗೆ ಹುಬ್ಬಳ್ಳಿ ಪಂ| ಜಯತೀರ್ಥ ಮೇವುಂಡಿ ಮತ್ತು ತಂಡದಿಂದ ಹಿಂದೂಸ್ಥಾನೀ ಶಾಸ್ತ್ರೀಯ ಗಾಯನ ಹಾಗೂ ಸಂತವಾಣಿ, ಸಂಜೆ 7.30ರಿಂದ 9.15ರ ವರೆಗೆ ಬೆಂಗಳೂರು ಮೆಲೋ ಟ್ರೀ ಫ್ಯೂಶನ್‌ ಮ್ಯೂಸಿಕ್‌ನವರಿಂದ ಫ್ಯೂಶನ್‌ ಮ್ಯೂಸಿಕ್‌, 24ರಂದು ಸಂಜೆ 6ರಿಂದ 7.15ರ ವರೆಗೆ ಉಡುಪಿಯ ಅರ್ಚನಾ, ಸಮನ್ವಿ ಮತ್ತು ತಂಡದಿಂದ ಕರ್ನಾಟಕೀ ಶಾಸ್ತ್ರೀಯ ದ್ವಂದ್ವ ಗಾಯನ, 7.15ರಿಂದ 9.15ರ ವರೆಗೆ ಬೆಂಗಳೂರಿನ ಡಾ| ಸಂಜಯ್‌ ಶಾಂತರಾಮ್‌, ಶಿವಪ್ರಿಯ ತಂಡದಿಂದ ನೃತ್ಯರೂಪಕ, ಕರ್ನಾಟಕ ಕ್ಷೇತ್ರ ವೈಭವ, 25ರಂದು ಸಂಜೆ 6ರಿಂದ 7. 45ರ ವರೆಗೆ ಬೆಂಗಳೂರಿನ ವಿದ್ವಾನ್‌ ಎಸ್‌. ಶಂಕರ್‌ ಮತ್ತು ತಂಡದಿಂದ ಕರ್ನಾಟಕೀ ಶಾಸ್ತ್ರೀಯ ಗಾಯನ, 7.45ರಿಂದ 9.15ರ ವರೆಗೆ ಪುತ್ತೂರು ಶ್ರೀ ದೇವಿ ನೃತ್ಯಾರಾಧಾನಾ ಕಲಾಕೇಂದ್ರದ ರೋಹಿಣಿ ಉದಯ್‌ ಮತ್ತು ತಂಡದಿಂದ ನೃತ್ಯ ಸಂಭ್ರಮ ನಡೆಯಲಿದೆ.

26ರಂದು ಸಂಜೆ 6ರಿಂದ 7.45ರ ವರೆಗೆ ಧಾರವಾಡದ ಪಂ| ವೆಂಕಟೇಶ್‌ ಕುಮಾರ್‌ ಮತ್ತು ತಂಡದಿಂದ ಹಿಂದೂಸ್ಥಾನೀ ಶಾಸ್ತ್ರೀಯ ಗಾಯನ ಹಾಗೂ ದಾಸವಾಣಿ, 7.45ರಿಂದ 9.15ರ ವರೆಗೆ ನೃತ್ಯಾಂಗಣ್‌ನ ರಾಧಿಕಾ ಶೆಟ್ಟಿ ಮತ್ತು ತಂಡದಿಂದ ಸಮೂಹ ನೃತ್ಯ, 27 ಮತ್ತು 28ರಂದು ಸಂಜೆ 5ರಿಂದ 9. 15ರ ವರೆಗೆ ಜಿಲ್ಲೆಯ ವಿವಿಧ ಕಾಲೇಜು ವಿದ್ಯಾರ್ಥಿಗಳಿಂದ ‘ಯುವ ಉತ್ಸವ’ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ. 29ರಂದು ಸಂಜೆ 6ರಿಂದ 7.45ರವರೆಗೆ ವಿದ್ವಾನ್‌ ಎನ್‌. ರವಿಕಿರಣ್‌, ಚೆನ್ನೈ ಅವರಿಂದ ಚಿತ್ರವೀಣಾ ವಾದನ, 7.45ರಿಂದ 9.15ರವರೆಗೆ ಭುವನೇಶ್ವರದ ಗುರು ರತಿಕಾಂತ್‌ ಮಹಾಪಾತ್ರ, ಸೃಜನ್‌ ಎನ್ಸೆಂಬಲ್‌ ಮತ್ತು ತಂಡದಿಂದ ಒಡಿಸ್ಸಿ ನೃತ್ಯ, 30ರಂದು ಬೆಳಗ್ಗೆ 6ರಿಂದ 7.30ರ ವರೆಗೆ ಸ್ವರಶ್ರೀ ಕಲಾವೇದಿಕೆ ಟ್ರಸ್ಟ್‌ನ ವಸಂತಿ ಆರ್‌. ನಾಯಕ್‌ ಮತ್ತು ತಂಡದಿಂದ ಉದಯರಾಗ-ಹಿಂದೂಸ್ಥಾನೀ ಶಾಸ್ತ್ರೀಯ ಗಾಯನ ಹಾಗೂ ದಾಸವಾಣಿ, ಬೆಳಗ್ಗೆ 7.30ರಿಂದ 8.15ರ ವರೆಗೆ ಹರಿದ್ವಾರ ಪತಂಜಲಿ ಯೋಗ ಪೀಠದ ಯೋಗ ಶಿಕ್ಷಕರಿಂದ ಯೋಗ ವ್ಯಾಯಾಮ ಪ್ರದರ್ಶನ, ಸಂಜೆ 6ರಿಂದ 7.30ರ ವರೆಗೆ ಉಡುಪಿ ಕಲಾ ಸಿಂಧು ಸಂಗೀತ ಸಂಸ್ಥೆಯ ಕಲಾವತಿ ದಯಾನಂದ್‌ ಮತ್ತು ತಂಡದಿಂದ ಭಾವಗೀತೆ, ಜಾನಪದಗೀತೆ, ತತ್ವಗೀತೆ, 7.30ರಿಂದ 9.30ರವರೆಗೆ ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ತಂಡದಿಂದ ಯಕ್ಷಗಾನ ತಾಳಮದ್ದಳೆ, 28ರಂದು ವ್ಯಂಗ್ಯ ಚಿತ್ರಕಲಾವಿದರಿಂದ ವ್ಯಂಗ್ಯಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10ಕ್ಕೆ ವಿದ್ಯಾರ್ಥಿಗಳಿಗೆ ವ್ಯಂಗ್ಯಚಿತ್ರ ಸ್ಪರ್ಧೆ ಆಯೋಜಿಸಲಾಗಿದ್ದು, 1ರಿಂದ 4ನೇ ತರಗತಿ, 5ರಿಂದ 7ನೇ ತರಗತಿ, 8 ರಿಂದ 10ನೇ ತರಗತಿ ಮಕ್ಕಳಿಗೆ ‘ನನ್ನ ಮೆಚ್ಚಿನ ಕಾರ್ಟೂನ್‌ ಪಾತ್ರ ಪ್ರಸಿದ್ಧ ವ್ಯಕ್ತಿಯ ವ್ಯಂಗ್ಯಚಿತ್ರ’ ವಿಷಯದಲ್ಲಿ ಸ್ಪರ್ಧೆ ನಡೆಯಲಿದೆ ಎಂದು ಪತ್ರಿಕಾ ಪ್ರಕಟನೆ ತಿಳಿಸಿದೆ.

Advertisement

ಕರುನಾಡ ಕಲಾ ಸಂಗಮ
ಮಹಿಳಾ ವೀರಗಾಸೆ, ಚಿಕ್ಕ ಮಗಳೂರು, ಶಿವಮೊಗ್ಗದ ಡೊಳ್ಳು ಕುಣಿತ, ಸಾಗರದ ಕೋಲಾಟ, ಹಾವೇರಿಯ ಪುರವಂತಿಕೆ, ಧಾರವಾಡದ ಜಗ್ಗಲಿಗೆ ಮೇಳ, ಮಾಗಡಿಯ ಪಟ್ಟದ ಕುಣಿತ, ತುಮಕೂರಿನ ಸೋಮನ ಕುಣಿತ, ರಾಮನಗರದ ಪೂಜಾ ಕುಣಿತ, ಮೈಸೂರಿನ ವೀರಭದ್ರ ಕುಣಿತ, ಹಾವೇರಿಯ ಬೇಡರ ಕುಣಿತ, ಕಾರವಾರದ ಸುಗ್ಗಿ ಕುಣಿತ, ಮೈಸೂರಿನ ಕಂಸಾಳೆ, ನಗಾರಿ ತಂಡ, ರಾಯಚೂರಿನ ಕಣಿವಾದನ, ಚಾಮರಾಜನಗರದ ಗೊರವರ ಕುಣಿತ, ಬೆಳಗಾವಿಯ ಲಂಬಾಣಿ ನೃತ್ಯ, ಹಾಸನದ ಚಿಟ್ಟಿಮೇಳ, ಬದಿಯಡ್ಕದ ತ್ರಯಂಬಕಂ, ಕಾಸರಗೋಡಿನ ದುಡಿ ಇನದನ, ಮಾರ್ಗಂಕಳಿ, ತಿರುವಾದಿರೆಕ್ಕಳಿ, ಮಡಿಕೇರಿಯ ಕೊಡವ ನೃತ್ಯ ತಂಡಗಳು ಭಾಗವಹಿಸಿ ಕರಾವಳಿ ಉತ್ಸವದಲ್ಲಿ ರಾಜ್ಯಾದ್ಯಂತ ವಿವಿಧ ಭಾಗಗಳ ಸಾಂಸ್ಕೃತಿಕ ಸೊಬಗನ್ನು ಪಸರಿಸಲಿವೆ.

ಬೀಚ್‌ ಉತ್ಸವದಲ್ಲಿ ಜುಂಬಾ ಡ್ಯಾನ್ಸ್‌ 
28ರಿಂದ 30ರ ವರೆಗೆ ಪಣಂಬೂರು ಬೀಚ್‌ನಲ್ಲಿ ಬೀಚ್‌ ಉತ್ಸವ ನಡೆಯಲಿದ್ದು, 28ರಂದು ಸಂಜೆ 4.30ಕ್ಕೆ ಬೀಚ್‌ ಉತ್ಸವ ಉದ್ಘಾಟನೆಗೊಳ್ಳಲಿದೆ. ಬೀಚ್‌ ಉತ್ಸವದ ಅಂಗವಾಗಿ ಬೆಳಗ್ಗೆ 9ಕ್ಕೆ ಬೀಚ್‌ ವಾಲಿಬಾಲ್‌, ಸಂಜೆ 5ಕ್ಕೆ ಆಹಾರೋತ್ಸವ ಉದ್ಘಾಟನೆ ನಡೆಯಲಿದೆ. ಗಾಳಿಪಟ ತಯಾರಿ ಪ್ರಾತ್ಯಕ್ಷಿಕೆ, ಮರಳಿನಿಂದ ಶಿಲ್ಪಕೃತಿ ರಚನೆ, ಸರ್ಫಿಂಗ್‌ ಪ್ರದರ್ಶನ, ಡ್ರಮ್‌ ಜಾಮ್‌, ನೃತ್ಯ, ಜುಂಬಾ ಡ್ಯಾನ್ಸ್‌ ವರ್ಕ್‌ ಔಟ್‌, ಸ್ಟ್ಯಾಂಡ್‌ ಅಪ್‌ ಪೆಡ್ಲಿಂಗ್‌, ಸಂಗೀತದಂತಹ ಕಾರ್ಯಕ್ರಮಗಳಿವೆ. 30ರಂದು ಸಂಜೆ 6ಕ್ಕೆ ಸಂಗೀತ ನಿರ್ದೇಶಕ ಮಣಿಕಾಂತ್‌ ಕದ್ರಿ ಲೈವ್‌ ಕಾರ್ಯಕ್ರಮ ಬೀಚ್‌ ಉತ್ಸವದ ಹೈಲೈಟ್ಸ್‌.

ವಸ್ತು ಪ್ರದರ್ಶನ ವೇದಿಕೆ 
ಡಿ. 21ರಂದು ಸಂಜೆ 6ಕ್ಕೆ ಕರಾವಳಿ ಉತ್ಸವ ಉದ್ಘಾಟನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. 22ರಂದು ಸಂಜೆ 6ರಿಂದ 7.30ರ ವರೆಗೆ ಸತೀಶ್‌ ಸುರತ್ಕಲ್‌ ಮತ್ತು ತಂಡದಿಂದ ಸುಗಮ ಸಂಗೀತ, 7.30ರಿಂದ 9.15ರ ವರೆಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ಬ್ಯಾರಿ ಸಾಂಸ್ಕೃತಿಕ ವೈವಿಧ್ಯ, 23ರಂದು ಸಂಜೆ 6ರಿಂದ 7ರ ವರೆಗೆ ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಆಶ್ರಯದಲ್ಲಿ ಕವಿಗೋಷ್ಠಿ, 7ರಿಂದ 9.15ರ ವರೆಗೆ ಕೊಟ್ಟಾರ ಭರತಾಂಜಲಿಯ ಪ್ರತಿಮಾ ಶ್ರೀಧರ್‌ ಮತ್ತು ತಂಡದಿಂದ ನೃತ್ಯ ಸಂಭ್ರಮ ನಡೆಯಲಿದೆ. 24ರಂದು ಸಂಜೆ 6ರಿಂದ 7.30ರ ವರೆಗೆ ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ರಂಗ ಗೀತೆಗಳು, ಜಾನಪದ ಗೀತೆಗಳು, ಸಂಜೆ 7.30ರಿಂದ 9.15ರವರೆಗೆ ಮಾಧ್ಯಮ ಮಿತ್ರ ವೃಂದದವರಿಂದ ಕರಾವಳಿ ಸಾಂಸ್ಕೃತಿಕ ವೈಭವ, 25ರಂದು ಸಂಜೆ 6ರಿಂದ 7.15ರ ವರೆಗೆ ಧನಶ್ರೀ ಶಬರಾಯ ಮತ್ತು ತಂಡದಿಂದ ಪಿಟೀಲು ವಾದನ, 7.15ರಿಂದ 9.15ರ ವರೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಸಾಂಸ್ಕೃತಿಕ ವೈವಿಧ್ಯ, 26ರಂದು ಸಂಜೆ 6ರಿಂದ 7.30ರ ವರೆಗೆ ಕಿನ್ನಿಗೋಳಿ ಸ್ವರಾಂಜಲಿ ಸಂಗೀತ ಶಾಲೆಯ ಜಯಶ್ರೀ ಆರ್‌. ಭಟ್‌ ಮತ್ತು ತಂಡದಿಂದ ಕರ್ನಾಟಕೀ ಶಾಸ್ತ್ರೀಯ ಸಂಗೀತ, 7.30ರಿಂದ 9.30ರವರೆಗೆ ಲಕುಮಿ ತಂಡದಿಂದ ‘ಓವುಲ ಒಂತೆ ದಿನನೆ’ ತುಳು ಹಾಸ್ಯ ನಾಟಕ, 27ರಂದು 6ರಿಂದ 7.15ರ ವರೆಗೆ ಕಲರ್ ಸೂಪರ್‌ ಮಜಾಭಾರತ ಖ್ಯಾತಿಯ ಆರಾಧನಾ ಭಟ್‌ ಮತ್ತು ತಂಡದಿಂದ ನಗೆ ಹಬ್ಬ, 7.15ರಿಂದ 9.15ರ ವರೆಗೆ ಸುರತ್ಕಲ್‌ ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿಯ ಕಲಾಶ್ರೀ ವಿದ್ವಾನ್‌ ಚಂದ್ರಶೇಖರ ನಾವಡ ಮತ್ತು ತಂಡದಿಂದ ನೃತ್ಯರೂಪಕ, 28ರಂದು ಸಂಜೆ 6ರಿಂದ 7.30ರ ವರೆಗೆ ಶರತ್‌ ಹಳೆಯಂಗಡಿ ಮತ್ತು ತಂಡದಿಂದ ಫ್ಯೂಶನ್‌ ಸಂಗೀತ, 7.30ರಿಂದ 9.15ರ ವರೆಗೆ ಸುರತ್ಕಲ್‌ ಪೂರ್ಣಿಮಾ ಯತೀಶ್‌ ರೈ ಮತ್ತು ತಂಡದಿಂದ ‘ಶಮಂತಕ ಮಣಿ’ ಮಹಿಳಾ ಯಕ್ಷಗಾನ, 29ರಂದು 6ರಿಂದ 7.15ರ ವರೆಗೆ ಮೇಧಾ ಉಡುಪ ಮತ್ತು ತಂಡದಿಂದ ಕೊಳಲು ವಾದನ, 7.15ರಿಂದ 9.15ರ ವರೆಗೆ ನಂದಗೋಕುಲ ಅರೆಹೊಳೆ ಪ್ರತಿಷ್ಠಾನದಿಂದ ನೃತ್ಯ ವೈಭವ, 30ರಂದು ಸಂಜೆ 6ರಿಂದ 7.30ರ ವರೆಗೆ ಮಾಧುರ್ಯ ಸಂಗೀತ ವಿದ್ಯಾಲಯದ ಅನುಶ್ರೀ ರಾವ್‌ ಮತ್ತು ಸ್ವಾತಿ ರಾವ್‌ ಹಾಗೂ ತಂಡದಿಂದ ಸುಗಮ ಸಂಗೀತ, 7.30ರಿಂದ 9.30ರ ವರೆಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಂಕಣಿ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳು ಜರಗಲಿದೆ ಎಂದು ಸಮಿತಿ ಅಧ್ಯಕ್ಷ ನರೇಂದ್ರ ಎಲ್‌. ನಾಯಕ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next