Advertisement

ಕಾಪು ತಾ|ವಿವಿಧ ಸಮಸ್ಯೆಗಳ ಅಹವಾಲು ಮಂಡಿಸಿದ ಜನಪ್ರತಿನಿಧಿಗಳು !

09:04 PM Sep 06, 2019 | Sriram |

ಕಾಪು: ಕಾಪು ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಜನಪ್ರತಿನಿಧಿಗಳ ನೆಲೆಯಲ್ಲಿ ನಾವು ಕ್ರಿಯಾಯೋಜನೆ ಸಿದ್ಧಪಡಿಸಿದ್ದೇವೆ. ಅದರ ಅನುಷ್ಠಾನಕ್ಕೆ ಎಲ್ಲಾ ಹಂತದ ಅಧಿಕಾರಿಗಳ ಸಹಕಾರದ ಅಗತ್ಯತೆಯಿದೆ. ಇದಕ್ಕಾಗಿ ಅಧಿಕಾರಿಗಳು ಪಾರದರ್ಶಕವಾಗಿ ಕೆಲಸ ನಿರ್ವಹಿಸುವ ಅಗತ್ಯತೆಯಿದೆ. ಕ್ಷೇತ್ರದ ಜನತೆಯನ್ನು ಜ್ವಲಂತವಾಗಿ ಕಾಡುತ್ತಿರುವ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಅವರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಶಾಸಕ ಲಾಲಾಜಿ ಆರ್‌. ಮೆಂಡನ್‌ ಹೇಳಿದರು.

Advertisement

ಕಾಪು ಪುರಸಭಾ ಸಭಾಂಗಣದಲ್ಲಿ
ಸೆ. 4ರಂದು ನಡೆದ ಜಿಲ್ಲಾಧಿಕಾರಿಗಳ ಅಹವಾಲು ಸ್ವೀಕಾರ ಸಭೆಯಲ್ಲಿ ಅವರು ಮಾತನಾಡಿದರು.

ಯುಪಿಸಿಎಲ್‌, ಐಎಸ್‌ಪಿಆರ್‌ಎಲ್‌, ಸುಜ್ಲಾನ್‌ನಂತಹ ಸಾವಿರಾರು ಕೋಟಿ ರೂಪಾಯಿ ಬಂಡವಾಳ ದ ಯೋಜನೆಗಳು ಕಾಪು ಕ್ಷೇತ್ರದಲ್ಲಿ ಅಸ್ತಿತ್ವಕ್ಕೆ ಬಂದಿದ್ದರೂ ಅದರಿಂದ ಕ್ಷೇತ್ರದ ಬೆಳವಣಿಗೆಗೆ ನಿರೀಕ್ಷಿತ ಸಹಕಾರ ದೊರಕಿಲ್ಲ. ಕಾಪು ಮೆಸ್ಕಾಂ ಕಚೇರಿಗೆ ಕಟ್ಟಡ ನಿರ್ಮಾಣಕ್ಕೆ ಪ್ರವಾಸಿ ಬಂಗ್ಲೆ ಪ್ರದೇಶದಲ್ಲಿನ 19 ಸೆಂಟ್ಸ್‌ ಜಮೀನನ್ನು ಗುರುತಿಸಲಾಗಿದೆ. ಮಿನಿ ವಿಧಾನಸೌಧ ಸಹಿತ ವಿವಿಧ ಕಚೇರಿಗಳಿಗೆ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕಾಗಿ ಬಂಗ್ಲೆ ಪ್ರದೇಶದಲ್ಲಿರುವ ವಸತಿ ಗƒಹ ಕಟ್ಟಡಗಳನ್ನು ತೆರವು ಮಾಡಿ ಅನುಕೂಲ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಅವರು ಮನವಿ ಮಾಡಿದರು.

ಪಲಿಮಾರು ಗ್ರಾ.ಪಂ.
ಪಲಿಮಾರು ಗ್ರಾ.ಪಂ. ವ್ಯಾಪ್ತಿಯಲ್ಲಿ ಮಳೆ ನೀರು ಹರಿದು ಹೋಗುವ ತೋಡಿನಲ್ಲಿ ಹೂಳು ತುಂಬಿ ಕೃತಕ ನೆರೆಯಿಂದ ಸಮಸ್ಯೆಗಳಾಗುತ್ತಿದೆ. ತೋಡಿನ ಹೂಳೆತ್ತುವ ಬಗ್ಗೆ ಗಮನಹರಿಸಬೇಕು. ಘನತ್ಯಾಜ್ಯ ನಿರ್ವಹಣಾ ಘಟಕ, ಹಿಂದೂ ರುದ್ರಭೂಮಿ, ನಿವೇಶನಕ್ಕೆ ಗುರುತು ಮಾಡಿದ ಜಮೀನಿಗೆ ಇರುವ ಅಡೆತಡೆಗಳನ್ನು ಕೂಡಲೇ ಪರಿಹರಿಸಿಕೊಡುವಂತೆ ಗ್ರಾ.ಪಂ. ಅಧ್ಯಕ್ಷ ಜಿತೇಂದ್ರ ಫುರ್ಟಾರ್ಡೊ ಜಿಲ್ಲಾಧಿಕಾರಿಯವರನ್ನು ಆಗ್ರಹಿಸಿದರು.

ಸಂತ್ರಸ್ತರಿಗೆ ಪರಿಹಾರ ನೀಡಲು ಕ್ರಮ ಪಾದೂರು ಐಎಸ್‌ಪಿಆರ್‌ಎಲ್‌ ಯೋಜನೆಗೆ ಬಂಡೆ ಸ್ಫೋಟಿಸಿದ ಪರಿಣಾಮ ಹಾನಿಯುಂಟಾದ ಮನೆಗಳಿಗೆ ಇನ್ನೂ ಕೂಡ ಪರಿಹಾರ ವಿತರಣೆಯಾಗಿಲ್ಲ. ಈಗ ಎರಡನೇ ಹಂತದಲ್ಲಿ ಯೋಜನೆ ವಿಸ್ತರಣೆಗೆ ಸಿದ್ಧತೆ ನಡೆಯುತ್ತಿದೆ. ಯೋಜನೆಗೆ ನಮ್ಮ ಯಾವುದೇ ವಿರೋಧವಿಲ್ಲ. ಆದರೆ ಹಾನಿಗೊಂಡ ಮನೆಗಳವರಿಗೆ ಸೂಕ್ತ ಪರಿಹಾರ ನೀಡಿ ಎರಡನೇ ಹಂತದ ವಿಸ್ತರಣೆ ನಡೆಯುವಂತಾಗಲಿ ಎಂದು ಮಜೂರು ಗ್ರಾ.ಪಂ ಅಧ್ಯಕ್ಷ ಸಂದೀಪ್‌ ರಾವ್‌ ಮನವಿ ಮಾಡಿದರು.

Advertisement

ಎಲ್ಲೂರು ಗ್ರಾ.ಪಂ.
ಎಲ್ಲೂರು ಗ್ರಾ.ಪಂ. ವ್ಯಾಪ್ತಿಯ ನಿವೇಶನ ರಹಿತರಿಗೆ ಗುರುತಿಸಿದ ಜಮೀನಿನ ಸಮಸ್ಯೆ, ಐಟಿಐಗಾಗಿ ಮಂಜೂರಾದ ಜಮೀನಿನ ಪಹಣಿಯಲ್ಲಿನ ದೋಷವನ್ನು ತುರ್ತಾಗಿ ಸರಿಪಡಿಸುವಂತೆ ಗ್ರಾ.ಪಂ. ಉಪಾಧ್ಯಕ್ಷ ಜಯಂತ್‌ ಕುಮಾರ್‌ ಒತ್ತಾಯಿಸಿದರು.

ಗಣಿಗಾರಿಕೆ ಬಗ್ಗೆ ಮಾಹಿತಿ ಕೊಡಿ
ಶಿರ್ವ ಗ್ರಾ.ಪಂ. ವ್ಯಾಪ್ತಿಯಲ್ಲಿ ಎಷ್ಟು ಗಣಿಗಾರಿಕೆಗಳು ನಡೆಯುತ್ತಿವೆ. ಗಣಿಗಾರಿಕೆಗಾಗಿ ಗ್ರಾ.ಪಂ.ನಿಂದ ಯಾವುದೇ ನಿರಾಕ್ಷೇಪಣಾ ಪತ್ರ ಪಡೆಯದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಮತ್ತು ಕಳೆದ ಒಂದು ವರ್ಷದ ಹಿಂದೆ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಗೆ ಚಾಲನೆ ದೊರಕಿದೆ. ಆದರೆ ಇನ್ನೂ ಕೂಡಾ ಕಾಮಗಾರಿಗಳು ಆರಂಭವಾಗದ ಬಗ್ಗೆ ಜನರು ದೂರು ನೀಡುತ್ತಿದ್ದಾರೆ ಎಂದು ಗ್ರಾ.ಪಂ. ಅಧ್ಯಕ್ಷೆ ವಾರಿಜ ಪೂಜಾರಿ¤ ಅಹವಾಲು ಮಂಡಿಸಿದರು.

ವೋಟರ್‌ ಐಡಿಗೆ ಆಧಾರ್‌
ಮಾತ್ರ ಸಾಕೇ ?
ಇನ್ನಂಜೆ ಗ್ರಾ. ಪಂ. ವ್ಯಾಪ್ತಿಯಲ್ಲಿ ಡಿ.ಜಿ.ಎಂ. ಬೇತೆಲ್‌ ಟ್ರಸ್ಟ್‌ ವತಿಯಿಂದ ನಡೆಯುತ್ತಿರುವ ಅನಾಥಾಶ್ರಮದಲ್ಲಿ ಇರುವವರ ಆಧಾರ್‌ ಕಾರ್ಡ್‌ನ್ನೇ
ಆಧಾರವಾಗಿರಿಸಿಕೊಂಡು ವೋಟರ್‌ ಐಡಿ ವಿತರಣೆಯಾಗಿದೆ. ಇದಕ್ಕೆ ಪಂಚಾಯತ್‌ನಿಂದ ಯಾವುದೇ ಪತ್ರ ಪಡೆಯಲಾಗಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿಗೂ ಮೂರು ಬಾರಿ ಮನವಿ, ದೂರು ನೀಡಲಾಗಿದೆ. ಇನ್ನೂ ಕೂಡಾ ಪ್ರತ್ಯುತ್ತರವೇ ಬಂದಿಲ್ಲ ಎಂದು ಇನ್ನಂಜೆ ಗ್ರಾ.ಪಂ. ಉಪಾಧ್ಯಕ್ಷೆ ಮಾಲಿನಿ ಶೆಟ್ಟಿ ದೂರು ನೀಡಿದರು.

ಕಾರ್ಮಿಕರ ಗುರುತು ಪತ್ರ ಏನಾಯ್ತು ?
ಕಾರ್ಮಿಕ ಇಲಾಖೆಯ ವತಿಯಿಂದ ಒಂದು ವರ್ಷದ ಹಿಂದೆ ಕಾರ್ಮಿಕರಿಗೆ ಗುರುತು ಚೀಟಿ ನೀಡುವುದಾಗಿ ಹಣ ಪಡೆದು ಈವರೆಗೂ ಗುರುತು ಚೀಟಿ ನೀಡದಿರುವ ಬಗ್ಗೆ ಜಿ.ಪಂ. ಸದಸ್ಯೆ ಶಿಲ್ಪಾ ಸುವರ್ಣ ಸಭೆಯ ಗಮನ ಸೆಳೆದರು.

9/11, ತ್ಯಾಜ್ಯ, ಟೋಲ್‌
ಗೇಟ್‌ ಸಮಸ್ಯೆಯಿಂದ ಮುಕ್ತಿ ಕೊಡಿ
ಉಡುಪಿ ಜಿ.ಪಂ. ಸದಸ್ಯ ವಿಲ್ಸನ್‌ ರೋಡ್ರಿಗಸ್‌ ಅವರು ಗ್ರಾಮೀಣ ಜನರನ್ನು ಕಾಡುತ್ತಿರುವ 9 / 11 ಸಮಸ್ಯೆಯ ಬಗ್ಗೆ, ಪುರಸಭೆ ಸದಸ್ಯ ಅನಿಲ್‌ ಕುಮಾರ್‌ ಕಾಪುವಿನ ತ್ಯಾಜ್ಯ ಸಮಸ್ಯೆ, ಒಳ ಚರಂಡಿ ನೀರು ಸರಬರಾಜು ಯೋಜನೆ ಇತ್ಯಾದಿ ಸಮಸ್ಯೆಗಳ ಬಗ್ಗೆ, ತಾ.ಪಂ. ಸದಸ್ಯ ದಿನೇಶ್‌ ಕೋಟ್ಯಾನ್‌ ಪಲಿಮಾರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರು ಮಲಿನಗೊಂಡಿರುವ ಗ್ಗೆ, ಹೆಜಮಾಡಿ ಗ್ರಾ.ಪಂ. ಉಪಾಧ್ಯಕ್ಷ ಸುಧಾಕರ ಕರ್ಕೇರ ಹೆಜಮಾಡಿ ಟೋಲ್‌ಗೇಟ್‌ನಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ, ಪುರಸಭಾ ಸದಸ್ಯೆ ಶಾಂಭವಿ ಕುಲಾಲ್‌ ಮೂಳೂರಿನಲ್ಲಿ ಹೈವೇ ಯೂ ಟರ್ನ್ ಇಲ್ಲದಿರುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಉಡುಪಿ ಜಿ.ಪಂ. ಅಧ್ಯಕ್ಷ ದಿನಕರ್‌ ಬಾಬು, ತಾ.ಪಂ. ಅಧ್ಯಕ್ಷೆ ನೀತಾ ಗುರುರಾಜ್‌, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿ.ಪಂ. ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್‌, ಉಡುಪಿ ತಹಶೀಲ್ದಾರ್‌ ಪ್ರದೀಪ್‌ ಕುಡೇìಕರ್‌, ಕಾಪು ತಹಶೀಲ್ದಾರ್‌ ಮಹಮ್ಮದ್‌ ಇಸಾಕ್‌, ಕಾಪು ವೃತ್ತ ನಿರೀಕ್ಷಕ ಮಹೇಶ್‌ ಪ್ರಸಾದ್‌, ಜಿ.ಪಂ., ತಾ.ಪಂ. ಮತ್ತು ಪುರಸಭೆ ಸದಸ್ಯರು, ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯೆ ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

ತ್ಯಾಜ್ಯ ವಿಲೇವಾರಿಗೆ ಮೀಸಲಿರಿಸಿದ
ಸ್ಥಳ ಮಂಜೂರಿಗೆ ಆಗ್ರಹ
ಬೆಳಪು ಗ್ರಾ.ಪಂ. ವ್ಯಾಪ್ತಿಯ ಕೈಗಾರಿಕಾ ವಲಯಕ್ಕೆ ಸೂಕ್ತ ಸಂಪರ್ಕ ರಸ್ತೆ ಇಲ್ಲದೆ ಇರುವುದರಿಂದ ಕೈಗಾರಿಕೋದ್ಯಮಿಗಳು ಬರಲು ಹಿಂದೇಟು ಹಾಕುತ್ತಿದ್ದಾರೆ. ಅದರೊಂದಿಗೆ ಬೆಳಪು ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿಗಾಗಿ 3 ಎಕರೆ ಜಮೀನನ್ನು ಗುರುತಿಸಿ, ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ. ಆದರೆ ಜಿಲ್ಲಾಡಳಿತ ಇನ್ನೂ ಕೂಡಾ ಅದಕ್ಕೆ ಅನುಮೋದನೆಯನ್ನೇ ನೀಡಿಲ್ಲ ಎಂದು ಗ್ರಾ.ಪಂ. ಅಧ್ಯಕ್ಷ ಡಾ| ದೇವಿಪ್ರಸಾದ್‌ ಶೆಟ್ಟಿ ತಿಳಿಸಿದರು.

ಸಮಸ್ಯೆ ಬಗೆಹರಿಸಲು ಬದ್ಧ
ಕಾಪು ತಾಲೂಕಿನ ವಿವಿಧೆಡೆ ಭೇಟಿ ನೀಡಿ ಇಲ್ಲಿನ ಸಮಸ್ಯೆಗಳನ್ನು ಗಮನಿಸಿದ್ದೇನೆ. ಶಾಸಕರು, ವಿವಿಧ ಜನಪ್ರತಿನಿಧಿಗಳಿಂದ ಸಮಸ್ಯೆಗಳ ಕುರಿತಾದ ಅಹವಾಲು ಸ್ವೀಕರಿಸಿದ್ದೇನೆ. ಅಹವಾಲುಗಳನ್ನು ಸ್ವೀಕರಿಸಿದ್ದು, ಮುಂದಿನ ದಿನಗಳಲ್ಲಿ ಸಭೆ ನಡೆಸಿ ಸಮಸ್ಯೆ ಪರಿಹರಿಸಲು ಬದ್ಧನಿದ್ದೇನೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಅಧ್ಯಕ್ಷ – ಉಪಾಧ್ಯಕ್ಷರ
ಆಯ್ಕೆ ವಿಳಂಬ ಸರಿಪಡಿಸಿ
ರಾಜ್ಯದ ಎಲ್ಲಾ ನಗರಾಡಳಿತ ಸಂಸ್ಥೆಗಳಂತೆ ಹೊಸದಾಗಿ ಕಾಪು ಪುರಸಭೆಯ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೂ ತಡೆ ಬಿದ್ದಿದೆ. ಇದರಿಂದ ಪುರಸಭೆ ವ್ಯಾಪ್ತಿಯ ಅಭಿವೃದ್ಧಿಗೆ ತಡೆಯುಂಟಾಗಿದೆ. ಶೀಘ್ರವಾಗಿ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುವಂತೆ ಸ‌ರಕಾರದ ಗಮನಕ್ಕೆ ತರಬೇಕು. ಕಾಪು ನಗರ ಯೋಜನಾ ಪ್ರಾಧಿಕಾರದಿಂದ ಗ್ರಾ.ಪಂ.ಗಳಿಗಾಗುವ ಸಮಸ್ಯೆಗಳ ಬಗ್ಗೆಯೂ ಪುರಸಭೆ ಸದಸ್ಯ ಅರುಣ್‌ ಶೆಟ್ಟಿ ಪಾದೂರು ಗಮನ ಸೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next