ಮಂಗಳೂರು: ಕೋವಿಡ್ 19 ಮಾಹಾಮಾರಿಯಿಂದಾಗಿ ಜನಸಾಮಾನ್ಯರು ಬಹಳಷ್ಟು ಸಮಸ್ಯೆಗೆ ಸಿಲುಕಿದ್ದಾರೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಒಬ್ಬರಿ ಗೊಬ್ಬರು ಸಹಾಯ ಮಾಡುವ ಮೂಲಕ ಕೋವಿಡ್ 19 ಸಮರದಲ್ಲಿ ಸಂಘಟಿತರಾಗಿ ಹೋರಾಡಿ ಗೆಲ್ಲೋಣ ಎಂದು ಕರಾವಳಿ ಕಾಲೇಜು ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಸ್. ಗಣೇಶ್ ರಾವ್ ಹೇಳಿದರು.
ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ನೀರುಮಾರ್ಗ ಕರಾವಳಿ ಎಂಜಿನಿಯರಿಂಗ್ ಕಾಲೇಜು ಕ್ಯಾಂಪಸ್ನಲ್ಲಿ ಮಂಗಳವಾರ ಕಿಟ್ ವಿತರಿಸಿ ಅವರು ಮಾತನಾಡಿದರು.
ಕರಾವಳಿ ಕಾಲೇಜು ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಸಮಾಜದ ಬಡವರಿಗೆ ಕಿಟ್ ವಿತರಣೆ ಮಾಡುತ್ತಿದೆ. ಈಗಾಗಲೇ ಕಾವೂರು, ಕೊಟ್ಟಾರ, ಕದ್ರಿ, ವಾಮಂಜೂರು ವ್ಯಾಪ್ತಿಯಲ್ಲಿ ನಡೆದಿದೆ. ಮುಂದೆ ತೊಕ್ಕೊಟ್ಟು ಸೇರಿದಂತೆ ವಿವಿಧ ಕಡೆ ವಿತರಣೆ ನಡೆಯಲಿದೆ. ಸಾರ್ವಜನಿಕರು, ಸಂಘ-ಸಂಸ್ಥೆಗಳು, ದಾನಿಗಳ ಕೈಗೂಡುವಿಕೆ ಮೂಲಕ ಸಮಾಜದ ಸಂಕಷ್ಟದಲ್ಲಿ ಭಾಗಿಗಳಾಗೋಣ ಎಂದರು.
ಮಂಗಳೂರು ತಾ.ಪಂ. ಮಾಜಿ ಅಧ್ಯಕ್ಷ ಗೋಕುಲ್ದಾಸ್ ಶೆಟ್ಟಿ, ನೀರುಮಾರ್ಗ ಗ್ರಾ.ಪಂ ಅಧ್ಯಕ್ಷರಾದ ಕಸ್ತೂರಿ, ಸದಸ್ಯರಾದ ಸಚಿನ್ ಹೆಗ್ಡೆ, ಚೇತನ್ ಕುಮಾರ್, ರಾಮ ಕರ್ಕೇರಾ ಉಪಸ್ಥಿತರಿದ್ದರು.
ಕಿಟ್ನಲ್ಲಿ ಕುಚ್ಚಲಕ್ಕಿ, ಚಾ ಹುಡಿ, ಈರುಳ್ಳಿ, ತೊಗರಿ ಬೇಳೆ, ಸಕ್ಕರೆ ನೀಡಲಾಗಿತ್ತು. ನೀರುಮಾರ್ಗದಲ್ಲಿ ಸುಮಾರು 180 ಮಂದಿಗೆ ಕಿಟ್ ವಿತರಣೆ ಮಾಡಲಾಯಿತು.