Advertisement

ಕರಾವಳಿ ಹೈವೇ : ಪುನರ್ವಸತಿ ಬಗ್ಗೆ ರಾಜ್ಯ ಸರಕಾರ ಮೌನ 

05:11 PM Mar 19, 2017 | Team Udayavani |

591.5 ಕಿ.ಮೀ. ನೀಳಕ್ಕೆ ರಸ್ತೆ ನಿರ್ಮಾಣ, 25,000 ಮನೆಗಳ ತೆರವು 
ಕಾಸರಗೋಡು: ಕಡಲ ಕಿನಾರೆಯಲ್ಲಿ ಹಾದು ಹೋಗುವ ಮಹತ್ವಾಕಾಂಕ್ಷೆಯ “ಕರಾವಳಿ ಹೈವೇ’ ಕಾಮಗಾರಿ ಆರಂಭಿಸಲಿರುವಂತೆ ಮೀನುಗಾರಿಕೆಯಲ್ಲಿ ತೊಡಗಿಕೊಂಡಿರುವ ಕಾರ್ಮಿಕರು ಆತಂಕಿತರಾಗಿದ್ದಾರೆ. ರಾಜ್ಯದಲ್ಲಿ ಸುಮಾರು 25 ಸಾವಿರ ಮೀನು ಕಾರ್ಮಿಕರ ಮನೆಗಳನ್ನು ತೆರವುಗೊಳಿಸಿ ಮುರಿಯಬೇಕಾಗಿ ಬರಲಿದೆ ಹಾಗೂ 10 ಲಕ್ಷಕ್ಕೂ ಅಧಿಕ ಮಂದಿ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸಬೇಕಾಗಿ ಬರಲಿದೆ ಎಂಬುದಾಗಿ ಪ್ರಾಥಮಿಕ ಅಂಕಿಅಂಶದಲ್ಲಿ ಸೂಚಿಸಲಾಗಿದೆ. 

Advertisement

ಆದರೆ ಅದೇ ವೇಳೆ ಮನೆ ಕಳೆದುಕೊಳ್ಳುವ ಮೀನು ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸುವ ಕುರಿತಾಗಿ ಸರಕಾರಿ ಮಟ್ಟದಲ್ಲಿ ಈ ವರೆಗೂ ಯಾವುದೇ ಚರ್ಚೆ ನಡೆದಿಲ್ಲ. ಎಂಟು ಜಿಲ್ಲೆಗಳಲ್ಲಿ ಹಾದು ಹೋಗುವ ಕರಾವಳಿ ಹೈವೇ ನಿರ್ಮಾಣದಿಂದ ಆಲಪ್ಪುಳ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಮೀನು ಕಾರ್ಮಿಕರು ಸಮಸ್ಯೆಗೆ ತುತ್ತಾಗಲಿದ್ದಾರೆ. ಆಲಪ್ಪುಳ ಜಿಲ್ಲೆಯಲ್ಲಿ 78.6 ಕಿಲೋ ಮೀಟರ್‌ ನೀಳದಲ್ಲಿ ಹೈವೇ ನಿರ್ಮಾಣವಾಗಲಿದೆ. ಈ ಜಿಲ್ಲೆಯಲ್ಲಿ ಮಾತ್ರ ಸುಮಾರು 10 ಸಾವಿರದಷ್ಟು ಮೀನು ಕಾರ್ಮಿಕ ರನ್ನು ಒಕ್ಕಲೆಬ್ಬಿಸಬೇಕಾಗಿ ಬರಲಿದೆ ಎಂದು ಮೀನು ಕಾರ್ಮಿಕ ವಲಯದ ಸಂಘಟನೆಗಳು ಭೀತಿ ವ್ಯಕ್ತಪಡಿಸಿವೆ. ಆಲಪ್ಪುಳ ಜಿಲ್ಲೆಯಲ್ಲಿ ಈ ಯೋಜನೆಗಾಗಿ 1,256 ಕೋಟಿ ರೂ. ವ್ಯಯಿಸಬೇಕಾಗಿದೆ. 

ಕೇರಳದ ರಾಜಧಾನಿ ತಿರುವನಂತ ಪುರ ಜಿಲ್ಲೆಯಲ್ಲಿ ಸುಮಾರು 8 ಸಾವಿರ ಮೀನು ಕಾರ್ಮಿಕರನ್ನು ಒಕ್ಕಲೆಬ್ಬಿಸಬೇಕಾಗಿ ಬರಲಿದೆ ಎಂದು ಅಂದಾಜಿಸಲಾಗಿದೆ. ಈ ಜಿಲ್ಲೆಯಲ್ಲಿ 75.2 ಕಿಲೋ ಮೀಟರ್‌ ನೀಳಕ್ಕೆ ಕರಾವಳಿ ಹೈವೇ ನಿರ್ಮಾಣವಾಗಲಿದೆ. ಇದಕ್ಕಾಗಿ 1,046 ಕೋಟಿ ರೂ. ವೆಚ್ಚವನ್ನು ಅಂದಾಜಿಸಲಾಗಿದೆ. 

ಕಣ್ಣೂರು ಜಿಲ್ಲೆಯಲ್ಲಿ 70.2 ಕಿಲೋ ಮೀಟರ್‌ ಕರಾವಳಿ ಹೈವೇ ನಿರ್ಮಿಸುವಾಗ ಸುಮಾರು 1,000ದಷ್ಟು ಮೀನು ಕಾರ್ಮಿಕ ಕುಟುಂಬವನ್ನು ತೆರವುಗೊಳಿಸಬೇಕಾಗಿ ಬರುವುದು. ಈ ಜಿಲ್ಲೆಯಲ್ಲಿ ಹೈವೇ ನಿರ್ಮಾಣಕ್ಕೆ 562 ಕೋಟಿ ರೂ. ವೆಚ್ಚವನ್ನು ಅಂದಾಜಿಸಲಾಗಿದೆ. 4,500ರಷ್ಟು ಮೀನು ಕಾರ್ಮಿಕರು ಕರಾವಳಿ ಹೈವೇ ನಿರ್ಮಾಣದ ಹಿನ್ನೆಲೆಯಲ್ಲಿ ಬೀದಿ ಪಾಲಾಗಲಿದ್ದಾರೆ. ಮಲಪ್ಪುರ ಜಿಲ್ಲೆಯಲ್ಲಿ 63 ಕಿ.ಮೀ. ನೀಳದಲ್ಲಿ ರಸ್ತೆ ನಿರ್ಮಾಣವಾಗಬೇಕಾಗಿದ್ದು, ಇದಕ್ಕಾಗಿ 634 ಕೋಟಿ ರೂ. ಮಂಜೂರು ಮಾಡಲಾಗಿದೆ. ಸುಮಾರು 5,000ದಷ್ಟು ಮೀನು ಕಾರ್ಮಿಕರನ್ನು ತೆರವುಗೊಳಿಸಿ ಮನೆಗಳನ್ನು ಮುರಿದು ತೆಗೆಯಬೇಕಾಗಲಿದೆ. ಕಲ್ಲಿಕೋಟೆ ಜಿಲ್ಲೆಯಲ್ಲಿ 63.6 ಕಿಲೋ ಮೀಟರ್‌ ಹೈವೇ ನಿರ್ಮಾಣ ಸಂದರ್ಭದಲ್ಲಿ ಸುಮಾರು 3,500 ಮೀನು ಕಾರ್ಮಿಕ ಕುಟುಂಬಗಳನ್ನು ಒಕ್ಕಲೆಬ್ಬಿಸಬೇಕಾಗಿ ಬರಲಿದೆ. 463 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಎರ್ನಾಕುಳಂ ಜಿಲ್ಲೆಯಲ್ಲಿ 47.2 ಕಿ.ಮೀ. ನೀಳಕ್ಕೆ ರಸ್ತೆ ನಿರ್ಮಾಣವಾಗಲಿದ್ದು, ಸುಮಾರು 3,000ದಷ್ಟು ಮಂದಿಗೆ ಬಾಧಿಸಲಿದೆ. ಈ ಜಿಲ್ಲೆಯಲ್ಲಿ ರಸ್ತೆ ನಿರ್ಮಾಣಕ್ಕೆ 644 ಕೋಟಿ ರೂ. ವೆಚ್ಚ ಅಂದಾಜಿಸ ಲಾಗಿದೆ. ಕೊಲ್ಲಂ ಜಿಲ್ಲೆಯಲ್ಲಿ 45.5 ಕಿಲೋ ಮೀಟರ್‌ ನೀಳದಲ್ಲಿ ರಸ್ತೆ ನಿರ್ಮಾಣವಾಗಲಿದ್ದು. 465 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಸುಮಾರು 1,000ದಷ್ಟು ಮೀನು ಕಾರ್ಮಿಕರನ್ನು ತೆರವುಗೊಳಿಸಬೇಕಾಗಿ ಬರಲಿದೆ. ಕಾಸರಗೋಡು ಜಿಲ್ಲೆಯಲ್ಲಿ ಕರಾವಳಿ ಹೈವೇಯ ಅಂಕಿಅಂಶ ಇನ್ನೂ ಬಹಿರಂಗಗೊಂಡಿಲ್ಲ. 

ಭರವಸೆ ಉಲ್ಲಂಘನೆ
ಎಲ್‌.ಡಿ.ಎಫ್‌.   ಸರಕಾರ  ಚುನಾ ವಣಾ ಪ್ರಣಾಳಿಕೆಯಲ್ಲಿ ಘೋಷಿಸಿ ರುವ ಭರವಸೆಗಳನ್ನು ಉಲ್ಲಂಘಿಸಿ ಮೀನು ಕಾರ್ಮಿಕರನ್ನು ಅವಗಣಿಸುತ್ತಿದೆ ಎಂದು ಮೀನು ಕಾರ್ಮಿಕ ಸಂಘಟನೆಗಳು ಆರೋಪಿಸಿವೆ. ಮೀನು ಕಾರ್ಮಿಕರಿಗೆ ಪಟ್ಟಾ ವಿತರಿಸಲು ಕಂದಾಯ ಇಲಾಖೆ ತಡೆಯೊಡ್ಡುತ್ತಿದೆ ಎಂದು ಈ ಸಂಘಗಟನೆಗಳು ಆರೋಪಿಸುತ್ತಿವೆೆ. ಸಮುದ್ರ ಕಿನಾರೆ ಸಂರಕ್ಷಣೆ ಮಸೂದೆಯ ಹೆಸರಿನಲ್ಲಿ ಪಟ್ಟಾ ವಿತರಣೆಯನ್ನು ನಿಷೇಧಿಸುತ್ತಿದೆ ಎಂದು ಆರೋಪಿಸಿದೆ. ಮೀನು ಕಾರ್ಮಿಕ ವಲಯದಲ್ಲಿ ಪುನರ್ವಸತಿ ಸಮಸ್ಯೆಗಳನ್ನು ಪರಿಹರಿ ಸಲು ಸರ್ವರಿಗೂ ವಸತಿ, ಸಾನಿಟರಿ, ಶೌಚಾಲಯ ಸೌಕರ್ಯಗಳು, ಕುಡಿಯುವ ನೀರು, ವಿದ್ಯುತ್‌, ಆರೋಗ್ಯದಾಯಕ ಪರಿಸರ ಮೊದಲಾದವುಗಳನ್ನು ಕಲ್ಪಿಸಲು ಸಮಗ್ರ ಕರಾವಳಿ ಪ್ರದೇಶ ವಸತಿ ಯೋಜನೆ ಯನ್ನು ಆವಿಷ್ಕರಿಸಲಾಗುವುದೆಂದು ಚುನಾವಣೆಯ ಸಂದರ್ಭದಲ್ಲಿ ಎಲ್‌ಡಿಎಫ್‌ ಭರವಸೆ ನೀಡಿತ್ತು. ಆದರೆ ಈ ಭರವಸೆಗಳನ್ನು ಈಡೇರಿಸಲು ಈ ಸರಕಾರ ಮೀನಮೇಷ ಎಣಿಸುತ್ತಿದೆ ಎಂದು ಆರೋಪಿಸಿದೆ. 

Advertisement

591.5 ಕಿಲೋ ಮೀಟರ್‌ ರಸ್ತೆ
ನಾಟ್‌ಪಾಕ್‌ನ ಪ್ರಾಥಮಿಕ ಸರ್ವೇ ಪ್ರಕಾರ ರಾಜ್ಯದಲ್ಲಿ 591.5 ಕಿಲೋ ಮೀಟರ್‌ ನೀಳಕ್ಕೆ ಕರಾವಳಿ ಹೈವೇ ನಿರ್ಮಿಸಲಾಗುವುದು. ಇದಕ್ಕಾಗಿ 6,612 ಕೋಟಿ ರೂ. ಒಟ್ಟು ವೆಚ್ಚ ಅಂದಾಜಿಸಲಾಗಿದೆ. 12 ಮೀಟರ್‌ ರೈಟ್‌ ಆಫ್‌ ವೇ ಹಾಗು 7 ಮೀಟರ್‌ ಕ್ಯಾರೇಜ್‌ ವೇಯನ್ನು ನಿರ್ಮಿಸಲು ನಿರ್ದೇಶಿಸಲಾಗಿದೆ. 

ಪಟ್ಟಾ  ಕೇಳಿದ್ದಕ್ಕೆ “ರಸ್ತೆ’ ಪೆಟ್ಟು!
ನಾಟ್‌ಪಾಕ್‌ನ ಪ್ರಾಥಮಿಕ ಸರ್ವೇ ಪ್ರಕಾರ 591.5 ಕಿಲೋ ಮೀಟರ್‌ ನೀಳಕ್ಕೆ ಕರಾವಳಿ ಹೈವೇ ನಿರ್ಮಾಣವಾಗಲಿದೆ. ಒಟ್ಟು ವೆಚ್ಚ 6,612 ಕೋಟಿ ರೂ. ಅಂದಾಜಿಸಲಾಗಿದೆ. 12 ಮೀಟರ್‌ ರೈಟ್‌ ಆಫ್‌ ವೇ ಹಾಗೂ 7 ಮೀಟರ್‌ ಕ್ಯಾರೇಜ್‌ ವೇ ಯನ್ನು ನಿರ್ದೇಶಿಸಲಾಗಿದೆ. ಕೆಲವೆಡೆ ಕ್ಯಾರೇಜ್‌ವೇಯ ಅಗಲ 5.5 ಮೀಟರ್‌ ಆಗಲಿದೆ. ಸಮುದ್ರ ಕಿನಾರೆಯಲ್ಲಿ ಯಾವುದೇ ಶರತ್ತು ಗಳಿಲ್ಲದೆ ಪಟ್ಟಾ ನೀಡಬೇಕೆಂದು ಆಗ್ರಹಿಸಿ ಮೀನು ಕಾರ್ಮಿಕರು ಸತ್ಯಾಗ್ರಹಕ್ಕೆ ಮುಂದಾಗಿರುವಂತೆ ಕರಾವಳಿ ಹೈವೇ ನಿರ್ಮಾಣಕ್ಕೆ ಸರಕಾರ ಮುಂದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next