Advertisement

ಪ್ರೇಮೋತ್ಸಾಹವಿದ್ದಲ್ಲಿ ಮಾತ್ರ ಉತ್ಸವ

05:21 PM Nov 25, 2019 | Naveen |

ಕಾರಟಗಿ: ಉತ್ಸಾಹ, ಶ್ರದ್ಧಾ-ಭಕ್ತಿ ಮನಸ್ಸಿನೊಳಗೆ ಮೂಡಿದರೆ ಜನರಲ್ಲಿ ಉತ್ಸಾಹ ತಾನಾಗಿಯೇ ಮೂಡುತ್ತದೆ. ಭತ್ತ ಬೆಳೆಯುವ ಮಣ್ಣಿನಲ್ಲಿ ಭಕ್ತಿ ಹೇಗೆ ಬೆಳೆಸಬೇಕೆಂಬುದನ್ನು ಚಳ್ಳೂರ ಗ್ರಾಮದ ಜನತೆ ತೋರಿಸಿಕೊಟ್ಟಿದ್ದಾರೆ ಎಂದು ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.

Advertisement

ಸಮೀಪದ ಚಳ್ಳೂರ ಗ್ರಾಮದಲ್ಲಿ ರವಿವಾರ ಸದ್ಭಾವನಾ ಪಾದಯಾತ್ರೆ ನಂತರ ಶ್ರೀ ಸಿದ್ಧರಾಮೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ದ್ವೇಷವಿದ್ದಲ್ಲಿ ಉತ್ಸವ ಕಾಣುವುದಿಲ್ಲ, ನಡೆಯುವುದಿಲ್ಲ. ಪ್ರೇಮೋತ್ಸಾಹವಿದ್ದಲ್ಲಿ ಮಾತ್ರ ಉತ್ಸವ ಕಾಣುತ್ತದೆ. ದೇವರು ಕೊಟ್ಟಿದ್ದನ್ನು ಅನುಭವಿಸಿ ಸಂತೋಷ ಪಡಬೇಕು ಆಗ ಜೀವನ ಉತ್ಸವವಾಗುತ್ತದೆ. ನಾವು ಯಾರನ್ನೂ ಮಲತಾಯಿಯಂತೆ ನೋಡಬಾರದು. ಹೆತ್ತ ತಾಯಿಯಂತೆ ನೋಡಬೇಕು. ಆಗ ನಮ್ಮ ಬದುಕು ಉತ್ಸವವಾಗುತ್ತದೆ. ವಚನಗಳು ಪುಸ್ತಕಗಳಲ್ಲಿ ಓದುತ್ತಿದ್ದೆವು ಆದರೆ ಗ್ರಾಮದ ಮನೆಗಳ ಗೋಡೆಗಳ ಮೇಲೆ ವಚನಗಳು ಕಾಣಸಿಗುತ್ತವೆ. ಕಾರಣ ಜನರಲ್ಲಿ ಪ್ರೇಮೋತ್ಸಾಹ ತುಂಬಿದೆ. ಹೀಗಾಗಿ ಉತ್ಸವ ಕಾಣುತ್ತಿದ್ದೇವೆ. ದೇವರು ಇನ್ನೊಬ್ಬನಿಗೆ ಏನು ಕೊಟ್ಟಿದ್ದಾನೆ ಎಂದು ನೋಡುತ್ತೇವೆ ಆಗ ನಮಗೆ ದುಃಖವಾಗುತ್ತದೆ. ಸಂತೋಪಡಲೂ ವಿದೇಶ ಪ್ರವಾಸ ಹೋಗಬೇಕಿಲ್ಲ. ಸಂತೋಷ ಪಡಬೇಕಾದರೆ ಇನ್ನೊಬ್ಬರ ತಟ್ಟೆಯಲ್ಲಿ ಏನಿದೆ ಎಂದು ನೋಡಿ ಆಶಾ ಪಡಬಾರದು. ನನ್ನ ತಟ್ಟೆಯಲ್ಲಿ ಹಾಕಿದ್ದನ್ನು ಉಂಡು ಸಂತೋಷಪಡಬೇಕು. ಫಾರೀನ್‌ ಗೆ ಹೋಗುವುದಲ್ಲ ಫಾರೀನ್‌ ಇಲ್ಲೆ ನಿರ್ಮಾಣ ಮಾಡಬೇಕು. ಮನುಷ್ಯ ಸಂತೋಷವಾಗಿರಬೇಕಾದರೆ ದುಡಿಯಬೇಕು, ಕಷ್ಟಪಡಬೇಕು. ಕೈತುಂಬ ಕೆಲಸವಿರಬೇಕು ಅಂದಾಗ ಜೀವನದಲ್ಲಿ ಉತ್ಸಾಹ, ನಿತ್ಯೋತ್ಸಾಹವಾಗುತ್ತದೆ. ಇದನ್ನು ಎಲ್ಲರೂ ಕಲಿಯಬೇಕು ನಿತ್ಯ ಉತ್ಸಾಹಭರಿತನಾಗಿರಬೇಕು ಅಂದಾಗ ನಮ್ಮ ಜೀವನ ಸಾಕ್ಷಾತ್ಕಾರವಾಗುತ್ತದೆ ಎಂದರು.

ಹರಿದು ಬಂದ ಜನಸಾಗರ: ಪಟ್ಟಣದಲ್ಲಿ ನಡೆದ ಕೊಪ್ಪಳದ ಗವಿಶ್ರೀಗಳ ಕೊನೆಯ ದಿನದ ಪ್ರವಚನದ ಅಂಗವಾಗಿ ಪಟ್ಟಣದ ಶ್ರೀ ಸಿದ್ದೇಶ್ವರ ಬಯಲು ರಂಗಮಂದಿರದಲ್ಲಿ ರವಿವಾರ ಸಂಜೆ ಅಪಾರ ಸಂಖ್ಯೆಯ ಜನಸ್ತೋಮ ನೆರೆದಿತ್ತು. ಇದು ಗವಿಸಿದ್ದೇಶ್ವರರ ಜಾತ್ರೆ ನಡೆದಿದೆ ಎಂಬಂತೆ ಭಾಸವಾಗುತ್ತಿತ್ತು. ಆದರೆ ರಥೋತ್ಸವ ಮಾತ್ರ ಇರಲಿಲ್ಲ. ಕಳೆದ 10 ದಿನಗಳಿಂದ ನಡೆದ ಪ್ರವಚನ ಕಾರ್ಯಕ್ರಮಕ್ಕೆ ಸುತ್ತಲಿನ ಗ್ರಾಮಗಳು ಸೇರಿದಂತೆ ತಾಲೂಕು, ಹೊರ ಜಿಲ್ಲೆಗಳಿಂದಲೂ ನಿತ್ಯ ಭಕ್ತರು ಆಗಮಿಸುತ್ತಿದ್ದರು. ಆದರೆ ರವಿವಾರ ದಿನಕ್ಕಿಂತ ಹೆಚ್ಚಿನ ಸಂಖ್ಯೆಯ ಭಕ್ತರು ಪ್ರವಚನ ಆಲಿಸಲು ಆಗಮಿಸಿದ್ದು, ಸುಮಾರು 30 ಸಾವಿರಕ್ಕೂ ಹೆಚ್ಚು ಭಕ್ತರು ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಟ್ರ್ಯಾಕ್ಟರ್‌, ಕಾರು, ಟಾಂಟಾಂ, ಟ್ರ್ಯಾಕ್ಸ್‌, ಆಟೋ ಸೇರಿದಂತೆ ವಿವಿಧ ವಾಹನಗಳಲ್ಲಿ ಭಕ್ತರ ಆಗಮಿಸಿದ್ದ ಪರಿಣಾಮ್‌ ಸಂಚಾರ ದಟ್ಟಣೆಯಾಗಿತ್ತು. ಆರ್‌.ಜಿ. ಮುಖ್ಯೆ ರಸ್ತೆಯ ಇಕ್ಕೆಲಗಳ ಅಂಗಡಿಗಳ ಮುಂದೆ ನೂರಾರು ದ್ವಿಚಕ್ರವಾಹನ ನಿಲ್ಲಿಸಲಾಗಿತ್ತು. ಪ್ರವಚನಕ್ಕೆ ಪಾಲಕರೊಂದಿಗೆ ಮಕ್ಕಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಸಂಜೆ 4 ಗಂಟೆಯಿಂದ ಆಗಮಿಸುತ್ತಿದ್ದ ಭಕ್ತರು ಪ್ರವಚನ ಆರಂಭಗೊಂಡು ಮುಕ್ಕಾಲು ಗಂಟೆಯಾದರೂ ಬರುತ್ತಿದ್ದರು. ಕನಕದಾಸ ವೃತ್ತ ಮತ್ತು ಹಳೆ ಬಸ್‌ ನಿಲ್ದಾಣಗಳಲ್ಲಿ ವಾಹನ ಹಾಗೂ ಭಕ್ತರನ್ನು ನಿಯಂತ್ರಿಸಲೂ ಪೊಲೀಸರು ಹರಸಾಹಸ ಪಟ್ಟರು.

ಸದ್ಭಾವನಾ ಪಾದಯಾತ್ರೆ: ಕಾರ್ಯಕ್ರಮಕ್ಕೂ ಮುನ್ನ ಚಳ್ಳೂರ ಗ್ರಾಮದಲ್ಲಿ ರವಿವಾರ ಗವಿಶ್ರೀಗಳ ಸದ್ಭಾವನಾ ಯಾತ್ರೆ ಅದ್ಧೂರಿಯಾಗಿ ನಡೆಯಿತು. ಶ್ರೀಗಳ ಯಾತ್ರೆ ನಿಮಿತ್ತ ಗ್ರಾಮವನ್ನು ತಳಿರು, ತೋರಣ ಕಟ್ಟಿ, ಹೂವು, ರಂಗೋಲಿಗಳಿಂದ ಅಲಂಕರಿಸಲಾಗಿತ್ತು. ಶ್ರೀಗಳು ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಬರಮಾಡಿಕೊಂಡರು. ಗ್ರಾಮದ ಶ್ರೀ ವಾಲ್ಮೀಕಿ ದೇವಸ್ಥಾನದಿಂದ ಆರಂಭವಾದ ಸದ್ಭಾವನಾ ಯಾತ್ರೆ ವಿವಿಧ ವಾರ್ಡ್‌ಗಳಲ್ಲಿ ಸಂಚರಿಸಿತು. ಕೇರಿಯ ದ್ಯಾಮಮ್ಮ ದೇವಸ್ಥಾನ, ಕಲ್ಲೇಶ್ವರ ದೇವಸ್ಥಾನ, ದುರ್ಗದೇವಿ ದೇವಸ್ಥಾನದ ಮೂಲಕ ಸಾಗಿ ಸಿದ್ಧರಾಮೇಶ್ವರ ದೇವಸ್ಥಾನಕ್ಕೆ ಬಂದು ತಲುಪಿತು. ಗ್ರಾಮದ ವೃತದಲ್ಲಿ ಮರಳಿನಲ್ಲಿ ನಿರ್ಮಿಸಿದ ಸಿದ್ಧಗಂಗಾ ಶ್ರೀಗಳ ಶಿಲ್ಪ ಹಾಗೂ ಸಿದ್ಧರಾಮೇಶ್ವರ ದೇವಸ್ಥಾನದ ವೇದಿಕೆ ಬಳಿ ಮರಳಿನಿಂದ ನಿರ್ಮಿಸಿದ ಪುಟ್ಟರಾಜ ಗವಾಯಿಗಳ ಶಿಲ್ಪವನ್ನು ಶ್ರೀಗಳು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶಾಸಕ ದಢೇಸುಗೂರು ಬಸವರಾಜ, ಚಳ್ಳೂರ, ಸೋಮನಾಳ, ಗುಡೂರ, ಹಗೇದಾಳ, ತೊಂಡ್ಯಾಳ, ದುಂಡಗಿ ಸೇರಿದಂತೆ ವಿವಿಧ ಕ್ಯಾಂಪ್‌ಗ್ಳ ಜನತೆ ಹಾಗೂ ಪ್ರವಚನ ಸಮಿತಿ ಸದಸ್ಯರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next